ಬೆಂಗಳೂರು(ಮಾ.28): ಲಂಚ ಪ್ರಕರಣದಲ್ಲಿ (Corruption Case) ಬಂಧನ ಭೀತಿ ಎದುರಿಸುತ್ತಿದ್ದ ಬಿಜೆಪಿ ಉಚ್ಛಾಟಿತ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಅರೆಸ್ಟ್ ಆಗಿದ್ದಾರೆ. ತಮ್ಮ ಕ್ಷೇತ್ರ ಚನ್ನಗಿರಿಯಿಂದ ಬೆಂಗಳೂರಿಗೆ ಬರುವ ಹಾದಿಯಲ್ಲಿ ಅವರನ್ನು ಲೋಕಾಯುಕ್ತ ಪೊಲೀಸರು (Lokayukta Police) ಬಂಧಿಸಿದ್ದಾರೆ. ಅರೆಸ್ಟ್ ಆದ ಬೆನ್ನಲ್ಲೇ ಮಾಡಾಳ್ ಎದೆನೋವಿನ ಕಾರಣ ನೀಡಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ಸದ್ಯ ಅವರ ಬಂಧನ ಪ್ರಕರಣ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದು, ಕಾಂಗ್ರೆಸ್ (Congress) ಹಾಗೂ ಬಿಜೆಪಿ ನಡುವೆ ಹೊಸ ವಾಕ್ಸಮರಕ್ಕೆ ನಾಂದಿ ಹಾಡಿದೆ.
ಹೌದು ಮಾಡಾಳ್ ವಿರೂಪಾಕ್ಷಪ್ಪ ಬಂಧನದ ಬೆನ್ನಲ್ಲೇ ಬಿಜೆಪಿ ವಿರುದ್ಧ ಕಾರಿರುವ ಕಾಂಗ್ರೆಸ್ 'ಕಾಂಗ್ರೆಸ್ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಿಕ್ಕಿರುವ ಆಸ್ಕರ್ ಅವಾರ್ಡಿನಂತೆ. ನಲ್ವತ್ತು ಪರ್ಸೆಂಟ್ ಸರ್ಕಾರ ಭ್ರಷ್ಟರ ರಕ್ಷಣೆಯ ಪ್ರಯತ್ನದ ಹೊರತಾಗಿಯೂ ಈ ಬಂಧನವಾಗಿದ್ದು ಬಿಜೆಪಿಯ ಭ್ರಷ್ಟಾಚಾರದ ಪಾಪದ ಕೊಡ ತುಂಬಿರುವುದಕ್ಕೆ ಸಾಕ್ಷಿ. ಇಂಥಹ ಕಡುಭ್ರಷ್ಟ ಬಿಜೆಪಿಗೆ ಮತ ಕೇಳಲು ಜನರ ಮುಂದೆ ಹೋಗಲು ಯಾವುದೇ ನೈತಿಕ ಹಕ್ಕೂ ಇಲ್ಲ ಎಂದು ಟ್ವೀಟ್ ಮಾಡಿದೆ.
ಮಾಡಾಳ್ ವೀರೂಪಾಕ್ಷಪ್ಪರ ಬಂಧನ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಿಕ್ಕಿರುವ ಆಸ್ಕರ್ ಅವಾರ್ಡಿನಂತೆ!#40percentsarkara ಭ್ರಷ್ಟರ ರಕ್ಷಣೆಯ ಪ್ರಯತ್ನದ ಹೊರತಾಗಿಯೂ ಈ ಬಂಧನವಾಗಿದ್ದು ಬಿಜೆಪಿಯ ಭ್ರಷ್ಟಾಚಾರದ ಪಾಪದ ಕೊಡ ತುಂಬಿರುವುದಕ್ಕೆ ಸಾಕ್ಷಿ.
ಇಂಥಹ ಕಡುಭ್ರಷ್ಟ ಬಿಜೆಪಿಗೆ ಮತ ಕೇಳಲು ಜನರ ಮುಂದೆ ಹೋಗಲು ಯಾವುದೇ ನೈತಿಕ ಹಕ್ಕೂ ಇಲ್ಲ
— Karnataka Congress (@INCKarnataka) March 27, 2023
ಇನ್ನು ಅತ್ತ ಲೋಕಾಯುಕ್ತ ಪೊಲೀಸರು ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿsಇ ಕಸ್ಟಡಿ ಕೇಳಲಿದ್ದಾರೆ. ಹೆಚ್ಚಿನ ವಿಚಾರಣೆ ಅಗತ್ಯ ಹಿನ್ನಲೆ ಮತ್ತೆ ವಶಕ್ಕೆ ನೀಡುವಂತೆ ಮನವಿ ಮಾಡಬಹುದೆನ್ನಲಾಗಿದೆ. ಈ ಹಿಂದೆಯೂ ಮಾಡಾಳ್ ವಿಚಾರಣೆಗೆ ಸರಿಯಾಗಿ ಸಹಕರಿಸಿರಲಿಲ್ಲ ಹಾಗೂ ಸಮರ್ಪಕವಾದ ಉತ್ತರ ತನಿಖಾಧಿಕಾರಿಗಳಿಗೆ ನೀಡಿಲ್ಲ. ಪೂರಕವಾದ ಸಾಕ್ಷ್ಯಾಧಾರಗಳನ್ನು ಸಹ ಒದಗಿಸಿರಲಿಲ್ಲ. ಹಣದ ಮೂಲದ ಕುರಿತಂತೆ ಪುರಾವೆ ನೀಡಲು ಮೀನಾಮೇಷ ಎಣಿಸಿದ್ದರು.
ಇದನ್ನೂ ಓದಿ: Madal Virupakshappa: ಬಂಧನ ಭೀತಿಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ, ಪೊಲೀಸರು ಬರುತ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ಎಸ್ಕೇಪ್!
ಆರಂಭದಲ್ಲಿ ಪತ್ತೆಯಾದ ಹಣ ಕೃಷಿ ಮೂಲದಿಂದ ಬಂದಿದ್ದು ಎಂದಿದ್ದ ಮಾಡಳ್ ವಿರೂಪಾಕ್ಷಪ್ಪ ಬಳಿಕ ವಿಚಾರಣೆ ವೇಳೆ ಸೂಕ್ತ ದಾಖಲೆ ನೀಡಲು ವಿಫಲರಾಗಿದ್ದರು. ಹೀಗಾಗಿ ಅಧಿಕಾರಿಗಳು ಸೂಕ್ತ ವಿಚಾರಣೆ ನಡೆಸಲು ಮಾಡಾಳ್ರನ್ನು ಕಸ್ಟಡಿಗೆ ಪಡೆಯಬಹುದು.
ಜಾಮೀನು ಕೋರಿ ಅರ್ಜಿ ಸಲ್ಲಿಕೆ ಸಾಧ್ಯತೆ
ಇತ್ತ ಮಾಡಾಳ್ ವಿರೂಪಾಕ್ಷಪ್ಪ ಇವೆಲ್ಲದರಿಂದ ತಪ್ಪಿಸಿಕೊಳ್ಳಲು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಈಗಾಗಲೇ ನಿರೀಕ್ಷಣಾ ಜಾಮೀನು ರದ್ದಾಗಿರೋ ಕಾರಣಕ್ಕೆ ರೆಗ್ಯುಲರ್ ಬೇಲ್ಗೆ ಅರ್ಜಿ ಸಲ್ಲಿಸಲಹುದು. ಮುಖ್ಯವಾಗಿ ಅನಾರೋಗ್ಯ ಕಾರಣ ನೀಡಿ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ