ಉಡುಪಿ: 13 ವರ್ಷಗಳ ಕಾಲ ಹುಡುಗಿಯನ್ನು ಪ್ರೀತಿಸಿದ ಪ್ರೇಮಿಯೊಬ್ಬನ ನಿಜ ಬಣ್ಣ ಮದುವೆಗೆ ಇನ್ನೇನು ಕೆಲವೇ ಗಂಟೆಗಳಿದೆ ಎನ್ನುವಾಗ ಬಯಲಾಗಿದೆ. ಪ್ರೇಯಸಿಯನ್ನು ಪ್ರೀತಿಸಿದ ಪ್ರಿಯತಮ ಆಕೆಯನ್ನು ಮದುವೆಯಾಗಲು ಇಷ್ಟವಿಲ್ಲದ ಕಾರಣ ನಾಪತ್ತೆಯಾಗಿರುವ ಪ್ರಕರಣ ಇಲ್ಲಿನ ಪರ್ಕಳದಲ್ಲಿ ನಡೆದಿದೆ. ಗಣೇಶ್ ಮೋಸ ಮಾಡಿದ ಯುವಕ. ಮಮತಾ ಎಂಬ ಹುಡುಗಿಯನ್ನು ಕಳೆದ 13 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕ ನ.6ರಂದು ಮದುವೆಯಾಗಬೇಕಿತ್ತು. ಆದರೆ, ಯುವಕ ಕಣ್ಮರೆಯಾಗಿದ್ದು, ಕಳೆದೆರಡು ದಿನಗಳಿಂದ ಆತನ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಪ್ರೀತಿಸಿದ ತಪ್ಪಿಗೆ ಈಗ ಯುವತಿ ಕಣ್ಣೀರಲ್ಲಿ ಕೈತೊಳೆಯುವಂತೆ ಆಗಿದೆ.
13 ವರ್ಷಗಳಿಂದ ನಿಷ್ಠೆಯಿಂದ ಪ್ರೀತಿಸುತ್ತಿದ್ದ ಗಣೇಶ್ ತನ್ನ ಮದುವೆಯಾಗುತ್ತಾನೆಂಬ ಭರವಸೆ ಈಗ ನುಚ್ಚುನೂರಾಗಿದೆ. ಅಷ್ಟು ವರ್ಷಗಳ ಕಾಲ ಪ್ರೀತಿಯಲ್ಲಿದ್ದರೂ ಗಣೇಶ್ ಲಾಕ್ಡೌನ್ ಸಮಯದಲ್ಲಿ ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಅಲ್ಲದೇ ಕೊರೋನಾ ಕಾರಣದಿಂದ ಮದುವೆಯನ್ನು ಮುಂದೂಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಮಮತಾ ಮಣಿಪಾಲ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಈ ವೇಳೆ ಪೊಲೀಸರ ರಾಜಿ ಪಂಚಾಯತಿಯಿಂದ ಈ ಜೋಡಿಗಳು ಪುನಃ ಒಂದಾಗಿದ್ದರು.
ತನ್ನನ್ನು ಬಿಟ್ಟು ಬೇರೆ ಹುಡುಗಿ ಮದುವೆಯಾಗಲು ಮುಂದಾಗಿದ್ದರಿಂದ ಯುವತಿ ಹುಡುಗನಿಗೆ ಮದುವೆಯಾಗುವಂತೆ ಪೀಡಿಸಿದ್ದಾಳೆ. ಎರಡು ಮನೆಯಲ್ಲಿಯೂ ಇವರಿಬ್ಬರ ಪ್ರೀತಿ ವಿಷಯ ತಿಳಿದಿದ್ದರಿಂದ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಎರಡು ಕುಟುಂಬಗಳ ಸಮ್ಮತಿ ಮೇರೆಗೆ ಇದೇ ನ.6ರಂದು ಮದುವೆ ದಿನ ನಿಗದಿ ಮಾಡಲಾಗಿತ್ತು. ನ,5 ರಂದು ವಿಜೃಂಭಣೆಯಿಂದ ಮೆಹಂದಿ ಶಾಸ್ತ್ರ ಕೂಡ ಸಾಗಿತ್ತು. ಆ ರಾತ್ರಿಯಿಂದ ಗಣೇಶ್ ನಾಪತ್ತೆಯಾಗಿದ್ದಾನೆ. ಮದುವೆಗೆ ಮುನ್ನ ದಿನ ಹುಡುಗ ನಾಪತ್ತೆಯಿಂದ ಗಣೇಶ್ ತನ್ನೊಂದಿಗೆ ಕೇವಲ ಪ್ರೀತಿ ನಾಟಕವಾಡಿದ ಎಂದು ಹುಡುಗಿ ಕಣ್ಣೀರು ಹಾಕುತ್ತಿದ್ದಾಳೆ.
ಪರ್ಕಳದ ಗಣೇಶ್ ಮನೆಯಲ್ಲಿ ಎರಡು ದಿನಗಳ ಕಾಲ ಯುವತಿ ಕುಟುಂಬ ಮೊಕ್ಕಾಂ ಹೂಡಿದರೂ ಆತನ ಸುಳಿವಿಲ್ಲ. ಇತ್ತ ದಿಕ್ಕು ತೋಚದಾಗಿರುವ ಕುಟುಂಬ ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಗಣೇಶ್ನನ್ನು ಆತನ ಮನೆಯವರೇ ಮುಚ್ಚಿಟ್ಟಿದ್ದು, ಕಾನೂನು ಹೋರಾಟ ಮಾಡಲು ಸಿದ್ಧ ಎಂದು ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ