ಚಿಕ್ಕಮಗಳೂರು (Chikkamagaluru) ನಗರದಲ್ಲಿ ಲವ್ ಜಿಹಾದ್ (Love Jihad) ಸದ್ದು ಮತ್ತೆ ಕೇಳಿಬಂದಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದ ಹಿಂದೂ ಹುಡುಗಿ (Hindu Girl)-ಮುಸ್ಲಿಂ ಹುಡುಗ (Muslim Boy) ವಿವಾಹ (Marriage) ಮಾಡಿಕೊಳ್ಳಲು ಮುಂದಾಗಿದ್ದಾರೆ. ಆ ವೇಳೆ ಮುಸ್ಲಿಂ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಹೊರಸಿದ ಹಿಂದೂ ಸಂಘಟನೆ ಕಾರ್ಯಕರ್ತರು (Hindu organization), ಜೋಡಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ಪೊಲೀಸರಿಂದ ವಿಚಾರಣೆ ನಡೆದಿದೆ. ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ರಿಂದ ಯುವಕ-ಯುವತಿ ವಿಚಾರಣೆ ಮುಂದುವರಿದಿದೆ.
ಲವ್ ಜಿಹಾದ್ ಆರೋಪ ಪ್ರಕರಣದಲ್ಲಿ ನೈತಿಕ ಪೊಲೀಸ್ ಗಿರಿ (Moral Policing) ದೂರಿನನ್ವಯ ಹಿಂದೂಪರ ಸಂಘಟನೆ ನಾಲ್ವರು ಕಾರ್ಯಕರ್ತರ ವಿರುದ್ದ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ವಿಚಾರಣೆ ಬಳಿಕ ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.
ಮಗಳ ಮದುವೆಗೆ ಒಪ್ಪಿಗೆ ಸೂಚಿಸಿದ ತಾಯಿ
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಯುವತಿ ತಾಯಿ ಶೋಭಾ, ನನಗೆ ಮಗಳು ಅಂದ್ರೆ ಜೀವ. ಆಕೆಯ ಪ್ರೇಮ ವಿವಾಹಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. ಮಗಳು ಮತ್ತು ಅಳಿಯನಿಗೆ ತೊಂದರೆ ಕೊಡಬೇಡಿ. ಹಾರ ಬದಲಿಸಿಕೊಂಡು ನಮ್ಮ ಲಕ್ಷ್ಮಿಪುರ ಗ್ರಾಮಕ್ಕೆ ಬರಲಿ, ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ.
ವಿಚಾರಣೆ ಬಳಿಕ ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗುವಾಗ ಠಾಣೆಯ ಮುಂದೆ ನಿಂತಿದ್ದ ಶೋಭಾ ಅವರು ಮಗಳ ಜೊತೆ ಮಾತನಾಡಲು ಅವಕಾಶ ನೀಡಿ ಎಂದು ಕಣ್ಣೀರು ಹಾಕಿದರು.
ನಾಲ್ವರ ವಿರುದ್ಧ ಪ್ರಕರಣ ದಾಖಲು
ನೈತಿಕ ಪೊಲೀಸ್ ಗಿರಿ ದೂರಿನ್ವಯ ಹಿಂದೂ ಸಂಘಟನೆಯ ನಾಲ್ವರ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಅರ್ ದಾಖಲಾಗಿದೆ. ಸಬ್ ರೆಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿಗೆ ಹೋದ ಸಂದರ್ಭದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದೆ. ಯುವಕ ಮತ್ತು ಯುವತಿ ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಸಮೀಪ ಲಕ್ಷ್ಮೀಪುರದ ನಿವಾಸಿಗಳು ಎಂದು ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಅನ್ಯಕೋಮಿನ ಯುವಕನಿಂದ ಲೈಂಗಿಕ ಕಿರುಕುಳ
ಮಹಿಳೆಗೆ ಅನ್ಯಕೋಮಿನ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತಿಂಗಳಾಡಿ ಎಂಬಲ್ಲಿ ಘಟನೆ ನಡೆದಿದೆ. ದಿನಸಿ ಅಂಗಡಿಗೆ ಬಂದಿದ್ದ ಮಹಿಳೆಯ ಮೇಲೆ ಕೈಹಾಕಿ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ಕಿರುಚಿದಾಗ ಆರೋಪಿ ಓಲೆಮುಂಡೋವು ನಿವಾಸಿ ಬದ್ರುದ್ಧೀನ್ ಪರಾರಿಯಾಗಿದ್ದಾನೆ. ಆರೋಪಿಯನ್ನು ಬಂಧಿಸುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಆರೋಪಿಯ ಬಂಧನ ಆಗದಿದ್ರೆ ಪ್ರತಿಭಟನೆಯ ಎಚ್ಚರಿಕೆಯನ್ನು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಇತ್ತ ವಿಷಯ ತಿಳಿಯುತ್ತಿದ್ದಂತೆ ಪುತ್ತೂರು ಶಾಸಕ ಸಂಜೀವ್ ಮಠಂದೂರು, ಆರೋಪಿಯನ್ನು ಬಂಧಿಸುವಂತೆ ಪೋಲೀಸರಿಗೆ ಸೂಚಿಸಿದ್ದಾರೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪು
ವಯಸ್ಸಿಗೆ ಬಂದ ಯಾವುದೇ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಬಾಳಲು ಕಾನೂನಿನಲ್ಲಿ ಅವಕಾಶ ಇದೆ. ಅವರಿಬ್ಬರ ಶಾಂತಿಯುವ ಬದುಕಿಗೆ ಬೇರಾವುದೇ ವ್ಯಕ್ತಿ ಅಥವಾ ಕುಟುಂಬದಿಂದ ತೊಂದರೆ ಆಗಬಾರದು. ಸರ್ಕಾರ ಕೂಡ ಇಬ್ಬರು ವಯಸ್ಕರ ಸಂಬಂಧಕ್ಕೆ ಅಡ್ಡಗಾಲು ಹಾಕುವಂತಿಲ್ಲ ಎಂದು ಉತ್ತರ ಪ್ರದೇಶದ ಅಲಹಾಬಾದ್ ಉಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಇದನ್ನೂ ಓದಿ: ಲವ್ ಜಿಹಾದ್ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನು ; ಮುನ್ನಲೆಗೆ ಬಂದ ಗುಜ್ಜರ್ ಕಿ ಶಾದಿ
ಸಲಾಮತ್ ಅನ್ಸಾರಿ ಸೇರಿದಂತೆ ನಾಲ್ವರು ವ್ಯಕ್ತಿಗಳು ತಮ್ಮ ವಿರುದ್ಧದ ಲವ್ ಜಿಹಾದ್ ಪ್ರಕರಣವನ್ನು ಕೈಬಿಡಬೇಕೆಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಂತರ ಕೋರ್ಟ್ ನೀಡಿದ ತೀರ್ಪು ಇದು.
2019ರಲ್ಲಿ ಮದುವೆಯಾಗಿದ್ದ ಸಲಾಮತ್ ಮತ್ತು ಪ್ರಿಯಾಂಕಾ
ಲವ್ ಜಿಹಾದ್ಗೆ ತಳುಕುಹಾಕಿಕೊಂಡ ಪ್ರಕರಣ ಇದಾದ್ದರಿಂದ ಕೋರ್ಟ್ ತೀರ್ಪು ಮಹತ್ವ ಪಡೆದಿದೆ. ಇಸ್ಲಾಮ್ ಧರ್ಮೀಯ ಸಲಾಮತ್ ಮತ್ತು ಹಿಂದೂ ಧರ್ಮೀಯ ಪ್ರಿಯಾಂಕಾ ಖರ್ವರ್ ಅವರಿಬ್ಬರು ಪರಸ್ಪರ ಪ್ರೇಮಿಸಿ 2019, ಆಗಸ್ಟ್ 19ರಂದು ವಿವಾಹವಾಗಿದ್ದರು. ಮುಸ್ಲಿಮ್ ಶಾಸ್ತ್ರ ಸಂಪ್ರದಾಯದಂತೆ ಮದುವೆ ಜರುಗಿತ್ತು. ಮದುವೆ ನಂತರ ಪ್ರಿಯಾಂಕಾ ತನ್ನ ಹೆಸರನ್ನು ಆಲಿಯಾ ಎಂದು ಬದಲಾಯಿಸಿಕೊಂಡರು. ಪ್ರಿಯಾಂಕಾ ಅವರ ಕುಟುಂಬದವರಿಗೆ ಈ ಮದುವೆ ಇಷ್ಟವಿರಲಿಲ್ಲ. ತಮ್ಮ ಮಗಳನ್ನ ಅಪಹರಿಸಿ ಮದುವೆಯಾಗಿದ್ದಾರೆ ಎಂದು ಆರೋಪಿಸಿ ಅವರು ಪೋಕ್ಸೋ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿದ್ದರು.
ಇದನ್ನೂ ಓದಿ: ಲವ್ ಜಿಹಾದ್ ಪದ ಬಳಸಿ ವಿವಾದಕ್ಕೀಡಾದ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ; ನೆಟ್ಟಿಗರಿಂದ ರಾಜೀನಾಮೆಗೆ ಒತ್ತಾಯ
ಈ ಎಫ್ಐಆರ್ ಅನ್ನು ರದ್ದುಗೊಳಿಸಿ ಅವರಿಗೆ ಭದ್ರತೆ ಒದಗಿಸಬೇಕೆಂದು ಕೋರಿ ಸಲಾಮತ್ ಅನ್ಸಾರಿ, ಪ್ರಿಯಾಂಕಾ ಖರ್ವರ್ ಹಾಗೂ ಇತರ ಇಬ್ಬರ ಪರವಾಗಿ ಹೈಕೋರ್ಟ್ನಲ್ಲಿ ಅರ್ಜಿ ಹಾಕಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ