ವಿಜಯಪುರ, (ಡಿ. 11): ಲಾರಿ ಚಾಲಕ ಮಾಡಿದ ಯಡವಟ್ಟಿನಿಂದ ಮೂರು ರೈಲುಗಳಲ್ಲಿರುವ ಪ್ರಯಾಣಿಕರು ಪರದಾಡುಂತಾಗಿದೆ. ನಗರದ ಹೊರವಲಯದಲ್ಲಿ. ಲಾರಿಯೊಂದು ಹೈ ಟೆನ್ಷನ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ವಿದ್ಯುತ್ ಕಂಬ ರೈಲು ಹಳಿಯ ಮೇಲೆ ಉರುಳಿ ಬಿದ್ದಿದೆ. ಇದರಿಂದ ರೈಲು ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತೆ ಆಗಿದೆ. ಇಂದು ಮಧ್ಯಾಹ್ನ 3.45ಕ್ಕೆ ಈ ಅವಘಡ ಸಂಭವಿಸಿದ್ದು, ವಿದ್ಯುತ್ ಕಂಬದಲ್ಲಿ ವಿದ್ಯುತ್ ಸರಬರಾಜು ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ. ಈ ವಿದ್ಯುತ್ ಕಂಬವನ್ನು ದುರಸ್ಥಿಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಈ ಅವಘಡದಿಂದಾಗಿ ಮೂರು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಈ ರೈಲು ಮಾರ್ಗಕ್ಕೆ ಈವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ.
ಈ ಅವಘಡದಿಂದಾಗಿ ಮೂರು ರೈಲುಗಳು ಮೂರು ಪ್ರತ್ಯೇಕ ನಿಲ್ದಾಣಗಳಲ್ಲಿ ನಿಂತಿವೆ. ಸಂಜೆ. 4.35ಕ್ಕೆ ಹೊರಡಬೇಕಿದ್ದ ಬಾಗಲಕೋಟೆ- ಮೈಸೂರು ಬಸವ ಎಕ್ಸಪ್ರೆಸ್ ರೈಲು ವಿಜಯಪುರದಲ್ಲಿ ನಿಂತಿದೆ. ಸಂಜೆ. 4.55ಕ್ಕೆ ವಿಜಯಪುರದಿಂದ ಹೊರಡಬೇಕಿರುವ ಮಹಾರಾಷ್ಟ್ರದ ಸೋಲಾಪುರ-ಮೈಸೂರು ಗೋಲಗುಂಬಜ ರೈಲು ವಿಜಯಪುರ ಜಿಲ್ಲೆಯ ಮಿಂಚನಾಳ ರೈಲು ನಿಲ್ದಾಣದಲ್ಲಿ ನಿಂತಿದೆ. ಸಂ. 5.30ಕ್ಕೆ ವಿಜಯಪುರದಿಂದ ಹೊರಡಬೇಕಿದ್ದ ಗದಗ-ಮುಂಬೈ ರೈಲು ವಿಜಯಪುರ ಜಿಲ್ಲೆಯ ಜುಮನಾಳ ರೈಲು ನಿಲ್ದಾಣದಲ್ಲಿಯೇ ನಿಂತಿದೆ.
ಇದರಿಂದಾಗಿ ರೈಲಿನಲ್ಲಿರುವ ಪ್ರಯಾಣಿಕರು ಪರದಾಡುವಂತಾಗಿದೆ. ನೈರುತ್ಯ ರೇಲ್ವೆ ಇಲಾಖೆ ಮೂಲಗಳ ಪ್ರಕಾರ ವಿದ್ಯುತ್ ಕಂಬದ ದುರಸ್ಥಿ ಕಾರ್ಯ ಸಮರೋಪಾದಿಯಲ್ಲಿ ಸಾಗಿದ್ದು, ಇನ್ನೋಂದು ಗಂಟೆಯಲ್ಲಿ ರೈಲು ಸಂಚಾರ ಪುನಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ