ಹಾವೇರಿ(ಆ.14): ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತುಮ್ಮಿನಕಟ್ಟಿ, ಹಳ್ಳೂರು, ಹೊನ್ನಾಳಿ, ಶಿವಮೊಗ್ಗ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಕೆಸರು ಗದ್ದೆಯಾಗಿದ್ದು, ಹಳ್ಳೂರು ಗ್ರಾಮಸ್ಥರು ರಸ್ತೆ ನಡುವೆ ಭತ್ತ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.
ರಟ್ಟೀಹಳ್ಳಿಯಿಂದ ಕಡೂರು ಮಾರ್ಗವಾಗಿ ಹಳ್ಳೂರು ಹೊನ್ನಾಳಿ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿರುವುದರಿಂದ ಈ ರಸ್ತೆಯಲ್ಲಿಸಂಚಾರ ಮಾಡುವ ಪ್ರಯಾಣಿಕರು, ವಾಹನ ಸವಾರರು ಈ ರಸ್ತೆ ಯಾವಾಗ ದುರಸ್ತಿ ಕಾಣುತ್ತದೆಯೊ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಈ ರಸ್ತೆ ಕೃಷಿ ಸಚಿವರು ತವರು ಕ್ಷೇತ್ರದಿಂದ ಮುಖ್ಯಮಂತ್ರಿಗಳ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಪ್ರತಿನಿತ್ಯ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಜನರು ಶಿವಮೊಗ್ಗ ಜಿಲ್ಲೆಗೆ ಪ್ರಯಾಣ ಬೆಳಸಬೇಕಾದರೆ ಇದೇ ರಸ್ತೆಯನ್ನೇ ಉಪಯೋಗಿಸಬೇಕು. ಹೀಗಾಗಿ ಈ ರಸ್ತೆ ದುರಸ್ತಿ ಮಾಡಲು ಹಲವಾರು ಬಾರಿ ಮನವಿ ಮಾಡಿದ್ದಾರೆ ಆದರೂ ರಸ್ತೆ ಮಾತ್ರ ದುರಸ್ತಿಯಾಗಿಲ್ಲ. ಇನ್ನೂ ಮಳೆಗಾಲದಲ್ಲಿ ಈ ರಸ್ತೆ ಮೇಲೆ ಸಂಚರಿಸಿದರೆ ಕೆಸರು ಗದ್ದೆಯಲ್ಲಿ ಸಂಚರಿಸಿದ ಅನುಭವ ಆಗುತ್ತದೆ.
‘ಹಾಸನದಲ್ಲಿ ಭಾರೀ ಮಳೆಗೆ ಬೆಳೆ ಹಾನಿ; ಹೆಚ್ಚುವರಿ ಪರಿಹಾರಕ್ಕಾಗಿ ಸರ್ಕಾರಕ್ಕೆ ವಿಶೇಷ ಪ್ರಸ್ತಾಪ‘ - ಜಿಲ್ಲಾಧಿಕಾರಿ
ಗುಂಡಿಗಳು ನೀರಿನಲ್ಲಿ ಮುಚ್ಚಿಹೋಗಿರುವುದರಿಂದ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡೇ ಸಂಚರಿಸಬೇಕಾಗಿದೆ. ಆದರೂ ಕಳೆದ ನಾಲ್ಕು ವರ್ಷಗಳಿಂದ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಸ್ಥಿತಿ ನಿರ್ಮಾಣವಾಗುವುದರಿಂದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಗಳಿಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ರಸ್ತೆ ಮಾತ್ರ ದುರಸ್ತಿ ಕಾಣದೆ ಮತ್ತಷ್ಟು ಹಾಳಾಗಿ ಹೋಗುತ್ತಿದೆ. ಈ ಹಿಂದೆ ಚುನಾವಣೆ ಸಂಧರ್ಭದಲ್ಲಿ ಮುಖ್ಯಮಂತ್ರಿಗಳು ಸಚಿವರು ಇದೇ ಮಾರ್ಗವಾಗಿ ಸಂಚಾರ ಮಾಡುವಾಗ ಅಧಿಕಾರಿಗಳು ರಸ್ತೆಗೆ ತೇಪೆ ಹಚ್ಚಿ ಎಲ್ಲವೂ ಸರಿಯಾಗಿದೆ ಎನ್ನುವ ರೀತಿ ನೋಡಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ