• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಯೋಗೇಶ್ವರ್ 9 ಕೋಟಿ ಸಾಲ ಮಾಡಿದ್ದಾರೆ ಎಂಬ ಜಾರಕಿಹೊಳಿ ಹೇಳಿಕೆ ಬಗ್ಗೆ ತನಿಖೆಯಾಗಲಿ; ಸಿದ್ದರಾಮಯ್ಯ ಆಗ್ರಹ

ಯೋಗೇಶ್ವರ್ 9 ಕೋಟಿ ಸಾಲ ಮಾಡಿದ್ದಾರೆ ಎಂಬ ಜಾರಕಿಹೊಳಿ ಹೇಳಿಕೆ ಬಗ್ಗೆ ತನಿಖೆಯಾಗಲಿ; ಸಿದ್ದರಾಮಯ್ಯ ಆಗ್ರಹ

ಸಿದ್ದರಾಮಯ್ಯ

ಸಿದ್ದರಾಮಯ್ಯ

ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜನವರಿ 20ರಂದು ಚಳವಳಿ ನಡೆಸಲಿದೆ. ಅಂದು ರಾಜಭವನ ಚಲೋ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

  • Share this:

    ಬೆಂಗಳೂರು; ಸಮ್ಮಿಶ್ರ ಸರ್ಕಾರ ಬೀಳಿಸಿ, ಬಿಜೆಪಿ ಸರ್ಕಾರ ರಚನೆಗೆ ನೆರವಾಗಲು ಯೋಗೇಶ್ವರ್ 9 ಕೋಟಿ ರೂ. ಸಾಲ ಮಾಡಿದ್ದರು ಎಂಬ ಸಚಿವ ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ತನಿಖೆಯಾಗಲಿ. ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳು ತನಿಖೆ ನಡೆಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಆಪರೇಷನ್ ಕಮಲದಲ್ಲಿ ಹಣದ ಪ್ರಭಾವ ಇದೆ. ಇದು ರಮೇಶ್ ಜಾರಕಿಹೊಳಿಯವರ ಹೇಳಿಕೆಯಿಂದ ಸಾಬೀತಾಗಿದೆ.  ಹೀಗಾಗಿ ಅವರ ಹೇಳಿಕೆ ಕುರಿತು ನಿಖರ ಮತ್ತು ಸಮಗ್ರವಾದ ತನಿಖೆ ಆಗಲೇಬೇಕು ಎಂದ ಒತ್ತಾಯಿಸಿದ್ದಾರೆ.


    ಆಪರೇಷನ್ ಕಮಲ ಎಂದರೆ ಹಣ ನೀಡಿ ಶಾಸಕರನ್ನು ಖರೀದಿ ಮಾಡುವುದು ಎಂದು ಅರ್ಥ. ಈಗ ರಮೇಶ್ ಜಾರಕಿಹೊಳಿಯೇ ಹಣದ ವ್ಯವಹಾರ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಸಿ.ಪಿ. ಯೋಗೇಶ್ವರ್ ಅವರು 9 ಕೋಟಿ ಸಾಲ ಮಾಡಿ ಸರ್ಕಾರ ರಚನೆಗೆ ನೆರವಾಗಿದ್ದಾರೆ ಎಂದು ಅವರು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ಆಪರೇಷನ್ ಕಮಲಕ್ಕೆ ಹಣ ಖರ್ಚು ಮಾಡಿಲ್ಲ. 17 ಶಾಸಕರು ಅವರಾಗಿಯೇ ಬಂದಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಬಿಜೆಪಿಯವರು ಎಂಥ ನೀಚರು, ಸುಳ್ಳುಗಾರರು ಎಂಬುದು ತನಿಖೆ ಮೂಲಕ ರಾಜ್ಯದ ಜನರಿಗೆ ತಿಳಿಯಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.


    ಯಡಿಯೂರಪ್ಪ ಅವರು ಆಪರೇಷನ್ ಕಮಲದ ಜನಕ. ರಾಜ್ಯದ ಜನತೆಯ ಆಶೀರ್ವಾದದಿಂದ ಮುಖ್ಯಮಂತ್ರಿ ಆದವರಲ್ಲ. ಹಣ ಮತ್ತು ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ ಸಿಎಂ ಆಗಿದ್ದಾರೆ. 9 ಕೋಟಿ ರೂ.ಗಳು ಬಂದಿದ್ದಾದರೂ ಎಲ್ಲಿಂದ. ಅದನ್ನು ಯೋಗೇಶ್ವರ್ ಅವರಿಗೆ ಕೊಟ್ಟವರು ಯಾರು. ಅದು ಬಿಳಿ ಹಣವೇ ಅಥವಾ ಕಪ್ಪು ಹಣವೇ ಎಂಬುದು ಗೊತ್ತಾಗಬೇಕು. ಇದು ದಾರಿಯಲ್ಲಿ ಹೋಗುವವರು ಹೇಳಿರುವ ಮಾತಲ್ಲ. ಸಚಿವರು ಹೇಳಿರುವ ಮಾತಿದು. ಹೀಗಾಗಿ ಸಮಗ್ರವಾಗಿ ತನಿಖೆಯಾಗಬೇಕು ಎಂದು ಹೇಳಿದರು.


    ಇದನ್ನು ಓದಿ: ದನದ ಮಾಂಸ ರಫ್ತು ಮಾಡೋರನ್ನು ಮೊದಲು ಜೈಲಿಗೆ ಹಾಕಿ; ಶಾಸಕ ಹಿಟ್ನಾಳ


    ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿಯ ಹಿರಿಯ ನಾಯಕ. ಸಿ.ಡಿ. ಕುರಿತಾಗಿ ಅವರೇ ಆರೋಪ ಮಾಡಿದ್ದಾರೆ. ಈ ಬಗ್ಗೆಯೂ ತನಿಖೆಯಾಗಲಿ. ತಮ್ಮ ಕ್ಷೇತ್ರಗಳಿಗೆ ಅನುದಾನ ಪಡೆಯಲು ಶಾಸಕರು ಅರ್ಹರು. ಅದರಲ್ಲಿ ಬ್ಲಾಕ್ ಮೇಲ್ ಮಾಡುವ ಅಗತ್ಯವೇನಿದೆ. ಅನುದಾನ ಕೋರಿ ಜಮೀರ್ ಅಹಮದ್ ಅವರು ಪತ್ರ ಕೊಟ್ಟಿದ್ದಾರೆ. ಆ ಪತ್ರದ ಮೇಲೆ ಸಿಎಂ ಯಡಿಯೂರಪ್ಪ ಸಣ್ಣ ಸಹಿ ಮಾಡಿ ಹಣಕಾಸು ಇಲಾಖೆಗೆ ಕಳುಹಿಸಿದ್ದಾರೆ ಇಷ್ಟಕ್ಕೂ ಅನುದಾನ ಬಿಡುಗಡೆ ಆಗಿದೆಯೇ? ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಏಳು ಸತ್ತಿರುವ ಕುದುರೆಗಳನ್ನು ಸಿಎಂ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.


    ರಾಜ್ಯದಲ್ಲಿ ಪಿಂಚಣಿ ಕೊಡಲು, ಮನೆ, ರಸ್ತೆ ಕಾಮಗಾರಿಗಳಿಗೆ ಅನುದಾನ ಕೊಡಲು ಹಣ ಇಲ್ಲ. ನೀರಾವರಿ ಯೋಜನೆಗಳು ನಿಂತಿವೆ. ವಿದ್ಯಾರ್ಥಿ ವೇತನ ಕೊಡುತ್ತಿಲ್ಲ. ಸರ್ಕಾರ ಎಲ್ಲಿದೆ. ಚುನಾವಣೆ ಬರಲಿ ಜನರು ಎಂದು ಕಾಯುತ್ತಿದ್ದಾರೆ. ಬಂದ ಕೂಡಲೇ ಈ ಸರ್ಕಾರ ಮತ್ತು ಯಡಿಯೂರಪ್ಪ ಅವರನ್ನು ಜನ ಮನೆಗೆ ಕಳುಹಿಸುತ್ತಾರೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜನವರಿ 20ರಂದು ಚಳವಳಿ ನಡೆಸಲಿದೆ. ಅಂದು ರಾಜಭವನ ಚಲೋ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

    Published by:HR Ramesh
    First published: