ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi) ರಾಜಕೀಯದ ಮೇಲಾಟ ಜೋರಾಗಿದೆ. ಇಂದು ಬೆಳಗ್ಗೆಯಷ್ಟೇ ಮಾಜಿ ಸಚಿವ, ಗೋಕಾಕ್ ವಿಧಾನಸಭಾ ಕ್ಷೇತ್ರದ (Gokak Assembly Constituency) ಹಾಲಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಸುದ್ದಿಗೋಷ್ಠಿ ನಡೆಸಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಗಂಭೀರ ಆರೋಪ ಮಾಡಿದ್ದರು. “ಡಿಕೆ ಶಿವಕುಮಾರ್ ಬಳಿ ಸುಮಾರ್ ಸಿಡಿಗಳಿವೆ, ಲಂಡನ್, ದುಬೈನಲ್ಲಿ ಆಸ್ತಿ ಇದೆ ಅಂತ ಡಿಕೆಶಿ ಹೇಳಿರುವ ಆಡಿಯೋ ಇದೆ ಅಂತ ಜಾರಕಿಹೊಳಿ ಹೇಳಿದ್ದರು. ನಾನು ಹಾಗೂ ಡಿಕೆ ಶಿವಕುಮಾರ್ ಒಂದೇ ಬಾರಿಗೆ ರಾಜಕೀಯಕ್ಕೆ ಬಂದಿದ್ದು, ಇಬ್ಬರೂ ಅಣ್ಣತಮ್ಮಂದಿರಂತೆ ಇದ್ದೆವು. ಆದ್ರೆ ನಮ್ಮ ಮಧ್ಯೆ ಹುಳಿ ಹಿಂಡಿದ್ದು ಗ್ರಾಮಾಂತರ ಭಾಗದ ಶಾಸಕಿ. ಆಕೆ ವಿಷಕನ್ಯೆ” ಅಂತ ರಮೇಶ್ ಜಾರಕಿಹೊಳಿ ಆರೋಪಿಸಿದ್ದರು. ಈ ಆರೋಪಗಳಿಗೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ (Channaraj) ಸ್ಪಷ್ಟನೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಆರೋಪಕ್ಕೆ ತಿರುಗೇಟು
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಕ್ಕೆ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಚನ್ನರಾಜ್ ಹಟ್ಟಿಹೊಳಿ, ರಮೇಶ್ ಜಾರಕಿಹೊಳಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.
“ರಮೇಶ್ ಜಾರಕಿಹೊಳಿ ಮಾತಿನಲ್ಲಿ ಹುರುಳಿಲ್ಲ”
ರಮೇಶ್ ಜಾರಕಿಹೊಳಿ ಅವರನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಹಿಂದೆಲ್ಲ ಅವರು ಖಡಕ್ ಆಗಿ ಮಾತನಾಡುತ್ತಿದ್ದರು. ಆದರೆ ಈಗ ಹತಾಶೆಯಿಂದ ಏನೋನೋ ಮಾತನಾಡುತ್ತಾರೆ. ಅವರು ಹೇಳಿದ್ದು ಯಾವುದೇ ಮಾತಲ್ಲಿ ಹುರುಳಿಲ್ಲ ಅಂತ ಹೇಳಿದ್ದಾರೆ.
“ಲಕ್ಷ್ಮೀಗೆ ಟಿಕೆಟ್ ಕೊಡಿಸಿದ್ದು ಜಾರಕಿಹೊಳಿಯಲ್ಲ”
ಲಕ್ಷ್ಮೀ ಹೆಬ್ಬಾಳ್ಕರ್ಗೆ ಟಿಕೆಟ್ ಕೊಡಿಸಿದ್ದು ನಾನು ಅಂತ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅಂದು ಲಕ್ಷ್ಮೀಗೆ ಟಿಕೆಟ್ ಕೊಡುವಾಗ ಡಿಕೆ ಶಿವಕುಮಾರ್ ವಿರೋಧಿಸಿದ್ದರು ಅಂತಲೂ ಹೇಳಿದ್ದಾರೆ. ಆದರೆ ಅಂದು ಡಿಕೆ ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರಾಗಿ ಇರಲಿಲ್ಲ. ಡಾ. ಜಿ. ಪರಮೇಶ್ವರ್ ಅಧ್ಯಕ್ಷರಾಗಿ ಇದ್ದರು ಅಂತ ತಿರುಗೇಟು ನೀಡಿದ್ದಾರೆ.
“ರಮೇಶ್ ವ್ಯವಹಾರದ ಬಗ್ಗೆಯೂ ತನಿಖೆ ನಡೆಯಲಿ”
ರಮೇಶ್ ಜಾರಕಿಹೊಳಿ ಆರೋಪದಲ್ಲಿ ಯಾವುದೇ ಹುರಳಿಲ್ಲ. ಅಕ್ರಮದ ಬಗ್ಗೆ ದಾಖಲೆ ಇದ್ರೆ ಕೊಡಲಿ ಎಂದು ಕಾಂಗ್ರೆಸ್ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಚಾಲೆಂಜ್ ಹಾಕಿದ್ದಾರೆ. ನನ್ನ ಮಗ ಸೌಭಾಗ್ಯ ಲಕ್ಷ್ಮಿ ಶುಗರ್ ಕಾರ್ಖಾನೆ ನಡೆಸುತ್ತಿದ್ದಾನೆ. ಎಲ್ಲ ವ್ಯವಹಾರವನ್ನು ಅವನೇ ನೋಡಿಕೊಳ್ತಾನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಈ ಚಾಲೆಂಜ್ ಸ್ವೀಕರಿಸಿದ ರಮೇಶ್ ಜಾರಕಿಹೊಳಿ ಅವ್ರ ಕಾರ್ಖಾನೆ ಬಗ್ಗೆಯೂ ತನಿಖೆ ಮಾಡಲಿ ಅಂತ ಚನ್ನರಾಜ್ ಹೇಳಿದ್ದಾರೆ.
“ರಮೇಶ್ ಜಾರಕಿಹೊಳಿಗೆ ವಾಟ್ಸಾಪ್ ಬಳಸುತ್ತಾರೆ ಅಂತ ಜನರಿಗೆ ಗೊತ್ತು”
ತನ್ನ ಬಳಿ ಆಡಿಯೋ ಇದೆ. ಆದರೆ ನನಗೆ ವಾಟ್ಸಾಪ್ ಬಳಸೋಕೆ ಬರೋದಿಲ್ಲ. ಹೀಗಾಗಿ ಈಗ ನಿಮ್ಮ ಎದುರು ಆಡಿಯೋ ಪ್ಲೇ ಮಾಡೋದಿಲ್ಲ ಅಂತ ಜಾರಕಿಹೊಳಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೆ ಅವರು ಎಷ್ಟು ಚೆನ್ನಾಗಿ ವಾಟ್ಸಾಪ್ ಬಳಸುತ್ತಾರೆ ಎನ್ನುವುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ ಅಂತ ಚನ್ನರಾಜ್ ವ್ಯಂಗ್ಯವಾಡಿದ್ದಾರೆ.
“ಜನರೇ ರಮೇಶ್ ಜಾರಕಿಹೊಳಿಗೆ ಪಾಠ ಕಲಿಸುತ್ತಾರೆ”
ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ವಿಷ ಕನ್ಯೆ ಎಂಬ ಪದ ಬಳಕೆ ಮಾಡಿರುವುದನ್ನು ನಾನು ಖಂಡಿಸುತ್ತೇನೆ ಅಂತ ಚನ್ನರಾಜ್ ಹಟ್ಟಿಹೊಳಿ ಹೇಳಿದ್ದಾರೆ. . ನಾವು ಅವರ ರೀತಿ ಹೇಳಿಕೆ ಕೊಟ್ಟರೆ ಜನ ನೋಡುತ್ತಾರೆ. ಇಂಥ ಪದ ಬಳಸಲು ಅವರಿಗೆ ಕಾಮನ್ ಸೆನ್ಸ್ ಇಲ್ಲ. ಗೋಕಾಕ್ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮಾನಿಗಳಿದ್ದಾರೆ. ಅಲ್ಲಿನ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ