ಧಾರವಾಡ: ಕುಂದಗೋಳ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ (Congress MLA Kusumavati Shivallli/ Kusuma Shivalli) ಕುಟುಂಬದಲ್ಲಿಯೇ ಟಿಕೆಟ್ ವಿಚಾರದಲ್ಲಿ ಬಿರುಕು ಮೂಡಿದೆ. ಒಂದೇ ಮನೆಯಲ್ಲಿ ಟಿಕೆಟ್ಗಾಗಿ ಸೆಡ್ಡು ಹೊಡೆಯಲಾಗಿದೆ. ಮಾಜಿ ಸಚಿವ ಸಿ.ಎಸ್.ಶಿವಳ್ಳಿ (Former Minister CS Shivalli) ಕುಟುಂಬದಲ್ಲಿ ಟಿಕೆಟ್ ಗಾಗಿ ಬಿಗ್ ಫೈಟ್ ಶುರುವಾಗಿದೆ. ಅತ್ತಿಗೆಯ ವಿರುದ್ಧವೇ ತೊಟೆತಟ್ಟಲು ಶಿವಳ್ಳಿ ಬ್ರದರ್ಸ್ (Shivalli Brothers) ಮುಂದಾಗಿದ್ದಾರೆ. ಉಪ ಚುನಾವಣೆಯಲ್ಲಿ ಅತ್ತಿಗೆಯ ಗೆಲುವಿಗೆ ಶ್ರಮಿಸಿದ್ದ ಮೈದುನರು, ಇದೀಗ ತಾವೇ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆ ತಮಗೆ ಟಿಕೆಟ್ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಅಣ್ಣನ ಹೆಸರು, ಕೆಲಸ ಕಾರ್ಯ ಮುಂದುವರಿಸೋಕೆ ಅಖಾಡಕ್ಕೆ ಇಳಿಯುತ್ತಿರೋದಾಗಿ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಮೈದುನ ಮುತ್ತಣ್ಣ ಶಿವಳ್ಳಿ (Muttanna Shivalli) ಹೇಳಿದ್ದಾರೆ.
ಗೆದ್ದ ಮೇಲೆ ಶಾಸಕಿ ಕುಸುಮಾವತಿ ಅವರು ನಮ್ಮನ್ನು ದೂರ ಸರಿಸಿದ್ದಾರೆ. ಮನಸ್ಸಿಗೆ ಬಂದಂತೆ ಆಡಳಿತ ಮಾಡಿರೋದರಿಂದ ಕ್ಷೇತ್ರದಲ್ಲಿ ಪಕ್ಷಕ್ಕೆ ಹಾನಿಯಾಗಿದೆ. ಅದೆಲ್ಲವನ್ನೂ ಸರಿಪಡಿಸೋಕೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಮುತ್ತಣ್ಣ ಶಿವಳ್ಳಿ ಹೇಳುತ್ತಾರೆ.
ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಮುತ್ತಣ್ಣ ಶಿವಳ್ಳಿ
ಹೈಕಮಾಂಡ್ ಟಿಕೆಟ್ ಕೊಡುತ್ತೆ ಅನ್ನೋ ವಿಶ್ವಾಸ ನನಗಿದೆ. ಮುಂದಿನ ಚುನಾವಣೆಯಲ್ಲಿಯೂ ನಮ್ಮದೇ ಕುಟುಂಬ ಒಬ್ಬರು ಶಾಸಕರಾಗುತ್ತೇವೆ ಎಂದು ನ್ಯೂಸ್ 18ಗೆ ಮಾಜಿ ಸಚಿವ ದಿ. ಸಿ.ಎಸ್.ಶಿವಳ್ಳಿ ಸಹೋದರ ಮುತ್ತಣ್ಣ ಶಿವಳ್ಳಿ ತಿಳಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ಗೆ ಬಿಸಿ ತುಪ್ಪವಾದ ಕುಂದಗೋಳ
ಹಾಲಿ ಶಾಸಕರಿರೋ ಕ್ಷೇತ್ರದಲ್ಲಿಯೇ 17 ಜನರಿಂದ ಅರ್ಜಿ ಸಲ್ಲಿಕೆಯಾಗಿದ್ದು ಹುಬ್ಬೇರುವಂತೆ ಮಾಡಿದೆ. ಕುಂದುಗೋಳ ಶಾಸಕಿ ಕುಸುಮಾವತಿ ಶಿವಳ್ಳಿಗೆ ಟಿಕೆಟ್ ನೀಡದಿರುವಂತೆ ಬಹುತೇಕರು ಪಟ್ಟು ಹಿಡಿದಿದ್ದಾರೆ. ಇದೀಗ ಕುಟುಂಬದ ಸದಸ್ಯರಿಂದಲೇ ಶಾಸಕಿ ವಿರುದ್ಧ ಅಪಸ್ವರ ಕೇಳಿಬಂದಿದ್ದು, ಕುಂದಗೋಳ ಬೆಳವಣಿಗೆ ಹೈಕಮಾಂಡ್ಗೂ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ.
ಟಿಕೆಟ್ ಸಿಗುತ್ತೆ ಅಂತಾರೆ ಕುಸುಮಾ ಶಿವಳ್ಳಿ
ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದೆ. ಆದರೆ ಅಂಥದ್ದೇನೂ ಇಲ್ಲ ಅಂತಾರೆ ಶಾಸಕಿ ಕುಸುಮಾವತಿ ಶಿವಳ್ಳಿ. ನನ್ನ ಜೊತೆ ಇತರರೂ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಪ್ರಜಾಧ್ವನಿ ಯಾತ್ರೆ ಹಿನ್ನೆಲೆಯಲ್ಲಿ ಒಂದಷ್ಟು ಗೊಂದಲವಾಗಿದೆ. ಅದೆಲ್ಲವೂ ಸರಿಹೋಗುತ್ತೆ. ಮುಂದಿನ ಚುನಾವಣೆಯಲ್ಲಿಯೂ ನನಗೆ ಟಿಕೆಟ್ ಸಿಗುತ್ತೆ ಎಂದು ಕುಸುಮಾ ಶಿವಳ್ಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರೋದ್ರಿಂದ ಒಂದಷ್ಟು ಭಿನ್ನಾಭಿಪ್ರಾಯ ಇರೋದು ಸಹಜ. ಅದೆಲ್ಲವನ್ನೂ ಸರಿಪಡಿಸುತ್ತೇವೆ. ಟಿಕೆಟ್ ಯಾರಿಗೆ ಕೊಡ್ತಾರೆ ಅನ್ನೋದನ್ನ ಪಕ್ಷದ ನಾಯಕರು ತೀರ್ಮಾನಿಸ್ತಾರೆ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಎಚ್.ಕೆ.ಪಾಟೀಲ್ (Former Minister HK Patil) ಅಭಿಪ್ರಾಯಪಟ್ಟಿದ್ದಾರೆ.
ಮಂತ್ರಿಗಿರಿ ಆಸೆ ಇದ್ದವರು ಸತ್ತು ದೆವ್ವವಾದ್ರು!
ಮಂತ್ರಿಗಳಾಗಬೇಕು ಅಂತಾ ಆಸೆ ಇಟ್ಟುಕೊಂಡವರು ಸತ್ತು ದೆವ್ವಗಳಾಗಿದ್ದಾರೆ ಎಂದು ಮಾಜಿ ಸಚಿವ ಸಾರಾ ಮಹೇಶ್ ವ್ಯಂಗ್ಯವಾಡಿದ್ದಾರೆ.
ವಿಧಾನಸಭೆಯಲ್ಲಿ ಮಾತಾಡಿದ ಸಾ.ರಾ ಮಹೇಶ್ (Former Minister Sa Ra Mahesh), ಮೊದಲು ಇಲ್ಲಿಗೆ ಆರಿಸಿ ಬರಬೇಕು ಅಂತಾ ಆಸೆಪಡ್ತಾರೆ. ಆಮೇಲೆ ಮಂತ್ರಿ ಆಗೋ ಆಸೆ ಹುಟ್ಟುತ್ತೆ. ನಂತರ ಇಂತದ್ದೇ ಖಾತೆ ಬೇಕು ಅನ್ನೋ ಆಸೆ ಬರತ್ತೆ. ಈ ತರಾ ಆಸೆ ಇಟ್ಟುಕೊಂಡ ಅನೇಕರು ಆಸೆ ತೀರದೇ ಸತ್ತೇ ಹೋಗಿದ್ದಾರೆ. ಅವರೆಲ್ಲಾ ದೆವ್ವಗಳಾಗಿ ವಿಧಾನಸೌಧದ ಸುತ್ತ ತಿರುಗಾಡ್ತಾ ಇರ್ತಾರೆ ಎಂದು ತಮಾಷೆ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ