• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮುಷ್ಕರ ಕೈ ಬಿಟ್ಟ ಸಾರಿಗೆ ನೌಕರರು; ಇಂದಿನಿಂದ ಮತ್ತೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ ಸಂಚಾರ ಆರಂಭ

ಮುಷ್ಕರ ಕೈ ಬಿಟ್ಟ ಸಾರಿಗೆ ನೌಕರರು; ಇಂದಿನಿಂದ ಮತ್ತೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ ಸಂಚಾರ ಆರಂಭ

ಬೆಂಗಳೂರು ಸಾರಿಗೆ ಸಂಸ್ಥೆ

ಬೆಂಗಳೂರು ಸಾರಿಗೆ ಸಂಸ್ಥೆ

ಏಪ್ರಿಲ್ 7ರಿಂದ 21ರವರೆಗೆ ಒಟ್ಟು 15 ದಿನಗಳ ಕಾಲ ಸಾರಿಗೆ ನೌಕರರ ಮುಷ್ಕರ ನಡೆದಿತ್ತು. ಹೈಕೋರ್ಟ್ ಆದೇಶದಂತೆ ನಿನ್ನೆ ನೌಕರರ ಸಂಘದವರು ಮುಷ್ಕರವನ್ನು ವಾಪಾಸ್ ಪಡೆದಿದ್ದರು. ಇಂದು ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳು ಬೆಂಗಳೂರಿನ ರಸ್ತೆಗೆ ಇಳಿದಿವೆ.

  • Share this:

ಬೆಂಗಳೂರು (ಏ. 22): ಕಳೆದ 15 ದಿನಗಳಿಂದ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಕೊನೆಗೂ ಅಂತ್ಯಗೊಂಡಿದೆ. 15 ದಿನಗಳ ಬಳಿಕ ಇಂದು ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳು ಬೆಂಗಳೂರಿನ ರಸ್ತೆಗೆ ಇಳಿದಿವೆ. ಸಾರಿಗೆ ಮುಷ್ಕರ ಅಂತ್ಯವಾದ ಹಿನ್ನೆಲೆಯಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭವಾಗಿದೆ. 6ನೇ ವೇತನ ಆಯೋಗ ಜಾರಿ ಸೇರಿದಂತೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ನಿನ್ನೆ ಆ ಮುಷ್ಕರವನ್ನು ವಾಪಾಸ್ ಪಡೆಯಲಾಗಿತ್ತು.


ಏಪ್ರಿಲ್ 7ರಿಂದ 21ರವರೆಗೆ ಒಟ್ಟು 15 ದಿನಗಳ ಕಾಲ ಸಾರಿಗೆ ನೌಕರರ ಮುಷ್ಕರ ನಡೆದಿತ್ತು. ಹೈಕೋರ್ಟ್ ಆದೇಶದಂತೆ ನಿನ್ನೆ ನೌಕರರ ಸಂಘದವರು ಮುಷ್ಕರವನ್ನು ವಾಪಾಸ್ ಪಡೆದಿದ್ದರು. ಹೀಗಾಗಿ, ಇಂದಿನಿಂದ‌ ರಾಜ್ಯಾದ್ಯಂತ ನಾಲ್ಕು ನಿಗಮದ ಸಾರಿಗೆ ವ್ಯವಸ್ಥೆ ಯಥಾಸ್ಥಿತಿಯಲ್ಲಿರಲಿದೆ. ಇಂದು ಮುಂಜಾನೆಯಿಂದ ಮೆಜೆಸ್ಟಿಕ್​ನ ಬಿಎಂಟಿಸಿ, ಹಾಗೂ ಕೆಎಸ್ಆರ್​ಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. 15 ದಿನಗಳಿಂದ ಬಸ್ಸಿಲ್ಲದೇ ಪರದಾಡ್ತಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.


ಮುಷ್ಕರದ ವೇಳೆ ಬಸ್ಸಿಲ್ಲದೇ, ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣಗಳು ಇಂದು ಮತ್ತೆ ಸಹಜ ಸ್ಥಿತಿಗೆ ಮರಳಿವೆ. ಮುಷ್ಕರ ವಾಪಾಸ್ ಪಡೆದಿದ್ದರಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಎಲ್ಲಾ ಡಿಪೋಗಳಿಂದ ಬಿಎಂಟಿಸಿ ಬಸ್ ಗಳು ಆಪರೇಟ್ ಆಗಿವೆ. ಕಳೆದ 15 ದಿನಗಳಿಂದ ರಾಜ್ಯಾದ್ಯಂತ ಸಾರಿಗೆ ನೌಕರರು ಕೈಗೊಂಡಿದ್ದ ಮುಷ್ಕರವನ್ನು ಕೈ ಬಿಡುವಂತೆ ಹೈಕೋರ್ಟ್​​ ಆದೇಶ ನೀಡಿತ್ತು. ಸರ್ಕಾರ ಮತ್ತು ಸಾರಿಗೆ ನೌಕರರ ಮಧ್ಯ ಪ್ರವೇಶ ಮಾಡಿದ್ದ ಕರ್ನಾಟಕದ ಉಚ್ಛ ನ್ಯಾಯಾಲಯ ಸೇವೆಗೆ ಹಾಜರಾಗುವಂತೆ ಸಾರಿಗೆ ನೌಕರರಿಗೆ ಸೂಚಿಸಿತ್ತು.


6ನೇ ವೇತನ ಆಯೋಗದ ಅನುಷ್ಠಾನ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಕೈಗೊಂಡಿದ್ದರು. ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಎಂದು ಸಾರಿಗೆ ಇಲಾಖೆ ನೌಕರರಿಗೆ ನೋಟಿಸ್​ ಜಾರಿ ಮಾಡಿತ್ತು. ನೋಟಿಸ್​ ಬಳಿಕವೂ ಕರ್ತವ್ಯಕ್ಕೆ ಹಾಜರಾಗದ ಹಲವು ನೌಕರರನ್ನು ಸಾರಿಗೆ ಇಲಾಖೆ ಅಮಾನತು ಮಾಡಿತ್ತು.


15 ದಿನಗಳ ಸಾರಿಗೆ ನೌಕರರ ಮುಷ್ಕರದಿಂದ ಸರ್ಕಾರಕ್ಕೆ ಭಾರೀ ನಷ್ಟ ಉಂಟಾಗಿದೆ. ನಾಲ್ಕು ಸಾರಿಗೆ ನಿಗಮಗಳಿಂದ ಪ್ರತಿದಿನ 17 ಕೋಟಿ ರೂ. ಆದಾಯ ಸಿಗುತ್ತಿತ್ತು. ಕೆಎಸ್ಆರ್​ಟಿಸಿಗೆ ನಿತ್ಯ ಪ್ರತಿದಿನ 7 ಕೋಟಿ ರೂ. ಆದಾಯ ಹರಿದುಬರುತ್ತಿತ್ತು. ಯುಗಾದಿ ಹಬ್ಬಕ್ಕೆ ಹೆಚ್ಚುವರಿ ಆದಾಯ ಸಿಗುತ್ತಿತ್ತು. ಆದರೆ, ಯುಗಾದಿ ಹಬ್ಬದ ಸಮಯದಲ್ಲೇ ನೌಕರರು ಮುಷ್ಕರ ಹೂಡಿರುವುದರಿಂದ ಸರ್ಕಾರಕ್ಕೆ ಎರಡೇ ದಿನಗಳಲ್ಲಿ 44 ಕೋಟಿ ನಷ್ಟವಾಗಿತ್ತು. ಬಿಎಂಟಿಸಿ ನಿತ್ಯ ಕಾರ್ಯಾಚರಣೆಯ ಆದಾಯ 3 ಕೋಟಿ ರೂ., ವಾಯುವ್ಯ ಸಾರಿಗೆ ನಿಗಮದ ನಿತ್ಯ ಆದಾಯ 3.5 ಕೋಟಿ ರೂ., ಈಶಾನ್ಯ ಸಾರಿಗೆ ನಿಗಮದ ನಿತ್ಯದ ಆದಾಯ 3.5 ಕೋಟಿ ರೂ. ಇರುತ್ತಿತ್ತು. ಹೀಗಾಗಿ, ಕಳೆದ 15 ದಿನಗಳಲ್ಲಿ ಸಾರಿಗೆ ನಿಗಮಗಳಿಗೆ ನೂರಾರು ಕೋಟಿ ರೂ. ನಷ್ಟವಾಗಿದೆ.


ಸಾರಿಗೆ ನೌಕರರಿಗೆ ಸರ್ಕಾರ ಕೊಟ್ಟ 9 ಭರವಸೆಗಳು:


1) ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ.


2) ಕೋವಿಡ್ 19ನಿಂದ ಸಾವಿಗೀಡಾದರೆ 30 ಲಕ್ಷ ಪರಿಹಾರ‌.


3) ಅಂತರ್ ನಿಗಮ ವರ್ಗಾವಣೆಗೆ ಸೂಕ್ತ ನೀತಿ ರಚನೆ.


4) ತರಬೇತಿ ನೌಕರರ ಅವಧಿಯನ್ನ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ.


5) ನಿಗಮಗಳಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿಗೆ ತರುವುದು.


6) ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡಲು ತೀರ್ಮಾನ.


7) ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ಜಾರಿ.


8) ಎನ್ಐ ಎನ್ ಐಎನ್ಸಿ ಪದ್ದತಿ ಬದಲಾಗಿ ಪರ್ಯಾಯ ವ್ಯವಸ್ಥೆ ಜಾರಿ.


9) ವೇತನ ಪರಿಷ್ಕರಣೆ ಸಂಬಂಧಿಸಿದಂತೆ 6ನೇ ವೇತನ ಆಯೋಗ ಶಿಫಾರಸು ಪರಿಗಣನೆ ( ಸರ್ಕಾರದ ಆರ್ಥಿಕ ಅಂಶ ಪರಿಗಣಿಸಿ ತೀರ್ಮಾನ)

top videos
    First published: