ಹಾಸನ: ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬೆ ದೇವಿಯ (hasanamba temple) ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ಸಿಂಧಗಿ-ಹಾನಗಲ್ ಉಪ ಚುನಾವಣೆಯಲ್ಲಿ (by election) ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣಾ ಫಲಿತಾಂಶ ನವೆಂಬರ್ 2ರಂದು ಗೊತ್ತಾಗುತ್ತೆ. ಎರಡು ಪಕ್ಷದವರು ನಾವು ಮುಂದಿದ್ದೇವೆ ಅಂತಾರೆ, ನಿಜವಾಗಿಯೂ ನಾವು ಮುಂದಿದ್ದೇವೆ. ಎರಡು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಮೂರು ಅಂಶಗಳ ಮೂಲಕ ಚುನಾವಣೆ ಮಾಡಿದ್ದೇವೆ. ಮೊದಲನೆಯದು ಬೂತ್ ಮಟ್ಟದಿಂದ ಕಾರ್ಯಕರ್ತರ ಸಂಘಟನೆ ಬಲವಾಗಿದೆ. ಎರಡನೆಯದು ಯಡಿಯೂರಪ್ಪ (yediyurappa) ಸಿಎಂ ಆಗಿದ್ದಾಗ ಮಾಡಿದ್ದ ಅಭಿವೃದ್ಧಿ ಕಾರ್ಯಗಳು, ಸಿಎಂ ಬಸವರಾಜ ಬೊಮ್ಮಯಿ (cm basavaraj bommai) ಮಾಡುತ್ತಿರುವ ಅಭಿವೃದ್ಧಿ ಕಾರ್ಯ. ಮೂರನೆಯದು ನಾಯಕತ್ವ ಎಂದರು.
ಉಗ್ರಪ್ಪ ಮೇಲೆ ಕ್ರಮ ಕೈಗೊಂಡಿಲ್ಲ ಏಕೆ?
ಕಾಂಗ್ರೆಸ್ನಲ್ಲಿ ನಾಯಕರು ಯಾರು ಅಂಥಾ ಕೇಳುವ ಸ್ಥಿತಿ ಎದುರಾಗಿದೆ, ಅವರಲ್ಲೇ ಗೊಂದಲಗಳಿವೆ. ಇಡೀ ವಿಶ್ವವೇ ಮೆಚ್ಚಿರುವ ಮೋದಿಯವರ ನಾಯಕತ್ವ. ಈ ಚುನಾವಣೆಯಲ್ಲಿ ನಮ್ಮ ಮೂರು ಅಂಶಗಳು ನಮಗೆ ಅನುಕೂಲವಾಗಿವೆ. ಕಾಂಗ್ರೆಸ್-ಜೆಡಿಎಸ್ ನಲ್ಲಿ ಗೊಂದಲಗಳಿವೆ. ಅದರಲ್ಲೂ ಕಾಂಗ್ರೆಸ್ ನಲ್ಲಿ ಎರಡು ಗುಂಪುಗಳಿವೆ. ಒಂದು ಡಿ.ಕೆ.ಶಿವಕುಮಾರ್ ಗುಂಪು, ಸಲೀಂ-ಉಗ್ರಪ್ಪ ಮಾತನಾಡಿರುವುದನ್ನು ನೋಡಿದ್ದೇವೆ. ಸಲೀಂ ಅವರ ಬಗ್ಗೆ ಮಾತ್ರ ಕ್ರಮ ಕೈಗೊಂಡಿದ್ದಾರೆ, ಉಗ್ರಪ್ಪ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಗುಂಪುಗಾರಿಕೆ ಹೆಚ್ಚಾಗುತ್ತೆ ನೋಡ್ತಿರಿ..
ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಚುನಾವಣೆ ಮುಗಿದ ಮೇಲೆ ಇನ್ನೂ ಜಾಸ್ತಿಯಾಗುತ್ತೆ. ಬರುವ ಚುನಾವಣೆ ವೇಳೆಗೆ ಕಾಂಗ್ರೆಸ್ ಗುಂಪುಗಾರಿಕೆ ಜಾಸ್ತಿಯಾಗುತ್ತೆ. ಸಿದ್ದರಾಮಯ್ಯ ನಾನೇ ಸಿಎಂ ಅಂತಾರೆ, ಪರಮೇಶ್ವರ್ ದಲಿತ ಸಿಎಂ ಆಗಬೇಕು ಅಂತಾರೆ. ಎಂ.ಬಿ.ಪಾಟೀಲ್, ತನ್ವೀರ್ ಸೇಠ್ ಅವರದ್ದೇ ಗುಂಪು, ಡಿ.ಕೆ.ಶಿವ ಕುಮಾರ್ ನಾನೇ ಸಿಎಂ ಅಂತಾರೆ. ಕೇಂದ್ರ ನಾಯಕರು ಬಹಿರಂಗವಾಗಿ ಮಾತನಾಡಬೇಡಿ ಅಂದಿದ್ದಕ್ಕೆ ಸುಮ್ಮನಾಗಿದ್ದಾರೆ ಎಂದು ಕುಹಕವಾಡಿದರು.
ನಾನು ರಾಜಕೀಯ ಬಿಟ್ಟರು ಪರ್ವಾಗಿಲ್ಲ
ಬಿಜೆಪಿಯಲ್ಲಿ ಗುಂಪುಗಾರಿಕೆ ವಿವಾದದ ಪ್ರಶ್ನೆಯೇ ಇಲ್ಲ, ಅದರಿಂದ ಎಲ್ಲಾ ಚುನಾವಣೆಯನ್ನು ಬಿಜೆಪಿ ಗೆಲ್ಲುತ್ತಾ ಬಂದಿದೆ. ಗುಂಪುಗಾರಿಕೆಯಿಂದ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು, ಸರ್ಕಾರವನ್ನು ಕಳೆದುಕೊಂಡರು, ಅನೇಕ ಮಂತ್ರಿಗಳು ಸೋತರು ಎಂದು ವಾಗ್ದಾಳಿ ನಡೆಸಿದರು. ನಾನು ದೇವಾಲಯದಲ್ಲಿ ಕುಳಿತು ಹೇಳುತ್ತಿದ್ದೇನೆ, ನಾನು ರಾಜಕೀಯ ಬಿಟ್ಟರು ಪರ್ವಾಗಿಲ್ಲ. ಇಡೀ ರಾಜ್ಯದ ಜನ ರಾಜಕಾರಣಿಗಳನ್ನು ಛೀ ಥೂ ಎನ್ನುತ್ತಿದ್ದಾರೆ. ಯಾರೂ ಕೂಡ ವೈಯುಕ್ತಿಕವಾಗಿ ಟೀಕೆಗಳನ್ನು ಮಾಡಬಾರದು. ವೈಯುಕ್ತಿಕವಾಗಿ ಅಶ್ಲೀಲ ಪದಗಳನ್ನು ಬಳಸುವುದು ಆ ಸಂದರ್ಭದಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಆಗಬಹುದು. ನಾನು ಸೇರಿ ಯಾರೂ ಕೂಡ ವೈಯುಕ್ತಿಕವಾಗಿ ಟೀಕೆ ಮಾಡಬಾರದು ಎಂದರು.
ಅಪ್ಪು ಮೇಲೆ ಒಂದೇ ಒಂದು ಅಪಾದನೆ ಇರಲಿಲ್ಲ
ಇನ್ನು ನಟ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣಕ್ಕೆ ಸಚಿವರು ಬೇಸರ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯದ ಅತೀ ಚಿಕ್ಕ ವಯಸ್ಸಿನ ಪ್ರತಿಭಾವಂತ ಚಿತ್ರನಟ. ಅತ್ಯಂತ ಚಿಕ್ಕವಯಸ್ಸಿನ ಪ್ರತಿಭಾವಂತ ನಟನನ್ನು ನಾನು ನೋಡಲಿಲ್ಲ. ತುಂಬಾ ಸೌಜನ್ಯಶೀಲ, ಎಲ್ಲರೊಟ್ಟಿಗೆ ಬೆರೆಯುತ್ತಿದ್ದರು. ಅವರ ಮೇಲೆ ಒಂದೇ ಒಂದು ಅಪಾದನೆ ಬರಲಿಲ್ಲ. ಚಿತ್ರನಟರೆಂದರೆ ದುಡಿಮೆಯನ್ನ ಪೂರ್ಣ ಸ್ವಂತಕ್ಕೆ ಬಳಸಿಕೊಳ್ಳದೆ ವೃದ್ದಾಶ್ರಮ, ಶಾಲೆಗಳು, ಗೋಶಾಲೆಗಳು ಇರಬಹುದು ಅಷ್ಟು ಸಮಾಜ ಸೇವೆ ಮಾಡಿದ್ದಾರೆ. ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ, ಅವರು ಬೇರೆಯವರಿಗೆ ಮಾದರಿ . ಅವರನ್ನು ಕಳೆದುಕೊಂಡು ನಿಜವಾಗಿಯೂ ಚಿತ್ರರಂಗ ಬಡವಾಗಿದೆ. ಅದನ್ನು ತುಂಬಲು ಎಲ್ಲರೂ ಸೇರಿ ಪ್ರಯತ್ನ ಮಾಡಬೇಕು. ಕೇವಲ ಅವರ ಕುಟುಂಬಕ್ಕೆ ಮಾತ್ರ ದುಃಖವಲ್ಲ. ಇಡೀ ರಾಜ್ಯ ಅಷ್ಟೇ ಅಲ್ಲಾ ಬೇರೆ ಬೇರೆ ರಾಜ್ಯದವರು ದು:ಖತಪ್ತರಾಗಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕೊಡಲಿ. ಅಂತಹ ಪ್ರತಿಭಾವಂತ ನಟರು ಮುಂದೆ ಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ