ಬಾಗಲಕೋಟೆ(ಡಿ.19): ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಗಳಲ್ಲಿ ಅಸಮಾಧಾನದ ಹೊಗೆ ಆಡಲಾರಂಭಿಸಿದೆ. ನಾಯಕರೆಲ್ಲರೂ ನಿಧಾನವಾಗಿ ತಮ್ಮ ಆಕ್ರೋಶ ಹೊರ ಹಾಕಲಾರಂಭಿಸಿದ್ದಾರೆ. ಸದ್ಯ ಈ ಸಾಲಿಗೆ ಹಿರಿಯ ನಾಯಕ ಕೆ. ಎಸ್. ಈಶ್ವರಪ್ಪ ಹೆಸರೂ ಸೇರ್ಪಡೆಯಾಗಿದೆ. ಹೌದು ಸಚಿವ ಸ್ಥಾನ ಸಿಗದಕ್ಕೆ ಈಶ್ವರಪ್ಪ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಈ ಸಂಬಂಧ ಮಾತನಾಡಿದ ಅವರು ನನಗೆ ನೋವು ತಂದಿದೆ, ಅಪಮಾನ ಆಗ್ತಿದೆ. ಅದಕ್ಕೆ ಸೌಜನ್ಯದ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಹೈಕಮಾಂಡ್ ಹಾಗೂ ಸಿಎಂ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಈ ಸಂಬಂಧ ಮಾತನಾಡಿದ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಬೆಳಗಾವಿಗೆ ಹೋಗ್ತೇನೆ ಆದ್ರೆ ಅಧಿವೇಶನಕ್ಕೆ ಹೋಗಲ್ಲ. ಅಧಿವೇಶನದಲ್ಲಿ ನಾನು ಇರಲ್ಲ ಅಂತ ಅಧ್ಯಕ್ಷರಿಗೆ ಪತ್ರ ಕೊಟ್ಟು, ಅನುಮತಿ ತೆಗೆದುಕೊಳ್ಳೋಕೆ ಹೋಗ್ತೀನಿ. ಯಾಕೆ ಅಂತ ನೀವು ಕೇಳ್ತೀರಿ ಅದನ್ನ ನಾನೇ ಹೇಳ್ತೀನಿ. ಯಾಕೆ ಅಂದ್ರೆ ನನ್ನ ಸ್ನೇಹಿತರು ಒಬ್ಬರು
ಅಪರಾಧದಿಂದ ಮುಕ್ತವಾದ ವ್ಯಕ್ತಿಗಳಿಗೆ ಯಾವ ಕಾರಣಕ್ಕೂ ಶಿಕ್ಷೆ ಆಗಲ್ಲ ಅಂತ ಹೇಳಿದ್ದಾರೆ. ನನ್ನ ವಿಚಾರದಲ್ಲಿ ತೀರ್ಪು ಬಂದಾಗಿದೆ, ಕ್ಲಿನ್ ಚಿಟ್ ಸಿಕ್ಕಾಗಿದೆ. ನಿಮ್ಮನ್ನ ಮಂತ್ರಿ ಮಾಡ್ತೀವೆ ಮಂತ್ರಿ ಮಾಡ್ತೀವಿ ಎಂದಿದ್ದಾರೆ. ಇವತ್ತು ನಾಳೆ ಅಂತ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸ್ತಿದ್ದಾರೆ. ನಿಮ್ಮಂತವರು ಮಂತ್ರಿ ಮಂಡಲದಲ್ಲಿ ಇರಬೇಕು ಅಂತ ಹೇಳ್ತಾರೆ, ಆದ್ರೆ ಯಾತಕ್ಕೆ ತಗೊಳ್ತಿಲ್ಲ ಅಂತ ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Karnataka Politics: ಅಧಿವೇಶನಕ್ಕೂ ಮುನ್ನ ರಮೇಶ್ ಜಾರಕಿಹೊಳಿ, ಈಶ್ವರಪ್ಪ ಕನಸು ನನಸಾಗುತ್ತಾ?
ಇಡೀ ರಾಜ್ಯದಲ್ಲಿ ನಮ್ಮ ಕಾರ್ಯಕರ್ತರು, ಮಠಾಧೀಶರು ನನಗೆ ಫೋನ್ ಮಾಡ್ತಾರೆ ಯಾಕೆ ನಿಮ್ಮನ್ನ ಮಂತ್ರಿ ಮಾಡ್ತಿಲ್ಲ ಅಂತ ಕೇಳ್ತಾರೆ. ನಮಗೆಲ್ಲ ನೋವು ಆಗಿದೆ ಅಂತ ಹೇಳಿದ ಸಂಧರ್ಭದಲ್ಲಿ ನನಗೂ ನೋವು ಆಗ್ತಿದೆ ಅಪಮಾನ ಆಗ್ತಿದೆ. ಅದನ್ನ ಅವರಿಗೆ ಅರ್ಥ ಮಾಡಿಸಬೇಕು ಅನ್ನೋ ಒಂದೇ ಕಾರಣಕ್ಕೆ ನಾನು ಒಂದು ರೀತಿಯ ಸೌಜನ್ಯ ಪ್ರತಿಭಟನೆ ಮಾಡ್ತೀನಿ. ಮೊದಲನೇ ಬಾರಿ ವಿಧಾನಸೌಧಕ್ಕೆ ಕಾಲಿಟ್ಟಾಗಿನಿಂದ ಈ ತೀರ್ಪು ತಡ ಆಗುತ್ತೆ ಅಂದ್ರೂ ಕೂಡ ನಾನು ಒಂದೇ ಒಂದು ದಿನ ಚಕ್ಕರ್ ಹೊಡೆಯಲಿಲ್ಲ ಅನುಮತಿ ತಗೊಂಡಿಲ್ಲ ಎಂದಿದ್ದಾರೆ.
ಅಲ್ಲದೇ ನಾನು ಕ್ಲಿನ್ ಚಿಟ್ ತಗೊಂಡು ನಿರಪರಾಧಿ ಅಂತ ತೀರ್ಮಾನ ಆದ ನಂತರವೂ ಕೂಡ, ಇಡೀ ರಾಜ್ಯದ ಜನರು ಪ್ರಶ್ನೆ ಮಾಡೋ ಸಂಧರ್ಭದಲ್ಲಿ, ನಿಮ್ಮ ಮುಖಾಂತರ ನಾನು (ಮುಖ್ಯಮಂತ್ರಿಗೆ) ಕೇಳೋಕೆ ಇಷ್ಟಾ ಪಡ್ತೀನಿ, ನೀವು ಉತ್ತರ ಕೊಡಿ. ಯಾತಕ್ಕೆ ಈಶ್ವರಪ್ಪ ನನ್ನ ತೆಗೆದುಕೊಂಡಿಲ್ಲ? ಕೇಂದ್ರ ನಾಯಕರು ಅನ್ನೋ ಮಾತು ಆಡಬಹುದು. ಮುಖ್ಯಮಂತ್ರಿಗೆ ತನ್ನ ಸಚಿವ ಸಂಪುಟದಲ್ಲಿ ಯಾರ್ ಯಾರು ಇಟ್ಕೋಬೇಕು ಅನ್ನೋ ಅಧಿಕಾರ ಇರುತ್ತೆ. ಕೇಂದ್ರದ ನಾಯಕರು ಕೂಡ ಈ ವಿಚಾರದಲ್ಲಿ ಒಳ್ಳೆ ಅಭಿಪ್ರಾಯ ಇಟ್ಟುಕೊಂಡು ತಗೋಬೇಕಿತ್ತು. ಮುಖ್ಯಮಂತ್ರಿಗಳು ಇದನ್ನ ಗಮನಿಸಬೇಕು, ಬಹಿರಂಗವಾಗಿ ಯಾಕೆ ಹೇಳ್ತೀನಿ ಅಂದ್ರೆ ಇದು ಸೌಜನ್ಯ ಪ್ರತಿಭಟನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: CM Ibrahim: ಶಿವಮೊಗ್ಗದಲ್ಲಿ ನಡೆಯೋ ಕೊಲೆ, ಗಲಭೆಗಳಿಗೆ ಈಶ್ವರಪ್ಪ ಕಾರಣ; ಸಿ ಎಂ ಇಬ್ರಾಹಿಂ ಆರೋಪ
ಇದೇ ಸಂದರ್ಭದಲ್ಲಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದಿರಲು ಬಿಜೆಪಿಯಲ್ಲಿ ನಿಮ್ಮನ್ನು ನಿರ್ಲಕ್ಷ್ಯ ಮಾಡ್ತಿದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ನಿರ್ಲಕ್ಷ್ಯ ಎನ್ನುವ ಪ್ರಶ್ನೆ ಬರಲ್ಲ. ನನಗೇನು ವಯಸ್ಸಾಗಿದೆಯಾ.? ಇದನ್ನು ತೀರ್ಮಾನ ಮಾಡೋದು ಸಿಎಂ ಅಲ್ಲ. ಟಿಕೆಟ್ ಕೊಡುವ ಸಂದರ್ಭದಲ್ಲಿ ಪಕ್ಷ ಏನು ತೀರ್ಮಾನ ಮಾಡುವಂತದ್ದು. ಮೊನ್ನೆ ತನಕ ನಾನು ಸಂಪುಟದಲ್ಲಿ ಇದ್ದವನು. ನನ್ನ ಮೇಲೆ ಆಪಾದನೆ ಬಂದ ಮೇಲೆ ರಾಜೀನಾಮೆ ಕೊಡುತ್ತೇನೆ ಎಂದಿದ್ದೆ. ಪ್ರಾರಂಭದಲ್ಲಿ ಬೇಡ ಅಂದ್ರು, ನಾನು ಅವರನ್ನು ಒಪ್ಪಿಸಿ ರಾಜೀನಾಮೆ ಕೊಟ್ಟಿದ್ದೆ. ಕೆ.ಜೆ.ಚಾರ್ಜ್ ಅವರು ಆಪಾದನೆ ಹೊತ್ತಾಗ ರಾಜೀನಾಮೆ ಕೊಡಿ ಎಂದು ವಿಪಕ್ಷ ನಾಯಕನಾಗಿ ಒತ್ತಾಯಿಸಿದ್ದೆ. ಅವರು ರಾಜೀನಾಮೆ ಕೊಟ್ರು. ಕ್ಲೀನ್ ಚೀಟ್ ಬಂದ ತಕ್ಷಣ ಕಾಂಗ್ರೆಸ್ ನವರು ಅವರನ್ನ ಸಂಪುಟಕ್ಕೆ ಸೇರಿಸಿಕೊಂಡ್ರು. ಈಗ ನನಗೆ ಕ್ಲೀನ್ ಚೀಟ್ ಸಿಕ್ಕಿದೆ. ಆದರೆ, ನಮ್ಮ ಸರ್ಕಾರದ ನಾಯಕ ಬೊಮ್ಮಾಯಿಗೆ ಏನು ತೊಂದ್ರೆ? ನನಗೆ ಗೊತ್ತಿಲ್ಲ. ಯಾವುದೇ ವಿಚಾರದಲ್ಲಿ ಪಕ್ಷ ನನ್ನ ನಿರ್ಲಕ್ಷ್ಯ ಮಾಡಿಲ್ಲ. ಮೊನ್ನೆ ಪಕ್ಷದ ಕಚೇರಿ ಉದ್ಘಾಟನೆಗೆ ಬಾಗಲಕೋಟೆಗೆ ಕಳಿಸಿತ್ತು. ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಕಳಿಸಿತ್ತು. ನಿರ್ಲಕ್ಷ್ಯ ಮಾಡಿದ್ರೆ ನನ್ನೇಕೆ ಕಳಿಸುತ್ತಿತ್ತು.? ಎಂದು ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ