ಶಿವಮೊಗ್ಗ: ಚುನಾವಣೆ ಸಮಯದಲ್ಲಿ ಟಿವಿ, ಕುಕ್ಕರ್, ಸೀರೆಗಳನ್ನು ಮತದಾರರಿಗೆ ಕೊಟ್ಟು (Gift Politics) ಅವರನ್ನು ಓಲೈಸುವ ಪ್ರಯತ್ನವನ್ನು ಇತ್ತೀಚಿನ ವರ್ಷಗಳಲ್ಲಂತೂ ರಾಜಕಾರಣಿಗಳು ಹೆಚ್ಚಿಸಿದ್ದಾರೆ. ಎಲ್ಲಿ ನೋಡಿದರೂ ಮತದಾರರ ಓಲೈಕೆಗೆ ಗಿಫ್ಟ್ ಪಾಲಿಟಿಕ್ಸ್ ನಡೀತಿದೆ. ಇದೆಲ್ಲದರ ಮಧ್ಯೆ ಶಿವಮೊಗ್ಗದಲ್ಲಿ (Shivamogga) ಹೊಸ ಗಿಫ್ಟ್ ಮತದಾರರಿಗೆ ನೀಡಲಾಗಿದೆ.
ಹೌದು.. ಶಿವಮೊಗ್ಗದಲ್ಲಿ ಕೊಳಚೆ ಪ್ರದೇಶದ ಜನರಿಗೆ ಸೊಳ್ಳೆ ಪರದೆ ನೀಡುವ ಮೂಲಕ ಚುನಾವಣೆ ಸಮಯದಲ್ಲಿ ಓಲೈಸುವ ಕೆಲಸವನ್ನು ಮಾಡಲಾಗಿದೆ. ಅಂದ ಹಾಗೆ ಈ ಸೊಳ್ಳೆ ಪರದೆಯನ್ನು ನೀಡಿದ್ದು ಬೇರ್ಯಾರೂ ಅಲ್ಲ, ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಹಾಗೂ ಅವರ ಪುತ್ರ ಕಾಂತೇಶ್ (KE Kanthesh). ಸೊಳ್ಳೆ ಪರದೆ ನೀಡುತ್ತಾರೆ ಎನ್ನುವ ಸುದ್ದಿ ತಿಳಿದು ಸ್ಥಳೀಯ ನಿವಾಸಿಗಳು ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದರು.
ಸೊಳ್ಳೆ ಪರದೆಗೆ ಮುತ್ತಿಕ್ಕಿದ ಜನ!
ಮಾಜಿ ಸಚಿವ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಜನ್ಮದಿನ ಹಿನ್ನೆಲೆ ಶಿವಮೊಗ್ಗ ನಗರದ ಗುರುಪುರ ನಂಜುಡೇಶ್ವರ ದೇವಸ್ಥಾನದಲ್ಲಿ ಕೊಳಚೆ ಪ್ರದೇಶದ ಮನೆಗಳಿಗೆ ಸೊಳ್ಳೆ ಪರದೆ ಹಂಚುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಸೊಳ್ಳೆ ಪರದೆ ನೀಡುತ್ತಾರೆ ಅನ್ನೋದು ತಿಳಿಯುತ್ತಿದ್ದಂತೆ ಹೆಂಗಸರು, ಗಂಡಸರು ಎನ್ನದೆ ಸೊಳ್ಳೆ ಪರದೆಗಾಗಿ ಮುಗಿಬಿದ್ದರು. ಹೀಗಾಗಿ ಸೊಳ್ಳೆ ಪರದೆ ಕೊಡುವ ಜಾಗದಲ್ಲಿ ಕೆಲಕಾಲ ನೂಕು ನುಗ್ಗಲು ಉಂಟಾಯಿತು.
ಇನ್ನು ಶಿವಮೊಗ್ಗ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗುರುಪುರದಲ್ಲಿ ಕೊಳಚೆ ಪ್ರದೇಶದ ಮನೆಗಳಿಗೆ ಸೊಳ್ಳೆ ಪರದೆ ಹಂಚುವ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಬಮಾದರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗದ ಈಶ್ವರಾನಂದ ಸ್ವಾಮೀಜಿ, ಜಡೆ ಮಠದ ಮಹಾಂತ ಸ್ವಾಮೀಜಿ, ಕೆಎಸ್ ಈಶ್ವರಪ್ಪ, ಕೆ ಈ. ಕಾಂತೇಶ್ ಭಾಗಿಯಾಗಿದ್ರು.
ಇನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಯಸ್ಸಾದ ಕಾರಣದಿಂದ ಮಾಜಿ ಸಚಿವ ಈಶ್ವರಪ್ಪಗೆ ಟಿಕೆಟ್ ತಪ್ಪುವ ಆತಂಕವಿದ್ದು, ಹೀಗಾಗಿ ನನಗೆ ಟಿಕೆಟ್ ಸಿಗದಿದ್ದರೆ ನನ್ನ ಮಗನಿಗೆ ಟಿಕೆಟ್ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಕೆಎಸ್ ಈಶ್ವರಪ್ಪ ಪಕ್ಷದ ವರಿಷ್ಠರಿಗೆ ಒತ್ತಡ ತರುತ್ತಿದ್ದಾರೆ. ಹೊಳಲೂರು ಕ್ಷೇತ್ರದ ಮಾಜಿ ಜಿಪಂ ಸದಸ್ಯರಾಗಿರುವ ಕೆ.ಇ ಕಾಂತೇಶ್ ಚುನಾವಣೆಯ ಹಿನ್ನೆಲೆ ತನ್ನ ತಂದೆಯೊಂದಿಗೆ ಕ್ಷೇತ್ರದಾದ್ಯಂತ ಸಂಚಾರ ಮಾಡುತ್ತಿದ್ದಾರೆ.
ದಾವಣಗೆರೆಯಲ್ಲೂ ಕುಕ್ಕರ್-ಸಾರಿ ಪಾಲಿಟಿಕ್ಸ್ ಜೋರು
ದಾವಣಗೆರೆ-ಉತ್ತರ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಅಭಿಮಾನಿಗಳು ಸಾರಿ-ಕುಕ್ಕರ್ ಹಂಚುತ್ತಿದ್ದು, ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಸುಮಾರು 16.65 ಲಕ್ಷದ ಗೃಹಬಳಕೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: KS Eshwarappa: ಭ್ರಷ್ಟಾಚಾರದ ವಿರುದ್ಧ ಭ್ರಷ್ಟಾಚಾರಿಗಳೇ ಬಂದ್ ಕರೆ ಕೊಟ್ಟಿದ್ದಾರೆ; ಕಾಂಗ್ರೆಸ್ಗೆ ಈಶ್ವರಪ್ಪ ಟಾಂಗ್
ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ ಭಾವಚಿತ್ರವಿರೋ ಸಾರಿ ಮತ್ತು ಕುಕ್ಕರ್ ಹಂಚಿಕೆ ಮಾಡಲಾಗಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಯುಗಾದಿ ಹಬ್ಬದ ಪ್ರಯುಕ್ತ ಚುನಾವಣೆಗೂ ಮುನ್ನವೇ ಅಪ್ಪ ಮಗ ಸೇರಿ ಸೀರೆ-ಕುಕ್ಕರ್ ಹಂಚಿಕೆ ಮಾಡುತ್ತಿದ್ದಾರೆ.
ದೂರು ದಾಖಲಾದ ಹಿನ್ನೆಲೆಯಲ್ಲಿ ತಡರಾತ್ರಿ ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ ತವಾ ಮತ್ತು ಆಜಾದ್ ನಗರದ ಗೋಡೌನ್ ಒಂದರಲ್ಲಿ ಅಕ್ರಮವಾಗಿ ಇಡಲಾಗಿದ್ದ ಕುಕ್ಕರ್ಗಳನ್ನು ಪೊಲೀಸರು ವಶಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ