ಯಲಹಂಕ : ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಅವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಸಮರೋಪ ಸಮಾರಂಭದಲ್ಲಿ ಭಾಗವಹಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಮತ್ತು ತೋಟಗಾರಿಕಾ ಸಚಿವ ನಾರಾಯಣಗೌಡ ಜಿಕೆವಿಕೆ ಅವಿಷ್ಕರಿಸಿದ ನೂತನ ತಳಿಗಳು ಮತ್ತು ನೂತನ ಕೃಷಿ ತಾಂತ್ರಿಕತೆಯ ಪ್ರದರ್ಶನ ಸ್ಥಳಗಳಿಗೆ ಭೇಟಿ ನೀಡಿದರು.
ಸಚಿವರಿಗೆ ಕೃಷಿ ವಿಜ್ಞಾನಿಗಳು ನೂತನ ತಳಿಗಳಾದ ನೆಲಗಡಲೆ, ಅಲಸಂದೆ, ಮೇವಿನ ಅಲಸಂದೆ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು. ಜಿಕೆವಿಕೆ ಕೃಷಿ ವಿಜ್ಞಾನಿಗಳು ಅವಿಷ್ಕರಿಸಿ 17 ಕೃಷಿ ತಾಂತ್ರಿಕತೆಯ ಬಗ್ಗೆ ಸಹ ಮಾಹಿತಿ ನೀಡಲಾಯಿತು. ಇದೇ ಸಮಯದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಕೃಷಿ ವಿಜ್ಞಾನಿಗಳು ಕಂಡು ಹಿಡಿದಿರುವ ನೂತನ ತಳಿಗಳು ಮತ್ತು ಕೃಷಿ ತಾಂತ್ರಿಕತೆ ರೈತರಿಗೆ ಅನುಕೂಲವಾಗಲಿದೆ. ಈ ನೂತನ ತಳಿಗಳು ಮತ್ತು ಕೃಷಿ ತಾಂತ್ರಿಕತೆಗಳು ರೈತನ ಕೈ ಸೇರಲು ಪ್ರಚಾರದ ಅಗತ್ಯವಿದೆ, ಹಾಗೆಯೇ ಇಲ್ಲಿ ಬೆಳೆದಿರುವ ಔಷಧಿ ಸಸ್ಯಗಳ ಉಪಯೋಗ ಕೇಳಿದರೆ ಮೆಡಿಕಲ್ ಶಾಪ್ ಗೆ ಹೋಗುವ ಅಗತ್ಯವೇ ಇರುವುದಿಲ್ಲ. ರೈತರು ತಮ್ಮ ಹೊಲಗಳಲ್ಲಿ ಔಷಧಿ ಸಸ್ಯಗಳನ್ನು ಬೆಳೆಯುವ ಮೂಲಕ ಅವುಗಳ ಪ್ರಯೋಜನ ಪಡೆಯಬೇಕು ಎಂದರು.
ಯುವಕರು ಕೊರೋನದಿಂದ ಕೃಷಿಯತ್ತ ದಾವಿಸಿರುವುದು ಸ್ವಾಗತಾರ್ಹ, ಯುವಕರಿಗೆ ಉತ್ತೇಜನ ನೀಡಲು ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತದೆ. ಯುವಕರಿಗೆ ಆಧುನಿಕ ಕೃಷಿ ಬಗ್ಗೆ ತರಬೇತಿ, ಸರ್ಕಾರದ ಸೌಲಭ್ಯ ನೀಡಿ ಕೃಷಿಯಲ್ಲೇ ಉಳಿಸಿ ಸ್ವಾವಲಂಬಿ ಜೀವನಕ್ಕೆ ಸರ್ಕಾರ ಬದ್ಧವಾಗಿದೆ. ನಮ್ಮ ದೇಶದಲ್ಲಿ ಸಾಕಷ್ಟು ಮಾನವ ಸಂಪನ್ಮೂಲವಿದೆ. ಆದರೆ ಡಿಗ್ನಿಟಿ ಆಫ್ ಲೇಬರ್ ಅನ್ನೊದು ನಮ್ಮ ದೇಶಕ್ಕೆ ಮಾರಕವಾಗಿದೆ. ನಾನು ಶ್ರೀಮಂತನ ಮಗ, ಪದವಿ ಪಡೆದವನೆಂದು ಕೃಷಿ ಮಾಡುವುದು ಅಗೌರವ ಎಂದು ಭಾವಿಸಬಾರದು. ಕೃಷಿ ಬಹಳ ಗೌರವಯುತ ಹುದ್ದೆ, ಇನ್ನೊಬ್ಬರ ಕೈ ಕೆಳಗೆ ನೌಕರಿ ಮಾಡುವುದಕ್ಕಿಂತ, ತನ್ನ ಹೊಲದಲ್ಲಿ ತಾನು ದುಡಿದರೆ, ಇನ್ನೊಬ್ಬರಿಗೆ ಅನ್ನ ಕೊಡುವುದರ ಜೊತೆಗೆ ತಾನು ಅನ್ನ ತಿನ್ನಬಹುದು.
ವೈಜಾನಿಕ ವಿಧಾನಗಳ ಮೂಲಕ ಕೃಷಿ ಮಾಡುವುದು ಲಾಭದಾಯಕವಾಗಿದೆ. ಇದರಿಂದ ಕೃಷಿ ಕ್ಷೇತ್ರಕ್ಕೂ ಅನುಕೂಲಕರವಾಗಲಿದೆ ಎಂದರು.
ಇದನ್ನು ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರಳ, ಸಂಪ್ರದಾಯಬದ್ಧವಾಗಿ ಚಂಪಾಷಷ್ಠಿ ಉತ್ಸವ ಆಚರಿಸಲು ಸರ್ಕಾರದ ತೀರ್ಮಾನ
ನಾಳೆಯಿಂದ ರೈತರೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮ ಮಾಡಲಾಗುತ್ತಿದೆ. ರೈತರ ಮನೆ ಬಾಗಿಲಿಗೆ ಸರ್ಕಾರ ಬರಲಿದೆ. ಸಚಿವರು ಪ್ರತಿಯೊಂದು ಜಿಲ್ಲೆಯ ಒಂದು ಗ್ರಾಮದಲ್ಲಿ ರೈತರೊಂದಿಗೆ ಒಂದು ದಿನ ವಾಸ್ತವ್ಯ ಮಾಡಲಿದ್ದಾರೆ. ಈ ಸಮಯದಲ್ಲಿ ಗ್ರಾಮದ ಮಣ್ಣಿನ ಗುಣ, ಯಾವ ಬೆಳೆಗಳನ್ನು ಬೆಳೆಯುತ್ತಾರೆಂಬ ಮಾಹಿತಿ ಪಡೆಯಲಾಗುತ್ತದೆ. ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳದಂತೆ ಆತ್ಮಸ್ತೈರ್ಯ ತುಂಬುವ ಜೊತೆಗೆ ಯುವಕರು ಕೃಷಿಯಲ್ಲಿ ತೊಡಗುವಂತೆ ಪ್ರೇರಣೆ ತುಂಬುವ ಕೆಲಸ ಮಾಡಲಾಗುವುದು ಎಂದರು.
ನಂತರ ಮಾತನಾಡಿದ ತೋಟಗಾರಿಕಾ ಸಚಿವ ನಾರಾಯಣಗೌಡ, ಲಾಕ್ ಡೌನ್ ಸಮಯದಲ್ಲಿ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಇಲ್ಲದೆ ರೈತರು ನಷ್ಟ ಅನುಭವಿಸಿದರು. ಈ ಸಮಯದಲ್ಲಿ ನಮ್ಮ ಸರ್ಕಾರ ರೈತರ ನೆರವಿಗೆ ಬಂದಿದೆ. ರೈತರ ಉತ್ಪನ್ನಗಳನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕಳಿಸಲಾಗಿದೆ. ಶೇಕಡಾ 1 ರಷ್ಟಿದ್ದ ರಫ್ತು ಶೇಕಡಾ 5 ರಷ್ಟು ಏರಿಕೆಯಾಗಿದೆ. ಇವತ್ತು ರೈತರು ಎಪಿಎಂಸಿ ಮಾರುಕಟ್ಟೆ ಒಂದನ್ನೇ ಅವಲಂಬಿಸದೆ ಗ್ರಾಹಕರ ಮನೆ ಬಾಗಿಲಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ