ಬೆಂಗಳೂರು (ಮಾ. 2): ಸರ್ಕಾರದ ಪ್ರಭಾವಿ ಸಚಿವರೊಬ್ಬರ ರಾಸಲೀಲೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದೆ. ಬಿಜೆಪಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕೆಲ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ವಿಪಕ್ಷಗಳಿಗೆ ಇದು ಪ್ರಬಲ ಅಸ್ತ್ರವಾಗಿದ್ದು, ಸರ್ಕಾರದ ವಿರುದ್ಧ ಹರಿಹಾಯಲು ಸಿದ್ದತೆ ನಡೆಸಿದ್ದಾರೆ. ಇದೇ ಹಿನ್ನಲೆ ನಾಳೆ ಕಾಂಗ್ರೆಸ್ ನಾಯಕ ಬ್ರಿಜೇಶ್ ಕಾಳಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಪತ್ರಿಕಾಗೋಷ್ಟಿ ನಡೆಸಲಿದೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಚಿವರ ರಾಸಲೀಲೆ ಪ್ರಕರಣದ ಕುರಿತು ನನಗೆ ಸಂಪೂರ್ಣ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ಆಡಳಿತ ಪಕ್ಷ ಏನು ಹೇಳುತ್ತದೆ ನೋಡೋಣ ಎಂದಿದ್ದಾರೆ. ಇದೇ ವೇಳೆ ಈ ಸರ್ಕಾರದಲ್ಲಿ ಇಂಥವರೆಲ್ಲ ಇರಬೇಕು. ನಾವೇಕೆ ರಾಜೀನಾಮೆ ಕೇಳೋಣ ಎಂದು ವ್ಯಂಗ್ಯ ವಾಡಿದ್ದಾರೆ.
ಪ್ರಕರಣದ ಕುರಿತು ಬಿಜೆಪಿ ಯವರು ಏನು ಹೇಳುತ್ತಾರೆ. ಯಾವ ಕ್ರಮ ಕೈಗೊಳುತ್ತಾರೆ ನೋಡೊಣ. ಅವರು ಮಾತನಾಡದಿದ್ರೆ ವಿಪಕ್ಷವಾಗಿ ನಾವುಗಳು ಮಾತಾನಾಡುತ್ತೇವೆ ಎಂದಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ, ಸಚಿವರು ನೈತಿಕ ಹೊಣೆ ಹೊತ್ತು, ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈ ಕುರಿತು ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿರಾಕರಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಬಿವೈ ವಿಜಯೇಂದ್ರ, ಘಟನೆ ಬಗ್ಗೆ ಗಮನಕ್ಕೆ ಬಂದಿಲ್ಲ. ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದಿದ್ದಾರೆ.
ಇದನ್ನು ಓದಿ; ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಿಡಿ ಬಾಂಬ್; ಸಚಿವರ ರಾಸಲೀಲೆ ವಿಡಿಯೋ ವಿರುದ್ಧ ದೂರು
ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ನೋಡೋಣ ಎಲ್ಲ ಮಾಹಿತಿ ಬರಲಿ. ಇನ್ನು ಸಚಿವರು ಯಾವುದೇ ಹೇಳಿಕೆ ಕೊಟ್ಟಿಲ್ಲ. ಆ ಹೆಣ್ಣು ಮಗಳು ಏನೂ ಹೇಳಿಲ್ಲ. ಎಲ್ಲಾ ಸತ್ಯಾ ಸತ್ಯತೆ ಹೊರ ಬರಲಿ. ಆ ನಂತರ ನಾನು ಪ್ರತಿಕ್ರಿಯೆ ನೀಡುವೆ. ನೈತಿಕ ಹೊಣೆ ಹೊರಬೇಕು ನಿಜ. ಆದರೆ ಅವರು ಮಾತನಾಡದೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಯತೀಂದ್ರ ಸಿದ್ದರಾಮಯ್ಯ, ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕರ್ನಾಟಕ ಭವನವನ್ನು ಬಳಿಸಿಕೊಂಡಿದ್ದು ತಪ್ಪು. ಬಿಜೆಪಿ ವರಿಷ್ಠರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ