ಕೋಲಾರ(ಮಾ. 07): ಮಾರಣಾಂತಿಕ ಕೊರೋನಾ ವೈರಸ್ ಸೋಂಕು ಜಾಗತಿಕ ಆರ್ಥಿಕತೆ ಮೇಲೆ ಕರಿಛಾಯೆ ಬೀರಿದೆ. ಈ ನಡುವೆ ರೋಗ ತಡೆಗಟ್ಟುವಿಕೆ ಕೂಡ ಸವಾಲಿನ ಕೆಲಸವಾಗಿದೆ. ದೇಶ ಹಾಗೂ ರಾಜ್ಯದಲ್ಲಿ ಕೂಡ ಈ ಸೋಂಕು ಆತಂಕ ಮೂಡಿಸಿದ್ದು ಯುದ್ದೋಪಾದಿಯಲ್ಲಿ ರೋಗದ ಹರಡುವಿಕೆ ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಸೋಂಕಿನ ಪರಿಣಾಮ ಆಮದು ಹಾಗು ರಪ್ತು ವಹಿವಾಟಿಗೂ ಪೆಟ್ಟು ಬಿದ್ದಿದ್ದು, ಹಲವು ಉದ್ದಿಮೆಗಳು ನಷ್ಟದತ್ತ ಮುಖಮಾಡಿವೆ. ಆದರೆ, ಈ ಸೋಂಕು ಚಿನ್ನದನಾಡು ರೈತರ ಪಾಲಿಗೆ ಮಾತ್ರ ಅದೃಷ್ಟ ಖುಲಾಯಿಸಿದೆ.
ಆಶ್ಚರ್ಯ ಆದರೂ ಹೌದು. ಕೊರೋನಾ ಸೋಂಕು ಜಿಲ್ಲೆಯ ರೇಷ್ಮೆ ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ. ಕೊರೋನಾ ಸೋಂಕಿನಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕೊರೋನಾ ವೈರಸ್ ಸೋಂಕಿನ ಭೀತಿಯಿಂದ ಚೀನಾ ರೇಷ್ಮೆ ಆಮದು ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ಸ್ವದೇಶಿ ಗೂಡಿಗೆ ದುಪ್ಪಟ್ಟು ಬೆಲೆ ಸಿಗುತ್ತಿದೆ.
ರೇಷ್ಮೆಯ ಒಂದು ಕೆಜಿ ಬಿಳಿಗೂಡು ಗರಿಷ್ಟ 620ರೂಗೆ ಹರಾಜು ಆಗುತ್ತಿದೆ. ಇನ್ನು ಮಿಶ್ರತಳಿ (ಹರಿಶಿನ ಬಣ್ಣ) ಗೂಡಿಗೆ ಕೆಜಿಗೆ 400 ರಿಂದ 500 ರೂ ಬೆಲೆ ಸಿಗುತ್ತಿದೆ. 8 ಕೆಜಿಯ ಒಂದು ಕ್ರೇಟ್ ಬೆಲೆ ನಾಲ್ಕರಿಂದ ನಾಲ್ಕೂವರೆ ಸಾವಿರ ಮುಟ್ಟಿದೆ. ಹೀಗಾಗಿ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಚೀನಾ ರೇಷ್ಮೆ ಆಮದು ನಿಷೇಧ ಮಾಡಲು ಆಗ್ರಹಿಸಿದ್ದ ರೈತರು:
ಎರಡು ವರ್ಷಗಳ ಹಿಂದೆ ಭಾರತ ದೇಶಾದ್ಯಂತ ರೇಷ್ಮೆ ಬೆಲೆ ಕನಿಷ್ಠ ಬೆಲೆಗೆ ಕುಸಿದಿದ್ದರಿಂದ 2018-19ರಲ್ಲಿ ಚೀನಾ ರೇಷ್ಮೆ ಆಮದಿಗೆ ನಿಷೇಧ ಮಾಡುವಂತೆ ಹಲವು ಬಾರಿ ರೈತಪರ ಸಂಘಟನೆಗಳು ಬೀದಿಗಿಳಿದು ರಾಷ್ಟ್ರಾದ್ಯಂತ ಹೋರಾಟ ಮಾಡಿದ್ದವು, ಆದರೆ ದೇಶದಲ್ಲಿನ ರೇಷ್ಮೆ ಅಗತ್ಯತೆಯಿಂದ ಚೀನಾದ ರೇಷ್ಮೆ ಆಮದಿಗೆ ನಿಷೇಧ ಹೇರಲು ಕೇಂದ್ರ ಸರ್ಕಾರ ಮುಂದಾಗಿರಲಿಲ್ಲ,
ಇದನ್ನು ಓದಿ: ಕೊರೋನಾ ಕರಿಛಾಯೆ: ಪ್ರಮುಖ ಪ್ರವಾಸಿ ತಾಣಗಳಲ್ಲಿ ಗಣನೀಯವಾಗಿ ಇಳಿಮುಖವಾದ ಪ್ರವಾಸಿಗರ ಸಂಖ್ಯೆ!
ಈ ಮಧ್ಯೆ ದೇಶಿಯ ತಳಿಗಳ ಗೂಡಿಗೆ ಉತ್ತಮ ಬೆಲೆ ಸಿಗದೆ ರೇಷ್ಮೆ ಉತ್ಪಾದನೆ ಸಹ ಇಳಿಮುಖವಾಗಿತ್ತು. ಆದರೆ ಕಳೆದ 6 ತಿಂಗಳಿಂದ ಚೀನಾ ದೇಶಾದ್ಯಂತ ಕೊರೋನಾ ವೈರಸ್ ಸೋಂಕಿನಿಂದಾಗಿ ಅಲ್ಲಿಂದ ರೇಷ್ಮೆ ಸರಬರಾಜು ಬಹುತೇಕ ನಿಂತುಹೋಗಿದೆ. ಹೀಗಾಗಿ ಭಾರತೀಯ ರೇಷ್ಮೆಗೆ ಬೇಡಿಕೆ ಹೆಚ್ಚಾಗಿ ಬೆಲೆಯೂ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಕೊರೋನಾ ವೈರಸ್ ಹರಡುವಿಕೆ ಸ್ಥಿತಿಯ ಆಧಾರದ ಮೇಲೆ ರೇಷ್ಮೆ ಬೆಲೆ ಇನ್ನೂ ಹೆಚ್ಚಾಗುವ ನಿರೀಕ್ಷೆಯೂ ಇದೆ.
(ವರದಿ: ರಘುರಾಜ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ