ಕೋಲಾರ (ಮಾ.10): ಜಿಲ್ಲೆ ವ್ಯಾಪ್ತಿಯ ಮೆಗಾ ಡೈರಿ ಕಾಮಗಾರಿಗೆ ತಡೆ ನೀಡುವ ಮೂಲಕ ಸಚಿವ ಕೆ.ಸುಧಾಕರ್, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಕೋಲಾರದ ಡೈರಿ ಆವರಣದಲ್ಲಿ ಮೆಗಾ ಡೈರಿ ಸ್ಥಾಪಿಸಲು ಅನುಮೋದನೆ ನೀಡಲಾಗಿತ್ತು. ಆತ್ಯಾಧುನಿಕ ತಂತ್ರಜ್ಞಾನದಲ್ಲಿ ಸುಮಾರು 10 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ಕೂಡ ಸಿಕ್ಕಿತ್ತು
ಆದರೆ, ಈಗ ಈ ಮೆಗಾಡೈರಿ ಕಾಮಗಾರಿ ಆರಂಭವಾಗುವ ಮೊದಲೇ ಸ್ಥಗಿತಗೊಳಿಸುವಂತೆ ಸರ್ಕಾರದಿಂದ ಆದೇಶ ಜಾರಿಯಾಗಿದೆ. ಇದಕ್ಕೆ ಸಚಿವರ ಅಡ್ಡಗಾಲು ಕಾರಣವಾಗಿದೆ ಎಂಬ ಆಪಾದನೆ ಕೂಡ ಕೇಳಿ ಬಂದಿದೆ.
ಈ ಮೂಲಕ ಹಲವು ವರ್ಷಗಳಿಂದ ಜಂಟಿಯಾಗಿದ್ದ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಬೇರ್ಪಡಿಸಲು ಸಚಿವರು ಮುಂದಾಗಿದ್ದಾರೆ. ತಮ್ಮ ರಾಜಕೀಯ ಹಿತಾಸಕ್ತಿಗೆ ಅವರು ಈ ರೀತಿ ಕ್ರಮ ಅನುಸರಿಸುತ್ತಿದ್ದಾರೆ. ಒಕ್ಕೂಟವನ್ನು ಬೇರ್ಪಡಿಸುವುದಲ್ಲದೇ, ಈಗ ಮೆಗಾ ಡೈರಿ ಕಾಮಗಾರಿಗೆ ಅವರು ಅಡ್ಡಿ ಮಾಡುತ್ತಿರುವುದು ಸರಿಯಲ್ಲ. ಸಚಿವರು ಒಂದು ವೇಳೆ ಕಾಮಗಾರಿಗೆ ತಡೆ ನೀಡಿದರೆ, ಅವರು ವಿರುದ್ಧ ಜಿಲ್ಲೆಯ ಜನ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಒಕ್ಕೂಟ ಎಚ್ಚರಿಕೆ ನೀಡಿದೆ.
ಇದನ್ನು ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಬೇಕು; ಎಚ್ ವಿಶ್ವನಾಥ್ ಆಗ್ರಹ
ಈ ಬಗ್ಗೆ ಸಂಸದ ಎಸ್ ಮುನಿಸ್ವಾಮಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು,ಸಚಿವ ಸುಧಾಕರ್ ಶಿಫಾರಸ್ಸಿನ ಮೇರೆಗೆ ಅಭಿವೃದ್ದಿ ಕಾಮಗಾರಿಗೆ ತಡೆ ನೀಡಲಾಗಿದೆ. ಈ ಬಗ್ಗೆ ಜಿಲ್ಲೆಯ ಪ್ರತಿನಿಧಿಗಳು ರಾಜಕಾರಣಿಗಳ ಜೊತೆ ಚರ್ಚಿಸದೇ ಏಕಗವಾಕ್ಷಿಯಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
(ವರದಿ: ರಘುರಾಜ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ