ಕೋಲಾರ (ಫೆ. 27): ಸರ್ವಸಂಗ ಪರಿತ್ಯಾಗಿಗಳು ಎನ್ನುತ್ತ ಕಾವಿ ಧರಿಸಿಕೊಂಡ ಕೆಲವು ಸ್ವಾಮೀಜಿಗಳನ್ನು ಕುರುಡಾಗಿ ನಂಬಿ, ಕೊನೆಗೆ ಪಶ್ಚಾತ್ತಾಪ ಪಟ್ಟ ಅನೇಕ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಅದೇ ರೀತಿಯ ಘಟನೆಯೊಂದು ಕೋಲಾರದಲ್ಲಿ ನಡೆದಿದ್ದು, ಇಲ್ಲಿನ ಸ್ವಾಮೀಜಿಯೊಬ್ಬರು 19 ವರ್ಷದ ಯುವತಿ ಜೊತೆ ಪರಾರಿಯಾಗಿ, ಮದುವೆಯಾಗಿದ್ದಾರೆ.
ಕೋಲಾರದ ಹೊಳಲಿ ಸೇವಾಶ್ರಮದ ಪೀಠಾಧಿಪತಿಯಾಗಿರುವ ದತ್ತಾತ್ರೇಯ ಅವಧೂತ ಸ್ವಾಮೀಜಿ ಅದೇ ಗ್ರಾಮದ ಯುವತಿಯೊಂದಿಗೆ ಪರಾರಿಯಾಗಿದ್ದಾರೆ. ಈ ಘಟನೆಯಿಂದ ಅವರ ಭಕ್ತರು ಆಘಾತಕ್ಕೀಡಾಗಿದ್ದಾರೆ. ವಿಷಯದ ಬಗ್ಗೆ ಮಾಹಿತಿ ಪಡೆಯಲು ಫೋನ್ ಮಾಡಿದರೆ ಸ್ವಾಮೀಜಿಯ ಫೋನ್ ಸ್ವಿಚ್ ಆಫ್ ಆಗಿದೆ. ಯುವತಿಯೊಂದಿಗೆ ಪರಾರಿಯಾಗಿರುವ ಸ್ವಾಮೀಜಿ ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: ಎಚ್.ಎಸ್. ದೊರೆಸ್ವಾಮಿ ಯಾವ ಪಕ್ಷದ ಪರ ಕೆಲಸ ಮಾಡುತ್ತಾರೆಂದು ಗೊತ್ತಿದೆ; ಫೇಸ್ಬುಕ್ನಲ್ಲಿ ಯತ್ನಾಳ್ ವಾಗ್ದಾಳಿ
ಹೊಳಲಿಯಲ್ಲಿ ನೂತನವಾಗಿ ಆರಂಭವಾದ ಮಠಕ್ಕೆ ಪೀಠಾಧ್ಯಕ್ಷರಾಗಿ ಇದೇ ವರ್ಷ ಸಂಕ್ರಾಂತಿಯಂದು ದತ್ತಾತ್ರೇಯ ಅವಧೂತ ಸ್ವಾಮೀಜಿ ಅಧಿಕಾರ ಸ್ವೀಕರಿಸಿದ್ದರು. ಅದೇ ಗ್ರಾಮದ 19 ವರ್ಷದ ಯುವತಿಯೊಂದಿಗೆ ಆಪ್ತರಾಗಿದ್ದ ಸ್ವಾಮೀಜಿ ಆಕೆಯೊಂದಿಗೆ ಪರಾರಿಯಾಗಿದ್ದಾರೆ. ಹೊಳಲಿ ಗ್ರಾಮದಲ್ಲಿರುವ ಭೀಮಲಿಂಗೇಶ್ವರ ದೇವಾಲಯದ ಆಡಳಿತ ಮಂಡಳಿಯ ನೆರವಿನಿಂದ ಸ್ವಾಮೀಜಿ ಹೊಳಲಿ ಗ್ರಾಮದಲ್ಲಿ ನೂತನವಾಗಿ ಸೇವಾಶ್ರಮ ಪೀಠ ಸ್ಥಾಪಿಸಿದ್ದರು.
ಇದನ್ನೂ ಓದಿ: ರೌಡಿಶೀಟರ್ ಸ್ಲಂ ಭರತ್ ಬೆನ್ನಿಗೆ ನಿಂತಿದ್ದಳು ಆ ಯುವತಿ; ಪ್ರಿಯಕರನಿಗಾಗಿ ಪೊಲೀಸರನ್ನೇ ಎದುರು ಹಾಕಿಕೊಂಡಿದ್ದ ಅವಳ್ಯಾರು?
ದತ್ತಾತ್ರೇಯ ಅವಧೂತ ಸ್ವಾಮೀಜಿ ಎಂದು ಹೆಸರಿಟ್ಟುಕೊಂಡು ಸಂಕ್ರಾಂತಿ ಹಬ್ಬದ ದಿನ ಸ್ವಾಮೀಜಿ ಪೀಠವೇರಿದ್ದರು. ಕಳೆದ 3 ದಿನಗಳ ಹಿಂದೆ ಈ ಸ್ವಾಮೀಜಿ ನಾಪತ್ತೆಯಾಗಿದ್ದು, ಅವರ ಭಕ್ತರು ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಸ್ವಾಮೀಜಿಯ ಭಕ್ತೆಯಾಗಿರುವ ಯುವತಿ ಕೂಡ 3 ದಿನಗಳಿಂದ ನಾಪತ್ತೆಯಾಗಿದ್ದಾಳೆ. ಸ್ವಾಮೀಜಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಆದರೆ, ತಾವೇ ಖುದ್ದಾಗಿ ಯುವತಿಯ ಮನೆಯವರಿಗೆ ಫೋನ್ ಮಾಡಿರುವ ಸ್ವಾಮೀಜಿ, 'ನಾನು ನಿಮ್ಮ ಮಗಳನ್ನು ತಿರುಪತಿಯಲ್ಲಿ ಮದುವೆಯಾಗಿದ್ದೇನೆ. ಯಾರೂ ಪೊಲೀಸರಿಗೆ ದೂರು ನೀಡಬೇಡಿ' ಎಂದು ಹೇಳಿದ್ದಾರೆ. ಈ ಕುರಿತು ಯುವತಿಯ ಕುಟುಂಬಸ್ಥರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
(ವರದಿ: ರಘುರಾಜ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ