Seema.RSeema.R
|
news18-kannada Updated:February 18, 2020, 5:04 PM IST
ಮಗುವಿನ ಪೋಷಕರು
ಕೋಲಾರ (ಫೆ.18): ಮನೆಯಲ್ಲಿದ್ದ ಒಂದೂವರೆ ತಿಂಗಳ ಹೆಣ್ಣು ಮಗುವೊಂದು ನಾಪತ್ತೆಯಾಗಿದ್ದು, ಹೆಣ್ಣು ಮಗು ಎಂಬ ಕಾರಣಕ್ಕೆ ಹೆತ್ತ ಅಪ್ಪ-ಅಮ್ಮ ಹಾಗೂ ಅಜ್ಜಿಯೇ ಅದನ್ನು ನೀರಿನ ಸಂಪ್ನಲ್ಲಿ ಹಾಕಿ ಕೊಂದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕೋಲಾರದಲ್ಲಿ ಇಂತದ್ದೊಂದು ಘಟನೆ ನಡೆದಿದ್ದು ಮಾನವೀಯ ಮೌಲ್ಯಗಳಿಗೆ ಬೆಲೆಯೇ ಇಲ್ಲವೇ ಎಂಬ ಪ್ರಶ್ನೆ ಕೇಳುವಂತೆ ಮಾಡಿದೆ.
ತಾಲೂಕಿನ ಛತ್ರಕೋಡಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಘುಪತಿ ಹಾಗೂ ಹರ್ಷಿತ ಎಂಬ ದಂಪತಿಯ ಮಗು ಶವವಾಗಿ ಪತ್ತೆಯಾಗಿದೆ.
ಮಗು ಮಲಗಿದ ವೇಳೆ ತಾಯಿ ಹೊರಗೆ ಹೋಗಿ ಬರುವಷ್ಟರಲ್ಲಿ ಈ ಘಟನೆ ನಡೆದಿದೆ. ಮಲಗಿಸಿದ ಮಗು ನಾಪತ್ತೆಯಾದ ಹಿನ್ನೆಲೆ ತಾಯಿ ಗಾಬರಿಗೊಂಡು ಹುಡುಕಿದ್ದಾರೆ. ಈ ವೇಳೆ ಆಕೆಯ ಗಂಡ ರಘುಪತಿ ಹಾಗೂ ಅಜ್ಜಿ ರತ್ನಮ್ಮ ಕೂಡ ಮಗುವಿನ ಶೋಧಕ್ಕೆ ಮುಂದಾಗಿದ್ದು, ಕಡೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಡಾಗ್ ಸ್ಕ್ವಾಡ್ ಮನೆಯಲ್ಲಿದ್ದ ಸಂಪ್ ಸುತ್ತ ಗಿರಕಿ ಹೊಡೆಯುತ್ತಿತ್ತು. ಈ ವೇಳೆ ಅನುಮಾನಗೊಂಡು ನೀರಿನ ಸಂಪ್ ಪರಿಶೀಲಿಸಿದಾಗ ಶವವಾಗಿ ಮಗು ಪತ್ತೆಯಾಗಿದೆ.
ಇದನ್ನು ಓದಿ: ಆರ್ಥಿಕ ಸಂಕಷ್ಟದಿಂದ ಪಾರಾಗಲು ದಿನಗೂಲಿ ನೌಕರರ ಕೆಲಸದ ದಿನಗಳ ಕಡಿತಕ್ಕೆ ಮುಂದಾದ ಕೋಚಿಮುಲ್
ಮನೆಯ ನೀರಿನ ಸಂಪಿನಲ್ಲಿಯೇ ಮಗು ಪತ್ತೆಯಾದ ಹಿನ್ನೆಲೆ ಪೊಲೀಸರು ಮಗುವಿನ ಅಪ್ಪ, ಅಮ್ಮ ಹಾಗೂ ಅಜ್ಜಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ದಂಪತಿಗೆ ಈಗಾಗಲೇ ಒಂದು ಗಂಡು ಮಗು ಇದೆ.
ಪ್ರಾಥಮಿಕ ತನಿಖೆಯ ಪ್ರಕಾರ ಮಗುವನ್ನು ಹೆತ್ತವರೇ ಕೊಂದಿದ್ದಾರೆ ಎನ್ನಲಾಗುತ್ತಿದೆ. ಒಂದೆಡೆ ಕೇಂದ್ರ ಸರ್ಕಾರ ಭೇಟಿ ಬಚಾವೋ ಭೇಟಿ ಪಡಾವೋ ಎಂಬ ಮಹತ್ತರ ಯೋಜನೆಯನ್ನು ಜಾರಿಗೆ ತಂದಿದೆ. ಇನ್ನೊಂದೆಡೆ ಗಂಡು - ಹೆಣ್ಣು ಎಂಬ ಭೇದಭಾವ ಜನರಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ.
(ವರದಿ: ರಘುರಾಜ್)
First published:
February 18, 2020, 5:04 PM IST