ಕೊಡಗು ಜಿಲ್ಲೆಯಲ್ಲಿ ಮಳೆ (Kodagu Rains) ಪ್ರಮಾಣ ಒಂದಷ್ಟು ಕಡಿಮೆಯಾಗಿದ್ದರೂ ಅದರಿಂದ ಆಗುತ್ತಿರುವ ಅನಾಹುತಗಳು (Rain Effects) ಮಾತ್ರ ಭೀಕರ ಎನಿಸುವಂತಿವೆ. ಮಡಿಕೇರಿ (Madikeri) ತಾಲ್ಲೂಕಿನ ಕಾಟಿಕೇರಿಯಲ್ಲಿ ಅರ್ಧ ಎಕರೆಯಷ್ಟು ಪ್ರದೇಶದ ಭೂಮಿ ಅದೇ ಜಾಗದಲ್ಲಿ ಆಳಕ್ಕೆ ಕುಸಿದಿರುವುದು (LandSlide) ಆತಂಕಕ್ಕೆ ಕಾರಣವಾಗಿದೆ. ಕಾಟಿಕೇರಿಯ ನಿವಾಸಿ ಬೋಪಯ್ಯ ಎಂಬವರ ಮನೆ ಮುಂಭಾಗದಲ್ಲಿಯೇ ಇದ್ದ ಕಾಫಿ ತೋಟದಲ್ಲಿ (Coffee Plant) ಭೂಮಿ ಆಳಕ್ಕೆ ಕುಸಿದಿದೆ. ಅರ್ಧ ಎಕರೆಯಷ್ಟು ಭೂಮಿ ಕುಸಿದಿರುವುದರಿಂದ ಆ ಪ್ರದೇಶದಲ್ಲಿದ್ದ ಕಾಫಿ, ಬಾಳೆ ಮತ್ತು ಅಡಿಕೆ ಬೆಳೆಗಳು ಕೂಡ ಹತ್ತು ಅಡಿ ಆಳಕ್ಕೆ ಇರುವ ಸ್ಥಳದಲ್ಲಿಯೇ ಕುಸಿದು ಹೋಗಿವೆ.
ಬೋಪಣ್ಣ ಅವರು ಇತ್ತೀಚೆಗೆ ಅದರ ಪಕ್ಕದಲ್ಲಿಯೇ ನೂತನವಾಗಿ ಮನೆ ನಿರ್ಮಿಸುತ್ತಿದ್ದರು. ಇದೀಗ ಭೂಮಿ ಕುಸಿದಿರುವುದರಿಂದ ಮನೆ ನಿರ್ಮಾಣದ ಕೆಲಸವನ್ನು ಅಷ್ಟಕ್ಕೆ ನಿಲ್ಲಿಸಿದ್ದಾರೆ. 2018 ರಲ್ಲೂ ಇದೇ ಸ್ಥಳದಲ್ಲಿ ಭೂಮಿ ಎರಡು ಅಡಿ ಆಳಕ್ಕೆ ಕುಸಿದಿತ್ತು. ಇದೀಗ ಮತ್ತೆ ಅದೇ ಅರ್ಧ ಎಕರೆಯಷ್ಟು ಕಾಫಿ ತೋಟದ ಭೂಮಿ 10 ಅಡಿ ಆಳಕ್ಕೆ ಕುಸಿದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: Karnataka Weather Report: ಮುಂದಿನ ಮೂರು ಈ ಭಾಗದಲ್ಲಿ ಮಳೆ; ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ
ಕಮರಿ ಹೋದ ಸ್ವಂತ ಮನೆಯ ಕನಸು
ಸ್ಥಳಕ್ಕೆ ಭೇಟಿ ನೀಡಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಪರಿಸ್ಥಿತಿ ಅಪಾಯದ ರೀತಿ ಕಾಣುತಿದ್ದು, ಮನೆ ಖಾಲಿ ಮಾಡುವಂತೆ ಹೇಳಿದ್ದಾರೆ. ಹೀಗಾಗಿ ಬೋಪಯ್ಯ ಅವರ ಕುಟುಂಬ ಸದ್ಯಕ್ಕೆ ಮಡಿಕೇರಿ ಸಮೀಪದ ತಾಳತ್ ಮನೆಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ಅಲ್ಲಿಗೆ ಸ್ಥಳಾಂತರಗೊಂಡಿದೆ. ಆದರೆ ತಾವು ಒಂದು ಮನೆ ಮಾಡಿಕೊಂಡು ತೋಟದ ಒಳಗೆ ನೆಮ್ಮದಿ ಜೀವನ ಸಾಗಿಸಬೇಕೆಂಬ ಅವರ ಕನಸ್ಸು ಕಮರಿಹೋಗಿದೆ.
ಬೋಟ್ ಬಳಕೆಗೆ ಜಿಲ್ಲಾಡಳಿತದಿಂದ ವ್ಯವಸ್ಥೆ
ಮತ್ತೊಂದೆಡೆ ಮಳೆ ಜಾಸ್ತಿ ಆದಂತೆಲ್ಲಾ ಕಾವೇರಿ ನದಿ ನೀರಿನ ಹರಿವಿನಲ್ಲಿ ಭಾರಿ ಹೆಚ್ಚಳವಾಗಿದ್ದು ಹಲವು ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಭಾಗಮಂಡಲದಲ್ಲಿ ಭಾರಿ ಪ್ರಮಾಣದಲ್ಲಿ ಕಾವೇರಿ ನದಿ ನೀರು ಹರಿಯುತ್ತಿದ್ದು ನಾಪೋಕ್ಲು ರಸ್ತೆಯಲ್ಲಿ ಸಂಪರ್ಕ ಕಡಿತವಾಗಿದೆ. ಹೀಗಾಗಿ ಜಿಲ್ಲಾಡಳಿತ ಬೋಟಿಂಗ್ ವ್ಯವಸ್ಥೆ ಮಾಡಿದ್ದು, ಜನರು ಬೋಟ್ ಬಳಸಿ ರಸ್ತೆ ದಾಟುತ್ತಿದ್ದಾರೆ.
ರಸ್ತೆ ಮೇಲೆ 5 ಅಡಿಯಷ್ಟು ನೀರು
ಇನ್ನು ಮಡಿಕೇರಿ ತಾಲ್ಲೂಕಿನ ಚೆರಿಯಪರಂಬು ಗ್ರಾಮ ಬಹುತೇಕ ಜಲಾವೃತವಾಗಿದ್ದು, ಕಲ್ಲುಮೊಟ್ಟೆ ರಸ್ತೆ ಮೇಲೆ ಐದು ಅಡಿಯಷ್ಟು ಎತ್ತರದ ಪ್ರವಾಹದ ನೀರು ಹರಿಯುತ್ತಿದೆ. ಇದರಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಪ್ರಮಾಣದಲ್ಲಿ ಹರಿಯುತ್ತಿರುವ ಪ್ರವಾಹದ ನೀರಿನಲ್ಲಿ ಓಡಾಡುವುದಕ್ಕೂ ಸಾಧ್ಯವಾಗದೆ ಜನರು ತೆಪ್ಪ ಬಳಸಿ ಹಗ್ಗ ಕಟ್ಟಿ ಅದರ ಸಹಾಯದಿಂದ ಓಡಾಡುತ್ತಿದ್ದಾರೆ.
ಇದನ್ನೂ ಓದಿ: Chikkamagaluru: ಮಳೆಗೆ ಮುರಿದು ಬಿದ್ದ ಮನೆ, ಟೆಂಟ್ನಲ್ಲೇ ನಿತ್ಯ ವಾಸ! ಇದು ಚಿಕ್ಕಮಗಳೂರಿನ ಬಡ ಕುಟುಂಬದ ವ್ಯಥೆ
ಅಡಿಕೆ, ಕಾಫಿ ತೋಟ ಮುಳುಗಡೆ
ವಿರಾಜಪೇಟೆ ತಾಲ್ಲೂಕಿನ ಭೇತ್ರಿಯಲ್ಲೂ ಕಾವೇರಿ ನದಿ ನೀರು ನುಗ್ಗಿ ಹತ್ತಾರು ಎಕರೆ ಪ್ರದೇಶದ ಕಾಫಿ, ಅಡಿಕೆ ತೋಟಗಳು ಮುಳುಗಡೆಯಾಗಿವೆ. ಅಡಿಕೆ ತೋಟಗಳಲ್ಲಿ ಏಳರಿಂದ ಎಂಟು ಅಡಿ ಎತ್ತರದ ಪ್ರವಾಹದ ನೀರು ನಿಂತಿದೆ.
ಮಳೆ ನಿಂತರೂ ಮುಂದುವರಿದ ಅವಾಂತರಗಳು
ಕಳೆದ ನಾಲ್ಕು ದಿನಗಳಿಂದಲೂ ಅಡಿಕೆ ತೋಟಗಳಲ್ಲಿ ಪ್ರವಾಹದ ನೀರು ನಿಂತಿದ್ದು ಬೆಳೆಗಾರರು ಅಡಿಕೆ ಬೆಳೆಗಳು ಹಾಳಾಗುವ ಆತಂಕ ಎದುರಿಸುತ್ತಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಎರಡು ದಿನಗಳಿಂದ ಮಳೆ ಸ್ವಲ್ಪ ತಗ್ಗಿದ್ದರೂ ಅವಾಂತರಗಳು ಮಾತ್ರ ಮುಂದುವರಿಯುತ್ತಲೇ ಇವೆ.
ಕರಾವಳಿ ಜಿಲ್ಲೆಗಳಲ್ಲಿ (Coastal District) ಮುಂದಿನ ಮೂರು ದಿನ ಮಳೆಯಾಗುವ (Rainfall)ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಎಲ್ಲಾ ನದಿಗಳು (Rivers) ತುಂಬಿ ಹರಿಯುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ