ಬೆಂಗಳೂರು: ಮೊದಲೇ ಬೆಲೆ ಏರಿಕೆ(Price Hike), ಜಿಎಸ್ಟಿ ಏರಿಕೆಯಿಂದ (GST Hike) ತತ್ತರಿಸಿರುವ ಕರ್ನಾಟಕದ ಜನತೆಗೆ ಹೊಸ ಶಾಕ್ ಎದುರಾಗಿದೆ. ಕೇಂದ್ರದ ನೂತನ GST ನೀತಿ ಜಾರಿ ಹಿನ್ನೆಲೆ ನಂದಿನಿ ಉತ್ಪನ್ನಗಳನ್ನು ಏರಿಕೆ ಮಾಡಲಾಗಿದ್ದು, ನಾಳೆಯಿಂದಲೇ (ಜು.18) ಹೊಸ ದರಗಳು ಜಾರಿಗೆ ಬರಲಿವೆ. ನಂದಿನಿ ಉತ್ಪನ್ನಗಳು (Nandini Products) ಜನಸಾಮಾನ್ಯರ ಜೇಬನ್ನು ಸುಡಲು ಆರಂಭಿಸಲಿದೆ. KMF ನಿಂದ ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡಿದೆ. ಹಾಲು ಹೊರತಾಗಿ ಇತರೆ ಉತ್ಪನ್ನಗಳ ದರದಲ್ಲಿ ಹೆಚ್ಚಳ ಆಗಿದೆ. ಒಂದು ಲೀಟರ್ ಮೊಸರಿಗೆ 3 ರೂಪಾಯಿ ಹೆಚ್ಚಳ, ಮಜ್ಜಿಗೆ 200ml ಗೆ 1 ರೂಪಾಯಿ ಹೆಚ್ಚಳ ಹಾಗೂ ಲಸ್ಸಿ 200ml ಗೆ 1 ರೂಪಾಯಿ ಹೆಚ್ಚಳ ಮಾಡಲಾಗಿದೆ. ಸದ್ಯಕ್ಕೆ ನ ವಸ್ತುಗಳ ಮೇಲೆ ಹಳೆಯ ದರವೇ ಮುದ್ರಣವಾಗಿರಲಿದ್ದು ಹೊಸ ದರ ನೀಡುವಂತೆ ಕೋರಿಕೆ ಮಾಡಲಾಗಿದೆ.
ಯಾವುದರ ಮೇಲೆ ಎಷ್ಟು ರೂಪಾಯಿ ಏರಿಕೆ?
10 ರೂಪಾಯಿಯಿಂದ 200 ml ನಂದಿನಿ ಮೊಸರಿನ ಬೆಲೆ 12 ರೂ.ಗೆ ಏರಿಸಲಾಗಿದೆ. 2 ರೂಪಾಯಿಗಳನ್ನು ಹೆಚ್ಚಿ ಮಾಡಲಾಗಿದೆ.22 ರೂಪಾಯಿಯಿದ್ದ ಅರ್ಧ ಲೀಟರ್ ಮೊಸಲಿನ ಪ್ಯಾಕೇಸ್ ಈಗ 24 ರೂ. ಆಗಿದೆ. 1 ಲೀಟರ್ ಮೊಸರು ಪ್ಯಾಕೇಟ್ 3 ರೂ. ಏರಿಕೆಯೊಂದಿಗೆ 46 ರೂ. ಆಗಿದೆ. ಇನ್ನು 200 ml ಮಜ್ಜಿಗೆ ಸ್ಯಾಚೆ 7 ರಿಂದ 8 ರೂ. ಆಗಿದೆ. ಟೆಟ್ರಾ ಪ್ಯಾಕ್ 10 ರಿಂದ 11 ರೂ. ಹಾಗೂ ಪೆಟ್ ಬಾಟಲ್ ಬೆಲೆ 12 ರಿಂದ 13 ರೂ. ಆಗಿದೆ. ಇನ್ನು 200 ml ನಂದಿನಿ ಲಸ್ಸಿ ಮೇಲೆ 1 ರೂಪಾಯಿ ಏರಿಸಿ ಹೊಸ ದರಗಳ ಪಟ್ಟಿಯನ್ನು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹೊರಡಿಸಿದೆ.
ನಂದಿನಿ ಹಾಲಿನ ಬೆಲೆ ಏರಿಕೆಗೂ ಪ್ಲಾನ್
ಇನ್ನು ನಂದಿನಿ ಹಾಲಿನ ಬೆಲೆಯನ್ನೂ ಏರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹಾಲಿನ ದರವನ್ನು ಲೀಟರ್ಗೆ 3 ರೂಪಾಯಿ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದೆ. ಗುರುವಾರ ನಡೆದ ಕೆಎಂಎಫ್ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೆಎಂಎಫ್ ಪ್ರಸ್ತಾವನೆಗೆ ಸರಕಾರ ಒಪ್ಪಿಗೆ ನೀಡಿದರೆ, ಪ್ರಸ್ತುತ 37 ರೂ.ಗಳಲ್ಲಿರುವ ಒಂದು ಲೀಟರ್ ನಂದಿನಿ ಟೋನ್ಡ್ ಹಾಲು (ಬ್ಲೂ ಸ್ಯಾಚೆಟ್) 40 ರೂ.ಗೆ ಏರಬಹುದು. ಕೆಎಂಎಫ್ ಪ್ರಕಾರ, ರೈತರಿಗೆ 2.5 ರೂ ಹೆಚ್ಚುವರಿ ಸಿಗುತ್ತದೆ. ಪ್ರಸ್ತಾವನೆಯನ್ನು ಅಂಗೀಕರಿಸಿದರೆ ಮಾರಾಟ ಮಾಡುವ ಪ್ರತಿ ಲೀಟರ್ ಹಾಲಿನಿಂದ 50 ಪೈಸೆಯನ್ನು ಒಕ್ಕೂಟಗಳು ಉಳಿಸಿಕೊಳ್ಳುತ್ತವೆ.
ಹಾಲಿನ ಬೆಲೆ ಏರಿಕೆಗೆ ಪ್ರಸ್ತಾವನೆ
KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ನಾವು ಲೀಟರ್ ನಂದಿನಿ ಹಾಲನ್ನು 37 ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಕರ್ನಾಟಕದ ಎಲ್ಲಾ ಹಾಲು ಒಕ್ಕೂಟಗಳು ಬೆಲೆಯಲ್ಲಿ ಪರಿಷ್ಕರಣೆಗಾಗಿ ಸರ್ವಾನುಮತದಿಂದ ಕೋರಿವೆ; ಆದ್ದರಿಂದ ನಾವು ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ. ನಾವು ಶೀಘ್ರದಲ್ಲೇ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಪರಿಷ್ಕೃತ ದರಕ್ಕೆ ಅನುಮೋದನೆ ಪಡೆಯುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: GST ಲೆಕ್ಕಾಚಾರ ಹೇಗಿರುತ್ತದೆ ಗೊತ್ತಾ? ನಾಳೆಯಿಂದ ಯಾವೆಲ್ಲ ವಸ್ತುಗಳು ದುಬಾರಿಯಾಗಲಿವೆ?
ಕಳೆದ ತಿಂಗಳು ನಡೆದ ಚಳಿಗಾಲದ ಅಧಿವೇಶನದ ವೇಳೆ ಕೆಎಂಎಫ್ ನಿಯೋಗ ಬೊಮ್ಮಾಯಿ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಭೇಟಿ ಮಾಡಿ ಹಾಲಿನ ದರ ಏರಿಕೆ ಮಾಡುವಂತೆ ಮನವಿ ಮಾಡಿತ್ತು.
ನಾಳೆಯಿಂದಲೇ ಜಿಎಸ್ಟಿ ದುಬಾರಿ
ಪ್ಯಾಕ್ ಮಾಡಿ ಲೇಬಲ್ ಮಾಡಿದ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಸೇರಿದಂತೆ ಹಲವಾರು ಉತ್ಪನ್ನಗಳಿಗೆ ತೆರಿಗೆ ವಿನಾಯಿತಿಯನ್ನು ಕೊನೆಗೊಳಿಸುವ ಕುರಿತ ಜಿಎಸ್ಟಿ ಕೌನ್ಸಿಲ್ನ ನಿರ್ಧಾರದ ಬಗ್ಗೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಗುರುವಾರವಷ್ಟೇ ಅಧಿಸೂಚನೆ ಹೊರಡಿಸಿತ್ತು. ಇಂತಹ ವಸ್ತುಗಳ ಮೇಲೆ ಜುಲೈ 18 ಅಂದರೆ ನಾಳೆ ಸೋಮವಾರದಿಂದಲೇ ಶೇ. 5ರಷ್ಟು ಸರಕು ಮತ್ತು ಸೇವಾ ತೆರಿಗೆ ಅನ್ವಯವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ