ತುರುವೇಕೆರೆ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಹೀಗಿರುವಾಗ ಕಲ್ಪತರು ನಾಡು ತುಮಕೂರಿನ (Tumakuru) ತುರುವೇಕೆರೆ ವಿಧಾನಸಭಾ ಕ್ಷೇತ್ರದ (Turuvekere Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಕ್ಷೇತ್ರದ ವಿಶೇಷತೆ
ಮಂಡ್ಯದ ನಾಗಮಂಗಲ, ಹಾಸನದ ಚನ್ನರಾಯಪಟ್ಟಣ, ತಿಪಟೂರು, ಗುಬ್ಬಿ, ಕುಣಿಗಲ್ ಹೀಗೆ ಬರೋಬ್ಬರಿ ಐದು ತಾಲೂಕುಗಳಿಂದ ತುರುವೇಕೆರೆ ಸುತ್ತುವರೆದಿದೆ. ಇನ್ನು ಇಲ್ಲಿನ ಬೇಟೆರಾಯಸ್ವಾಮಿ ದೇವಸ್ಥಾನ ಬಹಳ ಪ್ರಸಿದ್ಧಿ ಪಡೆದಿದೆ. ತಾಲೂಕಿನಲ್ಲಿ ತುರುವೇಕೆರೆ, ದಂಡಿನಶಿವರ, ಮಾಯಸಂದ್ರ ಮತ್ತು ದಬ್ಬೆಘಟ್ಟ ಹೋಬಳಿಗಳಿವೆ. ತುರುವೇಕೆರೆ ಮತ್ತು ಅಮ್ಮಸಂದ್ರ ಪಟ್ಟಣಗಳನ್ನು, 233 ಗ್ರಾಮಗಳನ್ನು ಒಳಗೊಂಡಿದೆ. ತುರುವೇಕೆರೆ ಸಂಪಿಗೆ ತೆಂಗಿನ ತೋಟಗಳಿಗೂ ಫೇಮಸ್. ಇಲ್ಲಿ ವೆಂಕಟರಮಣಸ್ವಾಮಿ ದೇವಾಲಯವಿದೆ. ಸೂಳೆಕೆರೆಯಲ್ಲಿ ಹೊಯ್ಸಳ ಶೈಲಿಯ ಈಶ್ವರ ದೇವಾಲಯವೂ ವೀರಭದ್ರನ ದೇವಸ್ಥಾನವೂ ಇದೆ. ಇನ್ನು ಹೊಯ್ಸಳ ಶೈಲಿಯ ಚೆನ್ನಕೇಶವ ದೇವಾಲಯ ಪ್ರಸಿದ್ಧವಾದದ್ದು. ಇದಲ್ಲದೆ ಇಲ್ಲಿ ಮಲ್ಲೇಶ್ವರ ಮತ್ತು ಈಶ್ವರ ದೇವಾಲಯಗಳಿವೆ. ಈಶ್ವರ ದೇವಾಲಯ ದ್ರಾವಿಡ ಶೈಲಿಯಲ್ಲಿದೆ
ರಾಜಕೀಯ ಹಿನ್ನೋಟ
ತುರುವೇಕೆರೆ ಮೈಸೂರು ರಾಜ್ಯರ ಒಡೆತನದಲ್ಲಿದ್ದ ಸಂದರ್ಭದಲ್ಲಿ 1957ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಟಿ. ಸುಬ್ರಹ್ಮಣ್ಯ ಗೆಲುವು ಸಾಧಿಸಿದ್ದರು. ಬಳಿಕ 1962 ರಲ್ಲಿ ಬಿ. ಹುಚ್ಚೇಗೌಡ ಅದೇ ಪಕ್ಷದಿಂದ ಗೆದ್ದರು. 1967 ರಲ್ಲಿ ಕಾಂಗ್ರೆಸ್ನ ಎಂ ಎನ್ ರಾಮಣ್ಣ ಗೆದ್ದರೆ 1972 ರಲ್ಲಿ ಬಿ. ಭೈರಪ್ಪಾಜಿ ಗೆಲುವು ಸಾಧಿಸಿದರು. 1978 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಇಂದಿರಾ)ನ ಕೆ. ಎಚ್. ರಾಮಕೃಷ್ಣಯ್ಯ ಗೆಲುವು ಸಾಧಿಸಿದರು, 1983 ರಲ್ಲಿ ಮತ್ತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಬಿ. ಭೈರಪ್ಪಾಜಿ ಆಯ್ಕೆಯಾದರು. 1985 ರಲ್ಲಿ ಜನತಾ ಪಕ್ಷದ ಕೆ.ಎಚ್.ರಾಮಕೃಷ್ಣಯ್ಯ ಗೆದ್ದರೆ 1989 ರಲ್ಲಿ ಕಾಂಗ್ರೆಸ್ನ ಎಸ್. ರುದ್ರಪ್ಪ ವಿಜಯದ ನಗೆ ಬೀರಿದರು. 1994 ರಲ್ಲಿ ಜನತಾ ಪಕ್ಷದ ಎಚ್.ಬಿ.ನಂಜೇಗೌಡ ಶಾಸಕರಾದರು.
ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?
ಗೆದ್ದ ಜಗ್ಗೇಶ್, ಆಟ ಆರಂಭಕ್ಕೂ ಮುನ್ನ ಆಪರೇಷನ್ ಕಮಲ
1999 ರಲ್ಲಿ ಬಿಜೆಪಿಯ ಎಂ.ಡಿ.ಲಕ್ಷ್ಮೀನಾರಾಯಣ ಶಾಸಕರಾದರೆ. 2004ರಲ್ಲಿ ಎಡಿಎಸ್ನ ಎಂ.ಟಿ.ಕೃಷ್ಣಪ್ಪ ಜೆಡಿಎಸ್ ಬಾವುಟ ಹಾರಿಸಿದರು. ಆದರೆ 2008 ರಲ್ಲಿ ನಟ ಜಗ್ಗೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ಜೆಡಿಎಸ್ ಹೆಜ್ಜೆ ಅಳಿಸಲು ಯತ್ನಿಸಿದರಾದರೂ ಒಂದೇ ತಿಂಗಳಲ್ಲಿ ಆಪರೇಷನ್ ಕಮಲದಿಂದಾಗಿ ಎಲ್ಲವೂ ವಿಫಲವಾಯ್ತು. ನಂತರ ನಡೆದ 2008ರ ಉಪ-ಚುನಾವಣೆಯಲ್ಲಿ ಎಂ.ಟಿ.ಕೃಷ್ಣಪ್ಪ ಮತ್ತೆ ಅಧಿಕಾರಕ್ಕೇರಿದರು. 2013ರಲ್ಲಿ ಮತ್ತೆ ಎಂ.ಟಿ.ಕೃಷ್ಣಪ್ಪ ಜಯಭೇರಿ ಬಾರಿಸಿದರು. ಆದರೆ 2018 ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಕಣಕ್ಕಿಳಿದ ಮಸಾಲ ಜಯರಾಮ್ ಗೆದ್ದು, ಎಲ್ಲರ ಆಟಕ್ಕೂ ಬ್ರೇಕ್ ಹಾಕಿದರು.
2023ರ ಟಿಕೆಟ್ ಆಕಾಂಕ್ಷಿಗಳು ಯಾರು?
ಈ ಬಾರಿಯ ಚುನಾವಣೆಯಲ್ಲಿ ತುರುವೇಕೆರೆಯ ಫಲಿತಾಂಶ ಬಹಳಷ್ಟು ಕುತೂಹಲಕಾರಿಯಾಗಲಿದೆ. ಈ ಕ್ಷೇತ್ರದಲ್ಲಿ ಈ ಬಾರಿ ಮೂರೂ ಪಕ್ಷಗಳು ಗೆಲುವಿಗಾಗಿ ತಮ್ಮೆಲ್ಲಾ ಪ್ರಯತ್ನಗಳನ್ನು ನಡೆಸಲಿದ್ದಾರೆ
ಜೆಡಿಎಸ್: ಜೆಡಿಎಸ್ ಈಗಾಗಲೇ ತನ್ನ ಮೊದಲ ಪಟ್ಟಿಯಲ್ಲಿ ತುರುವೇಕೆರೆಯಿಂದ ಕಣಕ್ಕಿಳಿಯುವ ಅಭ್ಯರ್ಥಿಯನ್ನು ಘೋಷಿಸಿದೆ. ಜೆಡಿಎಸ್ನಿಂದ ಹಳೇ ಹುಲಿ ಎಂ. ಟಿ. ಕೃಷ್ಣಪ್ಪ ಮತ್ತೆ ಸ್ಪರ್ಧಿಸಲಿದ್ದಾರೆ
ಕಾಂಗ್ರೆಸ್: ಇತ್ತ ಕಾಂಗ್ರೆಸ್ ಕೂಡಾ ತನ್ನ ಮೊದಲ ಪಟ್ಟಿಯಲ್ಲೇ ತುರುವೇಕೆರೆ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಬಹಿರಂಗಗೊಳಿಸಿದ್ದು, ಬಿ. ಎಂ ಕಾಂತರಾಜ್ ಕಣಕ್ಕಿಳಿಯಲಿದ್ದಾರೆ.
ಬಿಜೆಪಿ: ಸದ್ಯ ಬಿಜೆಪಿ ಈ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಲಿದೆ ಎಂಬುವುದೇ ಬಹಳ ಕುತೂಹಲ ಮೂಡಿಸಿದೆ. ಕಮಲ ಪಾಳಯ ಈವರೆಗೂ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಆದರೆ ಈ ಬಾರಿ ಮತ್ತೆ ಹಾಲಿ ಶಾಸಕ ಮಸಾಲ ಜಯರಾಮ್ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆಗಳಿವೆ. ಈಗಾಗಲೇ ಅವರ ಬೆಂಬಲಿಗರು ಟಿಕೆಟ್ ನೀಡುವಂತೆ ಒತ್ತಾಯಿಸಲಾರಂಭಿಸಿದ್ದಾರೆ.
ಮತದಾರರೆಷ್ಟು?
ಒಟ್ಟು 1,80,566 ಮತದಾರರಿರುವ ತುರುವೇಕೆರೆ ಕ್ಷೇತ್ರದಲ್ಲಿ 90,519 ಪುರುಷ ಮತದಾರರಿದ್ದು, 89,995 ಮಹಿಳಾ ಮತದಾರರಿದ್ದಾರೆ. ಅಲ್ಲದೇ ಲೈಂಗಿಕ ಅಲ್ಪಸಂಖ್ಯಾತ ಮತದಾರರು 8 ಮಂದಿ ಇದ್ದಾರೆ.
2018ರಲ್ಲಿ ಫಲಿತಾಂಶವೇನಾಗಿತ್ತು?
2018 ಚುನಾವಣೆಯಲ್ಲಿ ತುರುವೇಕೆರೆ ಕ್ಷೇತ್ರದಲ್ಲಿ ಬಿಜೆಪಿಯ ಮಸಾಲ ಜಯರಾಮ್, ಜೆಡಿಎಸ್ನ ಎಂ ಟಿ ಕೃಷ್ಣಪ್ಪ ಅವರನ್ನು ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಬಿಜೆಪಿ | ಮಸಾಲ ಜಯರಾಮ್ | 60710 |
ಜೆಡಿಎಸ್ | ಎಂ ಟಿ ಕೃಷ್ಣಪ್ಪ | 58661 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ