ಬೇಲೂರು ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಹಾಸನ ಜಿಲ್ಲೆಯ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ (Shravanabelagola Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಕ್ಷೇತ್ರದ ವಿಶೇಷತೆ ಏನು?
ಐತಿಹಾಸಿಕ ನಗರಿ ಶ್ರವಣಬೆಳಗೊಳ ರಾಜ್ಯದ ಪ್ರಮುಖ ಜೈನ ಧಾರ್ಮಿಕ ಕೇಂದ್ರಗಳಲ್ಲೊಂದು. ಶ್ರವಣಬೆಳಗೊಳ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಒಂದು ಹೋಬಳಿಯಾಗಿದ್ದರೂ ವಿಧಾನಸಭಾ ಕ್ಷೇತ್ರವಾಗಿ ಬೆಳೆದಿದೆ. ಇಲ್ಲಿನ ವಿಂಧ್ಯಗಿರಿಯಲ್ಲಿ ಚಾವುಂಡರಾಯ ಸ್ಥಾಪಿಸಿದ ಗೊಮ್ಮಟೇಶ್ವರ ಮೂರ್ತಿಯ ಏಕಶಿಲಾ ವಿಗ್ರಹ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಈ ನಗರ ಪ್ರಮುಖ ವಿದ್ಯಾಕೇಂದ್ರವೂ ಹೌದು. ಈ ಬಾರಿ ಕೂಡಾ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಹೋರಾಟ ಸಾಧ್ಯತೆಯಿದೆ. ಹೀಗಿದ್ದರೂ ಈ ಬಾರಿಯೂ ತೆನೆ ಹೊತ್ತ ಮಹಿಳೆಯ ಪಕ್ಷಕ್ಕೆ ಗೊಮ್ಮಟನ ಕೃಪೆ ಸಿಗುವ ಲಕ್ಷಣಗಳಿವೆ ಅಧಿಕವಾಗಿವೆ.
ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?
ಇಲ್ಲಿ ಜೈನರ ಮಠದಿಂದ ಹಲವು ಶೈಕ್ಷಣಕ ಸಂಸ್ಥೆಗಳನ್ನು ನಡೆಸಲಾಗುತ್ತಿದ್ದು, ಇಂಜಿನಿಯರಿಂಗ್, ಪಾಲಿಟೆಕ್ನಿಕ್, ಪದವಿ ಕಾಲೇಜುಗಳಿವೆ. ಜೈನ, ಶ್ರೀವೈಷ್ಣವ ಸಂಶೋಧನಾ ಕೇಂದ್ರಗಳಿವೆ. ಹೆದ್ದಾರಿಗೆ ಹತ್ತಿರವಿದ್ದರೂ ಬೆಂಗಳೂರಿನಿಂದ ನೇರ ಬಸ್ ಸೇವೆ ಇಲ್ಲ. ಹೇಗೆ ಬಂದರೂ ಚನ್ನರಾಯಪಟ್ಟಣಕ್ಕೆ ತೆರಳಿ, ಅಲ್ಲಿಂದಲೇ ಶ್ರವಣಬೆಳಗೊಳ ತಲುಪಬೇಕು. ಹಾಸನದಿಂದ ಶ್ರವಣಬೆಳಗೊಳವನ್ನು ಸಂಪರ್ಕಿಸುವ ರೈಲುಮಾರ್ಗ ಪೂರ್ಣಗೊಂಡಿದೆ. ಇನ್ನು ಒಕ್ಕಲಿಗರ ಪ್ರಭಾವ ಹೆಚ್ಚಿರುವ ಈ ಕ್ಷೇತ್ರದಲ್ಲಿ ಈವರೆಗೂ ಅದೇ ಸಮುದಾಯದ ಅಭ್ಯರ್ಥಿಗಳೇ ಇದುವರೆವಿಗೂ ಆರಿಸಿ ಬಂದಿದ್ದಾರೆ. ಇನ್ನು ಪುರುಷರಿಗಿಂತ ಇಲ್ಲಿ ಈ ಬಾರಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ ಎಂಬುವುದು ಮತ್ತೊಂದು ವಿಶೇಷ.
ರಾಜಕೀಯ ಇತಿಹಾಸ:
2004 ಹಾಗೂ 2008ರ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿರುವ ಸಿ.ಎಸ್. ಪುಟ್ಟೇಗೌಡರು 2013ರ ಚುನಾವಣೆ ವೇಳೆಗೆ ಪಕ್ಷ ಬದಲಾಯಿಸಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಸಿ.ಎನ್.ಬಾಲಕೃಷ್ಣ ಅಂದಿನ ಚುನಾವಣೆಯಲ್ಲಿ ಗೌಡರ ಪಕ್ಷದಿಂದ ಟಿಕೆಟ್ ಪಡೆದು, ಸ್ಪರ್ಧಿಸಿ ಗೆಲುವಿನ ನಗೆ ಬೀರಿದರು. ಇದಾದ ಬಳಿಕ ಕಳೆದ 2018ರ ಚುನಾವಣೆಯಲ್ಲೂ ಸ್ಪರ್ಧಿಸಿದ ಸಿ.ಎನ್.ಬಾಲಕೃಷ್ಣ ಮತ್ತೆ ಗೆಲುವಿನ ಸಿಹಿ ಉಂಡಿದ್ದಾರೆ.
ಇನ್ನು ತಮಗೆ ಸಿಕ್ಕ ಅವಕಾಶಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುವ ಸಿ.ಎನ್.ಬಾಲಕೃಷ್ಣ ಕ್ಷೇತ್ರದ ಮನೆ ಮಾತಾಗಿದ್ದಾರೆ. ಹೀಗಾಗೇ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದ ಸಿ.ಎಸ್. ಪುಟ್ಟೇಗೌಡರು ಈ ಕ್ಷೇತ್ರದಿಂದ ಸತತ ಎರಡು ಬಾರಿ ಸ್ಪರ್ಧಿಸಿದರೂ, ಗೆಲುವು ಕಾಣಲು ಸಾಧ್ಯವಾಗಿಲ್ಲ. ಇದರ ಬದಲಾಗಿ ಸಿ.ಎನ್.ಬಾಲಕೃಷ್ಣರ ವಿರುದ್ಧ ಸೋಲಿನ ಅಂತರ ಹೆಚ್ಚಾಯಿತು. ಇನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಹೊರತುಪಡಿಸಿದರೆ ಬಿಜೆಪಿ ಇಲ್ಲಿ ನೆಲೆಯೂರಲು ಹರಸಾಹಸ ಪಡುತ್ತಿದೆ.
2023ರ ಟಿಕೆಟ್ ಆಕಾಂಕ್ಷಿಗಳು ಯಾರು?
ಜೆಡಿಎಸ್: ಸತತ ಎರಡು ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿರುವ ಹಾಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರನ್ನೇ ಈ ಬಾರಿಯೂ ಜೆಡಿಎಸ್ನಿಂದ ಕಣಕ್ಕಿಳಿಸುವ ಸಾಧ್ಯತೆ ಅಧಿಕವಿದೆ.
ಕಾಂಗ್ರೆಸ್: ಉಳಿದೆರಡು ಪಕ್ಷದಲ್ಲಿ ಕಾಣದ ಗೊಂದಲ ಕಾಂಗ್ರೆಸ್ನಲ್ಲಿ ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಿ.ಎಸ್. ಪುಟ್ಟೇಗೌಡ ಜೊತೆ ಮಾಜಿ ಸಚಿವ ಹೆಚ್.ಸಿ. ಶ್ರೀಕಂಠಯ್ಯ ಅವರ ಮಗ ಹೆಚ್.ಎಸ್. ವಿಜಯ್ ಕುಮಾರ್ ಕೂಡಾ ಈ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ನಡುವೆ ಕೈ ಪಕ್ಷದಲ್ಲಿ ಬಣ ರಾಜಕೀಯ ಆರಂಭವಾಗಿದ್ದು, ಇದು ಪಕ್ಷಕ್ಕೆ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ.
ಬಿಜೆಪಿ: ಅಣತಿ ಆನಂದ್ ಕಣಕ್ಕಿಳಿಯುವ ಸಾಧ್ಯತೆ. ಜೆಡಿಎಸ್ ಹಿಡಿತದಲ್ಲಿರುವ ಈ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಯಾವುದೇ ಪ್ರಬಲ ಅಭ್ಯರ್ಥಿಗಳಿಲ್ಲ. ಹೀಗಾಗೇ ಕೇವಲ ಹೆಸರಿಗಷ್ಟೇ ಇಲ್ಲಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಜಾತಿ ಲೆಕ್ಕಾಚಾರ:
ಒಟ್ಟು 2,12,070 ಮತದಾರರಿರುವ ಶ್ರವಣಬೆಳಗೊಳ ಕ್ಷೇತ್ರದಲ್ಲಿ 1,06,029 ಪುರುಷ ಮತದಾರರಿದ್ದು, 1,06,041 ಮಹಿಳಾ ಮತದಾರರಿದ್ದಾರೆ.
ಲಿಂಗಾಯತ | 7,000 |
ಮುಸ್ಲಿಂ | 6,000 |
ಎಸ್ಸಿ | 21,000 |
ಕುರುಬ | 7,000 |
ಎಸ್ಟಿ | 10,000 |
ಒಕ್ಕಲಿಗ | 1,34,000 |
ಸವಿತಾ ಸಮಾಜ | 3,000 |
ಬ್ರಾಹ್ಮಣ | 1,000 |
ವಿಶ್ವಕರ್ಮ | 4,000 |
ಇತರೆ | 20,000 |
2018 ಚುನಾವಣೆಯಲ್ಲಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಸಿಎನ್ ಬಾಲಕೃಷ್ಣ, ಕಾಂಗ್ರೆಸ್ನ ಸಿಎಸ್ ಪುಟ್ಟೇಗೌಡರನ್ನು 53,012 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಜೆಡಿಎಸ್ | ಸಿಎನ್ ಬಾಲಕೃಷ್ಣ | 105,516 |
ಕಾಂಗ್ರೆಸ್ | ಸಿಎಸ್ ಪುಟ್ಟೇಗೌಡ | 52,504 |
ಬಿಜೆಪಿ | ಶಿವನಂಜೇ ಗೌಡ | 44,578 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ