ಸಕಲೇಶಪುರ ವಿಧಾನಸಭಾ ಕ್ಷೇತ್ರ: ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ನಡೆಯುವುದಿದೆ. ಹೀಗಿರುವಾಗ ರಾಜಕೀಯ ವಲಯದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ರಾಜಕೀಯ ನಾಯಕರು ಮತದಾರರ ಗಮನ ಸೆಳೆಯಲು ಯತ್ನಿಸುತ್ತಿದ್ದರೆ, ಅತ್ತ ಹಿರಿಯ ನಾಯಕರು ಪಕ್ಷ ಬಲವರ್ಧನೆಗೆ ನಾನಾ ತಂತ್ರಗಳನ್ನು ಹೂಡುತ್ತಿದ್ದಾರೆ. ಈ ನಡುವೆ ಆರೋಪ, ಪ್ರತ್ಯಾರೋಪಗಳೂ ನಾಯಕರ ಮುಖವಾಡವನ್ನು ಕಳಚುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಕೊಡಗು ಜಿಲ್ಲೆಯ ಸಕಲೇಶಪುರ ವಿಧಾನಸಭಾ ಕ್ಷೇತ್ರದ (Sakleshpur Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಹಾಸನ ಜಿಲ್ಲೆಯ ತಾಲೂಕು ಕೇಂದ್ರ ಸಕಲೇಶಪುರ ವಿಧಾನಸಭಾ ಕ್ಷೇತ್ರ ಪಶ್ಚಿಮ ಘಟ್ಟದ ತಪ್ಪಲಿನ ಮಲೆನಾಡು ಪ್ರದೇಶವಾಗಿದ್ದು, ಸಮಶೀತೋಷ್ಣ ಹವೆಯನ್ನು ಹೊಂದಿದೆ. ಗಿರಿಧಾಮ ಪಟ್ಟಣವಾಗಿರುವ ಸಕಲೇಶಪುರ ಜೈವಿಕ ವೈವಿಧ್ಯತೆಗಳ ತಾಣವಾಗಿದ್ದು, ಪ್ರಮುಖ ಕೃಷಿ ಪ್ರಧಾನ ಕ್ಷೇತ್ರವೂ ಆಗಿದೆ. ಮೆಣಸು, ಏಲಕ್ಕಿ, ಶುಂಠಿ ಹಾಗೂ ಚಹಾ ಬೆಳೆದರೂ ಕಾಫಿ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ. ಹೀಗಾಗಿ ಏಲಕ್ಕಿ ಹಾಗೂ ಕಾಫಿ ಸಂಶೋಧನೆ ಹಾಗೂ ವಾಣಿಜ್ಯ ಕೇಂದ್ರವಾಗಿ ಸಕಲೇಶಪುರ ಗುರುತಿಸಿಕೊಂಡಿದೆ.
ಬೆಂಗಳೂರು- ಮಂಗಳೂರಿನ ಹೆದ್ದಾರಿಯಲ್ಲಿರುವ ಸಕಲೇಶಪುರ, ಸರಕು ಸಾಗಣೆದಾರರಿಗೆ ಅಗತ್ಯವಾದ ತಂಗುದಾಣ. ಕಳಪೆ ರಸ್ತೆ ಇಲ್ಲಿನ ಬಹುದೊಡ್ಡ ಸಮಸ್ಯೆ, ಬಿಸಿಲೆ ಅರಣ್ಯ ಧಾಮಕ್ಕೆ ಹೆಚ್ಚಿನ ಸುರಕ್ಷತೆ, ಪ್ರವಾಸಿಗರಿಗೆ ಹೆಚ್ಚಿನ ಮಾರ್ಗದರ್ಶನ ನೀಡುವ ಸೌಲಭ್ಯಗಳಲ್ಲಿ ಒಂದು ಕಡೆ ಶ್ರೀಮಂತ ನೈಸರ್ಗಿಕ ಪರಿಸರ ಹಾಗೂ ಎಸ್ಟೇಟುಗಳು ಮತ್ತೊಂದೆಡೆ ಕಾಡು, ಗುಡಿಸಲುಗಳನ್ನು ಹೊಂದಿದ್ದು ಸಮತೋಲನ ಕಾಯ್ದುಕೊಂಡಿದೆ.
ಹಾಸನ ಜಿಲ್ಲೆಯ ರಾಜಕಾರಣ ಜನತಾ ದಳದ ಭದ್ರಕೋಟೆ. ಹೇಮಾವತಿ ನದಿ ತೀರದ ಈ ಕ್ಷೇತ್ರದಲ್ಲಿ ಒಕ್ಕಲಿಗರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಮತ, ಪಂಥದವರು ನೆಲೆಸಿದ್ದಾರೆ. ಮೀಸಲು ಕ್ಷೇತ್ರವಾಗಿರುವ ಸಕಲೇಶಪುರದಲ್ಲಿ ಒಕ್ಕಲಿಗ, ಲಿಂಗಾಯತ ಮತಗಳು ಪ್ರಮುಖ ಪಾತ್ರವಹಿಸಲಿವೆ. ಕಳೆದ ಬಾರಿ ಜೆಡಿಎಸ್ ನ ಎಚ್ ಕೆ ಕುಮಾರಸ್ವಾಮಿ ಅವರು ಜಯಭೇರಿ ಬಾರಿಸಿದ್ದರು. ಈ ಬಾರಿ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿಯಿಂದ ಇಲ್ಲಿ ಕಠಿಣ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
ರಾಜಕೀಯ ಇತಿಹಾಸ:
ಸಕಲೇಶಪುರ ಜೆಡಿಎಸ್ನ ಭದ್ರಕೋಟೆ 2004ರಿಂದಲೂ ಇಲ್ಲಿ ಸತತವಾಗಿ ತೆನೆ ಹೊತ್ತ ಮಹಿಳೆಯದ್ದೇ ದರ್ಬಾರ್. 1962 ರಿಂದ 1983ರವರೆಗೆ ಇಲ್ಲಿ ಕಾಂಗ್ರೆಸ್ ಹಾಗೂ ಸ್ವತಂತ್ರ ಪಾರ್ಟಿ ಗೆಲುವು ಸಾಧಿಸಿತಾದರೂ, 1985ರಲ್ಲಿ ಬಿಜೆಪಿಯ ಬಸವರಾಜ್ ಕೈ ಪಾಳಯದ ಓಟಕ್ಕೆ ಬ್ರೇಕ್ ಹಾಕಿದರು. ಇದಾದ ಬಳಿಕದ 1989ರ ಚುನಾವಣೆಯಲ್ಲಿ ಗುರುದೇವ್ ಈ ಕ್ಷೇತ್ರದಿಂದ ಸ್ಪರ್ಧಿಸಿ ಮತ್ತೆ ಕಾಂಗ್ರೆಸ್ ಪಾಳಯಕ್ಕೆ ಅಧಿಕಾರದ ಚುಕ್ಕಾಣಿ ನೀಡಿದರು. ಆದರೆ 1994ರಲ್ಲಿ ಮತ್ತೆ ಸಕಲೇಶಪುರ ಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೆ ಜಾರಿತು. ಬಿಜೆಪಿಯ ಬಿ. ಬಿ. ಶಿವಪ್ಪ ಇಲ್ಲಿ ಗೆಲುವು ಸಾಧಿಸಿದರು, ಅಲ್ಲದೇ 1999ರಲ್ಲೂ ಅವರ ಗೆಎಲುವಿನ ಆಟ ಮುಂದುವರೆಯಿತು. ಆದರೆ 2004ರಲ್ಲಿ ಕಣಕ್ಕಿಳಿದ ಎಚ್. ಎ. ವಿಶ್ವನಾಥ್ ಸಕಲೇಶಪುರವನ್ನು ಜೆಡಿಎಸ್ ತೆಕ್ಕೆಗೆ ಜಾರುವಂತೆ ಮಾಡಿದರು. ಹೌದು ಇದಾದ ಬಳಿಕ 2008, 2013 ಹಾಗೂ 2018 ಹೀಗೆ ಮೂರೂ ಅವಧಿಗೂ ಇಲ್ಲಿ ಜೆಡಿಎಸ್ನದ್ದೇ ದರ್ಬಾರ್ ಮುಂದುವರೆದಿದೆ. ಗೌಡರ ಪಕ್ಷದ ಹೆಚ್. ಕೆ. ಕುಮಾರಸ್ವಾಮಿ ಇಲ್ಲಿ ಸತತವಾಗಿ ಗೆಲುವು ಪಡೆಯುತ್ತಿದ್ದಾರೆ.
ಇದನ್ನೂ ಓದಿ: Karnataka Assembly Elections: ಮಡಿಕೇರಿಯಲ್ಲಿ ಕೈ, ಕಮಲ ಫೈಟ್? ಯಾರ ಪಾಲಾಗುತ್ತೆ ಕಾಫಿನಾಡು?
ಜಾತಿ ರಾಜಕಾರಣ ಹೇಗಿದೆ?
ಕ್ಷೇತ್ರದಲ್ಲಿ ದಲಿತ ಮತದಾರರೇ ನಿರ್ಣಾಯಕರಾಗಿದ್ದರೂ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮಾಜದ ಮತದಾರರು ಫಲಿತಾಂಶ ನಿರ್ಧರಿಸುವಷ್ಟು ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ಪ್ರಾಬಲ್ಯದ ಕ್ಷೇತ್ರಕ್ಕೆ ಕಟ್ಟಾಯ ಹೋಬಳಿ ಸೇರ್ಪಡೆಯಾದ ನಂತರ ಒಕ್ಕಲಿಗರ ಮತಗಳು ನಿರ್ಣಾಯಕವಾಗಿದೆ. ಒಕ್ಕಲಿಗರು ಜೆಡಿಎಸ್ನ ಸಾಂಪ್ರದಾಯಿಕ ಮತಬ್ಯಾಂಕ್ ಆಗಿದ್ದರೂ ದಲಿತರು, ಲಿಂಗಾಯತ ಮತಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಕ್ಕಿಸಿಕೊಳ್ಳುವ ಮೂಲಕ ಪ್ರಾಬಲ್ಯ ಉಳಿಸಿಕೊಂಡಿತ್ತು. ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಯಾರು ದಲಿತ, ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುವರೋ ಅವರು ಗೆಲವಿನ ದಡ ಸೇರುವರು.
2023ರ ಟಿಕೆಟ್ ಆಕಾಂಕ್ಷಿಗಳು ಯಾರು?
ಹಾಸನ ಕ್ಷೇತ್ರಕ್ಕೆ ಹೋಲಿಸಿದರೆ ಸಕಲೇಶಪುರದಲ್ಲಿ ಈ ಬಾರಿ ಜೆಡಿಎಸ್ ಸೋಲಿಸುವುದು ಬಿಜೆಪಿಗೆ ಅಷ್ಟೇನೂ ಕಷ್ಟಕರವಾದ ಕೆಲಸವಲ್ಲ ಎಂಬುವುದು ತಜ್ಞರ ಮಾತಾಗಿದೆ. ಪ್ರಬಲ ಸ್ಪರ್ಧಿ ಕಣಕ್ಕಿಳಿಸಿದರೆ ಜೆಡಿಎಸ್ ಆಟ ನಡೆಯುವುದಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹಾಗಾದ್ರೆ ಈ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಗಳು ಯಾರು?
ಬಿಜೆಪಿ ಟಿಕೆಟ್ ಆಕಾಂಕ್ಷಿ: ನಾರ್ವೆ ಸೋಮಶೇಖರ್, ಸಿಮೆಂಟ್ ಮಂಜು ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್ನಿಂದ ಕಣಕ್ಕಿಳಿಯೋರು ಯಾರು?: ಈವರೆಗಿನ ರಾಜಕೀಯ ಬೆಳವಣಿಗೆಗಳ ಪ್ರಕಾರ ಮುರಳಿ ಮೋಹನ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ.
ಜೆಡಿಎಸ್ ಅಭ್ಯರ್ಥಿ ಯಾರಾಗಬಹುದು?: ಜೆಡಿಎಸ್ನಿಂದ ಹಾಲಿ ಶಾಸಕ ಹೆಚ್. ಕೆ. ಕುಮಾರಸ್ವಾಮಿಗೇ ಮತ್ತೆ ಟಿಕೆಟ್ ಸಿಗುವ ಸಾಧ್ಯತೆಗಳು ಅಧಿಕವಿದೆ. ಸಕಲೇಶಪುರದಲ್ಲಿ ಅವರ ಪ್ರಾಬಲ್ಯ ಹೆಚ್ಚಿರುವುದರಿಂದ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಬದಲಾಯಿಸುವ ಸಾಹಸ ಮಾಡುವುದು ಅನುಮಾನ.
ಇದನ್ನೂ ಓದಿ: Karnataka Assembly Elections: ಏಲಕ್ಕಿ ನಾಡಲ್ಲಿ ಮತ್ತೆ ಅರಳುತ್ತಾ ಕಮಲ? ಹಾವೇರಿ ಮತದಾರರ ಲೆಕ್ಕಾಚಾರ ಹೇಗಿದೆ?
2018ರಲ್ಲಿ ಫಲಿತಾಂಶವೇನಾಗಿತ್ತು?
2018 ಚುನಾವಣೆಯಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಎಚ್ ಕೆ ಕುಮಾರಸ್ವಾಮಿ, ಬಿಜೆಪಿಯ ಸೋಮಶೇಖರ್ ಜಯರಾಜ್ರನ್ನು 4,942 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಜೆಡಿಎಸ್ | ಎಚ್ ಕೆ ಕುಮಾರಸ್ವಾಮಿ | 62,262 |
ಬಿಜೆಪಿ | ಸೋಮಶೇಖರ್ ಜಯರಾಜ್ | 57,320 |
ಕಾಂಗ್ರೆಸ್ | ಸಿದ್ದಯ್ಯ | 37,002 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ