ಬೆಂಗಳೂರು ನಗರದ (Bengaluru City) ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ (Assembly Constancy) ರಾಜಾಜಿನಗರ (Rajajinagar) ಕ್ಷೇತ್ರವೂ ಒಂದು. ಸಾಲು ಸಾಲು ದೇಗುಲಗಳು (Temple), ಕೈಗಾರಿಕಾ ವಲಯ (Industrial Area), ಕಲ್ಯಾಣ ಮಂಟಪ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳಿಗೆ ಇಲ್ಲಿ ಕೊರತೆ ಇಲ್ಲ. ಬೆಂಗಳೂರಿನಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ರಾಜಾಜಿನಗರವೂ ಒಂದಾಗಿದ್ದು, ಮೆಜೆಸ್ಟಿಕ್ ಬಸ್ ಹಾಗೂ ರೈಲು ನಿಲ್ದಾಣ, ಯಶವಂತಪುರ ರೈಲು ನಿಲ್ದಾಣ ಸನಿಹದಲ್ಲಿದ್ದು, ಮೆಟ್ರೋ ಸಂಪರ್ಕಗಳನ್ನು ಈ ಕ್ಷೇತ್ರ ಹೊಂದಿದೆ. ಸದ್ಯ ಸುರೇಶ್ ಕುಮಾರ್ (S. Suresh Kumar) ಇಲ್ಲಿನ ಶಾಸಕರಾಗಿದ್ದು, ಈ ಬಾರಿ ಈ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ.
ಸ್ವಾತಂತ್ರ್ಯ ಹೋರಾಟಗಾರನ ಹೆಸರು ಪಡೆದ ಕ್ಷೇತ್ರ
ರಾಜಾಜಿನಗರವು ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವ ಒಂದು ಬಡಾವಣೆ. ಇದು ಸ್ವಾತಂತ್ರ್ಯಾ ನಂತರ ಎರಡೇ ವರ್ಷಕ್ಕೆ ರೂಪ ತಳೆದ ಬಡಾವಣೆ. 1949ರಲ್ಲಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಇದನ್ನು ಉದ್ಘಾಟನೆ ಮಾಡಿದ್ದರು. ತಮಿಳುನಾಡು ಮೂಲದ ಸ್ವಾತಂತ್ರ ಹೋರಾಟಗಾರ ಸಿ.ರಾಜಗೋಪಾಲಾಚಾರಿ ಅವರ ಹೆಸರನ್ನು ಈ ಬಡಾವಣೆಗೆ ಇಡಲಾಗಿದೆ. ಇದು ಬಸವೇಶ್ವರನಗರ, ಮಲ್ಲೇಶ್ವರಂ, ಮಹಾಲಕ್ಷ್ಮೀ ಲೇಔಟ್, ವಿಜಯನಗರಗಳಿಂದ ಸುತ್ತುವರೆದಿದೆ. ರಾಜಾಜಿನಗರವನ್ನು 2 ಹಂತಗಳಲ್ಲಿ ವಿಂಗಡಿಸಲಾಗಿದ್ದು, ಮೊದಲ ಹಂತವನ್ನು ಉತ್ತರದಿಂದ ದಕ್ಷಿಣದವರೆಗೆ 6 ವಿಭಾಗ ಅಥವಾ ಬ್ಲಾಕ್ಗಳಾಗಿ ವಿಂಗಡಿಸಲಾಗಿದೆ. ರಾಜಾಜಿನಗರದ ಕೆಲವು ಪ್ರದೇಶಗಳು ಇತರ ಹೆಸರುಗಳಿಂದ ಕರೆಯಲ್ಪಡುತ್ತವೆ. ಇವುಗಳಲ್ಲಿ ಪ್ರಮುಖ ಸುಬ್ರಮಣ್ಯನಗರ, ಕೇತ್ಮಾರನಹಳ್ಳಿ, ನಾಗಪುರ, ಮರಿಯಪ್ಪನಪಾಳ್ಯ, ಪ್ರಕಾಶನಗರ ಮತ್ತು ಶ್ರೀರಾಂಪುರಂ.
ಬೆಂಗಳೂರಿನ ಅತ್ಯಂತ ಉದ್ದರ ರಸ್ತೆ ಹೊಂದಿರುವ ಕ್ಷೇತ್ರ
ರಾಜಾಜಿನಗರದಿಂದ ಹಾದು ಹೋಗುವ ಕಾರ್ಡ್ ರಸ್ತೆ 8 ಕಿಮೀ ಉದ್ದವಾಗಿದ್ದು ಬೆಂಗಳೂರಿನ ಅತ್ಯಂತ ಉದ್ದ ರಸ್ತೆಗಳಲ್ಲಿ ಒಂದಾಗಿದೆ. ರಾಜಾಜಿನಗರ ಅನೇಕ ಪ್ರಖ್ಯಾತ ಶಾಲೆ ಮತ್ತು ಕಾಲೇಜುಗಳಿಗೆ ಪ್ರಸಿದ್ದ. ಇದು ಮುಖ್ಯ ಬಸ್ ನಿಲ್ದಾಣದ ಸಮೀಪ ಇರುವ ಪ್ರದೇಶವಾದ್ದರಿಂದ ಹೆಚ್ಚು ಹೋಟೆಲ್ಗಳಿರುವ ಪ್ರದೇಶ ಕೂಡ ಆಗಿದೆ. ಇಲ್ಲಿ ಬಿಬಿಎಂಪಿಯ ದಯಾನಂದ ನಗರ, ಪ್ರಕಾಶ್ ನಗರ, ರಾಜಾಜಿನಗರ, ಬಸವೇಶ್ವರ ನಗರ, ಕಾಮಾಕ್ಷಿ ಪಾಳ್ಯ, ಶಿವನಗರ ಮತ್ತು ಶ್ರೀ ರಾಮಮಂದಿರ ವಾರ್ಡ್ಗಳನ್ನು ಒಳಗೊಂಡಿದೆ.
ಹಾಲಿ ಶಾಸಕ ಸುರೇಶ್ ಕುಮಾರ್
ರಾಜಾಜಿನಗರ ಕ್ಷೇತ್ರದ ಹಾಲಿ ಶಾಸಕ ಸುರೇಶ್ ಕುಮಾರ್. ಮಾಜಿ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಶುದ್ಧ ಹಸ್ತರು, ಸರಳ ಸಜ್ಜನಿಕೆಯ ವ್ಯಕ್ತಿ ಎಂಬ ಹೆಸರು ಪಡೆದಿದ್ದಾರೆ. 2 ಬಾರಿ ಮಹಾನಗರ ಪಾಲಿಕೆ ಕಾರ್ಪೊರೇಟರ್ ಆಗಿದ್ದ ಸುರೇಶ್ ಕುಮಾರ್, ಈಗಾಗಲೇ 5 ಬಾರಿ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ರಾಜಕೀಯದಲ್ಲಿ ಅಪಾರ ಅನುಭವಿ
ಸುರೇಶ್ ಕುಮಾರ್ ಈಗಾಗಲೇ ರಾಜಕೀಯದಲ್ಲಿ ಅಪಾರ ಅನುಭವ ಗಳಿಸಿರುವ ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 1983 ಹಾಗೂ 1990ರಲ್ಲಿ ಎರಡು ಬಾರಿ ಕಾರ್ಪೊರೇಟರ್, ಪಾಲಿಕೆಯ ಬಿಜೆಪಿ ನಾಯಕನಾಗಿದ್ದರು. ಬಳಿಕ 1988ರಿಂದ 1990ರವರೆಗೆ ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷರಾಗಿದ್ದರು. ಬಳಿಕ 1994, 1999, 2008, 2013 ಹಾಗೂ 2018ರಲ್ಲಿ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಸಚಿವ, 2019ರಲ್ಲಿ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ರಾಜಕೀಯದಲ್ಲಿ ಏಳು ಬೀಳು
ಈಗಾಗಲೇ 5 ಬಾರಿ ಗೆದ್ದಿರುವ ಸುರೇಶ್ ಕುಮಾರ್, ಹಿಂದೊಮ್ಮೆ 2004ರಲ್ಲಿ ಕಾಂಗ್ರೆಸ್ನ ನೆಲ ನರೇಂದ್ರ ಬಾಬು ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಬಳಿಕ 2013ರಿಂದ ಈಗಿನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೇ ಕೆಜೆಪಿಯಿಂದ ಸುರೇಶ್ ಕುಮಾರ್ ವಿರುದ್ಧ ಸ್ಪರ್ಧಿಸಿ, ಸೋತು ಹೋಗಿದ್ದರು. ಇನ್ನು ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ರನ್ನು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕೈಬಿಡಲಾಗಿತ್ತು.
ಕ್ಷೇತ್ರದಲ್ಲಿ ಟಿಕೆಟ್ಗಾಗಿ ಪೈಪೋಟಿ
ಸದ್ಯ ಈ ಬಾರಿಯೂ ಬಿಜೆಪಿಯಿಂದ ಸುರೇಶ್ ಕುಮಾರ್ ಅವರೇ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ. ಅತ್ತ ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಭಾರೀ ಪೈಪೋಟಿ ಶುರುವಾಗಿದೆ. ಬಿಬಿಎಂಪಿ ಮಾಜಿ ಮೇಯರ್ ಜಿ. ಪದ್ಮಾವತಿ ಮುಂಚೂಣಿಯಲ್ಲಿದ್ದಾರೆ. ಕಳೆದ ಬಾರಿ ಸುರೇಶ್ ಕುಮಾರ್ ವಿರುದ್ಧ ಸೋತಿದ್ದ ಪದ್ಮಾವತಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ನಿರ್ಧರಿಸಿದ್ದಾರೆ. ಮೇಯರ್ ಆಗಿದ್ದಾಗ ಜನರ ಸಮಸ್ಯೆಗೆ ಸ್ಪಂದಿಸಿದ್ದರು ಎನ್ನುವುದು ಅವರ ಹೆಚ್ಚುಗಾರಿಕೆ. ಇನ್ನು ಹಾಲಿ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಪುಟ್ಟರಾಜು, ಯುವ ಮುಖಂಡ ಮಂಜುನಾಥ್ ಹೆಸರು ಕೇಳಿ ಬರುತ್ತಿದೆ.
ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ |
ಎಸ್. ಸುರೇಶ್ ಕುಮಾರ್ | ಜಿ. ಪದ್ಮಾವತಿ | ಸಾರಾ ಗೋವಿಂದ್? |
ಜಿ.ಸಿ. ಚಂದ್ರಶೇಖರ್ | ||
ಪುಟ್ಟರಾಜು | ||
ಮಂಜುನಾಥ್ | ||
ಹಂಸಲೇಖ? |
ರಾಜಾಜಿನಗರ ಕ್ಷೇತ್ರದಲ್ಲಿ ಸಿನಿಮಾ ಮಂದಿಯ ಹೆಸರುಗಳೂ ಕೇಳಿ ಬರುತ್ತಿವೆ. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೆಸರು ಕಾಂಗ್ರೆಸ್ನಿಂದ ಕೇಳಿ ಬಂದಿದ್ದರೆ, ನಿರ್ಮಾಪಕ ಸಾರಾ ಗೋವಿಂದು ಹೆಸರು ಜೆಡಿಎಸ್ನಿಂದ ಕೇಳಿ ಬರುತ್ತಿದೆ.
ರಾಜಾಜಿನಗರ ಕ್ಷೇತ್ರದ ಮತದಾರರು
ಕ್ಷೇತ್ರದಲ್ಲಿ ಒಟ್ಟು 2,22,200 ಮತದಾರರು ಇದ್ದಾರೆ. ಈ ಪೈಕಿ ಲಿಂಗಾಯತರು 51,000, ಒಕ್ಕಲಿಗ 45,000 ಇದ್ದರೆ, ಎಸ್ಸಿ-ಎಸ್ಟಿ ಮತದಾರರ ಸಂಖ್ಯೆ 38,000 ಇದೆ. ಇನ್ನುಳಿದಂತೆ ಬ್ರಾಹ್ಮಣ 23,000, ತಮಿಳು ಹಾಗೂ ತೆಲುಗು ಭಾಷಿಕರು 21,000, ಇತರೇ ಮತದಾರರು 15,500 ಇದ್ದರೆ, 7 ಸಾವಿರದಷ್ಟು ಮುಸ್ಲಿಂ ಮತದಾರರಿದ್ದಾರೆ.
ಒಟ್ಟು ಮತದಾರರು | 2,22,200 |
ಲಿಂಗಾಯತ | 51,000 |
ಒಕ್ಕಲಿಗ | 45,000 |
ಎಸ್ಸಿ-ಎಸ್ಟಿ | 38,000 |
ಬ್ರಾಹ್ಮಣ | 23,000 |
ತಮಿಳು-ತೆಲುಗು ಭಾಷಿಕರು | 21,000 |
ಇತರೇ | 15,5000 |
ಮುಸ್ಲಿಂ | 7,000 |
ರಾಜಾಜಿನಗರ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದ್ದು ಕಡಿಮೆ, ಆಗಬೇಕಾಗಿದ್ದು ಜಾಸ್ತಿ ಅಂತಾರೆ ಮತದಾರರು. ದೀನ ದಯಾಳ್ ಡಯಾಲಿಸಿಸ್ ಕೇಂದ್ರದ ಅಭಿವೃದ್ಧಿ, ವಾಜಪೇಯಿ ಒಳಾಂಗಣ ಕ್ರೀಡಾಂಗಣ, ಆಡಿಟೋರಿಯಂ, ಗಾಂಧಿ ಶಾಲೆ ನಿರ್ಮಾಣವಾಗಿದೆ ಎನ್ನುವುದು ಮೆಚ್ಚುಗೆ ಮಾತು.
ಇದನ್ನೂ ಓದಿ: Karnataka Assembly Elections: ಶಾಂತಿನಗರ ಕ್ಷೇತ್ರದಲ್ಲಿ ಹೇಗಿದೆ ಚುನಾವಣಾ ರಣಕಣ? ಕೈ-ಕಮಲ-ದಳ ನಡುವೆ ನಡೆಯುತ್ತಾ ಫೈಟ್?
ರಾಜಾಜಿನಗರ ಮತದಾರರ ಸಮಸ್ಯೆಗಳು
ಇನ್ನು ಕ್ಷೇತ್ರದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಿದೆ, ಪ್ರಕಾಶ ನಗರ, ಶಿವ ನಗರದಲ್ಲಿನ ಕೊಳೆಗೇರಿ ಪ್ರದೇಶಗಳು ಹಾಗೂ ಬಡ ವರ್ಗದ ಜನರು ವಾಸವಿರುವ ಪ್ರದೇಶಗಳಲ್ಲಿ ಸೂಕ್ತ ರಸ್ತೆ, ಪಾದಚಾರಿ ಮಾರ್ಗದಂತಹ ಮೂಲ ಸೌಕರ್ಯಗಳ ಕೊರತೆ ಇದೆ. ಗ್ರಂಥಾಲಯ, ಈಜುಕೊಳ, ಉದ್ಯಾನ, ಆಟದ ಮೈದಾನ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳು ಬೇಕು ಎನ್ನುತ್ತಾರೆ ಇಲ್ಲಿನ ಜನ. ವಸತಿ ಪ್ರದೇಶಗಳಲ್ಲೂ ವಾಣಿಜ್ಯ ಚಟುವಟಿಕೆ ಹೆಚ್ಚುತ್ತಿರುವುದು ಇಲ್ಲಿನ ನಿವಾಸಿಗಳಿಗೆ ತಲೆನೋವು ತಂದಿದೆ. ವಾಣಿಜ್ಯ ಚಟುವಟಿಕೆಗಳ ಮೇಲೆ ನಿಯಂತ್ರಣ ಹಾಗೂ ಟ್ರಾಫಿಕ್ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಚುನಾವಣೆಯ ಪ್ರಮುಖ ವಿಷಯಗಳಾಗಿವೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನಪ್ರತಿನಿಧಿಗೆ ಬೆಂಬಲ ನೀಡುತ್ತೇವೆ ಎನ್ನುತ್ತಾರೆ ಇಲ್ಲಿನ ಮತದಾರ ಪ್ರಭುಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ