ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಹೀಗಿರುವಾಗ ದೇವೇಗೌಡರ ಕುಟುಂಬದ ಪ್ರಾಬಲ್ಯವಿರುವ ನಾಗಮಂಗಲ ವಿಧಾನಸಭಾ ಕ್ಷೇತ್ರದ (Nagamangala Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಕ್ಷೇತ್ರದ ವಿಶೇಷತೆ
ಮಂಡ್ಯ ಜಿಲ್ಲೆಯ ಅತ್ಯಂತ ದೊಡ್ಡ ತಾಲೂಕು ಕೇಂದ್ರವಾಗಿರುವ ನಾಗಮಂಗಲದ ಮೇಲೆ ಪಕ್ಕದ ಹಾಸನ, ಮೈಸೂರು ಜಿಲ್ಲೆ ಪ್ರಭಾವ ಬಹಳಷ್ಟಿದೆ. ಬಯಲು, ಬೆಟ್ಟಗುಡ್ಡಗಳಿಂದ ಆವೃತವಾದ ಈ ಕ್ಷೇತ್ರದಲ್ಲಿ ಶಿಂಷಾ,ಲೋಕಪಾವನಿ ನದಿಗಳು ಹರಿಯುತ್ತಿವೆ. ರಾಗಿ, ಜೋಳ, ಹುರುಳಿ, ತೊಗರಿ ಬೆಳೆಗಳಿಗೆ ಎರಡು ನದಿಗಳಲ್ಲದೆ ಕೆರೆಗಳು ಆಸರೆಯಾಗಿವೆ. ಇದಲ್ಲದೆ, ತೆಂಗು, ಕಬ್ಬು, ಬಾಳೆ, ಮೆಣಸಿನಕಾಯಿ, ತರಕಾರಿ ಕೂಡಾ ಬೆಳೆಯಲಾಗುತ್ತದೆ. ಹೈನುಗಾರಿಕೆ, ಕುರಿ ಸಾಕಾಣಿಕೆ ಕೂಡಾ ಹೆಚ್ಚಾಗಿದೆ. ಇನ್ನು ಬಹುತೇಕ ಒಕ್ಕಲಿಗರ ಆರಾಧ್ಯ ಸ್ಥಳ ಆದಿಚುಂಚನಗಿರಿ ನಾಗಮಂಗಲ ತಾಲ್ಲೂಕಿನಲ್ಲಿದೆ. ಇನ್ನು ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ದೇವೇಗೌಡರ ಕುಟುಂಬದ್ದೇ ಪ್ರಾಬಲ್ಯವಿದೆ ಎಂಬುವುದೂ ಉಲ್ಲೇಖನೀಯ.
ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?
ರಾಜಕೀಯ ಹಿನ್ನೋಟ
1957ರಲ್ಲಿ ಕುರುಬ ಸಮುದಾಯದ ಟಿ.ಮರಿಯಪ್ಪ ಗೆಲುವಿನ ನಗೆ ಬೀರುತ್ತಾರೆ. 1962ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಟಿ.ಎನ್ ಮಾದಪ್ಪಗೌಡ ಗೆಲುವು ಸಾಧಿಸುತ್ತಾರೆ. 1967ರಲ್ಲಿ ಟಿ.ಎನ್ ಮಾದಪ್ಪಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಮತ್ತೆ ಕಣಕ್ಕಿಳಿದು ಎರಡನೇ ಬಾರಿ ಶಾಸಕರಾಗುತ್ತಾರೆ. ಇನ್ನು 1972ರ ವೇಳೆ ಇಂದಿರಾ ಕಾಂಗ್ರೆಸ್ ಪಕ್ಷ ಸೇರಿದ ಟಿ.ಎನ್ ಮಾದಪ್ಪಗೌಡ ಎಚ್.ಟಿ ಕೃಷ್ಣಪ್ಪನವರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ. ಈ ನಡುವೆ ಮಾದಪ್ಪಗೌಡ ಅನಾರೋಗ್ಯದಿಂದ ಕೊನೆಯುಸಿರೆಳೆಯುತ್ತಾರೆ. 1973ರಲ್ಲಿ ಮತ್ತೆ ಉಪ ಚುನಾವಣೆ ಎದುರಾಗುತ್ತದೆ. ಆಗ ಎಚ್.ಟಿ ಕೃಷ್ಣಪ್ಪನವರು ಕಾಂಗ್ರೆಸ್ನಿಂದ ಮತ್ತೆ ಸ್ಪರ್ಧಿಸಿ ಜಯ ಗಳಿಸುತ್ತಾರೆ.
1978ರಲ್ಲಿ ಕೃಷ್ಣಪ್ಪ ಮರು ಆಯ್ಕೆ ಬಯಸಿ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಾರೆ, ಅಂದುಕೊಂಡಂತೆ ಗೆಲುವು ಪಡೆಯುತ್ತಾರೆ. 1983ರಲ್ಲಿ ಕುರುಬ ಸಮುದಾಯದ ಚಿಗರಿಗೌಡರು ಕಾಂಗ್ರೆಸ್ ಟಿಕೆಟ್ ಸಿಗದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸುತ್ತಾರೆ. ಆದರೆ ಅವರು ಸಹ ಅಕಾಲಿಕ ನಿಧನ ಹೊಂದಿದ ಪರಿಣಾಮ 1984ರಲ್ಲಿ ಮತ್ತೆ ನಾಗಮಂಗಲದಲ್ಲಿ ಉಪ ಚುನಾವಣೆ ನಡೆಯುತ್ತದೆ. ಈ ವೇಳೆ ಎಚ್.ಟಿ ಕೃಷ್ಣಪ್ಪನವರು ಸ್ವತಂತ್ರವಾಗಿ ಸ್ಪರ್ಧಿಸಿ ಮೂರನೇ ಬಾರಿ ಗೆಲುವು ಸಾಧಿಸುತ್ತಾರೆ.
ಇನ್ನು 1985ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿಯೂ ಎಚ್.ಟಿ ಕೃಷ್ಣಪ್ಪನವರು ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲ್ಲುತ್ತಾರೆ. ಈ ಮೂಲಕ ನಾಲ್ಕನೇ ಬಾರಿ ಶಾಸಕರಾಗುತ್ತಾರೆ. ಇದರೊಂದಿಗೆ ಆರೋಗ್ಯ, ಅಬಕಾರಿ ಮತ್ತು ವೈದ್ಯಕೀಯ ಶಿಕ್ಷಣದಂತಹ ಮುಖ್ಯವಾದ ಖಾತೆಯನ್ನೂ ನಿರ್ವಹಿಸುತ್ತಾರೆ. 1989ರಲ್ಲಿ ಎಲ್.ಆರ್ ಶಿವರಾಮೇಗೌಡರಿಗೆ ಕಾಂಗ್ರೆಟ್ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸುತ್ತಾರೆ. 1994ರಲ್ಲಿಯೂ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಈ ಸಂದರ್ಭದಲ್ಲೂ ಅವರು ಭಾರೀ ಪೈಪೋಟಿ ಎದುರಿಸಿ ಗೆಲುವು ಕಾಣುತ್ತಾರೆ.
1999ರ ಚುನಾವಣೆಯಲ್ಲಿ ಮೂರನೇ ಬಾರಿ ಗೆಲ್ಲುವ ನಿಟ್ಟಿನಲ್ಲಿ ಎಲ್.ಆರ್ ಶಿವರಾಮೇಗೌಡರು ಕಾಂಗ್ರೆಸ್ನಿಂದ ಕಣಕ್ಕಿಳಿಯುತ್ತಾರೆ. ಆದರೆ ಅದೃಷ್ಟ ಕೈಕೊಟ್ಟಿದ್ದರಿಂದ ಜೆಡಿಎಸ್ ಪಕ್ಷದ ಚಲುವರಾಯಸ್ವಾಮಿ ಮೊದಲ ಯತ್ನದಲ್ಲಿಯೇ ಜಯ ಸಾಧಿಸುತ್ತಾರೆ. 2004ರಲ್ಲಿಯೂ ಇವರೇ ಪ್ರತಿಸ್ಪರ್ಧಿಗಳಾಗುತ್ತಾರೆ. ಈ ವೇಳೆಯೂ ಜೆಡಿಎಸ್ನ ಚಲುವರಾಯಸ್ವಾಮಿಯವರು ಮತ್ತೆ ಗೆಲುವು ಸಾಧಿಸುತ್ತಾರೆ. 2008ರ ಚುನಾವಣೆ ವೇಳೆಗೆ ಚಲುವರಾಯಸ್ವಾಮಿಯವರು ಮೂರನೇ ಬಾರಿ ಸ್ಪರ್ಧಿಸುತ್ತಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಕೆ.ಸುರೇಶ್ಗೌಡರಿಗೆ ಟಿಕೆಟ್ ನೀಡುತ್ತದೆ. ಈ ಚುನಾವಣೆಯಲ್ಲಿ ಕೈ ಅಭ್ಯರ್ಥಿ ಚಲುವರಾಯಸ್ವಾಮಿಯವರನ್ನು ಮಣಿಸಿ ಶಾಸಕರಾಗುತ್ತಾರೆ.
2013ರಲ್ಲಿ ಮತ್ತೆ ಜೆಡಿಎಸ್ನ ಚಲುವರಾಯಸ್ವಾಮಿ ಮತ್ತು ಕಾಂಗ್ರೆಸ್ನ ಸುರೇಶ್ಗೌಡರ ನಡುವೆ ಹಣಾಹಣಿ ನಡೆಯುತ್ತದೆ. ಚಲುವರಾಯಸ್ವಾಮಿಯವರು ಗೆಲುವು ಸಾಧಿಸುತ್ತಾರೆ. 2018ರ ವೇಳೆಗೆ ದೇವೇಗೌಡರ ಕುಟುಂಬದ ಮೇಲಿನ ಅಸಮಾಧಾನದಿಂದ ಚಲುವರಾಯಸ್ವಾಮಿಯವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ. ಅತ್ತ ಕಾಂಗ್ರೆಸ್ನಲ್ಲಿದ್ದ ಸುರೇಶ್ಗೌಡರು ಜೆಡಿಎಸ್ ಸೇರುತ್ತಾರೆ. ಇಬ್ಬರ ನಡುವೆ ಮತ್ತೆ ಸ್ಪರ್ಧೆ ಏರ್ಪಡುತ್ತದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತೀವ್ರ ಹಿನ್ನಡೆಯಾಗಿ ಜೆಡಿಎಸ್ ಗೆಲುವು ಸಾಧಿಸುತ್ತದೆ.
2023ರ ಟಿಕೆಟ್ ಆಕಾಂಕ್ಷಿಗಳು ಯಾರು?
ಜೆಡಿಎಸ್: ಹಾಲಿ ಶಾಸಕರಾದ ಕೆ.ಸುರೇಶ್ ಗೌಡರ ಮೇಲೆ ಕ್ಷೇತ್ರದ ಜನ ಮುನಿಸಿಕೊಂಡಿದ್ದು, ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ. ಹೀಗಿದ್ದರೂ ಜೆಡಿಎಸ್ ಮತ್ತೆ ಸುರೇಶ್ಗೌಡರಿಗೆ ಟಿಕೆಟ್ ಘೋಷಿಸಿದೆ.
ಕಾಂಗ್ರೆಸ್: ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹೊರತುಪಡಿಸಿ ಬೇರೆ ಯಾರು ಕೂಡ ಕಾಂಗ್ರೆಸ್ನಿಂದ ಅರ್ಜಿ ಸಲ್ಲಿಸಿಲ್ಲ. ಹಾಗಾಗಿ ಅವರೇ ಅಭ್ಯರ್ಥಿಯಾಗಲಿದ್ದಾರೆ.
ಬಿಜೆಪಿ: ಫೈಟರ್ ರವಿ (ಮಲ್ಲಿಕಾರ್ಜುನ) ಬಿಜೆಪಿ ಸೇರಿದ್ದು ನಾಗಮಂಗಲದ ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅದಕ್ಕೂ ಮಿಗಿಲಾಗಿ ಜೆಡಿಎಸ್ನ ಸುರೇಶ್ ಗೌಡರ ಮೇಲೆ ಮುನಿಸಿಕೊಂಡಿರುವ ಫೈಟರ್ ರವಿ ತಾನು ಸೋತರೂ ಸರಿ, ಅವರನ್ನು ಗೆಲ್ಲಲು ಬಿಡಲಾರೆ ಎಂಬಂತೆ ಪ್ರಚಾರ ನಡೆಸುತ್ತಿದ್ದಾರೆ. ಅತ್ತ ಲಕ್ಷ್ಮೀ ಅಶ್ವಿನ್ ಗೌಡ ಅವರನ್ನೂ ಕಣಕ್ಕಿಳಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಇದನ್ನೂ ಓದಿ: Karnataka Assembly Elections: ಸಕ್ಕರೆ ನಾಡಿನ ಅಧಿಪತಿ ಆಗೋರು ಯಾರು? ಮಂಡ್ಯದಲ್ಲಿ ಯಾರೆಲ್ಲಾ ಕಣಕ್ಕೆ?
ಜಾತಿ ಲೆಕ್ಕಾಚಾರ:
ಒಟ್ಟು 2,09,278 ಮತದಾರರಿರುವ ನಾಗಮಂಗಲ ಕ್ಷೇತ್ರದಲ್ಲಿ 1,05,198 ಪುರುಷ ಮತದಾರರಿದ್ದು, 1,04,065 ಮಹಿಳಾ ಮತದಾರರಿದ್ದಾರೆ.
ಲಿಂಗಾಯತ | 8,000 |
ಮುಸ್ಲಿಂ | 10,000 |
ಎಸ್ಸಿ | 30,000 |
ಕುರುಬ | 16,000 |
ಎಸ್ಟಿ | 4,000 |
ಒಕ್ಕಲಿಗ | 1,04,000 |
ವಿಶ್ವಕರ್ಮ | 4,000 |
ಬ್ರಾಹ್ಮಣ | 4,000 |
ಸವಿತಾ ಸಮಾಜ | 4,000 |
ಇತರೆ | 21,500 |
2018 ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್ನ ಕೆ. ಸುರೇಶ್ ಗೌಡ, ಕಾಂಗ್ರೆಸ್ನ ಎನ್. ಚಲುವನಾರಾಯಣಸ್ವಾಮಿ ಅವರನ್ನು 47,667 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಜೆಡಿಎಸ್ | ಕೆ. ಸುರೇಶ್ ಗೌಡ | 1,12,396 |
ಕಾಂಗ್ರೆಸ್ | ಎನ್. ಚಲುವನಾರಾಯಣಸ್ವಾಮಿ | 64,729 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ