ಕುಣಿಗಲ್ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಹೀಗಿರುವಾಗ ಕಲ್ಪತರು ನಾಡು ತುಮಕೂರಿನ (Tumakuru) ಕುಣಿಗಲ್ ವಿಧಾನಸಭಾ ಕ್ಷೇತ್ರದ (Tiptur Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಕ್ಷೇತ್ರದ ವಿಶೇಷತೆ
ತುಮಕೂರು ಜಿಲ್ಲೆಯ ಕುಣಿಗಲ್ನ ಕುದುರೆ ಫಾರ್ಮ್ ಬಹಳ ಪ್ರಸಿದ್ಧಿ. ಕುಣಿಗಲ್ ಕೆರೆ ಕರ್ನಾಟಕದ ಎರಡನೇ ದೊಡ್ಡ ಕೆರೆ. ಕುಣಿಗಲ್ ಕೆರೆ ಬಗ್ಗೆ ಜನಪದ ಗೀತೆಯೇ ಇದೆ. ಕೃಷಿಯೇ ನೆಚ್ಚಿಕೊಂಡ ಜನರು ಇಲ್ಲಿ ಹೆಚ್ಚು. ಕೆರೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಆಗಾಗ ಗ್ರಾಮ-ಗ್ರಾಮಗಳ ಮಧ್ಯೆ ಜಗಳವೇ ನಡೆದು ಹೋದ ಉದಾಹರಣೆಗಳಿವೆ. ಶಿವಗಂಗೆಯಲ್ಲಿ ಹುಟ್ಟುವ ಮೂರು ನದಿಗಳಾದ ನಳಿನಿ, ನಾಗಿನಿ ಮತ್ತು ಕಮಲ ಕುಣಿಗಲ್ನಲ್ಲಿ ಒಂದಾಗುತ್ತವೆ ಎಂದು ಹೇಳಲಾಗುತ್ತದೆ. ಇಲ್ಲಿರುವ ನರಸಿಂಹ ದೇವಾಲಯವು ಹೊಯ್ಸಳರ ಕಾಲದ ದೊಡ್ಡ ಕಲಾಕೃತಿಯಾಗಿದ್ದು, ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾಗಿದೆ.
ಕುಣಿಗಲ್ ಇತಿಹಾಸವನ್ನು ಗಮನಿಸಿದಾಗ ಶಿಲಾಯುಗದ ನೆಲೆಗಳನ್ನು ಕಾಣಬಹುದಾಗಿದೆ. ಹುಲಿಯೂರು ದುರ್ಗದ ಹೇಮಗಿರಿ ತಪ್ಪಲು, ತಿಪ್ಪಸಂದ್ರಗಳಲ್ಲಿ ಶಿಲಾಯುಗದ ಅವಶೇಷಗಳು ಕಾಣಬರುತ್ತವೆ. ಕುಣಿಗಲ್ ತಾಲೋಕಿನ ಹೊಡಾಘಟ್ಟ ಗ್ರಾಮದಲ್ಲಿ ಹೊಯ್ಸಳರ ಶಾಸನವಿದೆ. ಇನ್ನು ಕುಣಿಗಲ್ ಪಟ್ಟಣದ ಹೂವಾಡಿಗರ ಬೀದಿಯಲ್ಲಿ ಶ್ರೀ ಭೈರಾಗೀಶ್ವರ ಮಠವಿದ್ದು ಅವರು ಶತಮಾನಗಳ ಹಿಂದೆ ಜೀವಂತ ಸಮಾಧಿಯಾಗಿದ್ದು ಭಕ್ತರ ರಕ್ಷಣೆ ಮಾಡುತ್ತಿದ್ದಾರೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.
ರಾಜಕೀಯ ಹಿನ್ನೋಟ
ಇನ್ನು ಇಲ್ಲಿನ ರಾಜಕೀಯ ಇತಿಹಾಸ ನೋಡುವುದಾದರೆ ಇಲ್ಲಿ ಬಿಜೆಪಿ ಈವರೆಗೂ ಗೆಲುವಿನ ಖಾತೆಯನ್ನೇ ತೆರೆದಿಲ್ಲ. ಇನ್ನು ಇತ್ತೀಚೆಗಿನ ಚುನಾವಣೆಗಳ ಬಗ್ಗೆ ಗಮನಿಸುವುದಾದರೆ 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ ಎಚ್.ನಿಂಗಪ್ಪ ಗೆಲುವಿನ ನಗೆ ಬೀರಿದ್ದರೆ, 2008ರಲ್ಲಿ ಕಾಂಗ್ರೆಸ್ನ ಬಿ.ಬಿ.ರಾಮಸ್ವಾಮಿ ಗೌಡ ಗೆದ್ದು ಬೀಗಿದರು. 2013ರಲ್ಲಿ ಮತ್ತೆ ಕುಣಿಗಲ್ ಜೆಡಿಎಸ್ ತೆಕ್ಕೆಗೆ ಜಾರಿ ಡಿ. ನಾಗರಾಜಯ್ಯ ಶಾಸಕರಾದರು. ಇನ್ನು ಕಳೆದ 2018ರ ಚುನಾವಣೆಯನ್ನು ನೋಡುವುದಾದರೆ ಕಾಂಗ್ರೆಸ್ನ ಡಾ. ಎಚ್. ಡಿ. ರಂಗನಾಥ್ ಬಿಜೆರಪಿಯ ಕೃಷ್ಣಕುಮಾರ್ರನ್ನು ಸೋಲಿಸಿ ಗೆಲುವಿನ ನಗೆ ಬೀರಿದರು.
2023ರ ಅಭ್ಯರ್ಥಿಗಳು ಯಾರು?
ಜೆಡಿಎಸ್: ರವಿ. ಬಿ
ಕಾಂಗ್ರೆಸ್: ಡಾ. ಎಚ್. ಡಿ. ರಂಗನಾಥ್
ಬಿಜೆಪಿ: ಡಿ. ಕೃಷ್ಣಕುಮಾರ್
2018ರಲ್ಲಿ ಫಲಿತಾಂಶವೇನಾಗಿತ್ತು?
2018 ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ನ ಡಾ. ಎಚ್. ಡಿ. ರಂಗನಾಥ್, ಬಿಜೆಪಿಯ ಕೃಷ್ಣಕುಮಾರ್ರನ್ನು 5,600 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಬಿಜೆಪಿ | ಕೃಷ್ಣಕುಮಾರ್ | 53,097 |
ಕಾಂಗ್ರೆಸ್ | ಡಾ. ಎಚ್. ಡಿ. ರಂಗನಾಥ್ | 58,697 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ