ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ.
ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಹೀಗಿರುವಾಗ ಸಂಸ್ಕೃತಿ, ಸಾಹಿತ್ಯ, ಜಾನಪದ ಕಣಜ ಎನಿಸಿಕೊಂಡಿರುವ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ (KR Pete Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಕ್ಷೇತ್ರದ ವಿಶೇಷತೆ
ಮೈಸೂರು ಜಿಲ್ಲೆ ಹಾಗೂ ಹಾಸನ ಜಿಲ್ಲೆಯ ಪ್ರಭಾವ ಹೊಂದಿರುವ ಸಂಸ್ಕೃತಿ, ಸಾಹಿತ್ಯ, ಜಾನಪದ ಕಣಜ ಎನಿಸಿಕೊಂಡಿರುವ ಕೃಷ್ಣರಾಜಪೇಟೆ(ಕೆ. ಆರ್ ಪೇಟೆ) ಸುತ್ತಲೂ ಹತ್ತು ಹಲವು ಪ್ರೇಕ್ಷಣೀಯ ತಾಣಗಳಿವೆ.ಈ ಕ್ಷೇತ್ರದಲ್ಲಿ ಕ್ರೋಮೈಟ್, ಬೆಣಚುಕಲ್ಲು, ಬೂದು ಬಣ್ಣದ ಶಿಲೆ, ಆಭ್ರಕದ ಅದಿರುಗಳು ದೊರಕಿವೆ. ಕೆಂಪು ಮಿಶ್ರಿತ ಮಣ್ಣು ಹೊಂದಿದ್ದು, ಕೆಲ ಹೋಬಳಿಗಳಲ್ಲಿ ನೀರಾವರಿ ಸೌಲಭ್ಯ ಚೆನ್ನಾಗಿದೆ. ಇಲ್ಲಿ ಹುರಳಿ, ರಾಗಿ, ಬತ್ತ, ಕಬ್ಬು, ಬಾಳೆ ತೆಂಗಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದಲ್ಲದೆ ಹೈನುಗಾರಿಕೆ, ರೇಷ್ಮೆ ಸಾಕಣೆ ಅಲ್ಲದೆ ಮಣ್ಣಿನ ಮಡಿಕೆ ತಯಾರಿಕೆ, ಕೈಮಗ್ಗದ ನೇಯ್ಗೆಯಂಥ ಗುಡಿಕೈಗಾರಿಕೆ ಎಲ್ಲೆಡೆ ಕಾಣಬಹುದು. ಒಂದು ಕಾಲದಲ್ಲಿ ಕೆ. ಆರ್ ಪೇಟೆಯಲ್ಲಿ ನೂರಾರು ಕೆರೆಗಳಿದ್ದವು. ಹೇಮಗಿರಿ ಅಣೆಕಟ್ಟು, ಕೃಷ್ಣರಾಜಸಾಗರ ಹಿನ್ನೀರು ಸಿಗುತ್ತಿತ್ತು. ಈಗ ನಾಲ್ಕೈದು ನಾಲೆಗಳು ಆಸರೆಯಾಗಿವೆ.
ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?
ರಾಜಕೀಯವಾಗಿ ನೋಡುವುದಾದರೆ ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರ ಮಂಡ್ಯದಿಂದ ಕೊಂಚ ದೂರ ಇರುವ ಹಾಗೂ ಹೊಳೆನರಸೀಪುರ-ಚನ್ನರಾಯಪಟ್ಟಣ ಕ್ಷೇತ್ರಗಳಿಗೆ ಹೊಂದಿಕೊಂಡಿರುವ ಕಾರಣಕ್ಕೆ ಇಲ್ಲಿ ದೇವೇಗೌಡರ ಕುಟುಂಬ ಹಾಘೂ ಜೆಡಿಎಸ್ ಹಿಡಿತ ಅಧಿಕವಿದೆ.
ರಾಜಕೀಯ ಹಿನ್ನೋಟ
1952ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಸ್.ಎಂ ಲಿಂಗಪ್ಪನವರು ಗೆದ್ದರೆ, 1957ರಲ್ಲಿ ಎಂ.ಕೆ ಬೊಮ್ಮೇಗೌಡರು ಕಾಂಗ್ರೆಸ್ನಿಂದ ಸ್ಪರ್ಧಿಸಿ ವಿಜಯದ ನಗೆ ಬೀರಿದರು. 1962ರಲ್ಲಿ ಎನ್.ನಂಜೇಗೌಡರು ಮತ್ತೆ ಕಣಕ್ಕಿಳಿದು ಕಾಂಗ್ರೆಸ್ನ ಎಂ.ಕೆ ಬೊಮ್ಮೇಗೌಡರ ಎದುರು ಗೆಲುವು ದಾಖಲಿಸಿದರು. 1967ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಎಂ.ಕೆ ಬೊಮ್ಮೇಗೌಡರು ಗೆದ್ದರು. 1972ರಲ್ಲಿ ಕಾಂಗ್ರೆಸ್ನ ಎಸ್.ಎಂ ಲಿಂಗಪ್ಪನವರು ಎಂ.ಕೆ ಬೊಮ್ಮೇಗೌಡರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾದರು. 1978ರ ಚುನಾವಣೆಯಲ್ಲಿ ಜನತಾಪಕ್ಷ ಸೇರಿದ್ದ ಎಸ್.ಎಂ ಲಿಂಗಪ್ಪ ಮತ್ತೆ ಗೆದ್ದರು.
1983ರಲ್ಲಿ ಕಾಂಗ್ರೆಸ್ ಪಕ್ಷದ ಬಳ್ಳೇಕೆರೆ ಪುಟ್ಟಸ್ವಾಮಿಗೌಡ ಗೆದ್ದರೆ, 1985ರ ಚುನಾವಣೆಯಲ್ಲಿ ಕೊತ್ತಮಾರನಹಳ್ಳಿ ಕೃಷ್ಣರವರು ಗೆಲ್ಲುತ್ತಾರೆ. 1989ರಲ್ಲಿ ಚುನಾವಣೆ ಎದುರಾದಾಗ ಜನತಾ ಪಕ್ಷ ಇಬ್ಭಾಗವಾಗಿರುತ್ತದೆ. ಈ ಚುನಾವಣೆಯಲ್ಲಿ ಕೆ. ಆರ್. ಪೇಟೆ ಕ್ಷೇತ್ರದಿಂದ ಮೊದಲ ಬಾರಿ ಕುರುಬ ಸಮುದಾಯದ ಕೆ.ಎನ್ ಕೆಂಗೇಗೌಡರು ಜನತಾಪಕ್ಷದಿಂದ ಕಣಕ್ಕಿಳಿಯುತ್ತಾರೆ. ಈ ಬೆಳವಣಿಗೆಗಳಿಂದ ಮತ ವಿಭಜನೆಯಾಗಿ ಇದರ ಲಾಭ ಕಾಂಗ್ರೆಸ್ ಪಡೆಯುತ್ತದೆ. ಕಾಂಗ್ರೆಸ್ನಿಂದ ಸ್ಫರ್ಧಿಸಿದ್ದ ಪುಟ್ಟಸ್ವಾಮಿಗೌಡರು ಗೆದ್ದು ಎರಡನೇ ಬಾರಿ ಶಾಸಕರಾಗುತ್ತಾರೆ.
1994ರಲ್ಲಿ ಜನತಾ ಪರಿವಾರ ಒಂದಾಗಿ ಜನತಾದಳದಿಂದ ಕೃಷ್ಣರವರು ಅಭ್ಯರ್ಥಿಯಾಗಿ ಭಾರೀ ಅಂತರದ ಗೆಲುವು ದಾಖಲಿಸುತ್ತಾರೆ. ಆದರೆ 1996ರಲ್ಲಿ ಕೃಷ್ಣರವರು ಮಂಡ್ಯ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಕಾರಣಕ್ಕೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಬಳಿಕ ನಡೆದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ಪ್ರಕಾಶ್ರವರು ಗೆಲುವು ಸಾಧಿಸುತ್ತಾರೆ. 1999ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಬಿ ಚಂದ್ರಶೇಖರ್ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ. 2004ರಲ್ಲಿ ರಾಜ್ಯ ರಾಜಕಾರಣಕ್ಕೆ ಮರಳಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಕೃಷ್ಣರವರು ಗೆಲುವು ಸಾಧಿಸುತ್ತಾರೆ.
2008ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ನ ಕೆ.ಬಿ ಚಂದ್ರಶೇಖರ್ ಗೆದ್ದು ಎರಡನೇ ಬಾರಿ ಶಾಸಕರಾಗುತ್ತಾರೆ. 2013ರ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡ ಕೆ.ಸಿ ನಾರಾಯಣಗೌಡರು ಗೆದ್ದು ಮೊದಲ ಬಾರಿಗೆ ಶಾಸಕರಾಗುತ್ತಾರೆ. 2018ರ ಚುನಾವಣೆಗೆ ಮತ್ತೆ ಕೆ.ಸಿ ನಾರಾಯಣಗೌಡರು ಜೆಡಿಎಸ್ ಅಭ್ಯರ್ಥಿಯಾಗುತ್ತಾರೆ. ಕಾಂಗ್ರೆಸ್ ಕೆ.ಬಿ ಚಂದ್ರಶೇಖರ್ಗೆ ಟಿಕೆಟ್ ನೀಡುತ್ತದೆ. ಈ ಚುನಾವಣೆಯಲ್ಲಿ ನಾರಾಯಣಗೌಡರು ಮತ್ತೊಮ್ಮೆ ಗೆದ್ದು ಬರುತ್ತಾರೆ. ಆದರೆ ಬಳಿಕ ನಡೆದ ಆಪರೇಷನ್ ಕಮಲದಿಂದ ನಾರಾಯಣಗೌಡರು ಬಿಜೆಪಿ ಸೇರುತ್ತಾರೆ. ಹೀಗಾಗಿ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ನಾರಾಯಣಗೌಡರು ಕಮಲ ಪಾಳಯದಿಂದ ಸ್ಪರ್ಧಿಸುತ್ತಾರೆ. ಇವರ ಗೆಲುವಿಗಾಘಿ ಬಿಜೆಪಿ ದಂಡು ಕ್ಷೇತ್ರದಲ್ಲಿ ಬೀಡು ಬಿಡುತ್ತದೆ. ಪರಿಣಾಮವಾಗಿ ಬಿಜೆಪಿ ಮೊದಲ ಬಾರಿ ಕೆ. ಆರ್ ಪೇಟೆ ಕ್ಷೇತ್ರದಲ್ಲಿ ತನ್ನ ಖಾತೆ ತೆರೆಯುತ್ತದೆ.
2023ರ ಟಿಕೆಟ್ ಆಕಾಂಕ್ಷಿಗಳು ಯಾರು?
ಆಪರೇಷನ್ ಕಮಲ ಮೂಲಕ ಬಿಜೆಪಿ ಸೇರಿ, ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಹಾಲಿ ಶಾಸಕ ಹಾಗೂ ಸಚಿವ ಕೆ.ಸಿ ನಾರಾಯಣಗೌಡರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ.
ಜೆಡಿಎಸ್: ಜೆಡಿಎಸ್ನಿಂದ ಬಿ.ಎಲ್. ದೇವರಾಜು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರೆ, ಎಚ್.ಟಿ. ಮಂಜು ಕೂಡಾ ಟಿಕೆಟ್ ರೇಸ್ನಲ್ಲಿದ್ದಾರೆ.
ಕಾಂಗ್ರೆಸ್: ಕೆ.ಬಿ.ಚಂದ್ರಶೇಖರ್ ಪ್ರಬಲ ಸ್ಪರ್ಧಿಯಾಗಿದ್ದಾರೆ. ಇನ್ನುಳಿದಂತೆ ಬಿ.ಪ್ರಕಾಶ್, ಕಿಕ್ಕೇರಿ ಸುರೇಶ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಬಿಜೆಪಿ: ಬಿಜೆಪಿ ಈ ಬಾರಿಯೂ ಹಾಲಿ ಸಚಿವ ನಾರಾಯಣಗೌಡರಿಗೇ ಟಿಕೆಟ್ ನೀಡಬಹುದೆನ್ನಲಾಗಿದೆ.
ಜಾತಿ ಲೆಕ್ಕಾಚಾರ:
ಒಟ್ಟು 21,1492 ಮತದಾರರಿರುವ ಕೆ. ಆರ್. ಪೇಟೆ ಕ್ಷೇತ್ರದಲ್ಲಿ 10,6593 ಪುರುಷ ಮತದಾರರಿದ್ದು, 10,4890 ಮಹಿಳಾ ಮತದಾರರಿದ್ದಾರೆ.
ಲಿಂಗಾಯತ | 18,000 |
ಮುಸ್ಲಿಂ | 12,000 |
ಎಸ್ಸಿ | 33,000 |
ಕುರುಬ | 12,000 |
ಎಸ್ಟಿ | 4,000 |
ಒಕ್ಕಲಿಗ | 96,000 |
ಮಡಿವಾಳ | 4,000 |
ಸವಿತಾ ಸಮಾಜ | 4,000 |
ಇತರೆ | 17,000 |
2018ರಲ್ಲಿ ಫಲಿತಾಂಶವೇನಾಗಿತ್ತು?
2018 ಚುನಾವಣೆಯಲ್ಲಿ ಕರೆ. ಆರ್ ಪೇಟೆ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಸಿ.ನಾರಾಯಣಗೌಡ, ಜೆಡಿಎಸ್ಮ ಬಿ.ಎಲ್.ದೇವರಾಜು ಅವರನ್ನು 9,731 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಬಿಜೆಪಿ | ಕೆ.ಸಿ.ನಾರಾಯಣಗೌಡ | 66,094 |
ಜೆಡಿಎಸ್ | ಬಿ.ಎಲ್.ದೇವರಾಜು | 56,363 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ