ಧಾರವಾಡ (Dharwad) ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದತ್ತ (Dharwad Rural assembly constituency) ಇಡೀ ರಾಜ್ಯವೇ ಕುತೂಹಲದಿಂದ ನೋಡುತ್ತಿದೆ. ಈ ಕ್ಷೇತ್ರದಿಂದ ರೈತ ಹೋರಾಟಗಾರರು ಸಹ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದಾರೆ. ನಂಜುಡಪ್ಪ (Nanjudappa), ಬಾಬಾಗೌಡ ಪಾಟೀಲ (Baba Gowda Patila) ಇವರೆಲ್ಲ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಹೊಸ ಅಭ್ಯರ್ಥಿಗಳು ಬಹುತೇಕವಾಗಿ ಇಲ್ಲಿ ಗೆಲುವು ಸಾಧಿಸಿದ್ದಾರೆ. ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ನಾಯಕ ಮತ್ತೊಮ್ಮೆ ಗೆಲ್ಲುವುದು ಬಹಳ ಕಡಿಮೆ ಅನ್ನೋದು ವಿಚಿತ್ರ ಮತ್ತು ವಿಶೇಷ. ಆದ್ರೆ ಉಪಚುನಾವಣೆಯಲ್ಲಿ ಗೆದ್ದಿದ್ದಾರೆ. ಹಾಗಾದ್ರೆ ಈ ಬಾರಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಹೇಗಿದೆ ಎಲೆಕ್ಷನ್ ಜ್ವರ? ಈ ಬಾರಿ ಯಾರು ಸ್ಪರ್ಧಿಸ್ತಾರೆ? ಈ ಬಗ್ಗೆ ಕ್ಷೇತ್ರದ ಮತದಾರ ಹೇಳೋದು ಏನು? ಇಲ್ಲಿದೆ ಸಂಪೂರ್ಣ ವಿವರ…
ಅಮೃತ ದೇಸಾಯಿ v/s ವಿನಯ ಕುಲಕರ್ಣಿ?
ಹಾಲಿ ಬಿಜೆಪಿ ಶಾಸಕ ಅಮೃತ ದೇಸಾಯಿ vs ಮಾಜಿ ಸಚಿವ ವಿನಯ ಕುಲಕರ್ಣಿ ಸ್ಪರ್ಧೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಧ್ಯ ಧಾರವಾಡ ಜಿಲ್ಲೆಗೆ ಬರದಂತೆ ಹೈಕೋರ್ಟ್ ವಿನಯ ಕುಲಕರ್ಣಿಗೆ ಆದೇಶ ಮಾಡಿರೊ ಹಿನ್ನೆಲೆ ಜಿಲ್ಲೆಯ ಹೊರ ಭಾಗದಿಂದಲೇ ತನ್ನ ಕ್ಷೇತ್ರ ಮತದಾರರು ಜಿಲ್ಲೆಯ ಹೊರಭಾಗದಲ್ಲಿ ಭೇಟಿ ಮಾಡಿ ಪಕ್ಷ ಸಂಘಟನೆ ಮಾಡುವಂತೆ ಹುರುದುಂಬಿಸುತ್ತಿದ್ದಾರೆ.
ಹಾಲಿ ಬಿಜೆಪಿ ಶಾಸಕ ಅಮೃತ ದೇಸಾಯಿ ಮೂಲತಃ ರಾಜಕೀಯ ಕುಟುಂಬ ದಿಂದ ಬಂದಿದ್ದಾರೆ. ಅಮೃತ ದೇಸಾಯಿ ಅವರ ತಂದೆ ಸಹ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೇ ಅಮೃತ ದೇಸಾಯು ಅವರು ಸತತ ಮೂರು ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿ ಮೂರನೇ ಬಾರಿ ಜಯ ಸಾಧಿಸಿದ್ದರು ಜೆಡಿಎಸ್ ನಿಂದ ಎಡರು ಬಾರಿ ಸ್ಪರ್ಧೆ ಮಾಡಿದ್ರು ಗೆಲುವು ಮಾತ್ರ ಸಾಧಿಸಲಿಲ್ಲ. ಇದರಿಂದ ಬಿಜೆಪಿ ಪಾರ್ಟಿ ಸೇರಿ ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಪ್ರಹ್ಲಾದ್ ಜೋಶಿ ಶಿಷ್ಯ
ಇವರು ಜೋಶಿ ಅವರ ಶಿಷ್ಯ ಎಂದು ಕರೆಯಲಾಗುತ್ತಿದೆ. ಜೋಶಿ ಅವರೇ ಬಿಜೆಪಿಗೆ ಕರೆತಂದು ಗೆಲುವು ಸಾಧಿಸಲು ಪ್ರಮುಖ ಪಾತ್ರವಿದೆ. ಮೊದಲ ಬಾರಿ ಶಾಸಕರಾದ ಅಮೃತ ದೇಸಾಯಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪ್ರವಾಹದಲ್ಲಿ ಹಾನಿಯಾದ ಬೆಳೆ ಹಾನಿ ಹಾಗೂ ಮನೆಗಳ ಹಾನಿಗೆ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಪರಿಹಾರ ಹಣವನ್ನು ತಮ್ಮ ಕ್ಷೇತ್ರದ ಜನತೆಗೆ ನೀಡಿದ್ದಾರೆ.
ವಿನಯ ಕುಲಕರ್ಣಿಗೆ ಕಾನೂನು ಕಂಟಕ
ಮಾಜಿ ಸಚಿವ ವಿನಯ್ ಕುಲಕರ್ಣಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಗೌಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಬಿಐನಿಂದ ಬಂಧನವಾಗಿ ಈಗ ಬೇಲ್ ಮೇಲೆ ಹೊರಗಿದ್ದಾರೆ. 2016 ಜೂನ್ 15 ರಂದು ಮುಂಜಾನೆ ಧಾರವಾಡದ ಸಪ್ತಾಪುರ ನಗರದಲ್ಲಿನ ಜಿಮ್ ನಲ್ಲಿ ಬೆಳಂಬೆಳಿಗ್ಗೆ ಕೊಲೆ ನಡೆದಿತ್ತು. ಈ ಕೊಲೆಗೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಬಂಧನ ಸಹ ಮಾಡಲಾಗಿತ್ತು. ಆದ್ರೆ ಕೊಲೆ ಮಾಡಿರೊ ಆರೋಪಿಗಳು ಇನ್ನು ಇದ್ದಾರೆ ಈ ಪ್ರಕರಣವನ್ನು ಸಿಬಿಐ ಗೆ ನೀಡುವಂತೆ ಯೋಗೆಶಗೌಡರ ಸಹೋದರ ಗುರುನಾಥ ಗೌಡರ ಒತ್ತಾಯ ಮಾಡಿದ್ರು. ಈ ಹಿನ್ನೆಲೆ ಬಿಜೆಪಿ ಸರ್ಕಾರ ಪ್ರಕರಣವನ್ನು ಸಿಬಿಐಗೆ ನೀಡಿದ ಪರಿಣಾಮ ಮಾಜಿ ಸಚಿವ ವಿನಯ ಕುಲಕರ್ಣಿ 2020 ನವೆಂಬರ್ 5, ರಂದು ಬಂಧನ ಮಾಡಲಾಗಿತ್ತು. ಬಳಿಕ ಹೈಕೋರ್ಟ್ ನಿಂದ ಬೆಲ್ ಪಡೆಯಲಾಗಿದೆ. ಆದ್ರೆ ಧಾರವಾಡ ಜಿಲ್ಲೆಗೆ ಪ್ರವೇಶ ನಿರ್ಬಂಧ ಹಾಕಿ ಕೋರ್ಟ್ ಜಾಮೀನು ನೀಡಲಾಗಿದೆ.
ಜಿಲ್ಲೆಯ ಹೊರಗಿದ್ದು ಪಕ್ಷ ಸಂಘಟನೆ
ಧಾರವಾಡ 71 ಕ್ಷೇತ್ರದ ಜನತೆಯನ್ನು ಹೊರ ಜಿಲ್ಲೆಗೆ ಕರೆಸಿಕೊಂಡು ಪಕ್ಷದ ಸಂಘಟನೆ ಮಾಡುವಂತೆ ಹಾಗೂ ಚುನಾವಣೆ ಪ್ಲಾನ್ ಮಾಡುತ್ತಿದ್ದಾರೆ. ಆದ್ರೆ ಕಾಂಗ್ರೆಸ್ ಪಾರ್ಟಿ ಟಿಕೆಟ್ ಪಡೆಯುವವರು ಎರಡು ಲಕ್ಷ ಹಣದೊಂದಿಗೆ ಅರ್ಜಿ ಹಾಕಲು ಹೇಳಿತ್ತು. ಇದರಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ವಿನಯ ಅವರ ಪತ್ನಿ ಶಿವಲಿಲಾ ಕುಲಕರ್ಣಿ ಸಹ ಅರ್ಜಿ ಹಾಕಿದ್ದು ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಇಬ್ಬರಲ್ಲಿ ಇಬ್ಬರಿಗೆ ಪಾರ್ಟಿ ಟಿಕೆಟ್ ನೀಡುವ ಭರವಸೆ ಇದೆ.
ಕ್ಷೇತ್ರದ ಮತದಾರರ ಮಾಹಿತಿ
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಒಟ್ಟೂ 2,08,715 ಮತದಾರರಿದ್ದಾರೆ. ಈ ಪೈಕಿ ಪುರುಷರು – 104991, ಮಹಿಳೆಯರು – 103711 ಹಾಗೂ ಇತರೆ – 13 ಮಂದಿ ಇದ್ದಾರೆ.
ಕ್ಷೇತ್ರದ ಜಾತಿವಾರು ಮಾಹಿತಿ
ಕ್ಷೇತ್ರದಲ್ಲಿ ಲಿಂಗಾಯತರು – 70000, ಕುರುಬ – 13000 ಮತದಾರರಿದ್ದಾರೆ. ಇನ್ನು ಮುಸ್ಲಿಂ – 40000, ಮರಾಠರು – 40000 ಹಾಗೂ ಬ್ರಾಹ್ಮಣ – 6000 ಮತದಾರರಿದ್ದಾರೆ. ಇನ್ನುಳಿದಂತೆ ಎಸ್ಸಿ-ಎಸ್ಟಿ – 32000 ಹಾಗೂ ಇತರೆ ಸಮುದಾಯದ ಮತದಾರರು 7000 ಮಂದಿ ಇದ್ದಾರೆ.
(ವರದಿ: ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ, ಧಾರವಾಡ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ