ಕರ್ನಾಟಕದ ಹೃದಯಭಾಗದಲ್ಲಿರುವ (heart of Karnataka) ಜಿಲ್ಲೆ ದಾವಣಗೆರೆ (Davangere). ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಹೆಸರುವಾಸಿಯಾಗಿರುವ ದಾವಣಗೆರೆ, ಉತ್ತರ ಹಾಗೂ ದಕ್ಷಿಣ ಕರ್ನಾಟಕ ಮಿಶ್ರಿತ ಸಂಸ್ಕೃತಿಯ ಸಂಗಮವಾಗಿದೆ. ಈ ಕ್ಷೇತ್ರದಲ್ಲಿ ಲಿಂಗಾಯತರು (Lingayat) ಹೆಚ್ಚಾಗಿದ್ದು, ಕುರುಬ ಸಮುದಾಯದವರೂ (Kuruba Community) ಕೂಡ ಇದ್ದಾರೆ. ಇಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು, 5 ಸ್ಥಾನ ಬಿಜೆಪಿ (BJP), 2 ಸ್ಥಾನ ಕಾಂಗ್ರೆಸ್ (Congress) ಪಡೆದುಕೊಂಡಿದೆ. ಇನ್ನು ಜೆಡಿಎಸ್ (JDS) ಇಲ್ಲಿ ಹೇಳಿಕೊಳ್ಳುವ ಮಟ್ಟಿಗೆ ನೆಲೆ ಕಂಡುಕೊಂಡಿಲ್ಲ. ಇನ್ನು ದಾವಣಗೆರೆಯನ್ನು ಉತ್ತರ (Davanagere North) ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರ (Davanagere South Assembly constituency) ಅಂತ ಭಾಗ ಮಾಡಲಾಗಿದ್ದು, ದಕ್ಷಿಣದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಶಾಸಕರಾಗಿದ್ದರೆ, ಉತ್ತರದಲ್ಲಿ ಬಿಜೆಪಿಯ ಎಸ್.ಎ. ರವೀಂದ್ರನಾಥ್ (S.A. Ravindranath) ಆಡಳಿತ ನಡೆಸುತ್ತಿದ್ದಾರೆ.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ
ದಾವಣಗೆರೆ ವಿಧಾನಸಭಾ ಕ್ಷೇತ್ರ ವಿಭಜನೆಗೊಂಡ ಬಳಿಕ ದಾವಣಗೆರೆ ಉತ್ತರ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದವು. 2008ರಲ್ಲಿ ಅಸ್ತಿತ್ವಕ್ಕೆ ಬಂದ ದಾವಣಗೆರೆ ಉತ್ತರ ಕ್ಷೇತ್ರ ಇದುವರೆಗೂ 3 ಬಾರಿ ವಿಧಾನಸಭಾ ಚುನಾವಣೆ ಎದುರಿಸಿದೆ.
ಹಾಲಿ ಶಾಸಕ ಎಸ್ಎ ರವೀಂದ್ರನಾಥ್
ಬಿಜೆಪಿಯ ದೀರ್ಘಕಾಲದ ಸದಸ್ಯರಾಗಿರುವ ಎಸ್ಎ ರವೀಂದ್ರನಾಥ್ ಅವರು 1994 ರಿಂದ ಸತತ ನಾಲ್ಕು ಬಾರಿ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ . ಅವರು ಸತತ ಮೂರು ಬಾರಿ ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಇದೀಗ ಪ್ರಸ್ತುತ ದಾವಣಗೆರೆ ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಇದನ್ನೂ ಓದಿ: Karnataka Assembly Elections: ಮತ್ತೊಮ್ಮೆ ಸ್ಪರ್ಧೆಯ ಉತ್ಸಾಹದಲ್ಲಿ ಶಾಮನೂರು! ದಾವಣಗೆರೆ ದಕ್ಷಿಣದಲ್ಲಿ ಗೆಲ್ಲುವವರಾರು?
ಸಚಿವರಾಗಿರೂ ಅಪಾರ ಅನುಭವಿ
ರವೀಂದ್ರನಾಥ್ ಮಾಜಿ ಸಚಿವರಾಗಿಯೂ ಕೆಲಸ ಮಾಡಿದವರು. ಈ ಹಿಂದೆ ಎಚ್ಡಿ ಕುಮಾರಸ್ವಾಮಿ ನೇತೃತ್ವದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಕ್ಕರೆ ಮತ್ತು ಗ್ರಾಮೀಣ ನೀರು ಸರಬರಾಜು ಸಚಿವರಾಗಿದ್ದರು. ಕರ್ನಾಟಕದಲ್ಲಿ ಬಿಜೆಪಿಯ ಐತಿಹಾಸಿಕ ವಿಜಯದ ನಂತರ, ಅವರು ಯಡಿಯೂರಪ್ಪ ಸಂಪುಟದಲ್ಲಿ ಕೃಷಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಡಿ.ವಿ. ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಸಚಿವ ಸಂಪುಟದಲ್ಲಿ ತೋಟಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆಗ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. 2007ರಲ್ಲಿ ಪ್ರಥಮ ಬಾರಿಗೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯನ್ನು ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ.
2018ರ ಚುನಾವಣಾ ಫಲಿತಾಂಶ
ಕಳೆದ 2018ರ ಚುನಾವಣೆಯಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಪುತ್ರ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ರವೀಂದ್ರನಾಥ್ ಅವರ ವಿರುದ್ಧ ಕಡಿಮೆ ಅಂತರದಿಂದ ಸೋತಿದ್ದರು. ಕೇವಲ 4071 ಮತಗಳ ಅಂತರದಿಂದ ಶಾಸಕ ರವೀಂದ್ರನಾಥ್ ಗೆದ್ದಿದ್ದರು.
ದಾವಣಗೆರೆ ಉತ್ತರ ಆಕಾಂಕ್ಷಿಗಳು
ಸದ್ಯ ವಯಸ್ಸಿನ ಕಾರಣದಿಂದ ಎಸ್.ಎ. ರವೀಂದ್ರನಾಥ್ ಚುನಾವಣೆಗೆ ಸ್ಪರ್ಧಿಸೋದು ಅನುಮಾನ ಎನ್ನಲಾಗುತ್ತಿದೆ. ಹೀಗಾದರೆ ಮಾತ್ರ ಬೇರೆಯವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ ಈಗಾಗಲೇ ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಸುರೇಶ್, ದಾವಣಗೆರೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಸೇರಿದಂತೆ ಹಲವರು ಟಿಕೆಟ್ಗಾಗಿ ಪ್ರಯತ್ನಿಸುತ್ತಿದ್ಗಾರೆ. ಅತ್ತ ಕಾಂಗ್ರೆಸ್ನಲ್ಲಿ ಶಾಮನೂರು ಶಿವಶಂಕರಪ್ಪ ಅವರ ಪುತ್ರ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ.
ಇದನ್ನೂ ಓದಿ: Karnataka Assembly Elections: ರಾಣೇಬೆನ್ನೂರಲ್ಲಿ ರಾಜ ಯಾರು? ಮಾಜಿ ಸ್ಪೀಕರ್, ಮಾಜಿ ಸಚಿವರ ತವರಲ್ಲಿ ಹೇಗಿದೆ ಮತ ಚಿತ್ರಣ?
ದಾವಣಗೆರೆ ಉತ್ತರ ಮತದಾರರ ವಿವರ
ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಲಿಂಗಾಯತ- 69000, ಕುರುಬ-16000, ಮುಸ್ಲಿಂ-22000, ಎಸ್ ಟಿ-13000 ಮತದಾರರಿದ್ದಾರೆ. ಇನ್ನು ಎಸ್ ಸಿ-19500, ಮರಾಠ-7000, ಈಡಿಗ-3100 ಹಾಗೂ ಉಪ್ಪಾರ-7500 ಮತದಾರರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ