ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಹೀಗಿರುವಾಗ ಕಲ್ಪತರು ನಾಡು ತುಮಕೂರಿನ (Tumakuru) ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ (Chikkanayakanahalli Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಕ್ಷೇತ್ರದ ವಿಶೇಷತೆ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ವ್ಯವಸಾಯ ಪ್ರಾಶಸ್ತ್ಯವಿರುವ, ಕೊಬ್ಬರಿಯಿಂದ ಆದಾಯ ನಿರೀಕ್ಷೆ ಮಾಡುವ, ಸಾಂಸ್ಕೃತಿಕವಾಗಿ ಚಟುವಟಿಕೆಯಿಂದ ಇರುವ ತಾಲೂಕು ಅಥವಾ ಕ್ಷೇತ್ರ. ಚಿಕ್ಕನಾಯಕನಹಳ್ಳಿಯಲ್ಲಿ ತೆಂಗಿನ ಕಾಯಿಗಳಿಗೆ ಪ್ರಸಿದ್ದವಾಗಿರುವ ಚಿಕ್ಕನಾಯಕನಹಳ್ಳಿ ಪ್ರಸಿದ್ದ ದೇಗುಲಗಳ ಬೀಡಾಗಿದೆ. ಹೈನುಗಾರಿಕೆ- ಕುರಿ ಸಾಕಣೆಗೂ ಇಲ್ಲಿ ಪ್ರಾಶಸ್ತ್ಯವಿದೆ. ಸುಪ್ರಸಿದ್ಧ ಮದನಿಂಗನ ಕಣಿವೆ ಸುಂದರ ಪ್ರಕತಿಯ ಸೊಬಗು ಈ ಕ್ಷೇತ್ರದಲ್ಲಿ ಕಾಣಬಹುದು.
ರಾಜಕೀಯ ಹಿನ್ನೋಟ
ಇಲ್ಲಿನ ರಾಜಕೀಯ ಇತಿಹಾಸ ನೋಡುವುದಾದರೆ ಈ ಕ್ಷೇತ್ರದಲ್ಲಿ ಎರಡು ಬಾರಿ ಹೊರತುಪಡಿಸಿ ಒಬ್ಬ ಶಾಸಕ ನಿರಂತರ ಎರಡು ಅವಧಿಗೆ ಗೆದ್ದ ಉದಾಹರಣೆ ಇಲ್ಲ. 1957ರಲ್ಲಿ ಪಿಎಸ್ಪಿಯ ಸಿ.ಕೆ.ರಾಜಯ್ಯಶೆಟ್ಟಿ ಗೆದ್ದರೆ, 1962ರಲ್ಲಿ ಕಾಂಗ್ರೆಸ್ನ ಸಿ.ಎಚ್.ಲಿಂಗದೇವರು ಗೆಲುವು ಸಾಧಿಸುತ್ತಾರೆ. ಆದರೆ 1967ರ ಚುನಾವಣೆಯಲ್ಲಿ ಲಿಂಗದೇವರನ್ನು ಸೋಲಿಸುವ ಮೂಲಕ ಪಿಎಸ್ಪಿಯ ಸಿ.ಕೆ.ಆರ್.ಶೆಟ್ಟಿ ಗೆಲುವಿನ ನಗೆ ಬೀರುತ್ತಾರೆ. ಆದರೆ 1972ರಲ್ಲಿ ಮತ್ತೆ ಬದಲಾವಣೆ ಬಯಸಿದ ಮತದಾರ ಎನ್ಸಿಓನ ಎನ್.ಬಸವಯ್ಯನ್ನು ಗೆಲ್ಲಿಸುತ್ತಾರೆ. ಬಳಿಕ 1978ರ ಚುನಾವಣೆಯಲ್ಲಿ ಮತ್ತೆ ಐಎನ್ಸಿಯಿಂದ ಕಣಕ್ಕಿಳಿದ ಎ.ಬಸವಯ್ಯ ಗೆಲುವು ಸಾಧಿಸುತ್ತಾರೆ.
ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?
ಆದರೆ 1983ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ ಎನ್.ಬಸವಯ್ಯ ಸೋಲನುಭವಿಸುತ್ತಾರೆ. ಬಿಜೆಪಿಯಿಂದ ಕಣಕ್ಕಿಳಿದ ಎಸ್.ಜಿ.ರಾಮಲಿಂಗಯ್ಯ ವಿಜಯದ ನಗೆ ಬೀರುತ್ತಾರೆ. ಆದರೆ 1985ರಲ್ಲಿ ಮತ್ತೆ ಮತದಾರ ಬದಲಾವಣೆ ಬಯಸಿ ಕಾಂಗ್ರೆಸ್ನ ಬಿ.ಲಕ್ಕಪ್ಪರನ್ನು ಗೆಲುವಿನ ದಡ ತಲುಪಿಸುತ್ತಾರೆ. ಇದಾದ ಬಳಿಕ 1989ರ ಚುನಾವಣೆಯಲ್ಲಿ ಮೊದಲ ಬಾಋಇ ಜೆಡಿಎಸ್ನಿಂದ ಸ್ಪರ್ಧಿಸಿದ ಜೆ.ಸಿ.ಮಾಧುಸ್ವಾಮಿ ಗೆಲುವು ಸಾಧಿಸುತ್ತಾರೆ. 1994ರ ಚುನಾವಣೆಯಲ್ಲಿ ಮಾಧುಸ್ವಾಮಿ ಮತ್ತೆ ಸ್ಪರ್ಧಿಸುತ್ತಾರಾದರೂ ಗೆಲುವು ಸಾಧಿಸುವುದು ಅಸಾಧ್ಯವಾಗುತ್ತದೆ. ಆ ಚುನಾವಣೆಯಲ್ಲಿ ಕೆಪಿಸಿಯ ಎನ್.ಬಸವಯ್ಯ ಗೆದ್ದು ಬೀಗುತ್ತಾರೆ. ಬಳಿಕ 1997ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪಕ್ಷೇತರರಾಗ ಸ್ಪರ್ಧಿಸಿದ ಮಾಧುಸ್ವಾಮಿ ಮತ್ತೆ ಗೆಲುವಿನ ನಗೆ ಬೀರುತ್ತಾರೆ. ಆದರೆ ಇತ್ತು ಹೆಚ್ಚು ಸಮಯ ಮುಂದುವರೆಯುವುದಿಲ್ಲ. ಬಳಿಕ 1999ರಲ್ಲಿ ನಡೆದ ಸ್ಪರ್ಧೆಯಲ್ಲಿ ಮತ್ತೆ ಮಾಧುಸ್ವಾಮಿ ಜನತಾ ದಳದ ಸುರೇಶ್ ಬಾಬು ವಿರುದ್ಧ ಸೋಲನುಭವಿಸುತ್ತಾರೆ.
ತದನಂತರ ನಡೆದ 2004ರ ಚುನಾವಣೆಯಲ್ಲಿ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿ ಮತ್ತೆ ಜೆಡಿಯುನಿಂದ ಸ್ಪರ್ಧಿಸಿದ ಮಾಧುಸ್ವಾಮಿ ಅಧಿಕಾರಕ್ಕೇರುತ್ತಾರೆ. ಆದರೆ 2008ರಲ್ಲಿ ಜೆಡಿಎಸ್ ಸುರೇಶ್ ಬಾಬುರನ್ನು ಕಣಕ್ಕಿಳಿಸಿ ಗೆಲುವು ಸಾಧಿಸುತ್ತದೆ. ಬಳಿಕ 2013ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಜೆಡಿಎಸ್ನಿಂದ ಸ್ಪರ್ಧಿಸಿದ ಸುರೇಶ್ ಬಾಬು ಗೆಲುವಿನ ನಗೆ ಬೀರುತ್ತಾರೆ. ಇನ್ನು ಕಳೆದ 2018ರ ಚುನಾವಣೆಯಲ್ಲಿ ಕಮಲ ಪಾಳಯದಿಂದ ಸ್ಪರ್ಧಿಸಿದ ಮಾಧುಸ್ವಾಮಿ ಬಿಜೆಪಿಯನ್ನು ಗೆಲುವಿನ ದಡಕ್ಕೆ ದಾಟಿಸುತ್ತಾರೆ.
2023ರ ಟಿಕೆಟ್ ಆಕಾಂಕ್ಷಿಗಳು ಯಾರು?
ಈ ಬಾರಿ ಚಿಕ್ಕನಾಯಕನಹಳ್ಳಿ ಪಕ್ಷಗಳ ಹೋರಾಟಕ್ಕಿಂತ ಜೆ.ಸಿ. ಮಾಧುಸ್ವಾಮಿ ಮತ್ತು ಸಿ.ಬಿ. ಸುರೇಶ್ ಬಾಬು ನಡುವಿನ ಹೋರಾಟ ಎಂಬಂತ ಪರಿಸ್ಥಿತಿಯಿದೆ. ಹೀಗಾಗಿ ಚಿಕ್ಕನಾಯಕನಹಳ್ಳಿ ಹಾಲಿ, ಮಾಜಿ ಶಾಸಕರ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ. ಅಲ್ಲದೇ ಚಿಕ್ಕನಾಯಕನಹಳ್ಳಿ ಕುರುಬರು ಹಾಗೂ ಲಿಂಗಾಯತರ ನಡುವೆ ಪರಸ್ಪರ ಪೈಪೋಟಿ ಇರುವ ಕ್ಷೇತ್ರ . ಈ ಕ್ಷೇತ್ರದಿಂದ ಬಹುತೇಕ ಕುರುಬರು, ಲಿಂಗಾಯಿತ ಸಮುದಾಯದ ಶಾಸಕರೇ ಆಯ್ಕೆಯಾಗುತ್ತಾ ಬಂದಿದ್ದಾರೆ.
ಜೆಡಿಎಸ್: ಜೆಡಿಎಸ್ ಈಗಾಗಲೇ ತನ್ನ ಮೊದಲ ಪಟ್ಟಿಯಲ್ಲಿ ಚಿಕ್ಕನಾಯಕನಹಳ್ಳಿಯಿಂದ ಕಣಕ್ಕಿಳಿಯುವ ಅಭ್ಯರ್ಥಿಯನ್ನು ಘೋಷಿಸಿದೆ. ಜೆಡಿಎಸ್ನಿಂದ ಹಳೇ ಹುಲಿ ಸಿ. ಬಿ. ಸುರೇಶ್ ಬಾಬು ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್: ಇತ್ತ ಕಾಂಗ್ರೆಸ್ ಕೂಡಾ ತನ್ನ ಮೊದಲ ಪಟ್ಟಿಯಲ್ಲೇ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಬಹಿರಂಗಗೊಳಿಸಿದ್ದು, ಮಾಜಿ ಶಾಸಕ ಕಿರಣ್ ಕುಮಾರ್ ಕಣಕ್ಕಿಳಿಯಲಿದ್ದಾರೆ. ಮಾಧುಸ್ವಾಮಿ ಪಕ್ಷ ಸೇರುವುದಕ್ಕೂ ಮುನ್ನ ಕಿರಣ್ ಕುಮಾರ್ ಬಿಜೆಪಿಯ ಅಭ್ಯರ್ಥಿಯಾಗಿದ್ದರು. ಆದರೆ ಭಿನ್ನಮತ ಸ್ಪೋಟದಿಂದ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಇದು ಬಿಜೆಪಿಗೆ ಕೊಂಚ ಹಿನ್ನಡೆಯುಂಟು ಮಾಡುವ ಸಾಧ್ಯತೆ ಇದೆ.
ಬಿಜೆಪಿ: ಎರಡು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದೆ. ಇತ್ತ ಬಿಜೆಪಿ ಹಾಲಿ ಶಾಸಕ ಜೆ. ಸಿ. ಮಾಧುಸ್ವಾಮಿಯನ್ನೇ ಮತ್ತೆ ಕಣಕ್ಕಿಳಿಸುವುದು ಬಹುತೇಕ ಫೈನಲ್ ಆಗಿದೆ.
ಮತದಾರರೆಷ್ಟು?
ಒಟ್ಟು 2,10,277 ಮತದಾರರಿರುವ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 1,05,614 ಪುರುಷ ಮತದಾರರಿದ್ದು, 1,04,638 ಮಹಿಳಾ ಮತದಾರರಿದ್ದಾರೆ. ಅಲ್ಲದೇ ಲೈಂಗಿಕ ಅಲ್ಪಸಂಖ್ಯಾತ ಮತದಾರರು 8 ಮಂದಿ ಇದ್ದಾರೆ.
2018ರಲ್ಲಿ ಫಲಿತಾಂಶವೇನಾಗಿತ್ತು?
2018 ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯ ಜೆ ಸಿ ಮಾಧುಸ್ವಾಮಿ, ಜೆಡಿಎಸ್ನ ಸುರೇಶ್ ಬಾಬು ಅವರನ್ನು 10,277 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಬಿಜೆಪಿ | ಜೆ ಸಿ ಮಾಧುಸ್ವಾಮಿ | 69,612 |
ಜೆಡಿಎಸ್ | ಸುರೇಶ್ ಬಾಬು | 59,335 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ