ಬಾಗಲಕೋಟೆ: ರಾಜ್ಯ ವಿಧಾನಸಭಾ ಚುನಾವಣೆಯ (Karnataka Assembly Election) ಬಹಿರಂಗ ಪ್ರಚಾರಕ್ಕೆ ಇನ್ನು ಕೆಲವು ಗಂಟೆಗಳಷ್ಟೇ ಬಾಕಿ ಉಳಿದಿದೆ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಚುನಾವಣೆಯ (Election) ಹೊರತಾಗಿ ಬೇರೆ ವಿಷಯ ಅಪ್ರಸ್ತುತವಾಗಿದೆ ಎಂದರೆ ತಪ್ಪಾಗಲಾರದು. ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಹಾಗೂ ಸ್ಟಾರ್ ಪ್ರಚಾರಕರೂ ಇಂಚಿಂಚೂ ಬಿಡದಂತೆ ಕ್ಷೇತ್ರವನ್ನು ಸಂಚಾರ ಮಾಡ್ತಿದ್ದಾರೆ. ಒಂದೊಂದು ಮತವೂ (Vote) ಅವರ ಗೆಲುವನ್ನು ನಿರ್ಧರಿಸೋದ್ರಿಂದ ಎಲ್ಲಿಯೂ ನಿರ್ಲಕ್ಷ್ಯವಹಿಸದೇ ತಮ್ಮ ಜನಪರವಾದ ಕಾರ್ಯಗಳನ್ನು ಅಭಿವೃದ್ಧಿಯ ದಿಕ್ಸೂಚಿಯನ್ನ ಮುಂದಿಟ್ಟುಕೊಂಡು ಪ್ರಚಾರ ಮಾಡ್ತಿದ್ದಾರೆ.
ಬಾದಾಮಿ ಕ್ಷೇತ್ರ: ಹೇಗಿದೆ ಚುನಾವಣೆ ಭರಾಟೆ?
ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನಿಂದ ಕೂಡಿದ ಮತ ಕ್ಷೇತ್ರಗಳಲ್ಲಿ ಇದು ಸಹ ಒಂದು. ಭುವನೇಶ್ವರಿಯ ನೆಲೆಬೀಡು ಬಾದಾಮಿಯಲ್ಲಿ (Badami Constituency) ಈ ಬಾರಿ ಯಾರೇ ಗೆದ್ದರೂ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಲಿದ್ದಾರೆ.
ಕಳೆದ ಬಾರಿ ಸಿದ್ದರಾಮಯ್ಯ (Siddaramaiah) ಹಾಗೂ ಶ್ರೀರಾಮುಲು (Sriramulu) ಸ್ಪರ್ಧೆಯಿಂದಾಗಿ ಭಾರೀ ಪ್ರತಿಷ್ಠಿತ ಕಣವಾಗಿದ್ದ ಈ ಕ್ಷೇತ್ರದಲ್ಲಿ, ಈ ಬಾರಿಯೂ ರಾಷ್ಟ್ರೀಯ ಪಕ್ಷಗಳ ಜೊತೆಯಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನಡುವೆ ತ್ರೀವ್ರ ಪೈಪೋಟಿ ಏರ್ಪಟ್ಟಿದೆ.
ಮತ್ತೆ ಎದುರಾದ ಸಾಂಪ್ರದಾಯಿಕ ಎದುರಾಳಿಗಳು
ಸಾಂಪ್ರದಾಯಿಕ ಎದುರಾಳಿಗಳಾದ ಪಟ್ಟಣಶೆಟ್ಟಿ ಹಾಗೂ ಚಿಮ್ಮನಕಟ್ಟಿ ಕುಟುಂಬಗಳ ಮಧ್ಯೆ ನಡೆಯುತ್ತಿದ್ದ ಹೋರಾಟ ಈ ಚುನಾವಣೆಯಲ್ಲಿ ಕಂಡು ಬಂದಿಲ್ಲ. ಮಾಜಿ ಸಚಿವ ಚಿಮ್ಮನಕಟ್ಟಿರವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಕಣದಲ್ಲಿದ್ದರೆ, ಎದುರಾಳಿ ಪಟ್ಟಣಶೆಟ್ಟಿ ಕುಟುಂಬದ ಸದಸ್ಯರು ಈ ಬಾರಿ ಕಣದಲ್ಲಿಲ್ಲದಿರುವುದು ಈ ಬಾರಿಯ ವಿಶೇಷ.
ಬದಲಾಗಿ, ಬಿಜೆಪಿಯಿಂದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಶಾಂತಗೌಡ ಪಾಟೀಲರು ಕಣದಲ್ಲಿದ್ದಾರೆ. ಕಳೆದ ಬಾರಿ 24 ಸಾವಿರಕ್ಕೂ ಹೆಚ್ಚು ಮತಗಳನ್ನು ಸೆಳೆದಿದ್ದ ಹನುಮಂತ ಮಾವಿನ ಮರದ ಈ ಬಾರಿಯೂ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಟಿಕೆಟ್ ಹಂಚಿಕೆಯ ಸಮಯದಲ್ಲಿ ಮೂರು ಪಕ್ಷಗಳಲ್ಲಿಯೂ ಅಸಮಾಧಾನ ಹೊಗೆಯಾಡಿತ್ತಾದರೂ, ನಂತರದ ಸಂಧಾನ ಪ್ರಕ್ರಿಯೆಗಳು ಆಂತರಿಕ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಿದೆ ಎಂದು ಹೇಳಲಾಗ್ತಿದೆ.
ಈ ಕ್ಷೇತ್ರದ ಜಾತಿ ಬಲ ಮತ್ತು ಜನಸಂಖ್ಯೆ ಎಷ್ಟು? ಯಾರು ನಿರ್ಣಾಯಕ
ಬಾದಾಮಿ ಕ್ಷೇತ್ರದಲ್ಲಿ ಕುರುಬ, ಮುಸ್ಲಿಂ, ವಾಲ್ಮೀಕಿ ಹಾಗೂ ಲಿಂಗಾಯತ ಸಮುದಾಯದವರು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇಲ್ಲಿನ ಕ್ಷೇತ್ರದಲ್ಲಿ ಪುರುಷ ಮತದಾರರ ಸಂಖ್ಯೆ 1,07,074 ಇದ್ದರೆ, ಮಹಿಳಾ ಮತದಾರರ ಸಂಖ್ಯೆ 1,05,098 ಇದೆ.
ಭುವನೇಶ್ವರಿ ನೆಲೆಬೀಡಿನ ಚುನಾವಣೆ ಇತಿಹಾಸ
ವಿಧಾನಸಭಾ ಚುನಾವಣಾ ಪ್ರಾರಂಭವಾದಾಗಿನಿಂದ ಈವರೆಗೂ ಒಟ್ಟು 15 ಚುನಾವಣೆಗಳು ನಡೆದಿದೆ. ಈ ಪೈಕಿ 10 ಬಾರಿ ಕಾಂಗ್ರೆಸ್ ಗೆಲುವು ಕಂಡಿದೆ. ಬಾಂಬೆ ಕರ್ನಾಟಕದ ಭಾಗವಾಗಿ 1951ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ವಿ.ಹೆಚ್.ಪಾಟೀಲ ಕ್ಷೇತ್ರದ ಮೊದಲ ಶಾಸಕರಾಗಿ ‘ಕೈ’ನಿಂದ ಆಯ್ಕೆಯಾಗಿದ್ದರು.
ಮೈಸೂರು, ಕರ್ನಾಟಕದ ಭಾಗವಾದ ನಂತರದ ಮೊದಲ ನಾಲ್ಕು ಸಾರ್ವತ್ರಿಕ ಚುನಾವಣೆಗಳಲ್ಲಿ ಮೂರು ಬಾರಿ ಕಾಂಗ್ರೆಸ್ ಜಯ ಕಂಡಿದೆ. 1967ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಿ.ಕೆ ಮಹಾಗುಂಡಪ್ಪ ಜಯ ಸಾಧಿಸಿದ್ದರು.
1985 ರಲ್ಲಿ ಜೆಎನ್ಪಿ ಹಾಗೂ 1989ರಲ್ಲಿ ಜನತಾದಳ, 2004 ಹಾಗೂ 2008ರ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಹೇಗಿದೆ ಚುನಾವಣಾ ರಣತಂತ್ರ: ಕಳೆದ ಬಾರಿಯ ಚುನಾವಣೆಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯನವರು ಮೈಸೂರಿನ ಚಾಮುಂಡೇಶ್ವರಿ ಹಾಗೂ ಬಾದಾಮಿಯಿಂದಲೂ ಸ್ಪರ್ಧಿಸಿದ್ದರು.
ಚಾಮುಂಡೇಶ್ವರಿ ಕ್ಷೇತ್ರದ ಜನತೆ ಭಾರೀ ಅಂತರದಲ್ಲಿ ಅವರನ್ನು ಸೋಲಿಸಿದ್ರೆ, ಬಾದಾಮಿ ಕ್ಷೇತ್ರದ ಮತದಾರರು ಅತ್ಯಲ್ಪ ಅಂತರದಿಂದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಗೆಲುವು ಸಾಧಿಸಲು ನೆರವಾದ್ರು.
ಆದರೆ, ಈ ಬಾರಿ ಸಿದ್ದರಾಮಯ್ಯರವರ ಕಾರ್ಯಗಳು ಹಾಗೂ ತಂದೆ ಮಾಡಿರುವ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಚಿಮ್ಮನಕಟ್ಟಿ ಮತಯಾಚನೆ ಮಾಡುತ್ತಿದ್ದಾರೆ.
ಇನ್ನು ಬಿಜೆಪಿ ಅಭ್ಯರ್ಥಿ ಪಾಟೀಲರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ಬಿಂಬಿಸುತ್ತಿದ್ದಾರೆ. ಇತ್ತ ಜೆಡಿಎಸ್ ಅಭ್ಯರ್ಥಿ ಸಮ್ಮಿಶ್ರ ಸರ್ಕಾರದ ಕುಮಾರಣ್ಣನ ಸಾಧನೆ ಮತ್ತು ಪಂಚರತ್ನ ಯೋಜನೆಯ ಮೂಲಕ ಮತ ಸೆಳೆಯುತ್ತಿದ್ದಾರೆ.
ಇದನ್ನೂ ಓದಿ: Saundatti Yellamma Constituency: ರಂಗೇರಿದ ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಯಲ್ಲಮ್ಮನ ಕೃಪೆ ಯಾರಿಗೆ?
ರಂಗಾದ ಚುನಾವಣ ಕಣ: ಬಿಜೆಪಿಯ ಶಾಂತಗೌಡ ಪಾಟೀಲ, ಜೆಡಿಎಸ್ನ ಹನುಮಂತ ಮಾವಿನ ಮರದ ಲಿಂಗಾಯತ ಸಮುದಾಯಕ್ಕೆ ಸೇರಿದ್ದರೆ, ಕಾಂಗ್ರೆಸ್ನ ಭೀಮಸೇನ ಚಿಮ್ಮನಕಟ್ಟೆ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಬಾರಿಯ ಗೆಲುವಿನ ಹಿಂದೆ ಜಾತಿ ಸಮೀಕರಣದ ಲೆಕ್ಕಾಚಾರ ಅಧಿಕವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ