ಆನೇಕಲ್ (Anekal) ಎನ್ನುವುದು ಬೆಂಗಳೂರು ಕೇಂದ್ರದಿಂದ (Bengaluru Central) ತುಂಬಾ ದೂರದಲ್ಲಿದೆ ಅನಿಸಿದರೂ ಅದು ಬೆಂಗಳೂರು ನಗರಕ್ಕೆ (Bengaluru City) ಸೇರಿದ ಒಂದು ಪ್ರಮುಖ ಪ್ರದೇಶ. ಸದ್ಯ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲೂ (Anekal assembly constituency) ಎಲೆಕ್ಷನ್ ಜ್ವರ ಜೋರಾಗಿದೆ. ಪರಿಶಿಷ್ಟ ಜಾತಿ (SC) ಮೀಸಲು ಕ್ಷೇತ್ರವಾಗಿರುವ ಆನೇಕಲ್ ಮೊದಲು ಬಿಜೆಪಿ (BJP) ಭದ್ರಕೋಟೆಯಾಗಿತ್ತು. ಆದರೆ ಕಳೆದ ಬಾರಿ ಕೇಸರಿ ಕೋಟೆಯನ್ನು ಕಾಂಗ್ರೆಸ್ (Congress) ವಶಪಡಿಸಿಕೊಂಡಿದೆ. ಈ ಹಿಂದೆ ಶಾಸಕರಾಗಿದ್ದ ಎ. ನಾರಾಯಣ ಸ್ವಾಮಿ (A. Narayana Swamy), ಇದೀಗ ಚಿತ್ರದುರ್ಗದ ಸಂಸದರಾಗಿ (Chitradurga MP), ಕೇಂದ್ರ ಸಚಿವರೂ (Central Minister) ಆಗಿದ್ದಾರೆ. ಇಲ್ಲಿ ಕಾಂಗ್ರೆಸ್ನ ಬಿ. ಶಿವಣ್ಣ (B. Shivanna) ಪ್ರಸ್ತುತ ಶಾಸಕರು. ಕರ್ನಾಟಕ-ತಮಿಳುನಾಡಿಗೆ (Karnataka-Tamil Nadu) ಕೊಂಡಿಯಂತಿರುವ ಆನೇಕಲ್, ಹಲವು ವಿಶೇಷತೆಗಳನ್ನು ಹೊಂದಿರುವ ವಿಧಾನಸಭಾ ಕ್ಷೇತ್ರವಾಗಿದೆ.
ಆನೇಕಲ್ ಕ್ಷೇತ್ರ ಪರಿಚಯ
ಇದು ಬೆಂಗಳೂರು ನಗರದ ಹೊರವಲಯದಲ್ಲಿರುವ ಪ್ರಮುಖ ಪಟ್ಟಣವಾಗಿದೆ. ಬೆಂಗಳೂರು ಕೇಂದ್ರದಿಂದ ಸರಿಸುಮಾರು 36 ಕಿಮೀ ದೂರದಲ್ಲಿದ್ದರೂ ಬೆಂಗಳೂರು ನಗರದ ಭಾಗವಾಗಿದೆ. ಇದು ಎಲೆಕ್ಟ್ರಾನಿಕ್ ಸಿಟಿ ಮತ್ತು ತಮಿಳುನಾಡಿನ ಹೊಸೂರಿನಿಂದ ಸುಮಾರು 15 ಕಿಮೀ. ಸಿಲ್ಕ್ ಬೋರ್ಡ್ನಿಂದ ಆನೇಕಲ್ಗೆ ಎಕ್ಸ್ಪ್ರೆಸ್ ಲೈನ್ಗಳು ರಾಷ್ಟ್ರೀಯ ಹೆದ್ದಾರಿ ಮತ್ತು SH ಬ್ರಾಡ್ವೇ ಮೂಲಕ ಹಾದು ಹೋಗುತ್ತವೆ, ಹೀಗಾಗಿ ಅತ್ಯುತ್ತಮ ಸಂಪರ್ಕವನ್ನು ಒದಗಿಸುತ್ತದೆ.
ಪ್ರಮುಖ ಕಂಪನಿಗಳ ಆಶ್ರಯ ತಾಣ
ಆನೇಕಲ್ ತಾಲೂಕು ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು, IT ಮತ್ತು BT ಕಂಪನಿಗಳ ತಾಣವಾಗಿದೆ. Infosys, Biocon, Wipro, HCL, TCS, Accenture ಹೀಗೆ ಎಲ್ಲಾ ಪ್ರಮುಖ ಕಂಪನಿಗಳು ಆನೇಕಲ್ ತಾಲೂಕಿನಲ್ಲಿವೆ. ಪ್ರಮುಖ ಆಸ್ಪತ್ರೆಗಳು, ಶಾಲಾ-ಕಾಲೇಜುಗಳು ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ.
ಇದನ್ನೂ ಓದಿ: Karnataka Assembly Elections: ಬಹುರಾಷ್ಟ್ರೀಯ ಕಂಪನಿಗಳ ತಾಣ ಮಹದೇವಪುರ! ಹೇಗಿದೆ ಅಲ್ಲಿ ಚುನಾವಣಾ ಕಣ?
ಆನೇಕಲ್ ಪಟ್ಟಣದ ಇತಿಹಾಸ
ಆನೇಕಲ್ ಪಟ್ಟಣವನ್ನು ಸುಮಾರು 1603 ರಲ್ಲಿ ಸುಗಟೂರು ಕುಟುಂಬದ ಚಿಕ್ಕ ತಿಮ್ಮೆ ಕುರುಬ ಗೌಡ ಸ್ಥಾಪಿಸಿದರು ಅಂತ ಇತಿಹಾಸ ಹೇಳುತ್ತದೆ. ಬಿಜಾಪುರದ ಜನರಲ್ ತಿಮ್ಮೇ ಕುರುಬಗೌಡರ ಹೊಸಕೋಟೆಯ ಆನುವಂಶಿಕ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಅವರಿಗೆ ಆನೇಕಲ್ ಅನ್ನು ನೀಡಿದರು. ನಂತರ ಅವರು ಕೋಟೆ ಮತ್ತು ದೇವಾಲಯ, ದೊಡ್ಡ ತೊಟ್ಟಿಯನ್ನು ನಿರ್ಮಿಸಿದರು. ಅವರ ಮೊಮ್ಮಗ ದೊಡ್ಡ ತಿಮ್ಮೇ ಕುರುಬ ಗೌಡರ ಕಾಲದಲ್ಲಿ ಆನೇಕಲ್ ಅನ್ನು ಮೈಸೂರು ಪ್ರಾಂತ್ಯಕ್ಕೆ ಸೇರಿಸಲಾಯಿತು.
ಹಾಲಿ ಶಾಸಕ ಬಿ. ಶಿವಣ್ಣ
ಸದ್ಯ ಕಾಂಗ್ರೆಸ್ನ ಭದ್ರಕೋಟೆಯಾಗಿರುವ ಆನೇಕಲ್ನಲ್ಲಿ ಬಿ. ಶಿವಣ್ಣ ಶಾಸಕರಾಗಿದ್ದಾರೆ. ಸತತ 5 ಬಾರಿ ಶಾಸಕರಾಗಿರುವ ಶಿವಣ್ಣ, ಜನಸಾಮಾನ್ಯರಿಗೆ ಸ್ಪಂದಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಆನೇಕಲ್ ವಿಧಾನಭಾ ಕ್ಷೇತ್ರದ ವ್ಯಾಪ್ತಿಯ ಸೂರ್ಯನಗರದ ನಾಲ್ಕು ಹಂತಗಳು, ಆನೇಕಲ್ ಪಟ್ಟಣ ಹಾಗೂ 17 ಗ್ರಾಮಗಳಿಗೆ ಕುಡಿಯಲು ಕಾವೇರಿ ನೀರು, 60 ಕೆರೆಗಳಿಗೆ ನೀರು ತುಂಬುವ 190ಕೋಟಿ ರೂ. ಏತ ನೀರಾವರಿ ಯೋಜನೆ,ತಾಲೂಕಿನಲ್ಲಿ 25 ಸಾವಿರ ನಿವೇಶನಗಳ ಹಕ್ಕು ಪತ್ರ ವಿತರಣೆ ಸೇರಿದಂತೆ ಕೆಲವು ಯೋಜನೆಗಳು ಇವರ ಅವಧಿಯಲ್ಲೇ ಆಗಿವೆ ಎನ್ನಲಾಗಿದೆ.
ಶಿವಣ್ಣ ವಿರುದ್ಧ ಸೋತಿದ್ದ ನಾರಾಯಣಸ್ವಾಮಿ
ಬಿಜೆಪಿಯ ಜನಪ್ರಿಯ ಶಾಸಕರಲ್ಲಿ ಒಬ್ಬರಾಗಿದ್ದ ಎ. ನಾರಾಯಣ ಸ್ವಾಮಿ ಹಿಂದೆ ಇದೇ ಕ್ಷೇತ್ರದಲ್ಲಿ ಶಾಸಕರಾಗಿ, ಸಚಿವರೂ ಆಗಿದ್ದರು. ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದರು. ಬಳಿಕ ಚಿತ್ರದುರ್ಗದಲ್ಲಿ ಲೋಕಸಭೆಗೆ ಸ್ಪರ್ಧಿಸಿ, ಜಯಗಳಿಸಿದ್ದ ನಾರಾಯಣ ಸ್ವಾಮಿ, ಸದ್ಯ ಕೇಂದ್ರ ಸಚಿವರು.
ಆನೇಕಲ್ ಕ್ಷೇತ್ರದಲ್ಲಿ ಟಿಕೆಟ್ಗೆ ಭಾರೀ ಸ್ಪರ್ಧೆ
ಎಸ್ಸಿ ಮೀಸಲು ಕ್ಷೇತ್ರವಾದ ಆನೇಕಲ್ನಲ್ಲಿ ಈ ಬಾರಿ ಟಿಕೆಟ್ಗೆ ಭಾರೀ ಪೈಪೋಟಿ ಎದುನರಾಗಿದೆ. ಕಾಂಗ್ರೆಸ್ನಿಂದ ಹಾಲಿ ಶಾಸಕ ಬಿ. ಶಿವಣ್ಣ ಅವರಿಗೇ ಟಿಕೆಟ್ ಸಿಗುವುದು ಬಹುತೇಕ ಪಕ್ಕಾ ಆಗಿದೆ. ಆದರೆ ಅತ್ತ ಬಿಜೆಪಿಯಲ್ಲಿ ಭಾರೀ ಸ್ಪರ್ಧೆ ನಡೆಯುತ್ತಿದೆ. ಕೇಂದ್ರ ಸಚಿವ ನಾರಾಯಣ ಸ್ವಾಮಿ ಈ ಬಾರಿ ಸ್ಪರ್ಧಿಸುವ ಸಾಧ್ಯತೆ ಇದೆ. ಒಂದು ವೇಳೆ ಅವರು ಸ್ಪರ್ಧಿಸದೇ ಇದ್ದರೆ ಅವರ ಪುತ್ರಿ ಶೀತಲಾ ನಾರಾಯಣ ಸ್ವಾಮಿ ಟಿಕೆಟ್ ಬಯಸಿದ್ದಾರೆ. ಮತ್ತೊಂದೆಡೆ ಮಾಜಿ ಐಎಎಸ್ ಅಧಿಕಾರಿ, ಚಿತ್ರ ನಟ ಕೆ. ಶಿವರಾಮ್, ಬಿಜೆಪಿ ಮುಖಂಡ ಹುಲ್ಲಳ್ಳಿ ಶ್ರೀನಿವಾಸ, ಟಿ.ವಿ. ಬಾಬು ಬಂಡಾಪುರ, ಪಟಾಪಟ್ ಶ್ರೀನಿವಾಸ್ ಮುಂತಾದವರು ಟಿಕೆಟ್ಗಾಗಿ ಪ್ರಯತ್ನಿಸುತ್ತಿದ್ದಾರೆ. ಅತ್ತ ಜೆಡಿಎಸ್ನಿಂದ ನಗರಸಭೆ ಸದಸ್ಯ ಕೆಜಿ ರಾಜು ಅವರಿಗೆ ಟಿಕೆಟ್ ಪಕ್ಕಾ ಆಗಿದ್ದರೆ, ಡಾ. ವೈ. ಚಿನ್ನಪ್ಪ ಚಿಕ್ಕಹಾಗಡೆ ಎನ್ನುವವರು ಬಿಎಸ್ಪಿಯಿಂದ ಕಣಕ್ಕೆ ಇಳಿಯಲಿದ್ದಾರೆ.
ಕ್ಷೇತ್ರದ ಮತದಾರರ ವಿವರ
ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಹುಸ್ಕೂರು ಮುಂತಾದೆಡೆ ಕೈಗಾರಿಕಾ ಪ್ರದೇಶಗಳನ್ನು ಒಳಗೊಂಡ ಆನೇಕಲ್ ವಿಧಾನಸಭಾ ಕ್ಷಏತ್ರದಲ್ಲಿ ಹಲವು ವಿಧದ ಮತದಾರರಿದ್ದಾರೆ. ಖಾಸಗಿ ಉದ್ಯಮಿಗಳು, ಉದ್ಯೋಗಿಗಳು ಮತ್ತು ರೈತಾಪಿ ವರ್ಗ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಈ ಕ್ಷೇತ್ರದಲ್ಲಿ 3,48,102 ಮತದಾರರಿದ್ದು, ಈ ಪೈಕಿ ಎಸ್ಸಿ-ಎಸ್ಟಿ – 1,55,000, ಒಕ್ಕಲಿಗ – 82,000, ಅಲ್ಪ ಸಂಖ್ಯಾತ - 32,000, ಕುರುಬ ಮತದಾರರು 15,000 ಹಾಗೂ ಇತರೇ ವರ್ಗ ಮತದಾರರು 65,000 ಮಂದಿಯಿದ್ದಾರೆ.
ಆನೇಕಲ್ನಲ್ಲಿ ಆನೆಯಂತಾ ಸಮಸ್ಯೆ!
ಬೆಂಗಳೂರಿಗೆ ಹೊರಗಿನ ಕ್ಷೇತ್ರ ಎಂಬುದೇ ಆನೇಕಲ್ನ ಅಭಿವೃದ್ಧಿಗೆ ಕಂಟಕವಾಗಿದೆ ಅಂತಾರೆ ಇಲ್ಲಿನ ಮತದಾರರು. ಇಲ್ಲಿ ಒಳಚರಂಡಿ, ವಿದ್ಯುತ್, ಕುಡಿಯುವ ನೀರು, ಕಾನೂನು ಸುವ್ಯವಸ್ಥೆ ಸಮಸ್ಯೆಗಳಾಗಿವೆ. ಕರ್ನಾಟಕ ಹಾಗೂ ತಮಿಳುನಾಡು ಗಡಿಭಾಗದ ಆನೇಕಲ್ ವ್ಯಾಪ್ತಿಯಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಮುತ್ಯಾಲಮಡುವು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಆದರೆ, ಮೂಲ ಸೌಕರ್ಯಗಳ ಕೊರತೆ ನಿವಾರಣೆಯಾಗದೆ ಪ್ರವಾಸಿ ತಾಣಗಳು ಸೊರಗಿವೆ ಎಂಬ ಆರೋಪವೂ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ