ಬೆಂಗಳೂರು(ಜೂ.21): ಇಂದಿನಿಂದ ರಾಜ್ಯದಲ್ಲಿ ಅನ್ಲಾಕ್ 2.O ಜಾರಿಯಾಗಿದ್ದು, ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಇಂದು ಬೆಳಗ್ಗೆ 6 ಗಂಟೆಯಿಂದಲೇ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಸಂಚಾರ ಆರಂಭವಾಗಿದೆ. ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಸಂಚಾರ ಮಾಡಲು ಅವಕಾಶ ನೀಡಲಾಗಿದೆ. ಬಿಎಂಟಿಸಿಯ ವೋಲ್ವೋ ಬಸ್ಗಳ ಕಾರ್ಯಾಚರಣೆ ಸದ್ಯಕ್ಕಿಲ್ಲ. ಸಾಮಾನ್ಯ ಸಾರಿಗೆ ಬಸ್ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ, ಡ್ರೈವರ್ ಕಂಡಕ್ಟರ್ ಗೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ಎಂದು ಹೇಳಲಾಗಿದೆ. ಈಗಾಗಲೇ ಶೇ.90ರಷ್ಟು ಚಾಲಕ-ನಿರ್ವಾಹಕರಿಗೆ ವ್ಯಾಕ್ಸಿನ್ ಹಾಕಲಾಗಿದೆ. ಇಂದಿನಿಂದ 1500-2000 ಬಿಎಂಟಿಸಿ ಬಸ್ಗಳು ಕಾರ್ಯಾಚರಣೆ ನಡೆಸಲಿವೆ. ಬಿಎಂಟಿಸಿಯಲ್ಲಿ ದಿನದ ಪಾಸ್ ನೀಡಲು ಚಿಂತನೆ ನಡೆಸಲಾಗಿದೆ. ಕ್ಯಾಶ್ಲೆಸ್ ಮಾಡುವ ಹಿನ್ನೆಲೆಯಲ್ಲಿ ( ಪೋನ್ ಪೇ, ಗೂಗಲ್ ಪೇ) ಈ ನಿರ್ಧಾರ ಮಾಡಲಾಗಿದೆ.
ಇಂದಿನಿಂದ ಬಿಎಂಟಿಸಿ ಬಸ್ಗಳು ರಸ್ತೆಗಿಳಿದಿವೆ. ಬೆಂಗಳೂರು ನಗರ ಹಾಗೂ ಹೊರ ಭಾಗದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಂಜೆ 7 ಗಂಟೆಯ ನಂತರ ಬಿಎಂಟಿಸಿ ಓಡಾಟ ಇರಲ್ಲ. ಸಂಜೆ 7 ಗಂಟೆಗೆ ಬಸ್ಗಳು ನಿಲ್ದಾಣದಿಂದ ನಿರ್ಗಮಿಸಲಿವೆ. ಬೆಳ್ಳಂಬೆಳಿಗ್ಗೆ ಹಾಗೂ ತಡರಾತ್ರಿ ಬಸ್ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಬಿಎಂಟಿಸಿ ಸಿಬ್ಬಂದಿಗಳ ಅವಧಿಯನ್ನ 8 ಗಂಟೆ ಮೀರದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಡಿಪೋಗಳಲ್ಲಿ 5 ಹೆಚ್ಚುವರಿ ಬಸ್ ಗಳನ್ನ ಕಾಯ್ದಿರಿಸುವುದು. ಬಸ್ಗಳಲ್ಲಿ ಮಾರ್ಗಸೂಚಿ ಫಲಕ ಕಡ್ಡಾಯವಾಗಿ ಪ್ರದರ್ಶಿಸುವುದು. ಇಂತಹ ಕ್ರಮಗಳನ್ನು ಬಿಎಂಟಿಸಿ ತೆಗೆದುಕೊಂಡಿದೆ.
ಇದನ್ನೂ ಓದಿ:ಪಾಸಿಟಿವಿಟಿ ರೇಟ್ ಕಡಿಮೆಯಾಗಿದ್ರೂ ಧಾರವಾಡ ಜಿಲ್ಲೆಗಿಲ್ಲ ಅನ್ಲಾಕ್ ಭಾಗ್ಯ; ಸರ್ಕಾರದ ನಿರ್ಧಾರಕ್ಕೆ ಅತೃಪ್ತಿ!
ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭ
ಇಂದಿನಿಂದ 1500 ಕೆಎಸ್ ಆರ್ ಟಿಸಿ ಬಸ್ಗಳ ಸಂಚಾರ ಆರಂಭವಾಗಲಿದೆ. ಪ್ರಯಾಣಿಕರ ಸಂಖ್ಯೆಯನ್ನು ನೋಡಿಕೊಂಡು ಬಸ್ಗಳನ್ನು ರೋಡಿಗಿಳಿಸಲು ಕೆಎಸ್ಆರ್ಟಿಸಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಸದ್ಯಕ್ಕೆ ಒಂದೊಂದು ಡಿಪೋದಿಂದ ಕೇವಲ 50 ಬಸ್ಗಳನ್ನು ಆಪರೇಟ್ ಮಾಡಲು ನಿರ್ಧರಿಸಲಾಗಿದ್ದು, ಹೆಚ್ಚು ಪ್ರಯಾಣಿಕರು ಬಂದ್ರೆ, ಬಸ್ ಗಳ ಸಂಚಾರವೂ ಹೆಚ್ಚಳವಾಗಲಿದೆ.
ಶೇಕಡಾ 50ರಷ್ಟು ಪ್ರಯಾಣಿಕರಿಗೆ ಮಾತ್ರ ಆದ್ಯತೆ ಹಿನ್ನಲೆ, ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ರಾಜ್ಯಾದ್ಯಂತ 230 ಕೆಎಸ್ ಆರ್ ಟಿ ಸಿ ಬಸ್ ಡಿಪೋಗಳಿವೆ. ಕೆಲಸಕ್ಕೆ ಬರುವ ಎಲ್ಲಾ ಚಾಲಕರು, ನಿರ್ವಾಹಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರಬೇಕು.
ಕೆಎಸ್ಆರ್ಟಿಸಿಯಲ್ಲೂ ಶೇಕಡಾ 50% ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ನಿಂತು ಪ್ರಯಾಣ ಮಾಡಲು ಅವಕಾಶವಿಲ್ಲ. ಇಬ್ಬರು ಕುಳಿತುಕೊಳ್ಳುವ ಸೀಟ್ ನಲ್ಲಿ ಒಬ್ಬರು, ಮೂವರು ಕುಳಿತುಕೊಳ್ಳುವ ಸೀಟ್ ನಲ್ಲಿ ಇಬ್ಬರಿಗೆ ಅವಕಾಶ ನೀಡಲಾಗಿದೆ.
ಎಸಿ ಬಸ್ಗಳ ಸಂಚಾರ ಸದ್ಯಕ್ಕಿಲ್ಲ. ಹೊರ ರಾಜ್ಯಗಳಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರವಿಲ್ಲ. ಪ್ರಯಾಣಿಕರಿಗೆ ಮಾಸ್ಕ್, ಡ್ರೈವರ್ ಮತ್ತು ಕಂಡಕ್ಟರ್ ಗೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ಎಂದು ಹೇಳಲಾಗಿದೆ.
ಇಂದಿನಿಂದ ಬಸ್ ಗಳ ಸಂಚಾರ ಹಿನ್ನೆಲೆ, ಈಗಾಗಲೇ ಕೆಎಸ್ಆರ್ಟಿಸಿ, ಬಿಎಂಟಿಸಿ ನಿಗಮಗಳು ಬಸ್ ಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿವೆ. ನಿನ್ನೆಯೇ KSRTC ಬಸ್ ನಿಲ್ದಾಣದಲ್ಲಿ ಸ್ವಚ್ಚತಾ ಕಾರ್ಯ ನಡೆದಿದೆ. KSRTC ಬಸ್ ನಿಲ್ದಾಣವನ್ನು ಸ್ಯಾನಿಟೈಸ್ ಮಾಡಿ, ಬಳಿಕ ಸಿಬ್ಬಂದಿ ಸ್ವಚ್ಚತಾ ಕಾರ್ಯ ಮಾಡಿದ್ದಾರೆ.
ಇದನ್ನೂ ಓದಿ:Astrology: ಧನುರಾಶಿಯವರಿಗೆ ಧನಲಾಭ, ವಿವಾಹದ ಯೋಗವೂ ಇದೆ... ಎಲ್ಲಾ ರಾಶಿಗಳ ಫಲದ ಬಗ್ಗೆ ಪೂರ್ಣ ವಿವರ ಇಲ್ಲಿದೆ
ಮೆಟ್ರೋ ಸಂಚಾರಕ್ಕೆ ಅವಕಾಶ
ಇನ್ನು, ಸರ್ಕಾರ 2.O ಅನ್ಲಾಕ್ ವೇಳೆ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಿದೆ. ಹೀಗಾಗಿ ಇಂದಿನಿಂದ ನಮ್ಮ ಮೆಟ್ರೋ ಕೂಡ ಸಂಚಾರ ಆರಂಭಿಸಲಿದೆ. ಬೆಳಗ್ಗೆ 7 ಗಂಟೆಯಿಂದ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ. ಬೆಳಗ್ಗೆ 7ರಿಂದ ಬೆಳಗ್ಗೆ 11 ಗಂಟೆವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಪ್ರತೀ 5 ನಿಮಿಷಗಳ ಅಂತರದಲ್ಲಿ ಮೆಟ್ರೋ ಸೇವೆ ಲಭ್ಯವಾಗಲಿದೆ.
ಹಳದಿ ಬಣ್ಣದ ಪಟ್ಟಿಯಲ್ಲಿ ಮಾತ್ರ ಕುಳಿತು, ನಿಂತುಕೊಂಡು ಪ್ರಯಾಣ ಮಾಡಬೇಕು. ವೀಕೆಂಡ್ ಕರ್ಫೂ ಹಿನ್ನೆಲೆಯಲ್ಲಿ ಶನಿವಾರ, ಭಾನುವಾರ ಮೆಟ್ರೋ ಸಂಚಾರವಿರುವುದಿಲ್ಲ. ಸ್ಮಾರ್ಟ್ ಕಾರ್ಡ್ ಹೊಂದಿದ ಪ್ರಯಾಣಿಕರಿಗೆ ಮಾತ್ರ ಸಂಚಾರಿಸಲು ಅವಕಾಶ ನೀಡಲಾಗಿದೆ. ನಿಲ್ದಾಣದಲ್ಲೂ ಸ್ಮಾರ್ಟ್ ಕಾರ್ಡ್ ರಿಚಾರ್ಜ್ಗೆ ಅವಕಾಶ ನೀಡಲಾಗಿದೆ. ನಿಲ್ದಾಣದಲ್ಲಿ ಪ್ರಯಾಣಿಕರು ಕೋವಿಡ್ ನಿಯಮಾವಳಿ ಪಾಲಿಸಬೇಕು, ಉಷ್ಣಾಂಶ ಚೆಕ್ ಮಾಡಿಕೊಂಡು, ಹ್ಯಾಂಡ್ ಸ್ಯಾನಿಟೈಜರ್ ಬಳಸಿ ನಿಲ್ದಾಣಕ್ಕೆ ಎಂಟ್ರಿಯಾಗಬೇಕು. ಪ್ರಯಾಣಿಕರು ಫೇಸ್ ಮಾಸ್ಕ್ ಧರಿಸಿದ್ರೆ ಮಾತ್ರ ಮೆಟ್ರೋಗೆ ಪ್ರವೇಶ ಇರುತ್ತದೆ. ರೈಲಿನಲ್ಲಿ ಸಾಮಾಜಿಕ ಅಂತರ ಕಡ್ಡಾಯ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ