ಬೆಂಗಳೂರು: ಅಸಮರ್ಪಕ ಇಂಟರ್ನೆಟ್ ಸಂಪರ್ಕ, ಗ್ಯಾಜೆಟ್ಗಳ ಅಲಭ್ಯತೆ ಮತ್ತು ನೆಟ್ವರ್ಕ್ ಸಮಸ್ಯೆಗಳು ಆನ್ಲೈನ್ ತರಗತಿಗಳಿಗೆ ಹಾಜರಾಗುವ ಶಾಲಾ ವಿದ್ಯಾರ್ಥಿ ಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದರಿಂದ, ಕರ್ನಾಟಕ ಸರ್ಕಾರವು ಆನ್ಲೈನ್ ಶಿಕ್ಷಣವನ್ನು ನೀಡಲು ರಾಜ್ಯದಾದ್ಯಂತ ಇರುವ ಗ್ರಾಮ ಪಂಚಾಯಿತಿ (ಜಿಪಿ) ಗ್ರಂಥಾಲಯಗಳಲ್ಲಿ ಲಭ್ಯವಿರುವ ಸ್ಥಳ ಮತ್ತು ಮೂಲಸೌಕ ರ್ಯಗಳನ್ನು ಬಳಸಿ ಅಲ್ಲಿ ಟಿವಿ ಸೆಟ್ಗಳನ್ನು ಅಳವಡಿಸುವ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಯಾವುದೇ ವಿಶೇಷ ಸಾಧನಗಳು ಮತ್ತು ಸವಲತ್ತುಗಳು ಇಲ್ಲದ ಕಾರಣ ಮಕ್ಕಳು ಶಿಕ್ಷಣದಿಂದ ವಂಚಿತವಾಗುವುದನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರ ಇಂತಹ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ.
ಈ ಯೋಜನೆಯ ಬಗ್ಗೆ ಮಾಹಿತಿ ನೀಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, "ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸುವ ಸಲುವಾಗಿ ಸುಮಾರು 5,766 ಜಿಲ್ಲಾ ಪಂಚಾಯತ್ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಟೆಲಿವಿಷನ್ ಸೆಟ್ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ. ಡಿ.ಡಿ.ಚಂದನದಲ್ಲಿ ಪ್ರಸಾರವಾದ ನೇರ, ಆನ್ಲೈನ್ ಅಥವಾ ಧ್ವನಿಮುದ್ರಿತ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಈ ಟಿವಿಗಳನ್ನು ಬಳಸಲು ಸಾಧ್ಯವಾಗುತ್ತದೆ. ಈ ಮೂಲಕವೂ ಶಿಕ್ಷಣವನ್ನು ಪಡೆಯಬಹುದಾಗಿದೆ" ಎಂದು ಅವರು ತಿಳಿಸಿದ್ದಾರೆ.
"ಮಳೆಗಾಲದಲ್ಲಿ ಅನೇಕ ಭಾಗಗಳಲ್ಲಿ ಆನ್ಲೈನ್ ಶಾಲೆಗಳಿಗೂ ಸಹ ಅಡೆತಡೆಗಳು ಇವೆ. ವಿಶೇಷವಾಗಿ ಮಲೆನಾಡು ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಸೇರಿದಂತೆ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳ ಬಗೆಗಿನ ಅರಿವು ರಾಜ್ಯ ಸರ್ಕಾರಕ್ಕೂ ಇದೆ. ಆದರೆ, ಕೊರೋನಾ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ದೈಹಿಕ ತರಗತಿಗಳ ಪ್ರಾರಂಭ ವಿಳಂಬವಾಗುವುದರಿಂದ ನಾವು ಆನ್ಲೈನ್ ತರಗತಿಗಳನ್ನು ಅವಲಂಭಿಸುವುದು ಅನಿವಾರ್ಯವಾಗಿದೆ.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ಗಳನ್ನು ಬಲಪಡಿಸುವುದು ಮುಖ್ಯವಾಗಿದೆ. ಇದು ನಮ್ಮ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ನಿರಂತರತೆಯನ್ನು ಖಚಿತಪಡಿಸುತ್ತದೆ. ಆದರೆ, ನೆಟ್ವರ್ಕ್ ಸಮಸ್ಯೆ ಸಹ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಈ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು" ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಅಲ್ಲದೆ, ನೆಟ್ವರ್ಕ್ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರನ್ನು ಈಗಾಗಲೇ ಭೇಟಿ ಮಾಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಗ್ರಾಮೀಣ ಭಾಗಗಳ ವ್ಯಾಪ್ತಿಯನ್ನು ಬಲಪಡಿಸಲು ಮೊಬೈಲ್ ನೆಟ್ವರ್ಕ್ ಪೂರೈಕೆದಾರರಿಂದ ಉತ್ತಮ ಸೇವೆ ನೀಡುವಂತೆ ತಿಳಿಸಿದ್ದಾರೆ. ಮತ್ತು ಮಾಹಿತಿ- ತಂತ್ರಜ್ಞಾನ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಿಂದ ಈ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನೂ ಸಚಿವ ಸುರೇಶ್ ಕುಮಾರ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವಾರ ಸಚಿವ ಸರೇಶ್ ಕುಮಾರ್ ಅವರು ಆನ್ಲೈನ್ ತರಗತಿಗಳನ್ನು ಪ್ರವೇಶಿಸಲು ಅಗತ್ಯವಾದ ಗ್ಯಾಜೆಟ್ಗಳನ್ನು ವಂಚಿತ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ರಾಜ್ಯದ ಗ್ರಾಮೀಣ ಪಾಕೆಟ್ಗಳಲ್ಲಿ ಖಚಿತಪಡಿಸಿಕೊಳ್ಳಲು ‘ಮೊಬೈಲ್ ಬ್ಯಾಂಕುಗಳು’ ಸ್ಥಾಪಿಸುವ ಸರ್ಕಾರದ ಯೋಜನೆಯನ್ನು ವಿವರಿಸಿದ್ದರು.
ಇದನ್ನೂ ಓದಿ: Trending News| ಮೇರಿ ಸಹೇಲಿ ಸಹಕಾರದಿಂದ ರೈಲಿನೊಳಗೆ ಮಗು ಹೆತ್ತ ಮಹಿಳೆ..!
ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ರಾಜ್ಯದ 93.01 ಲಕ್ಷ ವಿದ್ಯಾರ್ಥಿಗಳಲ್ಲಿ ಶೇಕಡಾ 33 ರಷ್ಟು ವಿದ್ಯಾರ್ಥಿಗಳಿಗೆ ಆನ್ಲೈನ್ ಕಲಿಕೆಗೆ ಅನುಕೂಲವಾಗುವಂತೆ ಮೊಬೈಲ್ ಫೋನ್, ಕಂಪ್ಯೂಟರ್, ಟ್ಯಾಬ್ಲೆಟ್ ಮತ್ತು ಇತರ ಗ್ಯಾಜೆಟ್ಗಳು ಲಭ್ಯವಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ