ಬೆಂಗಳೂರು: ನಾಳೆಯಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದೆ. ಬಸವರಾಜ ಬೊಮ್ಮಾಯಿ ಸಿಎಂ ಆದಬಳಿಕ ಮೊದಲ ಅಧಿವೇಶನ ನಡೆಯಲಿದೆ. ಬೆಲೆ ಏರಿಕೆ, ಹದಗೆಟ್ಟ ಕಾನೂನು ಸುವ್ಯವಸ್ಥೆ, ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ತಂತ್ರ ರೂಪಿಸ್ತಿದೆ. ಇದರ ಜೊತೆಗೆ ಜೆಡಿಎಸ್ ಕೂಡ ಸಾಥ್ ನೀಡಲಿದೆ. ಎದುರಾಳಿಗಳನ್ನು ಸಮರ್ಥವಾಗಿ ಎದುರಿಸಲು ಬೊಮ್ಮಾಯಿ ಸರ್ಕಾರ ಕೂಡ ತಯಾರಿ ಮಾಡಿಕೊಂಡಿದೆ. ಯಡಿಯೂರಪ್ಪ ಅವರೇ ಕೊನೆಯ ಅಧಿವೇಶನ ನಡೆಸಿ, ವಿದಾಯದ ಭಾಷಣ ಮಾಡ್ತಾರೆ ಅಂತ ಎಣಿಸಿದ್ದರೂ, ಅದು ಸಾಧ್ಯವಾಗಿರಲಿಲ್ಲ. ಇದೀಗ ನೂತನ ಮುಖ್ಯಮಂತ್ರಿ ಮೊದಲ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ.
ಚಕ್ಕಡಿಯಲ್ಲಿ ಸಿದ್ದರಾಮಯ್ಯ, ಡಿಕೆಶಿ:
ಪೆಟ್ರೋಲ್, ಡೀಸೆಲ್, ಎಲ್ಪಿಜಿ ಹಾಗೂ ಅಡುಗೆ ಎಣ್ಣೆ ಬೆಲೆ ಏರಿಕೆ ಬಿಸಿ ಸದನದಲ್ಲೂ ಪ್ರಸ್ತಾಪವಾಗಲಿದೆ. ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಎತ್ತಿನ ಚಕ್ಕಡಿ ಬಂಡಿಯಲ್ಲೇ ವಿಧಾನಸೌಧಕ್ಕೆ ಬರಲು ವಿಪಕ್ಷ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಇದರ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಮುಜುಗರಕ್ಕೆ ಸಿಲುಕಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ತಮ್ಮ ನಿವಾಸದಿಂದಲೇ ಚಕ್ಕಡಿಯಲ್ಲಿ ಬರಲಿದ್ದಾರೆ. ಪೆಟ್ರೋಲ್ 100 ರೂ ದಾಟಿದ್ದು, ಡಿಸೆಲ್ ಬೆಲೆಯೂ ಹೆಚ್ಚಳವಾದ ಕಾರಣ ಚಕ್ಕಡಿಯಲ್ಲಿ ಆಗಮಿಸಿ ಸರ್ಕಾರಕ್ಕೆ ಅಣಕಿಸುವ ಯತ್ನ ಮಾಡಲಿದ್ದಾರೆ.
ಕೋವಿಡ್ ಲೆಕ್ಕ ಕೊಡಿ:
ಕೋವಿಡ್ನಂತಹ ವಿಷಮ ಪರಿಸ್ಥಿತಿ ಈಗಲೂ ಮುಂದುವರೆಯುತ್ತಿದೆ. ಹೀಗಾಗಿ ಅಭಿವೃದ್ಧಿ ಕೆಲಸಗಳಿಗೆ ಹಣವೇ ಇಲ್ಲ. ಖಾಲಿ ಖಜಾನೆ ರಾಜ್ಯ ಸರ್ಕಾರವನ್ನು ಮತ್ತಷ್ಟು ಸಂಕಟಕ್ಕೆ ಸಿಲುಕುವಂತೆ ಮಾಡಿದೆ. ಸಂಕಷ್ಟ ಕಾಲದಲ್ಲೂ ಕೋವಿಡ್ ಪರಿಕರಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆರೋಪಿಸಿತ್ತು. ಈ ಬಗ್ಗೆ ಸರ್ಕಾರ ಲೆಕ್ಕ ನೀಡುವಂತೆ ಸದನದಲ್ಲಿ ಕಾಂಗ್ರೆಸ್ ಪಟ್ಟು ಹಿಡಿಯಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆಯೂ ವಿರೋಧ ವ್ಯಕ್ತಪಡಿಸಿ, ಹಿಂಪಡೆಯುವವರೆಗೂ ಸದನದಲ್ಲಿ ಪಟ್ಟು ಹಿಡಿಯಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸದನದಲ್ಲೂ ಸದ್ದುಗದ್ದಲಕ್ಕೆ ಕಾರಣವಾಗಬಹುದು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ ಅಂತ ಸರ್ಕಾರದ ವಿರುದ್ಧ ವಾಕ್ಪ್ರಹಾರ ನಡೆಯುವ ಸಾಧ್ಯತೆಇದೆ.
ಇದನ್ನೂ ಓದಿ; Arvind Kejriwal| ಎಎಪಿ ರಾಷ್ಟ್ರೀಯ ಸಂಚಾಲಕರಾಗಿ ಸತತ ಮೂರನೇ ಬಾರಿ ಆಯ್ಕೆಯಾದ ಅರವಿಂದ ಕೇಜ್ರಿವಾಲ್
ವಿವಿಧ ಇಲಾಖೆಗಳಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳು ಕೂಡ ಸದನದಲ್ಲಿ ಪ್ರಸ್ತಾಪವಾಗಲಿವೆ. ಅದರಲ್ಲೂ ಕೆಲ ಸಚಿವರ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿದ್ದು, ಅವರನ್ನ ಸಂಪುಟದಿಂದ ಕೈಬಿಡಲು ಒತ್ತಡವೂ ವಿಪಕ್ಷಗಳಿಂದ ಬರುವ ನಿರೀಕ್ಷೆ ಇದೆ. ಕೋವಿಡ್ ಸಾವು ನೋವು ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತ ಬಂದಿದೆ ಅಂತ ಸಿದ್ದರಾಮಯ್ಯ ಅವರು ಅನೇಕ ಬಾರಿ ಆರೋಪಿಸಿದ್ದಾರೆ. ಸದನದಲ್ಲಿ ಸರ್ಕಾರವನ್ನು ಕಿವಿ ಹಿಂಡಲು ಇದನ್ನೂ ಅಸ್ತ್ರವಾಗಿ ಬಳಸಿಕಕೊಳ್ಳಲಿದ್ದಾರೆ.
ಮಾಧುಸ್ವಾಮಿಯೇ ಟ್ರಬಲ್ ಶೂಟರ್:
ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಭರ್ಜರಿ ತಾಲೀಮು ನಡೆಸಿದೆ. ವಿಪಕ್ಷಗಳ ಆರೋಪಗಳನ್ನು ಸುರಿಮಳೆ ಎದುರಿಸಲು ಬೊಮ್ಮಾಯಿ ಸರ್ಕಾರ ಕೂಡ ಸಿದ್ಧವಾಗುತ್ತಿದೆ. ಕಾನೂನು ಮತ್ತು ಸಂಸದೀಯ ಖಾತೆ ವಹಿಸಿಕೊಂಡಿರುವ ಜೆ.ಸಿ.ಮಾಧುಸ್ವಾಮಿ ಬೊಮ್ಮಾಯಿಗೆ ಆಪತ್ಭಾಂಧವ ಆಗಲಿದ್ದಾರೆ. ಸರ್ಕಾರದ ವಿರುದ್ಧದ ಎಲ್ಲ ಟೀಕಾಸ್ತ್ರಗಳಿಗೆ ಸಮರ್ಥ ಉತ್ತರ ನೀಡಲು ಸಾಥ್ ನೀಡಲಿದ್ದಾರೆ.
ಸದನದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯಬೇಕೆನ್ನುವ ಆಶಯ ಯಾವಾಗಲೂ ಇರುತ್ತದೆ. ಆದರೆ ಬಹುತೇಕ ಬಾರಿ ಸರ್ಕಾರ ಮತ್ತು ಆಡಳಿತ ಪಕ್ಷಗಳ ನಡುವಣ ತಿಕ್ಕಾಟಕ್ಕೆ ವೇದಿಕೆಯಾಗುತ್ತದೆ. ಈ ಬಾರಿಯೂ ಅದೇ ಪುನರಾವರ್ತನೆಯಾಗುವ ಎಲ್ಲ ಲಕ್ಷಗಳು ಗೋಚರಿಸುತ್ತಿವೆ. ಬೆಲೆ ಏರಿಕೆ ಎಂಬ ಪ್ರಬಲ ಅಸ್ತ್ರ ವಿಪಕ್ಷಗಳ ಕೈಗೆ ಸಿಕ್ಕಂತಾಗಿದೆ. ಇದನ್ನ ಸರ್ಕಾರ ಯಾವ ರೀತಿ ಸಮರ್ಥಿಸಿಕೊಳ್ಳುತ್ತದೆ ನೋಡಬೇಕಿದೆ.
(ವರದಿ: ದಶರಥ್ ಸಾವೂರು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ