news18-kannada Updated:September 22, 2020, 8:49 AM IST
ವಿಜಯಪುರದಲ್ಲಿ ಸುರಿದ ಮಳೆಯಿಂದ ಕೊಳೆತ ಬೆಳೆಗಳು
ವಿಜಯಪುರ, (ಸೆ. 22): ಕಳೆದ ಸುಮಾರು 10 ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಅಲ್ಲಲ್ಲಿ ಆಗಾಗಾ ಸುರಿಯುತ್ತಿರುವ ಧಾರಾಕಾರ ಮಳೆ ನಾನಾ ಅವಾಂತರಗಳಿಗೆ ಕಾರಣವಾಗಿದೆ. ಈ ಮಳೆಯಿಂದಾಗಿ ಜಿಲ್ಲೆಯ ರೈತರು ಕಂಗಾಲಾಗುವಂತೆ ಮಾಡಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯ ಆತಂಕ ಎದುರಾಗಿದೆ. ಈಗಾಗಲೇ ವಾಣಿಜ್ಯ ಬೆಳೆಗಳಾದ ಉಳ್ಳಾಗಡ್ಡಿ ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ, ಈಗ ತೊಗರಿ, ಸಜ್ಜೆ ಮತ್ತು ಮೆಕ್ಕೆಜೋಳ ಬೆಳೆಗಾರರೂ ಕಂಗಾಲಾಗಿದ್ದಾರೆ. ವಿಜಯಪುರ ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಒಂದೆಡೆ ಮಳೆಯಿಂದ ಬೆಳೆ ಹಾಳಾಗಿದ್ದರೆ, ಮತ್ತೊಂದೆಡೆ ಮಳೆಯ ನೀರು ಇನ್ನೂ ಹೊಲಗಳಲ್ಲಿ ಅಪಾರ ಪ್ರಮಾಣದಲ್ಲಿ ನಿಂತಿರುವುದರಿಂದ ರೈತರು ಕಂಗಾಲಾಗಿದ್ದಾರೆ.
ವಿಜಯಪುರ ಜಿಲ್ಲೆಯ ಕವಲಗಿ, ಕಗ್ಗೋಡ, ಹೊನ್ನುಟಗಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಮೆಕ್ಕೆ ಜೋಳ ಮತ್ತು ಸಜ್ಜೆ ಬೆಳೆಗಳು ನೀರಲ್ಲಿ ನಿಂತಿದ್ದು, ಬೆಳೆಹಾನಿ ಭೀತಿ ಎದುರಾಗಿದೆ. ಸಾಲಸೋಲ ಮಾಡಿ ಬೆಳೆ ಬಿತ್ತನೆ ಮಾಡಿದ್ದ ರೈತರು ಈ ಮಳೆಯಿಂದಾಗಿ ಅಕ್ಷರಶಃ ನಲುಗಿ ಹೋಗಿದ್ದಾರೆ. ಮಳೆಯ ನೀರನ್ನು ಹೊರಗೆ ಹಾಕಲಾಗದೆ ಈ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರ ತಮಗೆ ಸೂಕ್ತ ಪರಿಹಾರ ನೀಡಬೇಕು. ಸರಕಾರ ತಮ್ಮ ನೆರವಿಗೆ ಬಾರದಿದ್ದರೆ ಆತ್ಮಹತ್ಯೆಯೊಂದೇ ಉಳಿದಿರುವ ದಾರಿ ಎಂದು ರೈತರಾದ ಬಸವರಾಜ ಮಹಾನಿಂಗಪ್ಪ ತಳವಾರ ಮತ್ತು ಗುರುರಾಜ ಶಂಕರೆಪ್ಪ ಹೆಗಡಿಹಾಳ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Karnataka Weather: ಕರ್ನಾಟಕದಲ್ಲಿ ಇಂದಿನಿಂದ 3 ದಿನ ಭಾರೀ ಮಳೆ; ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ
ವಿಜಯಪುರ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಇತ್ತ ಡೋಣಿ ನದಿಯಲ್ಲಿ ನೀರಿನ ಒಳಹರಿವೂ ಕೂಡ ಕಡಿಮೆಯಾಗಿದೆ. ಆದರೆ, ಜಮೀನಿಗೆ ನುಗ್ಗಿರುವ ನೀರು ಇನ್ನೂ ಹಾಗೆ ನಿಂತಿದೆ. ಇದು ಸಾರವಾಡ, ದದಾಮಟ್ಟಿ, ತೊನಶ್ಯಾಳ ಸೇರಿದಂತೆ ಡೋಣಿ ನದಿ ತೀರದಲ್ಲಿ ಬರುವ ಗ್ರಾಮಗಳ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.
ಹೊಲದಲ್ಲಿ ನಿಂತಿರುವ ನೀರಿನಿಂದಾಗಿ ರೈತರು ತಮ್ಮ ಹೊಲದಲ್ಲಿ ಬೆಳೆದಿದ್ದ ತೊಗರಿ, ಉಳ್ಳಾಗಡ್ಡಿ, ಶೇಂಗಾ ಸೇರಿದಂತೆ ನಾನಾ ಬೆಳೆಗಳು ಇನ್ನೂ ನೀರಿನಲ್ಲಿಯೇ ನಿಂತಿವೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದರೂ, ತಗ್ಗು ಪ್ರದೇಶದ ಜಮೀನಿನಲ್ಲಿ ನೀರು ನಿಂತಿದೆ. ಇದು ರೈತರಲ್ಲಿ ಆತಂಕ ಉಂಟುಮಾಡಿದ್ದು, ಬೆಳೆಹಾನಿಯ ಭೀತಿ ಎದುರಾಗಿದೆ.
ಪ್ರತಿವರ್ಷ ಮಳೆ ಬಂದರೆ ಸಾಕು. ಡೋಣಿ ನದಿ ತರುವ ಗೋಳು ಅಷ್ಟಿಷ್ಟಲ್ಲ. ನದಿ ಪಾತ್ರದಲ್ಲಿ ಹೂಳು ತುಂಬಿರುವ ಕಾರಣ ಈ ಡೋಣಿ ನದಿ ಹಳಿ ತಪ್ಪಿದ ರೈಲಿನಂತೆ ಬೇಕಾಬಿಟ್ಟಿ ಹರಿಯುತ್ತಿದ್ದು, ರೈತರ ಬೆಳೆಯ ಜೊತೆಗೆ ಫಲವತ್ತಾದ ಮಣ್ಣನ್ನು ಕೂಡ ತೆಗೆದುಕೊಂಡು ಹೋಗುತ್ತದೆ. ಅಲ್ಲದೇ, ಈ ನದಿಯ ನೀರು ಉಪ್ಪಾಗಿರುವುದರಿಂದ ನೀರು ನಿಂತ ಜಾಗ ಜವಳು ಹಿಡಿದು ಯಾವುದೇ ಬೆಳೆ ಬಾರದಂತಹ ದುಸ್ಥಿತಿ ತಂದೊಡ್ಡುತ್ತಿದೆ.ಪ್ರತಿ ಬಾರಿ ಮಳೆ ಬಂದಾಗ ಬೇಕಾಬಿಟ್ಟಿ ಹರಿಯುವ ಡೋಣಿ ನದಿಯಿಂದ ರೈತರು ಸಂತ್ರಸ್ತರಾಗುತ್ತಿದ್ದರೂ, ಸೂಕ್ತ ಪರಿಹಾರ ಸಿಗದೆ ರೈತರು ಕಂಗಾಲಾಗಿದ್ದಾರೆ.
Published by:
Sushma Chakre
First published:
September 22, 2020, 8:49 AM IST