ಯಾದಗಿರಿ (ಮೇ 5): ಬೇಸಿಗೆಯಲ್ಲಿ ಅಲೆಮಾರಿ ಜನಾಂಗದವರು ಹನಿ ಹನಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.ಲಾಕ್ ಡೌನ್ ಇರುವುದರಿಂದ ಕೆಲಸ ಸಿಗದೆ ತುತ್ತು ಅನ್ನಕ್ಕೂ ಒದ್ದಾಡು ಸ್ಥಿತಿ ಇದೆ. ಈ ಮಧ್ಯೆ ಗುಟುಕು ನೀರಿಗಾಗಿ ಎರಡು ಕಿಮೀ ಕೊಡ ಹಿಡಿದುಕೊಂಡು ನಡೆದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾದಗಿರಿ ತಾಲೂಕಿನ ಎಂ.ಹೊಸಳ್ಳಿ ತಾಂಡಾದ ಹೊರ ಭಾಗದ ಗಿರಿನಗರದಲ್ಲಿ ಬುಡ್ಗ ಜಂಗಮ ಹಾಗೂ ಶಿಳ್ಳೆ ಕ್ಯಾತ ಸಮುದಾಯದ ಅಲೆ ಮಾರಿ ಜನಾಂಗದ ಸುಮಾರು 130 ಕುಟುಂಬಗಳು ವಾಸವಾಗಿದ್ದಾರೆ. ಮೊದಲೇ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಜನ ಈಗ ಬೇಸಿಗೆಯಲ್ಲಿ ನೀರು ತರಲು ಕಿಮೀಗಟ್ಟಲೆ ಅಲೆದಾಡುವಂತಾಗಿದೆ.
ನೀರು ಕೊಟ್ಟು ಜೀವ ಉಳಿಸಿ...!
ಕಳೆದ ಒಂದು ತಿಂಗಳಿನಿಂದ ಜನರು ನೀರಿಗಾಗಿ ನರಕಯಾತನೆ ಅನುಭವಿಸುವಂತಾಗಿದೆ. ಸರ್ಕಾರ ಕೊಳವೆ ಬಾವಿ ಕೊರಸಿ ನೀರಿನ ಅನುಕೂಲ ಮಾಡಿತ್ತು. ಈಗ ಅಂತರ್ಜಲ ಕಡಿಮೆಯಾದ ಹಿನ್ನಲೆ ನೀರು ಬತ್ತಿ ಹೋಗಿವೆ. ನೀರು ಕಡಿಮೆ ಪೂರೈಕೆ ಮಾಡಲಾಗುತ್ತಿದ್ದು ಬೇಡಿಕೆ ತಕ್ಕಂತೆ ನೀರು ಸರಿ ಹೋಗುತ್ತಿಲ್ಲ.
ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಗೌರಮ್ಮ ಮಾತಮಾಡಿ,ನಮಗೆ ಊಟ ಇಲ್ಲದಿದ್ದರೂ ಪರವಾಗಿಲ್ಲ. ನಮಗೆ ಮೊದಲು ನೀರು ಬೇಕು ನೀರು ಕೊಟ್ಟು ಜೀವ ಉಳಿಸಿ ಎಂದು ನೋವು ತೊಡಿಕೊಂಡರು.
ಇದನ್ನೂ ಓದಿ: ‘ಸರ್ಕಾರದ ಮನವಿಗೆ ಸ್ಪಂದಿಸಿ ಬೆಂಗಳೂರಲ್ಲೇ ಉಳಿದ ಕಾರ್ಮಿಕರು ನಾಳೆಯಿಂದ ಕೆಲಸ ಮಾಡಲಿದ್ದಾರೆ‘ - ಆರ್. ಅಶೋಕ್
ಜಮೀನಿನ ಕೊಳವೆ ಬಾವಿ ನೀರೆ ಆಶ್ರಯ..!:
ಅಲೆಮಾರಿ ಜನಾಂಗದವರು ವಾಸ ಮಾಡುವ ಸುತ್ತಲಿನ ಜಮೀನಿಗೆ ತೆರಳಿ ನೀರು ತರುವಂತಾಗಿದೆ. ಸಮೀಪದ ಹೊಸಳ್ಳಿತಾಂಡಾದ ರೈತನೋರ್ವನ ಜಮೀನಿನ ಕೊಳವೆ ಬಾವಿಗೆ ನಿತ್ಯವು ನೀರು ತರಲು ಹೋಗುತ್ತಿದ್ದಾರೆ. ನಿತ್ಯವು ಎರಡು ಕಿಮೀ ನಡೆದುಕೊಂಡು ಹೋಗಿ ನೀರು ತರುತ್ತಾರೆ. ಮಕ್ಕಳು, ಮಹಿಳೆಯರು ಸೇರಿ ಕೊಡ ಹೊತ್ತು ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಒಂದು ಕಡೆ ಕೊಡ ಮತ್ತೊಂದೆಡೆ ಮಕ್ಕಳನ್ನು ಮಡಿಲಲ್ಲಿ ಹಾಕಿಕೊಂಡು ಜನ್ಮದಾತೆಯರು ನೀರು ತರುವ ದೃಶ್ಯ ಕರಳು ಚುರ್ ಎನ್ನುತ್ತದೆ. ಚಿಕ್ಕ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗದೆ ಮಕ್ಕಳನ್ನೂ ಎತ್ತಿಕೊಂಡು ಹೋಗು ನೀರು ತರುತ್ತಿದ್ದಾರೆ. ವೃದ್ಧರಂತು ನೀರು ತರಲು ತತ್ತರಿಸಿ ಹೋಗಿದ್ದಾರೆ.
ಕೆಲವೊಮ್ಮೆ ಕೊಳವೆಬಾವಿಗೆ ಹೋದಾಗ ಕರೆಂಟ್ ಇದ್ದರೆ ನೀರು ಪಂಪ್ ಮೂಲಕ ಸಿಗುತ್ತದೆ. ಇಲ್ಲದಿದ್ದರೆ ಖಾಲಿ ಕೊಡ ಹೀಡಿದುಕೊಂಡು ಬರುವಂತಾಗಿದೆ. ಕುಡಿಯುವ ನೀರಿಗಾಗಿ ಹಾಗೂ ಬಳಕೆ ಮಾಡಲು ನೀರಿನ ತತ್ವಾರ ತಲೆದೊರಿದೆ.
ಎಂ.ಹೊಸಳ್ಳಿ ತಾಂಡಾದಲ್ಲಿ ಪರದಾಟ..!:
ಎಂ.ಹೊಸಳ್ಳಿ ತಾಂಡಾದ ಜನರು ಕೂಡ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.ಕೆಲ ಕಡೆ ನೀರು ಪೂರೈಕೆ ಮಾಡಿದರೆ ಮತ್ತೆ ಕೆಲ ಏರಿಯಾದಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಇದರಿಂದ ಜನರು ಕಂಗಲಾಗಿದ್ದಾರೆ.
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಜಿಲ್ಲಾಪಂಚಾಯತ್ ಸಿಇಓ ಶಿಲ್ಪಾ ಶರ್ಮಾ ಅವರು ಮಾತನಾಡಿ,ಈ ಬಗ್ಗೆ ಪರಿಶೀಲಿಸಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು.
ದು ಕಡೆ ಜನರು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.ಮತ್ತೊಂದೆಡೆ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವಂತಾಗಿದೆ. ಸರಕಾರ ಕೂಡಲೇ ಅಲೆಮಾರಿ ಜನಾಂಗದವರು ವಾಸ ಮಾಡುವ ಹಾಗೂ ಎಂ.ಹೊಸಳ್ಳಿ ತಾಂಡಾದ ಜನರಿಗೆ ನೀರಿನ ಸಮಸ್ಯೆ ನಿಗಿಸಬೇಕಿದೆ.
(ವರದಿ: ನಾಗಪ್ಪ ಮಾಲಿಪಾಟೀಲ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ