Karnataka MLC Elections: ಕರ್ನಾಟಕದ ನಾಲ್ಕು ವಿಧಾನ ಪರಿಷತ್ ಸ್ಥಾನಕ್ಕೆ ಆರಂಭವಾದ ಮತದಾನ; ಪ್ರತಿಷ್ಠೆಯ ಕಣದಲ್ಲಿ ಯಾರಿಗೆ ಗೆಲುವು?ಬೆಂಗಳೂರು (ಅಕ್ಟೋಬರ್ 28); ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆ ಕಾವು ಏರುತ್ತಿದೆ. ಇಂದಿನಿಂದ ಬಿಹಾರದಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದೆ. ಈ ನಡುವೆ ಕರ್ನಾಟಕದಲ್ಲೂ ಕೋವಿಡ್ ಭೀತಿಯ ನಡುವೆಯೂ 4 ಸ್ಥಾನಕ್ಕೆ ವಿಧಾನ ಪರಿಷತ್ ಚುನಾವಣೆಯನ್ನು ನಡೆಸಲಾಗುತ್ತಿದೆ. ಈ ಚುನಾವಣೆ ಆಡಳಿತರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಈಗಾಗಲೇ ಮೂರೂ ಪಕ್ಷಗಳು ಭರದಿಂದ ಚುನಾವಣಾ ಪ್ರಚಾರ ನಡೆಸಿದ್ದು, ಇಂದು ಎಲ್ಲಾ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಹೀಗಾಗಿ ಸೋಲು ಯಾರಿಗೆ? ಗೆಲುವು ಯಾರಿಗೆ? ಎಂಬ ಲೆಕ್ಕಾಚಾರಗಳು ರಾಜ್ಯ ರಾಜಕೀಯದಲ್ಲಿ ಗರಿಗೆದರಿವೆ.
ಬೆಂಗಳೂರು ಶಿಕ್ಷಕರ ಕ್ಷೇತ್ರ, ಈಶಾನ್ಯ ವಲಯ ಶಿಕ್ಷಕರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ, ಹಾಗೂ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಿದ್ದು, ಯಾರು ಗೆಲುವು ಸಾಧಿಸುತ್ತಾರೆ? ಎಂಬುದು ಇದೀಗ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಶಾಸಕ ಪುಟ್ಟಣ್ಣ ಈ ಬಾರಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿರುವುದು ವಿಶೇಷ. ಹೀಗಾಗಿ ಬೆಂಗಳೂರು ಶಿಕ್ಷಕರ ಕ್ಷೇತ್ರ ಬಿಜೆಪಿ ಮತ್ತು ಜೆಡಿಎಸ್ ಪಾಲಿಗೆ ಗೆಲ್ಲಲೇಬೇಕಾದ ನಿರ್ಣಾಯಕ ಮತ್ತು ಪ್ರತಿಷ್ಠೆಯ ಕಣವಾಗಿದೆ.
ಇಂದು ಬೆಳಗ್ಗೆ 8 ರಿಂದ ಸಂಜೆ 5ಗಂಟೆಯವರೆಗೆ ಈ ನಾಲ್ಕೂ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
ಕ್ಷೇತ್ರವಾರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು
ಬೆಂಗಳೂರು ಶಿಕ್ಷಕರ ಕ್ಷೇತ್ರ
ಬಿಜೆಪಿ: ಪುಟ್ಟಣ್ಣ
ಕಾಂಗ್ರೆಸ್: ಪ್ರವೀಣ್ ಪೀಟರ್
ಜೆಡಿಎಸ್: ಎ.ಪಿ.ರಂಗನಾಥ್
ಈಶಾನ್ಯ ಶಿಕ್ಷಕರ ಕ್ಷೇತ್ರ
ಬಿಜೆಪಿ: ಶಶಿಲ್ ನಮೋಶಿ
ಕಾಂಗ್ರೆಸ್: ಶರಣಪ್ಪ ಮಟ್ಟೂರು
ಜೆಡಿಎಸ್: ತಿಮ್ಮಯ್ಯ ಪುರ್ಲೆ
ಆಗ್ನೇಯ ಪದವೀಧರ ಕ್ಷೇತ್ರ
ಬಿಜೆಪಿ: ಡಾ.ಎಂ.ಚಿದಾನಂದಗೌಡ
ಕಾಂಗ್ರೆಸ್: ರಮೇಶ್ ಬಾಬು
ಜೆಡಿಎಸ್: ಚೌಡರೆಡ್ಡಿ ತೂಪಲ್ಲಿ
ಪಶ್ಚಿಮ ಪದವೀಧರ ಕ್ಷೇತ್ರ
ಬಿಜೆಪಿ: ವಿ.ಎಸ್.ಸಂಕನೂರ
ಕಾಂಗ್ರೆಸ್: ಡಾ.ಆರ್.ಎಂ.ಕುಬೇರಪ್ಪ
ಜೆಡಿಎಸ್ ಬೆಂಬಲಿತ ಪಕ್ಷೇತರ: ಬಸವರಾಜ ಗುರಿಕಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ