ಬೆಂಗಳೂರು (ಏ. 7): ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಮಾತಿಗೆ ತಿರುಗೇಟು ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ, ಕಥೆ ಕಟ್ಟುವುದರಲ್ಲಿ ಸಿದ್ದರಾಮಯ್ಯ ಎಕ್ಸ್ಪರ್ಟ್. ಅವರಿಗೆ ಜ್ಞಾನಪೀಠ ಪ್ರಶಸ್ತಿನೋ ಅಥವಾ ನೊಬೆಲ್ ಪ್ರಶಸ್ತಿನೋ ಕೊಡಬೇಕು. ಅವರಿಗೆ ಮಾಡಲು ಯಾವುದೇ ಉದ್ಯೋಗ ಇಲ್ಲ. ಅದಕ್ಕೆ ಹೀಗೆಲ್ಲಾ ಕಥೆ ಕಟ್ಟುತ್ತಾರೆ. ಸಿದ್ದರಾಮಯ್ಯನವರಿಗೆ ಅವರೇ ಪಕ್ಷದಲ್ಲಿಯೇ ಮರ್ಯಾದೆ ಇಲ್ಲ. ಈಗ ನಾನು ರಾಜೀನಾಮೆ ಕೊಡಬೇಕಾ? ಅಥವಾ ಅವರೇ ಕೊಡಬೇಕಾ? ಎಂಬುದನ್ನು ಮೊದಲು ನಿರ್ಧರಿಸಲಿ ಎಂದು ಟೀಕಿಸಿದ್ದಾರೆ.
ಸಚಿವ ಕೆ.ಎಸ್ ಈಶ್ವರಪ್ಪನವರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ ಮಾಡಿರುವ ವಿಚಾರವಾಗಿ ಹರಿಹಾಯ್ದಿರುವ ಸಚಿವ ಕೆ.ಎಸ್. ಈಶ್ವರಪ್ಪ, ರಾಜ್ಯದಲ್ಲಿ ಇಂತಹ ಒಬ್ಬ ವಿರೋಧ ಪಕ್ಷದ ನಾಯಕರು ಇದ್ದಾರಲ್ಲ ಎಂಬುದೇ ನನಗೆ ನೋವಾಗ್ತಿದೆ. ಅವರನ್ನು ಅವರೇ ಪಕ್ಷವೇ ತಿರಸ್ಕಾರ ಮಾಡಿದೆ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಅವರಿಗೆ ಹುಚ್ಚು ಹಿಡಿದಿದೆ ಮೈಸೂರಿನ ಮೇಯರ್ ಚುನಾವಣೆಯಲ್ಲಿ ಅವರ ಸ್ಥಿತಿ ನೋಡಿದ್ದೇವೆ. ಇದನ್ನೆಲ್ಲಾ ನೋಡಿದರೆ ನಾನು ರಾಜೀನಾಮೆ ಕೊಡಬೇಕಾ? ಅಥವಾ ಅವರೇ ರಾಜೀನಾಮೆ ಕೊಡಬೇಕಾ? ಎಂಬುದನ್ನು ಅವರೇ ಹೇಳಬೇಕು ಎಂದು ಸಚಿವ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ನಮ್ಮ ಇಲಾಖೆಯಲ್ಲಿ ಆಗಿರುವ ಉತ್ತಮ ಕೆಲಸದ ಬಗ್ಗೆ ಅವರಿಗೇನು ಗೊತ್ತಿದೆ? ಎಂದು ತಿರುಗೇಟು ನೀಡಿದ ಈಶ್ವರಪ್ಪ ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗೆ ಇಳಿಸಲು ಯತ್ನಾಳ್ ಮತ್ತೆ ಈಶ್ವರಪ್ಪ ಪ್ಲಾನ್ ಮಾಡಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯನವರಿಗೆ ಅವರ ಪಕ್ಷದಲ್ಲೇ ಮರ್ಯಾದೆ ಇಲ್ಲ ಎಂದು ಲೇವಡಿ ಮಾಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಪಕ್ಷಕ್ಕೆ ಏನೇ ಬೈದರೂ ಅದಕ್ಕೆ ಸೂಕ್ತವಾದ ದಾಖಲೆ ಕೊಟ್ಟು ಮಾತಾಡಬೇಕು. ಅದು ಬಿಟ್ಟು ಸುಮ್ಮನೆ ಏನೇನೋ ಮಾತಾಡೋದು ಸರಿಯಲ್ಲ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಬದಲಾವಣೆ ಆಗೋಲ್ಲ. ಅವರ ಬದಲಾವಣೆ ಆಗೋಲ್ಲ ಎಂಬ ವಿಶ್ವಾಸ ಇದೆ. ಈಗಲೂ ನಮಗೆ ಅವರೇ ನಾಯಕರು. ಇಲಾಖೆಯಲ್ಲಿ ನೇರವಾಗಿ ಸಿಎಂ ಹ್ಯಾಂಡಲ್ ಮಾಡೋಕೆ ಬರೋದಿಲ್ಲ. ಆದರೆ ಹಣ ಬಿಡುಗಡೆ ಮಾಡಬಹುದು. ರಾಜ್ಯಪಾಲರು ಗುಜರಾತ್ ನಲ್ಲಿ ಆರ್ಥಿಕ ಸಚಿವರಾಗಿದ್ದವರು. ಹೀಗಾಗಿ ಇದರ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಅವರ ಬಳಿ ಹೋಗಿದ್ದೆ. ಆದರೆ, ಯಾವುದೇ ಕಾರಣಕ್ಕೂ ನಾನು ಯಡಿಯೂರಪ್ಪನವರ ವಿರುದ್ಧ ದೂರು ಕೊಟ್ಟಿಲ್ಲ, ಮುಂದೆಯೂ ಸಿಎಂ ವಿರುದ್ಧ ದೂರು ಕೊಡೋದಿಲ್ಲ ಎಂದು ಸಚಿವ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.
ಸಿ.ಟಿ ರವಿ ಬಿಜೆಪಿ ಪಕ್ಷದ ನಾಯಕರು. ಈ ವಿಷಯವನ್ನು ಅವರ ಗಮನಕ್ಕೆ ತರದೇ ದೇವೇಗೌಡರಿಗೆ, ಡಿಕೆ ಶಿವಕುಮಾರ್ಗೆ ಹೇಳೋಕೆ ಆಗುತ್ತಾ? ಅಮಿತ್ ಷಾ, ಸಿ.ಟಿ ರವಿ, ಅರುಣ್ ಸಿಂಗ್ ಎಲ್ಲರೂ ನಮ್ಮ ಪಕ್ಷದ ಕುಟುಂಬದವರು. ಕುಟುಂಬ ಅಂದಾಗ ಇಲಾಖೆಯಲ್ಲಿ ಆದ ವಿಷಯದ ಬಗ್ಗೆ ಅವರ ಗಮನಕ್ಕೆ ತಂದಿದ್ದೇನೆ. ಇದು ಬಿಟ್ಟು ನಾನು ಯಾರಿಗೂ ದೂರು ಕೊಟ್ಟಿಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ