ಬೆಂಗಳೂರು, ಡಿ. 3: ದೇಶದಲ್ಲೇ ಮೊತ್ತಮೊದಲ ಬಾರಿಗೆ ಅಮೈಕ್ರಾನ್ ತಳಿಯ ಕೊರೋನಾ ವೈರಸ್ ಬೆಂಗಳೂರಿಗೆ ಪ್ರವೇಶ ಮಾಡಿದೆ. ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ. ಓಮೈಕ್ರಾನ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಇಡೀ ದೇಶವೇ ಕುತೂಹಲದಿಂದ ಗಮನಿಸುತ್ತಿದೆ. ಆಕ್ರಮಣಕಾರಿ ರೀತಿಯಲ್ಲಿ ಕೋವಿಡ್ ಪರೀಕ್ಷೆಗಳನ್ನ ನಡೆಸುವುದರ ಜೊತೆಗೆ ಲಸಿಕೆ ಹಂಚಿಕೆ ಕಾರ್ಯದತ್ತ ರಾಜ್ಯ ಸರ್ಕಾರ ಲಕ್ಷ್ಯ ವಹಿಸಿದೆ. ಲಸಿಕೆ ಮೂಲಕ ಕೋವಿಡ್ ಆರ್ಭಟ ತಗ್ಗಿಸುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಜರ್ಮನಿ ಮಾದರಿಯಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಪೂರ್ಣ ವ್ಯಾಕ್ಸಿನ್ ಡೋಸ್ ಹಾಕಿಸಿಕೊಳ್ಳದ ಜನರಿಗೆ ಲಾಕ್ ಡೌನ್ ಹೇರುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಈ ಬಗ್ಗೆ ಬಹಳ ಗಂಭೀರವಾಗಿದೆ.
ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವರು ಮತ್ತು ವಿವಿಧ ಅಧಿಕಾರಿಗಳ ಸಭೆಯಲ್ಲಿ ಇದೂ ಸೇರಿದಂತೆ ಹಲವು ವಿಚಾರಗಳನ್ನ ಚರ್ಚಿಸಲಾಗಿರುವುದು ತಿಳಿದುಬಂದಿದೆ. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಡಾ. ಅಶ್ವತ್ಥನಾರಾಯಣ, ಜರ್ಮನಿ ಮಾದರಿಯಲ್ಲಿ ರಾಜ್ಯದಲ್ಲಿ ಲಸಿಕೆ ಪಡೆಯದವರಿಗೆ ಲಾಕ್ಡೌನ್ ಘೋಷಿಸಲು ಸರಕಾರ ಚಿಂತೆ ಮಾಡಿರುವ ವಿಚಾರವನ್ನು ತಿಳಿಸಿದರು.
ವ್ಯಾಕ್ಸಿನೇಟೆಡ್ ಸರ್ಟಿಫಿಕೇಟ್ ನಿಮ್ಮ ಬಳಿ ಸದಾ ಇರಲಿ:
ಭಾರತದಲ್ಲಿ ಅತಿಹೆಚ್ಚು ಬಳಕೆ ಆಗುತ್ತಿರುವ ಲಸಿಕೆಗಳೆಂದರೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್. ಇವೆರಡೂ ಕೂಡ ಎರಡು ಡೋಸ್ಗಳನ್ನ ಹೊಂದಿವೆ. ಎರಡು ಡೋಸ್ ಹಾಕಿಸಿಕೊಂಡರೆ ಪೂರ್ಣ ವ್ಯಾಕ್ಸಿನೇಟೆಡ್ ಎಂದು ಪರಿಗಣಿಸಬಹುದು. ಲಸಿಕೆ ಹಾಕಿಸಿಕೊಂಡಾಗ ವ್ಯಾಕ್ಸಿನೇಟೆಡ್ ಪ್ರಮಾಣಪತ್ರ ಸಿಗುತ್ತದೆ. ಈಗ ಈ ಸರ್ಟಿಫಿಕೇಟ್ ಬಹಳ ಮಹತ್ವದ ದಾಖಲೆಯಾಗಿದೆ. ಮೊಬೈಲ್ನಲ್ಲಿ ನೀವು ಇದರ ಪ್ರತಿಯನ್ನ ಇರಿಸಿಕೊಳ್ಳಬಹುದು. ಅಥವಾ ಅದರ ಪ್ರಿಂಟ್ ತೆಗೆದುಕೊಂಡು ಇಟ್ಟುಕೊಳ್ಳಬಹುದು. ವಾಹನ ಚಾಲಕರು ತಮ್ಮ ಬಳಿ ಯಾವಾಗಲೂ ಲೈಸೆನ್ಸ್ ಪ್ರತಿ ಇಟ್ಟುಕೊಂಡಿರುವಂತೆ, ನೀವು ಎಲ್ಲೇ ಹೋದರೂ ನಿಮ್ಮ ಬಳಿ ವ್ಯಾಕ್ಸಿನೇಟೆಡ್ ಸರ್ಟಿಫಿಕೇಟ್ ಇದ್ದೇ ಇರಬೇಕು.
ಇದನ್ನೂ ಓದಿ: ರಾಜ್ಯದಲ್ಲಿ 16 ಓಮಿಕ್ರಾನ್ ಪ್ರಕರಣಗಳಿವೆ: ಎಚ್ ಕೆ ಪಾಟೀಲ್ ಸ್ಫೋಟಕ ಹೇಳಿಕೆ
ಲಸಿಕೆ ಪಡೆಯದವರಿಗೆ ಲಾಕ್ಡೌನ್ ಹೇಗೆ?
* ಪೂರ್ಣ ಲಸಿಕೆ ಪಡೆಯದವರಿಗೆ ಅಥವಾ ವ್ಯಾಕ್ಸಿನೇಟೆಡ್ ಸರ್ಟಿಫಿಕೇಟ್ ಇಲ್ಲದವರು ಸಾರ್ವಜನಿಕವಾಗಿ ಓಡಾಡುವಂತಿಲ್ಲ.
* ಏರ್ಪೋರ್ಟ್, ರೈಲ್ವೆ ನಿಲ್ದಾಣ, ಮೆಟ್ರೋ, ಬಸ್, ಟ್ಯಾಕ್ಸಿ, ಆಟೋ ಇತ್ಯಾದಿಗಳಲ್ಲಿ ನಿಮಗೆ ಟಿಕೆಟ್ ಜೊತೆಗೆ ವ್ಯಾಕ್ಸಿನ್ ಸರ್ಟಿಫಿಕೇಟ್ ಇದ್ದರೆ ಮಾತ್ರ ಪ್ರವೇಶ.
* ಲಸಿಕೆ ಪಡೆಯದವರು ಕೆಲಸ ಮಾಡಲು ಕಚೇರಿಗೆ ಹೋಗುವಂತಿಲ್ಲ. ಒಂದು ವೇಳೆ ಅಂಥವರು ಕೆಲಸಕ್ಕೆ ಹೋದರೆ ಆ ಸಂಸ್ಥೆಯ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬಹುದು.
* ಇನ್ನು, ಮಕ್ಕಳಿಗೆ ವ್ಯಾಕ್ಸಿನ್ ಬಂದಿಲ್ಲ. ಆದ್ದರಿಂದ ಮಗುವಿನ ಮನೆಯ ಇತರ ವಯಸ್ಕ ಸದಸ್ಯರೆಲ್ಲರೂ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರೆ ಮಾತ್ರ ಆ ಮಗುವನ್ನು ಶಾಲೆಗೆ ಕಳುಹಿಸಬಹುದು.
* ಮಾಲ್, ಥಿಯೇಟರ್, ಪಾರ್ಕ್, ಪ್ರೇಕ್ಷಣೀಯ ಸ್ಥಳ, ಸರ್ಕಾರಿ ಕಚೇರಿಗಳಲ್ಲೂ ವ್ಯಾಕ್ಸಿನೇಟೆಡ್ ಆಗಿಲ್ಲದವರಿಗೆ ಪ್ರವೇಶ ಇಲ್ಲ.
* ಮದುವೆ ಸಮಾರಂಭ, ನಾಮಕರಣ ಇತ್ಯಾದಿ ಹೆಚ್ಚು ಜನರು ಸೇರುವ ಯಾವುದೇ ಕಾರ್ಯಕ್ರಮ ಇದ್ದರೂ ವ್ಯಾಕ್ಸಿನೇಟೆಡ್ ಆಗಿರುವವರಿಗೆ ಮಾತ್ರ ಪ್ರವೇಶ.
* ಎಪಿಎಂಸಿ ಮಾರುಕಟ್ಟೆಯಲ್ಲಿ ವರ್ತಕರಾಗಲೀ, ರೈತರಾಗಲೀ ವ್ಯಾಕ್ಸಿನ್ ಪ್ರಮಾಣಪತ್ರ ತೋರಿಸುವುದನ್ನು ಕಡ್ಡಾಯ ಮಾಡಬಹುದು.
ಇದನ್ನೂ ಓದಿ: ಅಪ್ಪು ಕಳೆದುಕೊಂಡು ತಿಂಗಳಾಗಿದೆ, ಮತ್ತೆ ದೇವರು ನೋವು ನೀಡುತ್ತಿದ್ದಾನೆ : ಶಿವರಾಂ ಸ್ಥಿತಿ ಕಂಡು ಶಿವಣ್ಣ ಭಾವುಕ!
ಲಸಿಕೆ ಪಡೆಯದವರು ರಾಜ್ಯದಲ್ಲಿ ಲಕ್ಷಲಕ್ಷ ಮಂದಿ:
ರಾಜ್ಯದಲ್ಲಿ ಪೂರ್ಣ ಡೋಸ್ ಲಸಿಕೆ ಪಡೆಯದವರ ಸಂಖ್ಯೆ ಒಂದು ಅಂದಾಜಿನಂತೆ 40 ಲಕ್ಷ ಇದೆ. ಇವರನ್ನು ಗುರುತಿಸಿ ಲಸಿಕೆ ತಲುಪುವಂತೆ ಮಾಡುವ ಗುರುತರ ಜವಾಬ್ದಾರಿ ಸರ್ಕಾರದ ಮೇಲೆ ಇದೆ. ಇಂದು ನಡೆದ ಸಭೇಯಲ್ಲಿ ಈ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಸಿಎಂ ಬೊಮ್ಮಾಯಿ, ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಎಲ್ಲರಿಗೂ ತಲುಪವಂತೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ಸಚಿವರಾದ ಅಶ್ವಥನಾರಾಯಣ, ಡಾ. ಸುಧಾಕರ್, ಗೋವಿಂದ ಕಾರಜೋಳ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ: ಚಿದಾನಂದ ಪಟೇಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ