ರಾಜ್ಯ ಸರ್ಕಾರ ಇನ್ನೂ 3 ತಿಂಗಳು ಶಾಲೆ ತೆರೆಯದಿರುವುದು ಒಳಿತು; ಹೆಚ್.ಡಿ. ಕುಮಾರಸ್ವಾಮಿ ಸಲಹೆ
ನಾನು ಬೆಳಿಗ್ಗೆ ಸಿಎಂ ಯಡಿಯೂರಪ್ಪನವರ ಜೊತೆ ಫೋನ್ ಮಾಡಿ ಮಾತಾಡಿದ್ದೆ. ಹಾಗಾಗಿಯೇ ವಿದ್ಯಾಗಮ ಯೋಜನೆ ಹಂಪಡೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು (ಅ. 10): ಮಕ್ಕಳಿಗೆ ಕೊರೋನಾ ಸೋಂಕನ್ನು ಹರಡುತ್ತಿರುವ ವಿದ್ಯಾಗಮ ಯೋಜನೆಯನ್ನು ನಿಲ್ಲಿಸದಿದ್ದರೆ ಮಂಗಳವಾರ ಅಹೋರಾತ್ರಿ ಧರಣಿ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ರಾಜ್ಯ ಸರ್ಕಾರ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಸರ್ಕಾರದ ಈ ನಿರ್ಧಾರಕ್ಕೆ ಹೆಚ್.ಡಿ. ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ. ನಾನು ಬೆಳಿಗ್ಗೆ ಸಿಎಂ ಯಡಿಯೂರಪ್ಪನವರ ಜೊತೆ ಫೋನ್ ಮಾಡಿ ಮಾತಾಡಿದ್ದೆ. ಹಾಗಾಗಿಯೇ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಸರ್ಕಾರ ಇನ್ನೂ 2ರಿಂದ 3 ತಿಂಗಳು ಶಾಲೆಗಳನ್ನು ಆರಂಭಿಸದೇ ಇರುವುದು ಉತ್ತಮ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳು ಪ್ರಸಾರ ಮಾಡುತ್ತಲೇ ಇವೆ. ಶಾಲಾ- ಕಾಲೇಜುಗಳನ್ನು ಆರಂಭ ಮಾಡಬೇಕೆಂದು ಸರ್ಕಾರ ನಿರ್ಧಾರ ಮಾಡಿದಾಗ ಮಾಧ್ಯಮಗಳು ಜನಾಭಿಪ್ರಾಯ ಸಂಗ್ರಹ ಮಾಡಿದ್ದವು. ಈಗ ಶಾಲೆಗಳನ್ನು ಪ್ರಾರಂಭ ಮಾಡುವುದನ್ನು ಮುಂದೂಡಿ, ಪರಿಣಿತರ ಸಲಹೆ ಪಡೆಯಲು ಮುಂದಾಗಿದೆ. ವಿದ್ಯಾಗಮ ಯೋಜನೆಯ ಮೂಲಕ ಮಕ್ಕಳನ್ನು ವಠಾರ, ದೇವಸ್ಥಾನಗಳಲ್ಲಿ ಪಾಠ ಹೇಳುವುದನ್ನೂ ಸರ್ಕಾರ ಪ್ರಾರಂಭಿಸಿದೆ. ನಿನ್ನೆಯಿಂದ ಈ ಯೋಜನೆಯಲ್ಲಿ ಆಗುತ್ತಿರುವ ಅನಾಹುತಗಳನ್ನು ಮಾಧ್ಯಮಗಳು ತೋರಿಸುತ್ತಿವೆ. ಶಿಕ್ಷಣ ಸಚಿವರು ಮಾಧ್ಯಮಗಳು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದೂ ವರದಿ ಮಾಡಲಾಗಿತ್ತು. ಶಿಕ್ಷಕರು ನಿಧನರಾಗಿರುವ ಸುದ್ದಿಗಳನ್ನೂ ಮಾಧ್ಯಮಗಳು ತೋರಿಸುತ್ತಿವೆ. ಇದು ಕೂಡ ಸರ್ಕಾರ ವಿದ್ಯಾಗಮ ಯೋಜನೆ ಹಿಂಪಡೆಯಲು ಕಾರಣವಾಗಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈಗಾಗಲೇ ಕೊರೋನಾ ಸಂಧರ್ಭದಲ್ಲಿ ಅರ್ಧ ಶೈಕ್ಷಣಿಕ ವರ್ಷ ಮುಗಿದಿದೆ. ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗಲೇಬೇಕು. ವಿದ್ಯಾರ್ಥಿಗಳಿಗೆ ರಿಯಾಯಿತಿ ಕೊಟ್ಟು ಪಾಸ್ ಮಾಡುವುದರಿಂದ ಏನೂ ಆಗುವುದಿಲ್ಲ. ಪೋಷಕರ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇನ್ನೂ 2-3 ತಿಂಗಳು ಶಾಲೆ ಆರಂಭ ಮಾಡಬಾರದು ಎಂದು ಕೂಡ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಮಂಡ್ಯದಲ್ಲಿ ರೈತರ ಸಮಾವೇಶ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ನವರಿಗೆ ಈಗ ರೈತರ ಬಗ್ಗೆ ಕಾಳಜಿ ಬಂದಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಒಬ್ಬ ರೈತರ ಮನೆಗೂ ಕಾಂಗ್ರೆಸ್ ನಾಯಕರು ಹೋಗಲಿಲ್ಲ. ಹೋಗಿದ್ದು ನಾವು ಜೆಡಿಎಸ್ ನವರು ಮಾತ್ರ. ಈಗ ಕಾಂಗ್ರೆಸ್ನವರಿಗೆ ರೈತರ ಬಗ್ಗೆ ಕಾಳಜಿ ಬಂದಿದೆ. ಜನ ಏನೂ ದಡ್ಡರಲ್ಲ, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ