news18-kannada Updated:January 20, 2021, 2:25 PM IST
ಕರ್ನಾಟಕದ ರೈತರು
ಚಾಮರಾಜನಗರ (ಜನವರಿ 20): ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ದೆಹಲಿಯಲ್ಲಿ ಹೋರಾಟನಿರತ ರೈತರು ಹಮ್ಮಿಕೊಂಡಿರುವ ಪರ್ಯಾಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಲು ಕರ್ನಾಟಕದ 200ಕ್ಕೂ ಹೆಚ್ಚು ರೈತರು ಹೊರಟಿದ್ದಾರೆ. ದೆಹಲಿಗೆ ಹೊರಟ ರೈತರ ಹೋರಾಟ ಯಾತ್ರೆಗೆ ಚಾಮರಾಜನಗರ ಜಿಲ್ಲೆ ಅಮೃತಭೂಮಿಯಲ್ಲಿಂದು ಚಾಲನೆ ನೀಡಲಾಯಿತು. ರೈತ ನೇತಾರ ದಿವಂಗತ ಪ್ರೊ.ನಂಜುಂಡಸ್ವಾಮಿ ಅವರ ಸಮಾಧಿಗೆ ನಮಿಸಿ, ಪುಷ್ಪಾರ್ಚನೆ ಮಾಡಿದ ರೈತರು ದೆಹಲಿಗೆ ಪಯಣ ಆರಂಭಿಸಿದರು. ರೈತ ನಾಯಕಿ ಚುಕ್ಕಿನಂಜುಂಡಸ್ವಾಮಿ ರೈತರ ಹೋರಾಟ ಯಾತ್ರೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ರಾಜ್ಯ ರೈತ ಮುಖಂಡ ಅರಳಾಪುರ ಮಂಜೇಗೌಡ ನೇತೃತ್ವದಲ್ಲಿ ರೈತರ ಹೋರಾಟ ಯಾತ್ರೆ ಆರಂಭವಾಗಿದ್ದುರಾಜ್ಯದ ವಿವಿಧೆಡೆಯಿಂದ 200ಕ್ಕೂ ಹೆಚ್ಚು ರೈತರು ಲಾರಿಗಳಲ್ಲಿ ದೆಹಲಿಗೆ ತೆರಳಲಿದ್ದಾರೆ. ದಾರಿಯುದ್ದಕ್ಕೂ ದವಸಧಾನ್ಯ ಸಂಗ್ರಹ ಮಾಡಿ ದೆಹಲಿಯಲ್ಲಿ ಹೋರಾಟನಿರತ ರೈತರಿಗೆ ದವಸಧಾನ್ಯ ತಲುಪಿಸಲು ರೈತರು ನಿರ್ಧರಿಸಿದ್ದಾರೆ. ಜನವರಿ 26 ರೊಳಗೆ ದೆಹಲಿ ತಲುಪಲಿರುವ ಈ ರೈತರು ಪರ್ಯಾಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ರೈತರ ಹೋರಾಟ ಯಾತ್ರೆ ಚಾಲನೆ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಮುಖಂಡ ಅರಳಾಪುರ ಮಂಜೇಗೌಡ, ದೆಹಲಿಯಲ್ಲಿ ಹರಿಯಾಣ ಹಾಗೂ ಪಂಜಾಬ್ ನ ಸಾವಿರಾರು ರೈತರು ನಡೆಸುತ್ತಿರುವ ಚಳವಳಿ 53 ದಿನ ಪೂರೈಸಿದೆ. ಹೋರಾಟದಲ್ಲಿ ಪಾಲ್ಗೊಂಡ 54 ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಮನಸ್ಸಿಲ್ಲ ಎಂದು ಆರೋಪಿಸಿದರು.
ಮುಂಬೈನಲ್ಲಿ ಹೈ-ಟೆಕ್ ವೇಶ್ಯಾವಾಟಿಕೆ ಜಾಲ ಭೇದಿಸಿದ ಪೊಲೀಸ್; 8 ಮಾಡೆಲ್ಗಳ ರಕ್ಷಣೆ
ಅನ್ನದಾತರ ಹೋರಾಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಿರ್ಲಕ್ಷ ವಹಿಸಿದ್ದಾರೆ. ಯಾವುದೋ ನಾಮಕರಣದಲ್ಲಿ ಭಾಗವಹಿಸುವ ಪ್ರಧಾನಿ ಮೋದಿಗೆ ರೈತರ ಜೊತೆ ಮಾತನಾಡುವಷ್ಟು ವ್ಯವಧಾನವಿಲ್ಲ. ರೈತರ ಸಮಸ್ಯೆ ಬಗೆಹರಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದರೂ ಸಹ ಕೇಂದ್ರ ಸರ್ಕಾರ ಮೊಂಡಾಟವಾಡುತ್ತಿದೆ. ರೈತರಿಗೇ ಬೇಡವಾದ ಕಾನೂನು ಇವರಿಗೇಕೆ ಬೇಕು ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ನಮ್ಮ ಜಮೀನುಗಳನ್ನು, ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲು ಹೊರಟಿದೆ. ರೈತರನ್ನು ಬೀದಿಪಾಲು ಮಾಡಲು ಹೊರಟಿರುವ ಸರ್ಕಾರ ಬಂಡವಾಳಶಾಹಿಗಳ ಪರ ಕಾನೂನು ರೂಪಿಸಿದೆ, ಪಟ್ಟ ಭದ್ರ ಹಿತಾಸಕ್ತಿಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ವಿವಿಧೆಡೆಯಿಂದ ರೈತರು ಲಾರಿ ಗಳಲ್ಲಿ ದೆಹಲಿಗೆ ಹೋಗುತ್ತಿದ್ದು, ಇನ್ನೂ ಹಲವಾರು ರೈತರು ಜನವರಿ 23 ರಂದು ಬೆಂಗಳೂರಿನಿಂದ ರೈಲಿನಲ್ಲಿ ಹೊರಟು ದೆಹಲಿಗೆ ಬರಲಿದ್ದಾರೆ. ಇದಲ್ಲದೆ ಬೆಂಗಳೂರಿನಲ್ಲೂ ನಡೆಯಲಿರುವ ಪರ್ಯಾಯ ಗಣರಾಜ್ಯೋತ್ಸವ ಪೆರೇಡ್ನಲ್ಲಿ ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಮಂದಿ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಸೂಚಿಸಲು ಹಾಗು ಹೋರಾಟನಿರತ ರೈತರಿಗೆ ನೈತಿಕ ಸ್ಥೈರ್ಯ ತುಂಬುವುದು ನಮ್ಮ ಉದ್ದೇಶವಾಗಿದೆ ಎಂದು ಮಂಜೇಗೌಡ ತಿಳಿಸಿದರು.
Published by:
Latha CG
First published:
January 20, 2021, 2:25 PM IST