13ಬೆಳಗಾವಿ(ಮಾ.13): ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections) ಭರದ ಸಿದ್ಧತೆ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರೂ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿವೆ. ಹೀಗಿರುವಾಗ ರಾಜಕೀಯ ನಾಯಕರ ವಾಗ್ದಾಳಿಯೂ ಎಗ್ಗಿಲ್ಲದೇ ಸಾಗಿದೆ. ಇನ್ನು ಕೆಲ ದಿನಗಳಿಂದ ಈ ವಿಚಾರದಲ್ಲಿ ರಮೇಶ್ ಜಾರಕಿಹೊಳಿ (Ramesh Jarkiholi) ಒಂದು ಹೆಜ್ಜೆ ಮುಂದಿರುವುದು ಕಂಡು ಬರುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ (DK Shivakumar) ವಿರುದ್ಧ ಸಿಡಿದೆದ್ದಿರುವ ಸಾಹುಕಾರ್ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದಾರೆ. ಏನೇ ಆದರೂ ಈ ಬಾರಿ ಕಾಂಗ್ರೆಸ್ ಗೆಲ್ಲಲೇಬಾರದು, ಅವರಿಗೆ ಮತ ನೀಡಬೇಡಿ ಎಂದೇ ಸಾರ್ವಜನಿಕವಾಗಿ ಹೇಳುತ್ತಿದ್ದಾರೆ. ಸದ್ಯ ಜಾರಕಿಹೊಳಿ ಸಿಡಿ ವಿಚಾರವಾಗಿ ಮತ್ತೆ ವಾಗ್ದಾಳಿ ನಡೆಸಿದ್ದು, ಮತ್ತೊಬ್ಬ ಸಚಿವರಿಗೂ ಅವರು ಹೆಸರಿಸುತ್ತಿದ್ದಾರೆಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹೌದು ಮುಂಬರುವ ಚುನಾವಣೆಗೆ ಭರ್ಜರಿ ಸಿದ್ದತೆ ಮಾಡಿಕೊಂಡ ಮಾಜಿ ಸಚಿವ ರಮೇಶ ಜಾರಕಿಹೊಳಿ, ಗೋಕಾಕ್ ಕ್ಷೇತ್ರದಲ್ಲಿ ಕಾರ್ಯಕರ್ತರ ಬೃಹತ್ ಸಮಾರಂಭ ನಡೆಸಿದ್ದಾರೆ. ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ನಡೆದ ಈ ಸಮಾವೇಶದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಶಶಿಕಾಂತ ನಾಯಕ್, ಎಂ ಎಲ್ ಮುತ್ತೇಣ್ಣವರ್ ಭಾಗಿಯಾಗಿದ್ದಾರೆ. ಇನ್ನು ಈ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ನಾನು ಸಚಿವನಾಗಿದ್ದ ವೇಳೆಯಲ್ಲಿ ಕ್ಷೇತ್ರ ಅನೇಕ ಯೋಜನೆ ತಂದಿದ್ದೆ, ದುರ್ದೈವ ರಾಜೀನಾಮೆ ಕೊಡಬೇಕಾಯಿತು ಎಂದಿದ್ದಾರೆ.
ಇದನ್ನೂ ಓದಿ: Bengaluru Mysuru Expresswayನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳ; ಇದುವರೆಗೂ 84 ಪ್ರಯಾಣಿಕರು ಸಾವು!
ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಲು ಬಿಡಲ್ಲ
ಇನ್ನು ಕಾಂಗ್ರೆಸ್ ಸೋಲಿಸುವುದು ಪಕ್ಕಾ ಎಂದ ಸಾಹುಕಾರ್ 2023ರಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಸರ್ಕಾರ ರಚನೆ ಮಾಡುತ್ತೇವೆ. ಹೇಗಾದ್ರು ಮಾಡಿ ಸರ್ಕಾರ ಮಾಡುತ್ತೇವೆ. ಬಹಿರಂಗವಾಗಿ ಹೇಳಲು ಬರಲ್ಲ, ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಲು ಬಿಡಲ್ಲ. ಹೀಗೆಂದು ನಾವು ಶಪಥ ಮಾಡಿದ್ದೇನೆ. ಏನ್ ಬೇಕಾದ್ದು ಆಗಲಿ, ಎಷ್ಟೇ ತ್ರಾಸ ಆಗಲಿ ಬಿಡಲ್ಲ, ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. 2024ಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಆಗಲಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಕೋಮುವಾದಿ ಪಕ್ಷ
ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ರಮೇಶ್ ಜಾರಕಿಹೊಳಿ ನಿಜವಾದ ಕೋಮುವಾದಿ ಪಕ್ಷ ಕಾಂಗ್ರೆಸ್ ಪಕ್ಷ, ಜಾತಿಗಳನ್ನು ಒಡೆದು ಆಳುವಂತಹ ಪಕ್ಷ ಕಾಂಗ್ರೆಸ್, ಈ ಪಕ್ಷದಲ್ಲಿ ಒಂದೇ ಬಾಗಿಲು ಇದೆ, ಬಿಜೆಪಿಯಲ್ಲಿ 10 ಬಾಗಿಲು ಇದೆ. ಒಬ್ಬರು ಯಾರಾದ್ರು ನಾಯಕರು ಸಿಟ್ಟು ಮಾಡಿದ್ರೆ ಮತ್ತೊಬ್ಬರ ಕಡೆ ಹೋಗಬಹುದು, ಅಲ್ಲಿ ಒಂದೇ ಬಾಗಿಲು ಒದ್ದರು ಅಲ್ಲಿಗೆ ಹೋಗಬೇಕಾಗುತ್ತದೆ ಎಂದಿದ್ದಾರೆ.
ಎಲ್ಲಾ ಜಾತಿ, ಧರ್ಮದವರನ್ನು ಒಂದೇ ರೀತಿಯಲ್ಲಿ ನೋಡುತ್ತೇನೆ
ಇದೇ ಸಂದರ್ಭದಲ್ಲಿ ಡಿಕೆಶಿ ವಿರುದ್ಧ ಕಿಡಿ ಕಾರಿದ ರಮೇಶ್ ಜಾರಕಿಹೊಳಿ ವಿರೋಧಿಗಳು ಅಪಪ್ರಚಾರಕ್ಕೆ ಯಾವುದೇ ಕಾರಣಕ್ಕೂ ಕಿವಿ ಕೊಡಬೇಡಿ. ಎಲ್ಲಾ ಜಾತಿ, ಧರ್ಮದವರನ್ನು ಒಂದೇ ರೀತಿಯಲ್ಲಿ ನೋಡುತ್ತೇನೆ. ಕೇವಲ ನಮ್ಮ ಜಾತಿಯವರನ್ನು ಪ್ರೀತಿ ಮಾಡಿದ್ರೆ ಶಾಸಕರಾಗಿ ಇರಲು ನಾಲಾಯಕ್. ವಿರೋಧಿಗಳು ಕೇವಲ ಕುತಂತ್ರದ ಮೂಲಕ ರಾಜಕೀಯ ಮಾಡಬೇಕಷ್ಟೇ ಹೊರತು ಬೇರೇನೂ ಮಾಡಲು ಸಾಧ್ಯವಿಲ್ಲ. ತಂತ್ರಜ್ಞಾನ ಬಳಸಿ ಕಟ್ ಅಂಡ್ ಪೇಸ್ಟ್ ಮಾಡಬಹುದು, ಯಾರಿಗಾದ್ರು ಬೈದಿರೋದನ್ನು ತಂದು ಎಡಿಟ್ ಮಾಡುತ್ತಾರೆ. ತನಿಖೆಯಲ್ಲಿ ಸುಳ್ಳು ಎಂದು ಬರುತ್ತದೆ, ಆದರೆ ಅಲ್ಲಿಯವರೆಗೆ ಡ್ಯಾಮೇಜ್ ಆಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Bengaluru: ಹಿಂದಿ ಮಾತನಾಡಿ ಎಂದ ಯುವತಿಗೆ ಚಳಿ ಬಿಡಿಸಿದ ಆಟೋ ಚಾಲಕ; ಕನ್ನಡ ಪ್ರೇಮಿಯ ಭಾಷಾ ಪ್ರೇಮದ ವಿಡಿಯೋ ವೈರಲ್
ಸಿಡಿ ವಿಚಾರವಾಗಿಯೂ ಮಾತನಾಡಿದ ಜಾರಕಿಹೊಳಿ ಯುದ್ದ ಮಾಡಲು ನಾನು ರೆಡಿ ಇದ್ದೇನೆ, ಆದರೆ ಕುತಂತ್ರ ಮಾಡಿದ್ರೆ ಎನ್ ಮಾಡೋದು? ಕನಕಪುರಕ್ಕೆ ಬರಲು ನಾನು ಸಿದ್ದವಿದ್ದೇನೆ, ಆದರೇ ಷಡ್ಯಂತ್ರ ಯಾಕೆ ಮಾಡುವುದು? ಕಾಂಗ್ರೆಸ್ನಲ್ಲಿ ಎಲ್ಲರೂ ಬಾಯಿಮುಚ್ಚಿಕೊಂಡು ಕುಳಿತಿದ್ದಾರೆ, ಇಂತಹ ನೂರು ಸಿಡಿ ಬರಲಿ ಎದುರಿಸಲು ನಾನು ಸಿದ್ದವಿದ್ದೇನೆ. ಸಹೋದರರು, ಪತ್ನಿ, ಮಕ್ಕಳು ನನ್ನ ಜೊತಗೆ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ
ಮತ್ತೊಬ್ಬ ಸಚಿವನಿಗೆ ಬೆದರಿಕೆ, ಕಾಂಗ್ರೆಸ್ಗೆ ಬರಲು ಒತ್ತಡ
ಇನ್ನು ಈ ಸಂದರ್ಭದಲ್ಲಿ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿರುವ ರಮೇಶ್ ಜಾರಕಿಹೊಳಿ ನನ್ನ ಜೊತೆಗೆ ಕಾಂಗ್ರೆಸ್ನಿಂದ ಓರ್ವ ಮಂತ್ರಿಗೆ ಈಗ ಡಿಕೆಶಿ ಹೆದರಿಸುತ್ತಿದ್ದಾನೆ. ಬರ್ತಿಯೋ ಬಿಡ್ಲೋ ಎಂದು ಬೆದರಿಸುತ್ತಾರೆ. ಅದರ ಪಾರ್ಟ್ನರ್ ಬೆಳಗಾವಿಯಲ್ಲಿ ಇದ್ದಾರೆ. ಅದಕ್ಕೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಈಗ ಮತ್ತೊಬ್ಬ ಡ್ರೈವರ್ ಸಹ ಸೇರಿಕೊಂಡಿದ್ದಾನೆ ಎನ್ನುವ ಮೂಲಕ ಹೆಬ್ಬಾಳ್ಕರ್ ಹಾಗೂ ಚನ್ನರಾಜ್ ಹಟ್ಟಿಹೊಳಿ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ನನ್ನ ಬಳಿಯೂ ಹತ್ತು ಸಿಡಿ ಇದೆ
ಇನ್ನು ನಾವು ಯುದ್ಧ ಮಾಡೋ ಜನ, ಆದ್ರೆ ಷಡ್ಯಂತ್ರ ಮಾಡೋರು ಅಲ್ಲ ಎಂದಿರುವ ರಮೇಶ್ ಜಾರಕಿಹೊಳಿ ನನ್ನ ಬಳಿ 10 ಎವಿಡೆನ್ಸ್ ಇವೆ, ನಾನು ಬಹಿರಂಗ ಮಾಡಲ್ಲ. ಅವನ ಪತ್ನಿಯು ನನ್ನ ತಂಗಿ ಇದ್ದ ಹಾಗೆ, ಮನೆ ಒಡೆಯಬಾರದು. ನನಗೆ ಒಬ್ಬನಿಗೆ ತೊಂದರೆ ಆಗಿದೆ, ನಾನು ಹೊರಗೆ ಬಂದಿದ್ದೇನೆ. ಆದ್ರೆ ಬೇರೆ ಯಾರಿಗೂ ಈ ರೀತಿ ಆಗಬಾರದು. ಇಂತಹ ವ್ಯಕ್ತಿಯ ಕೈಯಲ್ಲಿ ತಪ್ಪಿ ರಾಜ್ಯದ ಅಧಿಕಾರ ಸಿಕ್ಕರೆ ಏನಾಗಬಹುದು, ಈ ಟೋಲ್ ರೀತಿಯಲ್ಲಿ ಮತ್ತೊಂದು ಡಿಕೆಶಿ ಟೋಲ್ ಸೃಷ್ಠಿಯಾಗಲಿದೆ. ಯಾವುದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಬಾರದು. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಪರಮೇಶ್ವರ, ಖರ್ಗೆರಂತಹ ಒಳ್ಳೆಯವರು ಇದ್ದಾರೆ, ಅವರದೇನು ನಡೆಯಲ್ಲ. ರಾಹುಲ್ ಗಾಂಧಿಗೆ ಏನ್ ಮಾಡಿದ್ದಾನೆ ಎಂಬುದು ತಿಳಿಯುತ್ತಿಲ್ಲ. ಬ್ಲ್ಯಾಕ್ ಮೇಲರ್ ಕೈಯಲ್ಲಿ ಸಿಕ್ಕು ಕಾಂಗ್ರೆಸ್ ಕಥೆ ಮುಗಿದಿದೆ. ಹೀಗಾಗಿ ಯಾವುದೇ ಆಡಿಯೋ ಬಿಡಲಿ, ಸಿಡಿ ಬಿಡಲಿ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ