ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Election) ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡುತ್ತಿದ್ದಂತೆ ಉಲ್ಭಣಗೊಂಡ ಬಂಡಾಯ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ (Laxman Savadi) ರಾಜೀನಾಮೆ ಬೆನ್ನಲ್ಲೇ, ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಅವರು ಕೂಡ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ನಡುವೆ ಬಿಜೆಪಿ ನಾಯಕರು ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ. ಇತ್ತ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಅವರು ಕೂಡ ಬಿಜೆಪಿ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇಂದು ಬೆಳಗಾವಿ (Belagavi) ಗ್ರಾಮೀಣ ಬಿಜೆಪಿ (BJP) ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಬಿಜೆಪಿ ಕಾರ್ಯಕರ್ತರ ಪಕ್ಷ, ನಾಯಕರ ಪಕ್ಷ ಅಲ್ಲ ಎಂದು ಹೇಳಿದ್ದಾರೆ.
ಎಷ್ಟು ನಾಯಕರು ಹೋಗುತ್ತಾರೆ ಹೋಗಲಿ
ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಬಿಜೆಪಿ ಕಾರ್ಯಕರ್ತರ ಪಕ್ಷ, ನಾಯಕರ ಪಕ್ಷ ಅಲ್ಲ. ನಾಯಕರು ಹೋಗಬಹುದು, ಅಂತ ಹತ್ತು ನಾಯಕರ ತಯಾರಿಸುವ ಶಕ್ತಿ ಬಿಜೆಪಿಗಿದೆ. ಇಂತಹ ಎಷ್ಟು ನಾಯಕರು ಹೋಗುತ್ತಾರೆ ಹೋಗಲಿ, ಪಕ್ಷ ಸ್ವಚ್ಛವಾಗಲಿ. ಕಾರ್ಯಕರ್ತರು ಸ್ವಚ್ಛ ಮಾಡಿ ಹೊಸ ನಾಯಕರ ತಯಾರು ಮಾಡಿ ನಾವೇ ನಾಯಕರು ಏಕೆ ಆಗಬಾರದು? ಎಷ್ಟು ದಿವಸ ಅವರ ಮನೆ ಕಾಯೋದು ಹೊಸ ನಾಯಕರ ಮಾಡೋಣ ಎಂದು ಕರೆ ನೀಡಿದ್ದಾರೆ.
ನೀವೆಲ್ಲಾ ಒಗ್ಗೂಡಿ ಬಿಜೆಪಿ ಗೆಲ್ಲಿಸಿ
ಅಲ್ಲದೆ, ಲಿಂಗಾಯತ, ಮರಾಠಾ, ಎಸ್ಸಿ ಹೀಗೆ ಎಲ್ಲಾ ಸಮಾಜದ ಹೊಸ ನಾಯಕರ ಮಾಡೋಣಾ. ರಾಜ್ಯದಲ್ಲಿ ಗಟ್ಟಿಯಾಗಿ ಬಿಜೆಪಿ ಬೆಳೆಸೋಣ. ಮೋದಿ ನೇತೃತ್ವದಲ್ಲಿ ಭಾರತ ಜಗತ್ತಿನ ನಂಬರ್ ಒನ್ ರಾಷ್ಟ್ರ ಆಗುವುದು ಶತಸಿದ್ಧ. ನೀವೆಲ್ಲಾ ಒಗ್ಗೂಡಿ ಬಿಜೆಪಿ ಗೆಲ್ಲಿಸಿ ಎಂದು ಕರೆ ನೀಡಿದರು. ಅಲ್ಲದೆ, ನಾಳೆ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸೋಣ. ಪ್ರತಿ ಬೂತ್ಗೆ ವಾಹನ ಕಳಿಸಿ 10 ರಿಂದ 15 ಸಾವಿರ ಜನ ಸೇರಿಸಿ ನಾಮಪತ್ರ ಸಲ್ಲಿಸೋಣ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸಿಎಂ ವಾಹನ ಪರಿಶೀಲನೆ ನಡೆಸಿದ ಚುನಾವಣಾ ಅಧಿಕಾರಿಗಳು
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಭುವನಹಳ್ಳಿ ಚೆಕ್ ಪೋಸ್ಟ್ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಅವರು ವಾಹನವನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ.
ತೋರಣಗಲ್ಲು ವಿಮಾನ ನಿಲ್ದಾಣದಿಂದ ಹೊಸಪೇಟೆಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಈ ವೇಳೆ ಸಿಎಂ ಕಾರಿನಲ್ಲಿ ಸಚಿವ ಆನಂದ್ ಸಿಂಗ್ ಕೂಡ ಇದ್ದರು. ಚುನಾವಣಾ ಅಧಿಕಾರಿಗಳ ಸೂಚನೆ ಬೆನಲ್ಲೇ ವಾಹನ ನಿಲ್ಲಿಸಿ ತಪಾಸಣೆಗೆ ಸಿಎಂ ಬೊಮ್ಮಾಯಿ ಸಹಕರಿಸಿದ್ದಾರೆ. ವಿಜಯನಗರ ವಿಧಾನ ಸಭೆ ಚುನಾವಣಾ ಅಧಿಕಾರಿ ಸಿದ್ದರಾಮೇಶ್ವರ ನೇತೃತ್ವದಲ್ಲಿ ತಪಾಸಣೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ