ಕೊಪ್ಪಳ: ಮತದಾನ (Voting) ಪವಿತ್ರವಾಗಿದ್ದು, ನಿಮ್ಮ ವಿವೇಚನೆಯಿಂದ ಮತದಾನ ಮಾಡಿ. ಆಯ್ಕೆಯಾದ ಅಭ್ಯರ್ಥಿಗಳು (Candidates) ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಕಾಳಜಿ ವಹಿಸಲಿ. ಈಗ ನಾನು ಪ್ರಚಾರ ಮಾಡಿದ್ದೇನೆ ಇಲ್ಲಿ, ಒಳ್ಳೆಯ ಕೆಲಸವಾಗಲಿ ಎಂದು ಚಿತ್ರನಟ ಕಿಚ್ಚ ಸುದೀಪ್ (Kichcha Sudeepa) ಹೇಳಿದ್ದಾರೆ. ಇಂದು ಕೊಪ್ಪಳ (Koppala) ಜಿಲ್ಲೆಯ ಕುಷ್ಟಗಿಯಲ್ಲಿ ಬಿಜೆಪಿ (BJP) ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಪರ ಪ್ರಚಾರಕ್ಕಾಗಿ ಆಗಮಿಸಿ ಕುಷ್ಟಗಿಯಲ್ಲಿ (Kushtagi) ರೋಡ್ ಶೋದಲ್ಲಿ ಭಾಗವಹಿಸಿದರು. ಇಂದು ಮಧ್ಯಾಹ್ನ ಕುಷ್ಟಗಿಗೆ ಆಗಮಿಸಿದ ಸುದೀಪ್ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ಇದಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿ ಅಮೀನ್ ರೆಡ್ಡಿ ಯಾಳಗಿ ಪರ ಪ್ರಚಾರ ನಡೆಸಿದ ಸುದೀಪ್, ಬಿಜೆಪಿ ಅಭ್ಯರ್ಥಿ ಮಾತನಾಡುತ್ತಿದ್ದ ವೇಳೆ ಮೈಕ್ ಪಡೆದುಕೊಂಡ ಘಟನೆಯೂ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಮತ್ತು ನಾಯಕರನ್ನು ಟೀಕೆ ಮಾಡಿ ಮಾತನಾಡುತ್ತಿದ್ದ ಅಮೀನ್ ರೆಡ್ಡಿ ಅವರ ಮೈಕ್ ಪಡೆದ ಕಿಚ್ಚ ಸುದೀಪ್, ಯಾರನ್ನು ಟೀಕೆ ಮಾಡಬೇಡಿ, ನಾವು ಮಾಡುವ ಕೆಲಸದ ಮೇಲೆ ನಮಗೆ ವಿಶ್ವಾಸ ಇರಬೇಕು. ನಾವು ಯಾರ ಬಗ್ಗೆಯೂ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ. ಕನ್ನಡದ ಚಿತ್ರರಂಗದ ಪರವಾಗಿ ನಾವು ಬಂದಿರುವ ಸಂದರ್ಭದಲ್ಲಿ ನಮ್ಮ ಎದುರು ಈ ರೀತಿ ಮಾತನಾಡುವುದು ತಪ್ಪಾಗುತ್ತದೆ. ನಿಮ್ಮ ಈ ಬೆಂಬಲ ನನಗೆ ತುಂಬಾ ಖುಷಿಯಾಗುತ್ತಿದೆ. ಒಬ್ಬ ವ್ಯಕ್ತಿಗೆ ಹಠ ಇರಬೇಕು, ಅದು ಅಮೀನ್ ರೆಡ್ಡಿ ಅವರಿಗೆ ಇದೆ. ಅವರಿಗೆ ನೀವು ಎಲ್ಲರೂ ಬೆಂಬಲ ನೀಡಿ ಎಂದು ಅಭಿಮಾನಿಗಳಿಗೆ ಕಿಚ್ಚ ಮನವಿ ಮಾಡಿದರು.
ಕುಷ್ಟಗಿಯ ಮಲ್ಲಯ್ಯ ಮೇಗಳಮಠ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ಮೆರವಣಿಗೆ ನಡೆಸಿದರು. ರಸ್ತೆ ಉದ್ದಕ್ಕೂ ಸುದೀಪ್ ಅಭಿಮಾನಿಗಳತ್ತ ಕೈ ಬೀಸಿದರು. ಇದೇ ವೇಳೆ ಅಭಿಮಾನಿಗಳ ಕಿಚ್ಚ ಕಿಚ್ಚ ಎಂದು ಘೋಷಣೆ ಕೂಗಿದರು, ತಮ್ಮ ನೆಚ್ಚಿನ ನಟಿನಿಗೆ ಅವರ ಹಾಗೂ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಗಿಫ್ಟ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಹೋದರ ದೊಡ್ಡನಗೌಡ ಪರ ಭಾಷಣ ಮಾಡಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ದೊಡ್ಡನಗೌಡ ಬೊಮ್ಮಾಯಿ ಹಾಗು ಮೋದಿ ಅವರಿಗೆ ಬೇಕಾದ ವ್ಯಕ್ತಿಯಾಗಿದ್ದಾರೆ. ಅವರು ಗೆದ್ದ ಮೇಲೆ ಅವರನ್ನು ಮಂತ್ರಿ ಮಾಡಿ. ಜನರ ಪ್ರೀತಿ ಗಳಿಸುವುದು ಸುಲಭವಲ್ಲ. ಗೆದ್ದ ನಂತರ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿ, ಇಲ್ಲದಿದ್ದರೆ ಜನ ನನಗೆ ಕೇಳುತ್ತಾರೆ. ಮತದಾರರು ವಿವೇಚನೆಯಿಂದ ಮತದಾನ ಮಾಡಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದರು. ಜನರು ನನಗೆ ಪ್ರೀತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸಹ ಹೇಳಿದರು.
ಇತ್ತ ನಗರದ ಬಸವೇಶ್ವರ ವೃತ್ತದಲ್ಲಿ ಅಭಿಮಾನಿಗಳು ಕ್ರೇನ್ ನಲ್ಲಿ ಬೃಹತ್ ಹಾರ ಹಾಕಲು ಬಂದಿದ್ದರು. ಆದರೆ ಹಾರ ಹಾಕಿಸಿಕೊಳ್ಳಲು ನಿರಾಕರಿಸಿದರು. ನಾನು ಹಾರ ಹಾಕಿಸಿಕೊಳ್ಳಲು ಬಂದಿಲ್ಲ, ದಯವಿಟ್ಟು ಹಾರವನ್ನು ದೇವರಿಗೆ ಹಾಕಿ, ನಿಮ್ಮ ಮತವನ್ನು ವಿಚೇಚನೆಯಿಂದ ಹಾಕಿ ಎಂದು ಕರೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ