ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ನಾಳೆ ಹಾಗೂ ನಾಡಿದ್ದು ಬೆಂಗಳೂರಿನಲ್ಲಿ ಮೆಗಾ ರೋಡ್ ಶೋ (Roadshow) ನಡೆಸಲಿದ್ದಾರೆ. ಆದರೆ ಈ ನಡುವೆ ಮೋದಿ ರೋಡ್ ವಿರುದ್ಧ ಹಿರಿಯ ವಕೀಲ (Lawyer) ಅಮೃತೇಶ್ ಅವರು ಹೈಕೋರ್ಟ್ಗೆ (High Court) ಅರ್ಜಿ ಸಲ್ಲಿಕೆ ಮಾಡಿ, ರೋಡ್ ಶೋಗೆ ತಡೆ ನೀಡುವಂತೆ ಮನವಿ ಮಾಡಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಮೋದಿ ರೋಡ್ ಶೋಗೆ ಗ್ರೀನ್ ಸಿಗ್ನಲ್ ನೀಡಿ ಆದೇಶ ನೀಡಿದೆ. ಇದೇ ವೇಳೆ ವಿದ್ಯಾರ್ಥಿಗಳ ಪರೀಕ್ಷೆಗೆ (Exam) ಯಾವುದೇ ತೊಂದರೆ ಆಗದಂತೆ ಹಾಗೂ ಯಾವುದೇ ಅಹಿತಕರ ಘಟನೆ ನಡೆದಂತೆ ಮುನ್ನೆಚ್ಚರಿಕ ಕ್ರಮಕೈಗೊಳ್ಳಲು ಸರ್ಕಾರಕ್ಕೆ (Govt) ಸೂಚನೆ ನೀಡಿದೆ.
ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಸಾರ್ವಜನಿಕ ಆಸ್ತಿ ಬಗ್ಗೆ ಗಮನ ಹರಿಸಬೇಕು. ಒಂದು ವೇಳೆ ಸಾರ್ವಜನಿಕ ಆಸ್ತಿ ನಾಶ ಆದರೆ ಹೊಣೆಗಾರಿಗೆ ಶ್ಯೂರಿಟಿ ಪಡೆಯಬೇಕು. ರ್ಯಾಲಿ ಆಯೋಜಕರಿಂದ ಶ್ಯೂರಿಟಿ ಪಡೆದುಕೊಳ್ಳಲು ಹೈಕೋರ್ಟ್ ಚುನಾವಣಾ ಆಯೋಜನಾ ಸಮಿತಿಗೆ ಸೂಚನೆ ನೀಡಿದ್ದು, ಆದೇಶ ಮಾಡಿ ಅರ್ಜಿ ಇತ್ಯರ್ಥಗೊಳಿಸಿದೆ.
ಬೆಂಗಳೂರಿನ ಹಿರಿಯ ನಾಗರಿಕರಿಗೆ ತೊಂದರೆಯಾಗಲಿದೆ
ಬೆಂಗಳೂರಿನಲ್ಲಿ ಪ್ರಧಾನಿ ಮೊದಿ ಬರೋಬ್ಬರಿ 36 ಕಿಲೋ ಮೀಟರ್ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ನಿಂದ ತುಂಬಾ ಟ್ರಾಫಿಕ್ ಜಾಮ್ ಆಗುತ್ತೆ. ಈಗಾಗಲೇ ಬಿಜೆಪಿ ಹೇಳಿರುವಂತೆ 10 ಲಕ್ಷ ಜನ ರೋಡ್ ಶೋಗೆ ಸೇರಲಿದ್ದಾರೆ. ಪರಿಣಾಮ ಸಾವಿರಾರು ಮಂದಿ ಜನ ಸೇರುವುದರಿಂದ ಪರಿಸರ ನಾಶವಾಗುತ್ತದೆ. ಅಲ್ಲದೆ, ಬೆಂಗಳೂರಿನ ಹಿರಿಯ ನಾಗರಿಕರಿಗೆ ತೊಂದರೆಯಾಗಲಿದೆ. ಅವೈಜ್ಞಾನಿಕ ರೀತಿಯಲ್ಲಿ ರೋಡ್ ಶೋಗೆ ಅನುಮತಿ ನೀಡಿದ್ದು, ಇದರಿಂದ ನಾಗರಿಕರು ನಡೆದಾಡುವ ಹಕ್ಕು ಕಸಿದುಕೊಂಡಂತೆ ಆಗಲಿದೆ.
ಆದ್ದರಿಂದ ಮೋದಿ ರೋಡ್ ಶೋಗೆ ತಡೆ ನೀಡುವಂತೆ ಅರ್ಜಿಯಲ್ಲಿ ವಕೀಲರು ಮನವಿ ಮಾಡಿದ್ದರು.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಂದಲೂ ರೋಡ್ ಶೋ
ವಕೀಲರು ಸಲ್ಲಿಸಿದ ಅರ್ಜಿಯನ್ನು ಇಂದು ಮಧ್ಯಾಹ್ನ 2:30 ವೇಳೆಗೆ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಈ ವೇಳೆ ತಮ್ಮ ವಾದ ಮಂಡಿಸಿದ ವಕೀಲ ಅಮೃತೇಷ್ ಅವರು, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಮೇ 10 ರಂದು ಮತದಾನ ಇದೆ ಎಂದು ಮಾಹಿತಿ ನೀಡಿದ್ದರು. ಅಲ್ಲದೆ, ನೀತಿಸಂಹಿತೆ ಜಾರಿಯಾದ ಬಳಿಕ ಕೆಲವು ಪಕ್ಷಗಳು ರೋಡ್ ಶೋ ಮಾಡಿದ್ದಾರೆ. ಅದು ಕೇವಲ ನಾಲ್ಕೈದು ಕಿಲೋ ಮೀಟರ್ ಗೆ ಸೀಮಿತವಾಗಿತ್ತು. ಹುಬ್ಬಳ್ಳಿ, ಗುಲ್ಬರ್ಗಾ, ಬೆಳಗಾವಿ ಧಾರವಾಡ ಸೇರಿದಂತೆ ಎಲ್ಲಾ ಕಡೆ ರ್ಯಾಲಿ ಮಾಡಲಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಂದಲೂ ರೋಡ್ ಶೋ ನಡೆದಿದೆ ಮಾಹಿತಿ ನೀಡಿದ್ದರು.
ಯಾವಾಗಿನಿಂದ ರೋಡ್ ಆರಂಭ ಆಗಿದೆ ಅಂತ ಅರ್ಜಿದಾರರಿಗೆ ನ್ಯಾ.ಕೃಷ್ಣ ದೀಕ್ಷೀತ್ ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಉತ್ತರಿಸಿದ ವಕೀಲರು, ಏಪ್ರಿಲ್ 2ನೇ ವಾರದಿಂದ ರಾಜ್ಯದ ಹಲವೆಡೆ ರೋಡ್ ಶೋ ಆರಂಭವಾಗಿದೆ ಎಂದು ತಿಳಿಸಿದರು. ಆದರೆ ಯಾಕೆ ನೀವು ಮೊದಲು ಅರ್ಜಿ ಸಲ್ಲಿಸದೇ ಈ ರೋಡ್ ಶೋಗೆ ಮಾತ್ರ ಪ್ರಶ್ನಿಸುತ್ತಿದ್ದೀರಿ ಅಂತ ನ್ಯಾಯಮೂರ್ತಿಗಳು ಮರುಪ್ರಶ್ನಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ವಕೀಲರು, ಮೊದಲು ಕೇವಲ 3 ರಿಂದ 5 ಕಿಲೋಮೀಟರ್ ಮಾತ್ರ ರೋಡ್ ಇರುತ್ತಿದ್ದವು. ಈ ಬಾರಿ 36 ಕಿಮೀ ರೋಡ್ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಿನ್ನೆ ಈ ಬಗ್ಗೆ ವರದಿ ಮಾಡಿವೆ ಹೀಗಾಗಿ ನಿನ್ನೆ ಅರ್ಜಿ ಸಲ್ಲಿಸಿದ್ದೇನೆ.
ನಾಳೆ ಬಿಜೆಪಿಯವರು ಮಾಡುತ್ತಾರೆ. ಇತ್ತ ಕಾಂಗ್ರೆಸ್ ನವರು ಅರ್ಜಿ ಹಾಕಿದ್ದಾರೆ. ಹಿರಿಯ ನಾಗರಿಕರು ಇದ್ದಾರೆ. ಶಬ್ದ ಮಾಲಿನ್ಯವಾಗುತ್ತೆ. ನಾಳೆ 26 ಕಿಮೀ ಇದೆ, 7 ಗಂಟೆಯಿಂದ 12.30 ರವರೆಗೆ ಮಾಡುತ್ತಾರೆ. ಆದರೆ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಇದೆ. 26 ಕಿಮೀ ಮತ್ತು 10 ಕಿಮೀ ರ್ಯಾಲಿ ಮಾಡಲಿದ್ದಾರೆ. ಮತ್ತೆ 9ನೇ ತಾರೀಖು ರ್ಯಾಲಿ ಇದೆ. ನಂತರ ಮತ ಎಣಿಕೆ ವೇಳೆ ಜನ ಸೇರ್ತಾರೆ. ಇದರಿಂದ ಶಬ್ದ ಮಾಲಿನ್ಯ ಉಂಟಾಗುತ್ತೆ. ಇವೆಲ್ಲ ಪರಿಣಾಮ ಬೀರುತ್ತೆ. ವಿಧಾನಸೌಧ, ವಿಕಾಸಸೌಧ ಸುತ್ತ ಯಾವುದೇ ಪ್ರತಿಭಟನೆ ಮಾಡುವಂತಿಲ್ಲ. ಒಂದು ಸಲ ವಾಲ್ಮೀಕಿ ಜಯಂತಿ ಮಾಡಿದಾಗ ಮೂರ್ನಾಲ್ಕು ಗಂಟೆ ಜಾಮ್ ಆಗಿತ್ತು ಎಂದು ತಿಳಿಸಿದರು.
ನಾಳೆ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರ್ಯಾಲಿ
ವಾದ ಆಲಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಇಲ್ಲಿಯವರೆಗೆ ಯಾವ ಯಾವ ರಾಜಕೀಯ ಪಕ್ಷಗಳು ರ್ಯಾಲಿ ಮಾಡಿದ್ದಾರೆ. ಯಾವ ಪಕ್ಷಗಳು ಮಾಡಿಲ್ಲ. ರಾಜ್ಯದಲ್ಲಿ ಎಷ್ಟು ಅಧಿಕೃತ ರಾಜಕೀಯ ಪಕ್ಷಗಳಿವೆ? ನೀತಿ ಸಂಹಿತೆ ಜಾರಿಯಾದ ಮೇಲೆ ಎಷ್ಟು ಪಕ್ಷಗಳು ರ್ಯಾಲಿ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಕೋರಿತ್ತು. ಈ ಬಗ್ಗೆ ಚುನಾವಣಾಧಿಕಾರಿಗಳು ಹಾಗೂ ವಕೀಲ ಅಮೃತೇಶ್ ರಿಂದ ಕೋರ್ಟ್ ಗೆ ಮಾಹಿತಿ ನೀಡಿದ್ದರು.
ಈವರೆಗೆ ನಗರದಲ್ಲಿ ಎಷ್ಟು ರ್ಯಾಲಿಗಳು ನಡೆಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು, ಸ್ಥಳೀಯ ಮಟ್ಟದಲ್ಲಿ ಆರ್ ಓ ಗಳು ಅನುಮತಿ ಕೊಡುತ್ತಾರೆ. ನಾಳೆ ನಡೆಯುವ ರ್ಯಾಲಿ ಸಂಬಂಧ ಈಗಾಗಲೇ ಸಭೆ ನಡೆಸಿದ್ದೇವೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.
ಯಾವುದಾದರೂ ಪರೀಕ್ಷೆಗಳಿವೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ನೀಟ್ ಪರೀಕ್ಷೆ ಇದೆ. ಬೆಂಗಳೂರಿನಲ್ಲಿ 30 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ರಾಜ್ಯಾದ್ಯಂತ 400 ಕ್ಕು ಹೆಚ್ಚು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು. ಬಳಿಕ ನೀಟ್ ಪರೀಕ್ಷೆ ದಿನ ರ್ಯಾಲಿ ಎಷ್ಟೊತ್ತಿಗೆ ನಡೆಯುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿ, ನೀಟ್ ಪರೀಕ್ಷೆ ದಿನ ಬೆಳಗ್ಗೆ 9 ರಿಂದ 11.30 ರವರೆಗೆ ಇರುತ್ತೆ. ನಾಳೆ ಬೆಳಗ್ಗೆ 9 ರಿಂದ ಮಧ್ಯಾಹ್ನ 12.30 ರವರೆಗೆ ರ್ಯಾಲಿ ನಿಗದಿಯಾಗಿದೆ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು. ಬೇರೆ ಯಾವುದಾದರೂ ಪರೀಕ್ಷೆಗಳು ಇವೆಯಾ ಎಂಬ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿ ಪಡೆಯುವಂತೆ ನ್ಯಾಯಾಲಯ ಸೂಚನೆ ನೀಡಿತು.
ಗಲಭೆ ನಡೆದರೆ ಕಂಟ್ರೋಲ್ ಗೆ ತರಲು ಏನೆಲ್ಲಾ ಕ್ರಮಗಳನ್ನ ಕೈಗೊಂಡಿದ್ದೀರಿ
ಇನ್ನು, ರ್ಯಾಲಿ ಯಲ್ಲಿ ಸಾವಿರಾರು ಜನ ಜಮಾಯಿಸ್ತಾರೆ. ಗಲಭೆ ಆಗೋದಕ್ಕೆ ಸಣ್ಣ ವಿಚಾರ ಸಾಕು. ಗಲಭೆಗಳು ನಡೆಯೋದಿಲ್ಲ. ನಮ್ಮ ರಾಜ್ಯ ತುಂಬಾ ಶಾಂತಿಯುತ ರಾಜ್ಯ. ಒಂದು ವೇಳೆ ಗಲಭೆ ನಡೆದರೆ ಕಂಟ್ರೋಲ್ ಗೆ ತರಲು ಏನೆಲ್ಲಾ ಕ್ರಮಗಳನ್ನ ಕೈಗೊಂಡಿದ್ದೀರಿ ಎಂದು ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದರು. ಅಲ್ಲದೇ, ರ್ಯಾಲಿಗಳ ವಿಚಾರಲದ್ಲಿ ಪೊಲೀಸ್ ಅಧಿಕಾರಿಗಳಿಗೆ ಅನುಭವವಿದೆ. ಎಲ್ಲವನ್ನೂ ಯೋಚನೆ ಮಾಡಿಯೇ ತೀರ್ಮಾನ ತೆಗೆದುಕೊಂಡಿರ್ತಾರೆ. ಈ ಹಿಂದೆ ಯಾವುದಾದರೂ ರ್ಯಾಲಿ ವೇಳೆ ಅನಾಹುತ ನಡೆದಿದೆಯೇ ಎಂದು ಸರ್ಕಾರಿ ವಕೀಲರಿಗೆ ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಇದಕ್ಕೆ ಯಾವುದೇ ಅನಾಹುತದ ಬಗ್ಗೆ ವರದಿಯಾಗಿಲ್ಲ ಎಂದು ಸರ್ಕಾರಿ ಪರ ವಕೀಲರು ಕೋರ್ಟ್ ಗೆ ಉತ್ತರ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ