ರಾಮನಗರ: ಕನಕಪುರದಲ್ಲಿ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ (CT Ravi) ಭರ್ಜರಿ ಪ್ರಚಾರ ನಡೆಸಿದ್ದಾರೆ. ಭಯ ಮುಕ್ತದಲ್ಲಿ ಚುನಾವಣೆ ಆದರೆ ಫಲಿತಾಂಶವೇ ಬೇರೆಯೇ ಆಗಿರುತ್ತದೆ. ನಿರ್ಭಯವಾಗಿ ಚುನಾವಣೆ ನಡೆದರೆ ಜನರು ಕಾಂಗ್ರೆಸ್ (Congress) ವಿರುದ್ದವೇ ಮತ ಹಾಕುತ್ತಾರೆ. ಹೆದರಿಸಿ, ಬೆದರಿಕೆ, ದಬ್ಬಾಳಿಕೆ ಮಾಡಿ, ಹೊಂದಾಣಿಕೆ ಮೂಲಕ ಗೆಲ್ಲುತ್ತಾ ಬಂದರೆ ಅದನ್ನು ಭದ್ರಕೋಟೆ ಅಂತಾ ಹೇಳೋಕೆ ಆಗಲ್ಲ. ಅಶೋಕ್ (R Ashok) ಮೊದಲ ಬಾರಿಗೆ ಇಲ್ಲಿಗೆ ಬರುತ್ತಿದ್ದಾರೆ. ಚುನಾವಣೆ (Election) ಮುಗಿದ ನಂತರವೂ ನೀವು ನಮ್ಮ ಬಲದಲ್ಲಿ ಇರ್ತೀರಾ ಅಂತಾ ಜನರು ಕೇಳುತ್ತಿದ್ದಾರೆ. ಅದರ ಅರ್ಥವೇ ಜನರಿಗೆ ಭಯ ಕಾಡುತ್ತಿದೆ ಎಂದು ಸಿ ಟಿ ರವಿ ಹೇಳಿದ್ದಾರೆ.
ಅಶೋಕ್ ಸಹೋದರನಂತೆ ಪ್ರಚಾರಕ್ಕೆ ಬಂದಿದ್ದೇನೆ
ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ಸಿ ಟಿ ರವಿ ಅವರು, ಅಶೋಕ್ ಅವರು ನನ್ನ ಸಹೋದರರ ರೀತಿ. ಅವರ ಪಕ್ಷದ ಆದೇಶದಂತೆ ಇಲ್ಲಿಗೆ ಚುನಾವಣೆಗೆ ಬಂದಿದ್ದಾರೆ. ಅವರ ಬೆಂಬಲವಾಗಿ ನಿಂತಿಕೊಳ್ಳೋದು ನನ್ನ ಕರ್ತವ್ಯ. ಒಬ್ಬ ಸಹೋದರನಂತೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಎಲ್ಲಾ ರೀತಿಯಲ್ಲಿ ಅವರಿಗೆ ಶಕ್ತಿ ತುಂಬಲು ಇಲ್ಲಿಗೆ ಬಂದಿದ್ದೇನೆ. ಡಿಕೆ ಸಹೋದರರು, ನಮ್ಮನ್ನು ಅವರು ಏನು ಮಾಡೋಕೆ ಆಗಲ್ಲ ಅನ್ನೋ ಅತಿ ಆತ್ಮವಿಶ್ವಾಸದಲ್ಲೇ ಇರಲಿ.
ಇಂದಿರಾ ಗಾಂಧಿ ಅವರನ್ನೇ ಸೋಲಿಸಿದ್ದರು
ಇತಿಹಾಸದಲ್ಲಿ ರಾವಣ ಕೂಡ ನಾನು ಏನು ಮಾಡೋಕೆ ಆಗಲ್ಲ ಅಂದ್ಕೊಂಡು ಇದ್ದ, ಕೊನೆಗೆ ರಾವಣನನ್ನು ರಾಮ ಬರಿಗಾಲಲ್ಲಿ ನಿಂತು ರಾವಣನನ್ನು ಎದುರಿಸಿದ. ಹಾಗೆಯೇ ರಾಯಭರೇಲಿನಲ್ಲಿ ಜೈಲಿನಲ್ಲಿದ್ದ ರಾಜ್ ನಾರಾಯಣ್, ಇಂದಿರಾ ಗಾಂಧಿ ಅವರನ್ನು ಸೋಲಿಸಿದ್ದರು. ರಾಯಬರೇಲಿ, ಅಮೇಥಿಯನ್ನೇ ಬಿಟ್ಟಿಲ್ಲ ಕನಕಪುರವನ್ನು ಬಿಡ್ತೀವಾ? ಇದು ಇತಿಹಾಸದ ಭಾಗ, ವಿಶ್ವಾಸ ಮತ್ತು ಅಹಂಕಾರಕ್ಕೆ ದೊಡ್ಡ ಅಂತರ ಇದೆ. ಫಲಿತಾಂಶ ನಿರ್ಣಯ ಮಾಡುವುದು ಮತದಾರ ಪ್ರಭುಗಳು. ಜಗತ್ತಿನಲ್ಲಿ ಬಹಳಷ್ಟು ಅಚ್ಚರಿ ಫಲಿತಾಂಶ ಗಳು ಬಂದಿವೆ. ಫಲಿತಾಂಶ ಬರಲಿ, ವೇಯ್ಟ್ ಅಂಡ್ ಸೀ ಎಂದು ತಿಳಿಸಿದರು.
ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ
ಸಿಟಿ ರವಿ ಮುಂದಿನ ಸಿಎಂ ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಈಗ ನಮ್ಮ ಮುಖ್ಯಮಂತ್ರಿ ಗಳು ಬಸವರಾಜ್ ಬೊಮ್ಮಾಯಿ ಅವರು, ಸಿಎಂ ವಿಷಯದಲ್ಲಿ ನಾನು ಯಾವುದೇ ಗೊಂದಲ ಸೃಷ್ಟಿ ಮಾಡೋಕೆ ಹೋಗುವುದಿಲ್ಲ. ಆ ಎತ್ತರಕ್ಕೆ ಬೆಳೆಯಬೇಕೆಂದು ಈಶ್ವರಪ್ಪ ಆಶಯ ವ್ಯಕ್ತಪಡಿಸಿದ್ದಾರೆ. ಇವಾಗ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷ ಏನು ಜವಾಬ್ದಾರಿ ಕೊಡುತ್ತದೆಯೋ ಅದನ್ನು ಪಾಲಿಸುವುದು ನನ್ನ ಧರ್ಮ.
ಇಡೀ ರಾಜ್ಯದಲ್ಲಿ ಸಿಟಿ ರವಿ ಸಿಎಂ ಆಗಬೇಕೆಂದು ಕೂಗು ಬರುತ್ತೋ, ಅವಾಗ ನಾನು ಆ ವಿಷಯಕ್ಕೆ ಕ್ಲೈಮ್ ಮಾಡ್ತೀನಿ, ಇವತ್ತು ಮಾಡಲ್ಲ ಎಂದರು. ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ಇರುವ ಸಾಮರ್ಥ್ಯ ಯಾರಿಗೂ ಇಲ್ಲ. ನಾಯಕನನ್ನು ಸೃಷ್ಟಿ ಮಾಡೋದು ಅವರೇ, ಶಾಸಕರನ್ನಾಗಿ ಸೃಷ್ಟಿ ಮಾಡುವುದು ಅವರೇ. ಆದರೆ ಅಹಂಕಾರ ಮಾತ್ರ ಒಳ್ಳೆಯದಲ್ಲ ಎಂದು ಡಿಕೆ ಸಹೋದರರಿಗೆ ಟಾಂಗ್ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ