ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Elections 2023) ಹತ್ತಿರವಾಗುತ್ತಿದ್ದಂತೆ ರಾಜ್ಯ ಪ್ರಮುಖ ಪಕ್ಷಗಳಲ್ಲಿ ಅಸಮಾಧಾನಿತ ನಾಯಕರು ಪಕ್ಷಕ್ಕೆ ಗುಡ್ಬೈ ಹೇಳುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ (Congress) ಹಾಗೂ ಬಿಜೆಪಿ ಪಕ್ಷದ ಹಲವರು ಶಾಸಕರು ತಮ್ಮ ತಮ್ಮ ಪಕ್ಷಗಳಿಗೆ ರಾಜೀನಾಮೆ ನೀಡಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ. ಇದರ ನಡುವೆ ಇಂದು ಕಾಂಗ್ರೆಸ್ ಪಕ್ಷದ ಪುಲಕೇಶಿನಗರದ (Pulakeshi Nagar) ಶಾಸಕ ಅಖಂಡ ಶ್ರೀನಿವಾಸಮೂರ್ತಿ (Akhanda Srinivas Murthy) ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಉತ್ತರ ಕನ್ನಡದ ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರನ್ನು ಭೇಟಿಯಾಗಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ತಮ್ಮ ರಾಜೀನಾಮೆ (Resignation) ಪತ್ರವನ್ನು ಸ್ಪೀಕರ್ ಅವರಿಗೆ ಸಲ್ಲಿಸಿದ್ದಾರೆ. ಅಲ್ಲದೆ, ಈ ವೇಳೆ ಪಕ್ಷದ ಹೈಕಮಾಂಡ್ ಅವರಿಗೆ ಮನವಿ ಮಾಡಿರುವ ಅಖಂಡ ಅವರು, ತಪ್ಪು ಮಾಡದೆ ನನಗೆ ಶಿಕ್ಷೆಯಾಗಿದೆ. ಪಕ್ಷದಿಂದ ಅನ್ಯಾಯ ಮಾಡಬೇಡಿ. ನಾನು ಇನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿಲ್ಲ ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲೇ ಅತೀ ಹೆಚ್ಚು ಲೀಡ್ ಪಡೆದು ಜಯಗಳಿಸಿದ ಶಾಸಕ
ರಾಜೀನಾಮೆ ನೀಡಿದ ಬಳಿಕ ಮಾಧ್ಯಮಳೊಂದಿಗೆ ಮಾತನಾಡಿದ ಅಖಂಡ, ಬಿಜೆಪಿ ಸೇರ್ಪಡೆ ಆಗುವುದಾಗಿ ವರದಿಯಾಗಿದೆ. ಆದರೆ ಅದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಕ್ಷೇತ್ರದ ಜನತೆಯೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಮಾಡುತ್ತೇನೆ.
ಕಳೆದ ಚುನಾವಣೆಯಲ್ಲಿ ನಾನು ರಾಜ್ಯದಲ್ಲೇ ಅತೀ ಹೆಚ್ಚು ಲೀಡ್ ಪಡೆದು ಜಯಗಳಿಸಿದ ಶಾಸಕ ನಾನು, ಆದರೂ ಮನೆ ಸುಟ್ಟುಕೊಂಡು ಸಾಕಷ್ಟು ನೋವು ತಿಂದಿದ್ದೇನೆ. ಪಕ್ಷದಿಂದ ಅನ್ಯಾಯ ಆಗುತ್ತಿದೆ ಎಂಬ ಕಾರಣಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದು, ಮೂರು ಪಟ್ಟಿಯಲ್ಲೂ ನನ್ನ ಹೆಸರು ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಪುಲಕೇಶಿನಗರದ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾಗಿ ಅಖಂಡ ತಿಳಿಸಿದ್ದಾರೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಸಲಹೆ ಪಡೆದು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇನ್ನು, ಶಾಸಕ ಅಖಂಡ ಅವರಿಗೆ ಟಿಕೆಟ್ ನೀಡದಂತೆ ಡಿಕೆ ಶಿವಕುಮಾರ್ ಅವರು ಹಠ ಹಿಡಿದು ಟಿಕೆಟ್ ತಪ್ಪಿದಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬಂದಿದೆ.
ಇತ್ತ ಅಖಂಡ ಅವರು ಟಿಕೆಟ್ಗಾಗಿ ನಿರಂತರವಾಗಿ ಪ್ರಯತ್ನ ನಡೆಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಆಪ್ತ ಜಮೀರ್ ಅಹ್ಮದ್ ಕೂಡ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದರು. ಆದರೆ ಡಿಕೆ ಶಿವಕುಮಾರ್ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಖಂಡಗೆ ಕರೆ ಮಾಡಿದ್ದ ಸಿದ್ದು, ನಾನು ಎಲ್ಲಾ ಪ್ರಯತ್ನಪಟ್ಟೆ ಆದರೆ ನಿನಗೆ ಟಿಕೆಟ್ ಕೊಡಲು ಹೈಕಮಾಂಡ್ ಒಪ್ಪಲಿಲ್ಲ, ನಿನಗ ಟಿಕೆಟ್ ಕೊಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರಂತೆ.
ಅಖಂಡ ಪತ್ನಿಗೆ ಟಿಕೆಟ್ ಕೊಡಲು ಹೈಕಮಾಂಡ್ ಸಿದ್ಧ
ಇದರಂತೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದ ಅಖಂಡ, ಸ್ಪೀಕರ್ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆ.
ಆದರೆ ಇದಕ್ಕೂ ಮೊದಲು ಅಖಂಡ ಪತ್ನಿಗೆ ಟಿಕೆಟ್ ಕೊಡಲು ಹೈಕಮಾಂಡ್ ಸಿದ್ಧವಾಗಿತ್ತಂತೆ. ಆದರೆ ಪತ್ನಿಗೆ ಬೇಡ, ಟಿಕೆಟ್ ಕೊಟ್ಟರೆ ನನಗೆ ಕೊಡಿ. ಇಲ್ಲ ಎಂದರೆ ಏನು ತಪ್ಪು ಮಾಡದೆ ಜನರಿಗೆ ಬೇರೆಯದ್ದೆ ಸಂದೇಶ ರವಾನೆ ಆಗುತ್ತೆ. ಮನೆ ಸುಟ್ಟವರ ಪರ ನೀವು ನಿಂತು, ನನಗೆ ಟಿಕೆಟ್ ತಪ್ಪಿಸಿದ್ದು ಯಾವ ನ್ಯಾಯ ಎಂದು ಹೈಕಮಾಂಡ್ ನಾಯಕರಿಗೆ ಪ್ರಶ್ನೆ ಮಾಡಿದ್ದರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ