ಬೆಂಗಳೂರು: ಚಾಮರಾಜನಗರ (Chamarajangar) ಮತ್ತು ವರುಣಾ (Varuna) ಕ್ಷೇತ್ರದಲ್ಲಿ ಸೋಲಿನ ಬಳಿಕ ಯಾವುದೇ ಪ್ರತಿಕ್ರಿಯೆ ನೀಡದೇ ಮಾಜಿ ಸಚಿವ ವಿ.ಸೋಮಣ್ಣ (Former Minister V Somanna) ಮೌನಕ್ಕೆ ಶರಣಾಗಿದ್ದರು. ಇಂದು ಬೆಂಗಳೂರಿನಲ್ಲಿ ಸೋಲಿನ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ಹೈಕಮಾಂಡ್ (High Command) ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಸೋತಿದ್ದೇವೆ ಏನ್ ಮಾಡೋಕೆ ಆಗುತ್ತೆ. ಹೈಕಮಾಂಡ್ ಹೇಳಿದ್ರು ಅಂತ ಹೋಗಿದ್ದೆ. ಪ್ರತಿಯೊಂದಕ್ಕೂ ಕಾಲ ಉತ್ತರ ಕೊಡುತ್ತದೆ. ತೀರ್ಮಾನ ಜನ ಮಾಡಿದ್ದಾರೆ ಅನ್ನೋದಕ್ಕಿಂತ ಹೈಕಮಾಂಡ್ಗೂ ಇದು ಎಚ್ಚರಿಕೆ ಗಂಟೆ ಎಂದು ಹೇಳಿದರು.
ಚಿನ್ನದಂತಹ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ಹೋಗಿ ಈಗ ನಿರುದ್ಯೋಗಿಯಾಗಿದ್ದೇನೆ. ಹೈಕಮಾಂಡ್ ಹೇಳಿದ್ದರಿಂದ ಕ್ಷೇತ್ರ ಬಿಡಬೇಕಾಯ್ತು. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ. ಪಕ್ಷಕ್ಕೂ ಹಿನ್ನಡೆ ಆಗಿದ್ದು, ನಮಗೆಲ್ಲ ಒಂದು ಎಚ್ಚರಿಕೆ ಗಂಟೆಯಾಗಿದೆ. ಜನರು ನೀಡಿರುವ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕು ಎಂದು ಸೋಲು ಒಪ್ಪಿಕೊಂಡರು.
ಸೋಲಿಗೆ ಯಡಿಯೂರಪ್ಪ ಫ್ಯಾಕ್ಟರ್ ಅಲ್ಲ
ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮೂಲೆ ಗುಂಪು ಮಾಡಿದ್ದೇ ಮುಳುವಾಯ್ತಾ ಪ್ರಶ್ನೆಗೆ ಉತ್ತರಿಸಿದ ವಿ.ಸೋಮಣ್ಣ, ಅವರನ್ನು ಪಕ್ಷ ಮೂಲೆಗುಂಪು ಮಾಡಲಿಲ್ಲ. ಅವರ ನಾಯಕತ್ವದಲ್ಲಿಯೇ ಚುನಾವಣೆ ಮಾಡಿದ್ದೇವೆ. ಸೋತ ತಕ್ಷಣ ಎಲ್ಲ ಮುಗಿದು ಹೋಯ್ತಾ? ಸೋಲಿಗೆ ಯಡಿಯೂರಪ್ಪ ಫ್ಯಾಕ್ಟರ್ ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Karnataka Election Results: ಅತಿ ಕಡಿಮೆ & ಹೆಚ್ಚು ಮತಗಳ ಅಂತರದಿಂದ ಗೆದ್ದವರು ಯಾರು?
ಸಕ್ರಿಯ ರಾಜಕೀಯದಲ್ಲಿರುವೆ!
ನಾನು ಕೆಲಸಗಾರ, ಈಗ ನಿರುದ್ಯೋಗಿ ಆಗಿದ್ದು, ಸೋಲನ್ನು ಒಪ್ಪಿಕೊಂಡಿದ್ದೇನೆ. ಒಳ್ಳೆಯವರನ್ನು ಯಾರೂ ಗುರುತಿಸಲ್ಲ. ಸೋತ ಮಾತ್ರಕ್ಕೆ ರಾಜಕೀಯ ನಿವೃತ್ತಿ ಇಲ್ಲ. ನಾನು ಸಾಯೋತನಕ ಸಕ್ರಿಯ ರಾಜಕಾರಣದಲ್ಲಿರುತ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ