ಬೆಂಗಳೂರು: ಭಾರೀ ಕುತೂಹಲ ಮೂಡಿಸಿದ್ದ ಆರ್ಆರ್ ನಗರ (RR Nagar) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ (Kusuma Hanumantharayappa) ಮುನ್ನಡೆ ಕಾಯ್ದುಕೊಂಡಿದ್ದಾರೆ. ಜಿದ್ದಾ ಜಿದ್ದಿನ ಪೈಪೋಟಿಯಲ್ಲಿ ಈವರೆಗೆ ಮುನಿರತ್ನ (Munirathna) ಅಲ್ಪ ಮತದಿಂದ ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಇದೀಗ ಆರ್ ಕುಸುಮಾ ಹನುಮಂತರಾಯಪ್ಪ ಅವರು 500 ಚಿಲ್ಲರೆ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮತಯಂತ್ರಗಳು ಭದ್ರ
ಮೇ 10ರಂದು ನಡೆದ ಮತದಾನದ ದಿನ ರಾಜ್ಯದ 37,777 ಪ್ರದೇಶದಲ್ಲಿ ಹಾಕಲಾಗಿದ್ದ 58,545 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ರಾಜ್ಯದ 224 ಕ್ಷೇತ್ರಗಳ ಮತ ಯಂತ್ರಗಳನ್ನು ಚುನಾವಣಾ ಸಿಬ್ಬಂದಿ ಭದ್ರವಾಗಿ ಇಟ್ಟಿದ್ದು, ಸ್ಟ್ರಾಂಗ್ ರೂಂಗಳಲ್ಲಿ ಮೂರನೇ ಹಂತದ ಭದ್ರತೆಯನ್ನು ಮಂತ ಯಂತ್ರಗಳಿಗೆ ಒದಗಿಸಲಾಗಿದೆ. 224 ಕ್ಷೇತ್ರಗಳ ಮತ ಎಣಿಕೆ ಕಾರ್ಯ 36 ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆದಿದ್ದು, ಸಾವಿರಾರು ಸಿಬ್ಬಂದಿ ಚುನಾವಣಾ ಎಣಿಕೆ ವೇಳೆ ಕಾರ್ಯ ನಿರ್ವಹಿಸಿದ್ದಾರೆ.
ಎಷ್ಟು ಅಭ್ಯರ್ಥಿಗಳು ಕಣದಲ್ಲಿ?
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2615 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಆ ಪೈಕಿ 2430 ಮಂದಿ ಪುರುಷ ಅಭ್ಯರ್ಥಿಗಳಾದ್ರೆ, 184 ಮಂದಿ ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಜೊತೆಗೆ ಓರ್ವ ಲೈಂಗಿಕ ಅಲ್ಪಸಂಖ್ಯಾತ (ಟ್ರಾನ್ಸ್ಜೆಂಡರ್) ಸಮುದಾಯದ ಅಭ್ಯರ್ಥಿ ಇದ್ದಾರೆ. ಅಭ್ಯರ್ಥಿಗಳ ಪೈಕಿ ಬಿಜೆಪಿಯಿಂದ 224, ಕಾಂಗ್ರೆಸ್ನಿಂದ 223, ಜೆಡಿಎಸ್ನಿಂದ 209 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಇನ್ನು 918 ಮಂದಿ ಪಕ್ಷೇತರ ಅಭ್ಯರ್ಥಿಗಳಾದ್ರೆ, ಎಎಪಿ 209, ಸಿಪಿಐಎಂ 4, ಬಿಎಸ್ಪಿ 133 ಹಾಗೂ ಎನ್ಸಿಪಿ ಇಬ್ಬರು ಅಭ್ಯರ್ಥಿಗಳನ್ನು ಕದನಕ್ಕೆ ಇಳಿಸಿದೆ.
ಖಾಕಿ ಸರ್ಪಗಾವಲು
ಇನ್ನು ರಾಜ್ಯಾದ್ಯಂತ ನಡೆಯುತ್ತಿರುವ ಚುನಾವಣಾ ಫಲಿತಾಂಶ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ದೃಷ್ಟಿಯಿಂದ ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಭಾರೀ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಪ್ರತಿಯೊಂದು ಮತ ಎಣಿಕೆ ಕೇಂದ್ರಗಳಲ್ಲೂ ಅಸಂಖ್ಯ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ನಿನ್ನೆ ರಾತ್ರಿ 10ರಿಂದ ಇಂದು ರಾತ್ರಿ 12ರ ತನಕ ಮದ್ಯ ಮಾರಾಟವನ್ನು ನಿಷೇಧಿಲಾಗಿದ್ದು, ಮುಖ್ಯವಾಗಿ ಮತ ಎಣಿಕೆ ಕೇಂದ್ರದ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಹಾಕಲಾಗಿದ್ದು, ಮತ ಎಣಿಕೆ ಕೇಂದ್ರದ ಬಳಿ 5ಕ್ಕಿಂತ ಹೆಚ್ಚು ಜನ ಸೇರೋದು, ವಿಜಯೋತ್ಸವ, ಮೆರವಣಿಗೆ ಇನ್ನಿತರ ಸಮಾರಂಭಗಳನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ಕೌಂಟಿಂಗ್ ಸೇರಿದಂತೆ ಚುನಾವಣೆ ಫಲಿತಾಂಶ ಕುರಿತ ಎಲ್ಲಾ ಮಾಹಿತಿಗಳು ಎಲ್ಲೆಲ್ಲಿ ಸಿಗುತ್ತೆ? ವಿವರಗಳಿಗೆ ಈ ಲಿಂಕ್ ಓಪನ್ ಮಾಡಿ
ಮತದಾನ ಆಗಿದ್ದು ಎಷ್ಟು?
ಬುಧವಾರ (ಮೇ 10) ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಗೆ ಈ ಬಾರಿ ದಾಖಲೆಯ ಮತದಾನ ಆಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ 73.19% ಮತದಾನ ಆಗಿದ್ದು, ಇದು ಸಾರ್ವಕಾಲಿಕ ದಾಖಲೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಇರುವ 5.30 ಕೋಟಿ ಮತದಾರರಲ್ಲಿ 3.88 ಕೋಟಿ ಮತದಾರರು ಈ ಭಾರಿ ತಮ್ಮ ಹಕ್ಕು ಚಲಾಯಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 85.56% ಮತದಾನವಾಗಿ ರಾಜ್ಯದಲ್ಲೇ ಅತೀ ಹೆಚ್ಚು ಮತದಾನ ನಡೆದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇತ್ತ ಬೆಂಗಳೂರು ದಕ್ಷಿಣದಲ್ಲಿ 52.33% ಮತದಾನವಾಗಿ ಅತೀ ಕಡಿಮೆ ಹಕ್ಕು ಚಲಾಯಿಸಿದ ಜಿಲ್ಲೆಗೆ ಗುರಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ